ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶ್ರೀಕೃಷ್ಣನ ಆಡುಂಬೊಲ

By Super
|
Google Oneindia Kannada News

ಇಲ್ಲಿ ನಿತ್ಯ ಉತ್ಸವ. ಈ ಉತ್ಸವಕ್ಕೆ ಅಬ್ಬರ ಆಡಂಬರ ಇಲ್ಲ. ನಿತ್ಯ ಭಜನೆ, ಅರ್ಚನೆ, ಸಂಕೀರ್ತನೆ, ಆಯನಗಳು .... ಅಂಗಣ, ಪ್ರಾಕಾರಗಳಲ್ಲಿ ಓಡಾಡುವ ವಟುಗಳು , ಪಕ್ಕದ ವಸಂತ ಮಹಲ್‌ನಲ್ಲಿ ನಿತ್ಯ ಗಾಯನ, ಗೋಷ್ಠಿ, ಚರ್ಚೆಗಳು, ಅಲ್ಲಿಗೆ ಕೇಳಿಸುವ ಚೆಂಡೆಯ ಸದ್ದು .... ಎಲ್ಲಿಂದ ಬಂತು ಎಂದು ಕತ್ತೆತ್ತಿ ನೋಡುತ್ತಾ ನಡೆದರೆ ಪೂರ್ಣ ಪ್ರಜ್ಞ ಕಾಲೇಜಿನ ವೇದಿಕೆಯಲ್ಲಿ ಉತ್ತರಾದಿ ದಕ್ಷಿಣಾದಿ ಯಕ್ಷಗಾನ ಎನ್ನುವ ಭೇದ ಇಲ್ಲದೆ ಧೀಂಗಿಣ ಹೊಡೆಯುವ ಬಾಲ ಗೋಪಾಲ ವೇಷ...

ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ನ ಈ ಚಿತ್ರ ಊಹಿಸಿಕೊಳ್ಳುವುದೆಂದರೆ ಆಗಿಹೋದ ಕಾಲದ ಜೀವನ ಶೈಲಿಯನ್ನು ಓದಿದ ಪುಸ್ತಕಗಳ ಪುಟಗಳು ತೆರೆದುಕೊಂಡಂತೆ. ಮಂಗಳ ೂರು ಏರ್‌ಪೋರ್ಟ್‌ನಿಂದ 64 ಕಿಲೋ ಮೀಟರ್‌, ಬೆಂಗಳೂರಿನಿಂದ 425 ಕಿ. ಮಿ. ದೂರದಲ್ಲಿ ರುವ ಉಡುಪಿ ದಕ್ಷಿಣ ಕನ್ನಡದಿಂದ ಪ್ರತ್ಯೇಕವಾದರೂ ಹಂತ ಹಂತವಾಗಿ ಬೆಳೆಯುತ್ತಿದೆ. ವೇದ ಶಿಕ್ಷಣ ನೀಡುವ ಪ್ರಸಿದ್ಧ ಮಧ್ವ ಪೀಠವಾಗಿ ಉಡುಪಿ ಗುರುತಿಸಿಕೊಂಡಿದೆ. ಇತ್ತೀಚೆಗೆ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ಕೊಡುವ ಹವ್ಯಾಸ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯ ಮರವಂತೆ, ಮಲ್ಪೆ ಬೀಚ್‌ಗಳು, ಸೈಂಟ್‌ ಮೇರಿಸ್‌ ದ್ವೀಪಗಳು ಪ್ರವಾಸಿಗರನ್ನು ಸೆಳೆಯುತ್ತಿದೆ. ಬೆಳಿಗ್ಗೆ ಮುದ ನೀಡಿ , ಮದ್ಯಾಹ್ನ ಬೆವರಿಳಿಸಿ, ಸಂಜೆ ಹೊತ್ತಿಗೆ ಸುಸ್ತಾಗಿ ಮುದುರಿಕೊಳ್ಳುವಂತೆ ಮಾಡುವ ಈ ಬೀಚ್‌ಗಳಲ್ಲಿ ಅಲೆದಾಡಿ ಮಂದಿ ಕೃಷ್ಣ ಮಠದ ಭಕ್ತಿ ರಸದಲ್ಲಿ ಮತ್ತೆ ಹೊಚ್ಚ ಹೊಸದಾಗುತ್ತಾರೆ.

