ಝೆನ್ ಕಥೆ: ಗೆಲ್ಲುವುದು ಕೌಶಲದಿಂದಲ್ಲ ಮನಸ್ಸಿನ ಸಾಮರ್ಥ್ಯದಿಂದ
ಒಬ್ಬ ಝೆನ್ ಮಾಸ್ಟರ್ ಬಿಲ್ಲು ವಿದ್ಯೆಯಲ್ಲಿಯೂ ಬಹಳ ಪ್ರವೀಣರಾಗಿದ್ದರು. ಒಬ್ಬ ಯುವ ಬಿಲ್ಲುಗಾರನೊಬ್ಬ ಅನೇಕ ಬಿಲ್ಲುಗಾರಿಕೆ ಸ್ಪರ್ಧೆಗಳಲ್ಲಿ ಗೆದ್ದಿದ್ದ. ಆತನಿಗೆ ಬಿಲ್ವಿದ್ಯೆಯಲ್ಲಿ ಬಹಳ ಹೆಸರಾಗಿದ್ದ ಈ ಝೆನ್ ಮಾಸ್ಟರ್ನಿಗೆ ಸವಾಲು ಒಡ್ಡಿ ಆತನನ್ನು ಸೋಲಿಸಬೇಕು ಮತ್ತು ತಾನು ಅಪ್ರತಿಮ ಬಿಲ್ಲುಗಾರ ಎಂಬ ಹೆಸರು ಮಾಡಬೇಕು ಎಂಬ ಬಯಕೆ ಮೂಡಿತು. ಆತ ಝೆನ್ ಮಾಸ್ಟರ್ ಬಳಿ ಬಂದು ನೇರವಾಗಿ ಸವಾಲು ಹಾಕಿದ. ಝೆನ್ ಮಾಸ್ಟರ್ ಕೂಡ ಯಾವುದೇ ಆಲೋಚನೆ ಮಾಡದೆ ಆತನ ಸವಾಲು ಸ್ವೀಕರಿಸಿದ.
ಯುವಕ ತನ್ನ ಬಿಲ್ಲು ಬಾಣಗಳನ್ನು ಹೊರತೆಗೆದು ಮೊದಲ ಪ್ರಯತ್ನದಲ್ಲಿಯೇ ದೂರದ ಒಂದು ಮರಕ್ಕೆ ಗುರಿ ಇಟ್ಟು ಹೊಡೆದ. ಬಳಿಕ ಇನ್ನೊಂದು ಬಾಣದಿಂದ ಮೊದಲು ಹೊಡೆದ ಬಾಣ ಇಬ್ಭಾಗವಾಗುವಂತೆ ಹೊಡೆದು ತನ್ನ ಸಾಮರ್ಥ್ಯ ಪ್ರದರ್ಶಿಸಿದ.
ಝೆನ್ ಮಾಸ್ಟರ್ ಕಡೆ ತಿರುಗಿ, "ಅಲ್ಲಿ ನೋಡಿ, ನೀವು ಅದನ್ನೇ ಪುನರಾವರ್ತಿಸುವಂತೆ ನಿಮ್ಮ ತಾಕತ್ತು ಪ್ರದರ್ಶಿಸಿ ನೋಡೋಣ" ಎಂದು ಸವಾಲು ಹಾಕಿದ.
ಆದರೆ ಝೆನ್ ಮಾಸ್ಟರ್ ತಮ್ಮ ಬಿಲ್ಲನ್ನು ತೆಗೆದುಕೊಳ್ಳಲಿಲ್ಲ. ಬದಲಿಗೆ ಆ ಬಿಲ್ಲುಗಾರನಿಗೆ ತನ್ನನ್ನು ಹಿಂಬಾಲಿಸುವಂತೆ ಹೇಳಿದ.
ಝೆನ್ ಮಾಸ್ಟರ್ ಏನು ಮಾಡುತ್ತಿದ್ದಾರೆ ಎಂದು ಅರ್ಥವಾಗದೆ ಇದ್ದರೂ, ಯುವ ಬಿಲ್ಲುಗಾರ ಕುತೂಹಲದಿಂದ ಮಾಸ್ಟರ್ನ ಹಿಂದೆ ಪರ್ವತದತ್ತ ತೆರಳಿದ. ತುಂಬಾ ಹಳೆಯದಾದ, ಶಿಥಿಲಗೊಂಡಿದ್ದ ಮತ್ತು ಕಾಲಿಟ್ಟರೆ ಮುರಿದುಬೀಳುವಂತೆ ಅಲಿಗಾಡುತ್ತಿದ್ದ ಒಂದು ಮರದ ಸೇತುವೆ ಮೇಲೆ ಕಾಲಿಟ್ಟರು.

ಝೆನ್ ಮಾಸ್ಟರ್ ಅಂಜಿಕೆಯಿಲ್ಲದೆ ಸರಾಗವಾಗಿ ಅದರ ಮೇಲೆ ನಡೆದುಕೊಂಡು ಸಾಗಿದ. ಯುವ ಬಿಲ್ಲುಗಾರ ನಡುಗುತ್ತಲೇ ಅದರ ಮೇಲೆ ತೆರಳಿದ. ಸೇತುವೆಯ ಮಧ್ಯಭಾಗದಲ್ಲಿ ನಿಂತು ನೋಡಿದರೆ ಕೆಳಗೆ ಆಳವಾದ ಕಮರಿ. ಝೆನ್ ಮಾಸ್ಟರ್ ಅಲ್ಲಿ ತನ್ನ ಬಿಲ್ಲು ಮತ್ತು ಬಾಣವನ್ನು ಹೊರತೆಗೆದು, ಯುವ ಬಿಲ್ಲುಗಾರನಿಗೆ ದೂರ ಮರವೊಂದನ್ನು ತೋರಿಸಿ ಬಾಣ ಬಿಟ್ಟ. ಅದು ಆ ಮರಕ್ಕೆ ಹೋಗಿ ನಾಟಿತು.
ಯುವಕನೆಡೆಗೆ ತಿರುಗಿ, "ಈಗ ನಿನ್ನ ಸರದಿ'' ಎಂದು ಅಲ್ಲಿಂದ ವಾಪಸ್ ಸುರಕ್ಷಿತ ಜಾಗಕ್ಕೆ ಬಂದು ನಿಂತರು. ಆ ಸೇತುವೆಯೋ ಯಾವಾಗ ಬೇಕಾದರೂ ತುಂಡಾಗುವ ಸ್ಥಿತಿಯಲ್ಲಿತ್ತು. ಕೆಳಗಿನ ಆಳವಾದ ಕಮರಿ ಇನ್ನಷ್ಟು ಭಯ ಹುಟ್ಟಿಸುತ್ತಿತ್ತು. ಅದನ್ನು ಕಂಡು ಯುವಕ ಗಾಬರಿಗೊಂಡಿದ್ದ. ಆತನಿಗೆ ಅಲ್ಲಿ ನಿಲ್ಲಲೂ ಸಾಧ್ಯವಾಗುತ್ತಿರಲಿಲ್ಲ. ಬಿಲ್ಲು ಬಾಣವನ್ನು ಗುರಿ ಇಡಲೂ ಸಾಧ್ಯವಾಗಲಿಲ್ಲ. ಕೊನೆಗೆ ಜೀವ ಉಳಿಸಿಕೊಂಡರೆ ಸಾಕೆಂದು ಭಯದಿಂದಲೇ ರಸ್ತೆಯ ಬದಿಗೆ ವಾಪಸ್ ಬಂದ.
ಹತಾಶೆ, ಬೇಸರದಿಂದಿದ್ದ ಬಿಲ್ಲಗಾರನಿಗೆ ಮಾಸ್ಟರ್ ಸಮಾಧಾನ ಮಾಡಿದ. "ನೀನು ಒಬ್ಬ ಬಿಲ್ಲುಗಾರನಾಗಿ ಹೆಚ್ಚು ಕೌಶಲ ಹೊಂದಿದ್ದೀಯ. ಆದರೆ ಮಾಡುವ ಕೆಲಸದಲ್ಲಿ ಮನಸ್ಸನ್ನು ನಿಗ್ರಹಿಸುವ ವಿಚಾರದಲ್ಲಿ ಇನ್ನೂ ಹೆಚ್ಚಿನ ಕೌಶಲ ಬೇಕು" ಎಂದು ಅಲ್ಲಿಂದ ಹೊರಟರು.
(ಸಂಗ್ರಹ)












Click it and Unblock the Notifications