ವೀರಪ್ಪನ್- ಗೋಪಾಲ್ ಮುಖಾಮುಖಿ, ಸಂದೇಶದ ನಿರೀಕ್ಷೆಯಲ್ಲಿ ಚೆನ್ನೈ ಸಭೆ
ಚೆನ್ನೈ : ನಕ್ಕೀರನ್ ಪತ್ರಿಕೆಯ ಸಂಪಾದಕ ಆರ್. ಆರ್. ಗೋಪಾಲ್ ಇಂದು (ಭಾನುವಾರ) ಬೆಳಿಗ್ಗೆ ವೀರಪ್ಪನ್ನ ನ್ನು ಭೇಟಿಯಾಗಿದ್ದು , ಮಧ್ಯಾಹ್ನದ ಹೊತ್ತಿಗೆ ಮಾತುಕತೆಗಳು ಆರಂಭವಾಗಲಿವೆ ಎಂದು ನಕ್ಕೀರನ್ ಪತ್ರಿಕೆಯ ಮೂಲಗಳು ತಿಳಿಸಿವೆ.
ರಾಜ್ ಅಪಹರಣಕಾರ ವೀರಪ್ಪನ್ನೊಂದಿಗೆ ಮಾತುಕತೆ ನಡೆಸಲು ಮಂಗಳವಾರ (ಆಗಸ್ಟ್ 1) ರಾತ್ರಿ ವೀರಪ್ಪನ್ ಅಡಗುದಾಣದತ್ತ ಗೋಪಾಲ್ ಹೊರಟಿದ್ದರು. ಈ ನಡುವೆ ಮಳೆಯ ತೊಂದರೆಯಿಂದಾಗಿ ವೀರಪ್ಪನ್ ಅಡಗಿರುವ ಸ್ಥಳವನ್ನು ತಲುಪುವುದು ತಡವಾಗಿತ್ತು. ಇಂದು ಬೆಳಿಗ್ಗೆ ಗೋಪಾಲ್ ವೀರಪ್ಪನ್ ತಂಗಿರುವ ಜಾಗವನ್ನು ತಲುಪಿದ್ದಾರೆ ಎಂದು ತಮಿಳುನಾಡು ಮುಖ್ಯ ಮಂತ್ರಿ ಕರುಣಾನಿಧಿ ಇಂಡಿಯಾ ಇನ್ಫೋ ವರದಿಗಾರರಿಗೆ ದೃಢಪಡಿಸಿದ್ದಾರೆ.
ಗೋಪಾಲ್ ಸಂದೇಶದ ನಿರೀಕ್ಷೆಯಲ್ಲಿ ಚೆನ್ನೈ ಸಭೆ : ಈ ನಡುವೆ ಚೆನ್ನೈನಲ್ಲಿ ಕರ್ನಾಟಕ ಮತ್ತು ತಮಿಳು ನಾಡಿನ ಮುಖ್ಯ ಮಂತ್ರಿಗಳ ಸಭೆ ನಡೆಯುತ್ತಿದ್ದು, ವೀರಪ್ಪನ್ ಕ್ಯಾಸೆಟ್ ಮುಖಾಂತರ ಕಳಿಸಿರುವ ಬೇಡಿಕೆಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುತ್ತಿದೆ. ಗೋಪಾಲ್ ವೀರಪ್ಪನನ್ನು ಭೇಟಿ ಮಾಡಿರುವ ವಿಷಯ ಸಭೆಯ ಗಮನಕ್ಕೆ ಬಂದಿದ್ದು, ಸಭೆ ಗೋಪಾಲ್ ಅವರಿಂದ ಸಂದೇಶವನ್ನು ನಿರೀಕ್ಷಿಸುತ್ತಿದೆ ಎಂದು ತಿಳಿದು ಬಂದಿದೆ.