ಕೃಷ್ಣ ಮಠದ ಸುತ್ತ ಅಗಲವಾದ ರಾಜಾಂಗಣವಿದೆ. ಮಠಕ್ಕೆ ಒಂದು ಸುತ್ತು ಬಂದರೆ ನೀವು ಅಷ್ಟ ಮಠಗಳ ಹೆಬ್ಬಾಗಿಲುಗಳನ್ನೆಲ್ಲಾ ನೋಡಿರುತ್ತೀರಿ. ನೀವು ರಾಜಾಂಗಣ ಪ್ರವೇಶಿಸುತ್ತಿದ್ದಂತೆಯೇ ಕನಕನ ಕಿಂಡಿ ನಿಮ್ಮ ಗಮನ ಸೆಳೆಯುತ್ತದೆ. ಪಕ್ಕದಲ್ಲಿ ತುಸು ನಡೆದರೆ ಮಾಧ್ವ ಸರೋವರ ಇದೆ. ಇನ್ನೆರಡು ಹೆಜ್ಜೆ ಹಾಕಿದರೆ ಗೋಶಾಲೆಯಿದೆ.

ಉಡುಪಿಯಿದು...
ಉಡುಪಿಯಲ್ಲಿ ಆಡು ಭಾಷೆ ತುಳು. ಕನ್ನಡವಿಲ್ಲವೆಂದಲ್ಲ. ದಕ್ಷಿಣ ಕನ್ನಡದಲ್ಲಿ ನೀವು ಕೇಳುವ ತುಳುವಿಗಿಂತ ತುಸು ಭಿನ್ನವಾದ ತುಳು ಅಲ್ಲಿದೆ. ಸಂಸ್ಕೃತ ಮಿಶ್ರಿತ ತುಳು ಭಾಷೆಯಲ್ಲಿ ಅರ್ಚಕರಿಂದ ಹಿಡಿದು ಉಡುಪಿ ಮಲ್ಲಿಗೆ ಬೆಳೆಯುವ ರೈತನವರೆಗೂ ನಿಮ್ಮೊಡನೆ ಅವರು ಅಶನ-ವಸನಗಳ ಬಗ್ಗೆ ಮಾತನಾಡುತ್ತಾರೆ.

ಪರ್ಯಾಯ : ಶ್ರೀ ಕೃಷ್ಣ ವಿಗ್ರಹವನ್ನು ಮಧ್ವಾಚಾರ್ಯರ ಶಿಷ್ಯರು ಮಾತ್ರ ಮುಟ್ಟಬಹುದು. ಕೃಷ್ಣ ಮಠದ ಸುತ್ತ ಎಂಟು ಮಠಗಳಿವೆ. ಈ ಮಠಗಳ ಮಠಾಧೀಶರು ಮಾತ್ರ ವಿಗ್ರಹವನ್ನು ಮುಟ್ಟಬಹುದು. ಪೂಜೆ ಮಾಡಬಹುದು. ಪ್ರತಿಯಾಂದು ಮಠದವರೂ ಸರತಿಯ ಪ್ರಕಾರ ಎರಡು ವರ್ಷ ಪೂಜೆ ಮಾಡುತ್ತಾರೆ. ಒಂದು ಮಠದವರ ಅವಧಿ ಮುಗಿದು ಇನ್ನೊಂದು ಮಠದವರು ಪೂಜೆಯ ಅಧಿಕಾರವನ್ನು ವಹಿಸಿಕೊಳ್ಳುವಾಗ ನಡೆಯುವ ಉತ್ಸವವೇ ಪರ್ಯಾಯ ಉತ್ಸವ. ಉಡುಪಿ ಪರ್ಯಾಯ ಉತ್ಸವ ಉಡುಪಿಯ ಎಲ್ಲ ಉತ್ಸವ , ಹಬ್ಬಗಳಿಗೆ ಕಿರೀಟಪ್ರಾಯ. ವಾರ್ಷಿಕ ಜಾತ್ರೆ ಜನವರಿ ತಿಂಗಳ ಸಂಕ್ರಾಂತಿಯಂದು ನಡೆಯುತ್ತದೆ. ಗರ್ಭ ಗುಡಿಯಾಳಗೆ ವಜ್ರ ಕಿರೀಟಧಾರಿ ಕೃಷ್ಣ ವಿಗ್ರಹ ಇದೆ. ಜಾತ್ರೆ, ಆಯನಗಳ ಸಂದರ್ಭದಲ್ಲಿ ಚಿನ್ನದ ರಥ ಎಳೆಯುವ ಕಾರ್ಯಕ್ರಮವಿರುತ್ತದೆ.

ಉಡುಪಿಗೆ ಹೋಗಬೇಕೆಂದಿದ್ದೀರಾ ?
ಬೆಂಗಳೂರಿನಿಂದ ಕುಂದಾಪುರಕ್ಕೆ ಹೋಗುವ ಎಲ್ಲ ಬಸ್ಸುಗಳೂ ಉಡುಪಿ ನಗರಕ್ಕೆ ಹೋಗುತ್ತವೆ. ಬೆಂಗಳೂರಿನಿಂದ 9 ಗಂಟೆಗಳ ಪ್ರಯಾಣ. ಮುಖ್ಯ ಬಸ್‌ ನಿಲ್ದಾಣದಿಂದ ದೇವಸ್ಥಾನಕ್ಕೆ ಒಂದು ಕಿಲೋ ಮೀಟರ್‌ಗಿಂತ ಹೆಚ್ಚು ದೂರವಿಲ್ಲ. ಜಿಲ್ಲೆಯ ತುಂಬಾ ಓಡಾಡಲು ಸಾಕಷ್ಟು ಖಾಸಗಿ ಸಿಟಿ ಬಸ್‌ಗಳಿವೆ. ನಿಮಗೆ ದೇವಸ್ಥಾನದಲ್ಲಿಯೇ ವಸತಿ ವ್ಯವಸ್ಥೆ ಇದೆ. ಆದರೆ ನೀವಿಲ್ಲ ತಂಗಲಾರಿರಿ, ಮಠದಿಂದ ಕೂಗಳತೆಯಲ್ಲಿ ಈಚೆಗೆ ದೊಡ್ಡದೊಡ್ಡ ಹೋಟೆಲುಗಳು ತಲೆ ಎತ್ತಿವೆ. ನಾವು ಯಾರಿಗೆ ಏನೂ ಕಡಿಮೆ ಇಲ್ಲ ಎನ್ನುವಂತೆ !

ಉಡುಪಿಯ ಸನಿಹದಲ್ಲೇ ಮಣಿಪಾಲ. ಮಣಿಪಾಲ ಅಂದರೆ ಹೊಸಹೊಸದೆನ್ನುವುದನ್ನು ತಾನೇ ಮೊದಲು ರೂಢಿಸಿಕೊಳ್ಳುವ ಪೈಗಳ ಅಂಗಳ. ಇಲ್ಲಿ ಇತ್ತೀಚೆಗೆ ಒಂದು ಶಿಬಿರ ನಡೆಯಿತು. ಇಂಟರ್‌ನೆಟ್‌ ಪರಿಚಯ ಮಾಡಿಕೊಳ್ಳುವವರಿಗೆ ಒಂದು ಆರಂಭಿಕ ಅಭ್ಯಾಸ ಶಾಲೆಯಂತಿದ್ದ ಈ ಶಿಬಿರ ನಡೆಸಿಕೊಟ್ಟವರು ಪೈ ಕುಟುಂಬದವರೇ. ಅಂದಹಾಗೆ ವ್ಯವಸ್ಥಾಪಕರು ಹೇಳಿಕೊಂಡಂತೆ ಭಾರತದಲ್ಲಿ ಇಂಟರ್‌ನೆಟ್‌ ಸಾ-ಕ್ಷ-ರರು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು ಇಲ್ಲೇ. ಮಣಿಪಾಲದಲ್ಲೇ.

English summary
Eternal attraction called Udupi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X