ಕಲಾವಿದರ ನೆರವಿಗೆ ಸರ್ಕಾರದ ನೆರವು ಕೋರಿದ ‘ಸನಾದಿ ಅಪ್ಪಣ್ಣ’
‘ಕಲಾವಿದರಿಗೂ ಮಕ್ಕಳಿದ್ದಾರೆ. ಆ ಮಕ್ಕಳನ್ನು ಸಲಹಬೇಕು, ಅವರಿಗೆ ವಿದ್ಯಾಭ್ಯಾಸ ಕೊಡಿಸಬೇಕು. ಅದಕ್ಕಾಗಿ ಅವರಿಗೆ ಹಣಕಾಸು ನೆರವು ನೀಡಿ. ಅವರ ಕಚೇರಿಗಳನ್ನು ಏರ್ಪಡಿಸಿ. ’
ಹಾಗೆಂದು ಸರ್ಕಾರಕ್ಕೆ ಮನವಿ ಮಾಡಿಕೊಂಡವರು ‘ಸನಾದಿ ಅಪ್ಪಣ್ಣ’ ಎಂದೇ ಕನ್ನಡಿಗರಿಗೆ ಪರಿಚಿತರಾದ ಶಹನಾಯಿ ಮಾಂತ್ರಿಕ ಬಿಸ್ಮಿಲ್ಲಾ ಖಾನ್. ಕನಿಷ್ಠ ಒಂದೆರಡು ಕಚೇರಿಗಳನ್ನಾದರೂ ಸರ್ಕಾರ ಏರ್ಪಡಿಸಿದರೆ, ನನಗೆ, ನನ್ನಂಥ ಕಲಾವಿದರಿಗೆ ತುಂಬಾ ಉಪಕಾರವಾದೀತು ಎಂದು ಬಿಸ್ಮಿಲ್ಲಾ ಖಾನ್ ಭಾವುಕರಾಗಿ ಹೇಳಿದರು. ಡೆಹ್ರಾಡೂನ್ನಲ್ಲಿ ಬುಧವಾರ (ಜೂ.19) ರಾತ್ರಿ ನಡೆದ ಕಚೇರಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಸ್ಮಿಲ್ಲಾ ಖಾನ್ ತೆರೆದಿಟ್ಟದ್ದು - ಸಂಗೀತಗಾರರ ಅಸಹಾಯಕತೆಯನ್ನು .
ಮಧುವಂತಿಯಿಂದ ಕಜಾರಿವರೆಗೆ ಶಹನಾಯಿ ಮಾಂತ್ರಿಕತೆ ಮೆರೆದ ಬಿಸ್ಮಿಲ್ಲಾ ಖಾನ್ ನೆರೆದಿದ್ದ ಸಹಸ್ರಾರು ಸಂಗೀತ ಸಹೃದಯರಿಗೆ ಹೇಳಿದ್ದು - ‘ನಾನು ನನ್ನ ಸಂಭಾವನೆ ಪಡೆದಿದ್ದೇನೆ. ನೀವು ಸಂಗೀತವನ್ನು ಆನಂದಿಸಿದ್ದೀರಿ. ನಾನು ನಿಮಗೊಂದು ಮಾತು ಹೇಳುವುದಿದೆ, ದಯವಿಟ್ಟು ನಿಮ್ಮ ಮಕ್ಕಳಿಗೆ ಸಂಗೀತ ಕಲಿಸಿ.’
ಇಳಿ ವಯಸ್ಸಿನ ಸಂಗೀತಗಾರನ ಮಾತಿನಲ್ಲಿ ಕಳಕಳಿಯಿತ್ತು . ದಣಿವೂ ಇತ್ತು .
ಉತ್ತರಾಂಚಲದ ರಾಜ್ಯಪಾಲ ಎಸ್.ಎಸ್.ಬರ್ನಾಲ ವೇದಿಕೆಗೆ ತೆರಳಿ ಬಿಸ್ಮಿಲ್ಲಾ ಅವರನ್ನು ಅಭಿನಂದಿಸಿದರು. ನಿಮಗೆ ಸಂತೋಷವಾಗಿದ್ದರೆ ನಾನು ಗೆದ್ದಂತೆ ಎಂದು ಬಿಸ್ಮಿಲ್ಲಾ ಪ್ರತಿಕ್ರಿಯಿಸಿದರು. ಸರ್ಕಾರಿ ಉತ್ಸವಗಳಲ್ಲಿ ಸಂಗೀತ ಕಚೇರಿಗಳನ್ನು ಏರ್ಪಡಿಸಿ ಎಂದು ರಾಜ್ಯಪಾಲರನ್ನು ವಿನಂತಿಸಿಕೊಳ್ಳಲು ಅವರು ಮರೆಯಲಿಲ್ಲ .
ಒಂದೆಡೆ ಟೀ ಪುಡಿಯಾಂದರ ರುಚಿಗೆ ಹಾಗೂ ತನ್ನ ಅಗಾಧ ವಿದ್ವತ್ತಿಗೆ ತಾಳೆ ಹಾಕುವ ಅಪ್ರತಿಮ ತಬಲಾಪಟು ವ್ಯಾಪಾರಿ, ಇನ್ನೊಂದೆಡೆ ಸಂಗೀತ ಕಲಾವಿದರ ಆರ್ಥಿಕ ಅಸಹಾಯಕತೆಯ ಬಿಚ್ಚಿಡುವ ಕಲಾವಿದ ಬಿಸ್ಮಿಲ್ಲಾ !
- ಸಂಗೀತ ಸರಸತಿಯೇ ಏನಮ್ಮಾ ಈ ವಿಪರ್ಯಾಸ!
(ಪಿಟಿಐ)
ವಾರ್ತಾ ಸಂಚಯ
ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications