ಸಾಧನ ಕೇರಿಯ ಶ್ರಾವಣ ಪ್ರತಿಭೆ ಬೇಂದ್ರೆ!
. ಬೇಂದ್ರೆ ಜನಮನದ ಕವಿ. ಧಾರವಾಡದ ದತ್ತಾತ್ರೇಯ ರಾಮಚಂದ್ರ ಬೇಂದ್ರೆ ಕವಿಯಲ್ಲ , ವರಕವಿ.*ಸತ್ಯವ್ರತ ಹೊಸಬೆಟ್ಟು
ಎನ್ನ ಪಾಡೆನಗಿರಲಿ. ಅದರ ಹಾಡನಷ್ಟೇ ನೀಡುವೆನು ನಿನಗೆ
ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಆ ಸವಿಯ ಹನಿಸು ನನಗೆ
ಅಂತ ಹಾಡಿದ ಅಂಬಿಕಾತನಯದತ್ತ ಹಾಡನ್ನು ಬದುಕಾಗಿಸಿಕೊಂಡವರು. ಬದುಕನ್ನೇ ನಾಕು ತಂತಿಯ ವೀಣೆ ಮಾಡಿಕೊಂಡು ನಾದ ವೀಣೆ ಹೊರಡಿಸಿದವರು. ಅವರು ಕಾವ್ಯ ಪ್ರಪಂಚದಲ್ಲಿ ಹೊಸದೊಂದು ಹಾದಿ ತೆರೆಯಲಿಲ್ಲ. ಒಂದು ಯುಗದ ಕಣ್ಣು ತೆರೆಸಿದ ಕವಿ ಅಂತ ಕರೆಸಿಕೊಳ್ಳಲಿಲ್ಲ. ಬದಲಾಗಿ ರೂಡಿಯ ಮಾತಿಗೆ ವಾಗ್ರೂಡಿಯ ರೂಪಕ್ಕೆ ರೂಪಕದ ವಿಸ್ತಾರ ಒದಗಿಸಿದವರು. ಪದಗಳ ಜೊತೆ ಅವರಾಡಿದ ಆಟ, ಪದಗಳ ಪುನರುಕ್ತಿಯಲ್ಲಿ ಅವರು ಸೃಷ್ಟಿಸಿದ ಕಾವ್ಯ ಪ್ರಪಂಚ ಅನನುಕರಣೀಯ.
ಬೇಂದ್ರೆ ಹುಟ್ಟಿದ್ದು 1896 ಜನವರಿ 31ರಂದು. ಅವರ ಪ್ರಕಾರ ಮನ್ಮಥ ನಾಮ ಸಂವತ್ಸರದ ಮಾಘ ಪ್ರತಿಪದೆಯಂದು. ಪ್ರಾಥಮಿಕ ಓದು ಧಾರವಾಡದಲ್ಲಿ. ಮುಂದೆ ಪೂನಾದ ಫರ್ಗ್ಯೂಸನ್ ಕಾಲೇಜಿನಲ್ಲಿ ಬಿ.ಎ. 1935 ಎಂ.ಎ. ಕವಿ ಅಂಬಿಕಾತನಯದತ್ತರು ಅವ್ಯಕ್ತ ಶಕ್ತಿಯನ್ನು ನಂಬಿದವರು. ನಾನು ಕವಿಯಲ್ಲ. ಕವಿ ನನ್ನೊಳಗೆ ಇದ್ದಾನೆ. ಅವನು ನಿಜವಾದ ಕವಿ, ಅನ್ನುತ್ತಿದ್ದವರು ವೀರನಾರಾಯಣ ಕವಿ, ಲಿಪಿಕಾರ ಕುಮಾರವ್ಯಾಸ ಅಂದ ಕುಮಾರ ವ್ಯಾಸನ ಹಾಗೆ ಬೇಂದ್ರೆ ಕವಿತ್ವ ಹುಲು ಮಾನವನಿಗೆ ಸಾಧ್ಯವಿಲ್ಲ, ಅದೊಂದು ದೈವಿಕ ಕ್ರಿಯೆ ಅಂತಲೇ ನಂಬಿದವರು.
ಅವರ ಕವಿತೆಗಳು ಕವಿಯ ಹೆಸರು ಅರಿಯದೆಯೇ ಮನೆ ಮಾತಾಗಿದ್ದೂ ಉಂಟು. ಇಳಿದು ಬಾ ತಾಯೇ ಇಳಿದು ಬಾ, ಹಕ್ಕಿ ಹಾರುತಿದೆ ನೋಡಿದಿರಾ, ಶ್ರಾವಣ ಬಂತು, ಇನ್ನೂ ಯಾಕ ಬರಲಿಲ್ಲವ್ವ ಹುಬ್ಬಳ್ಳಿಯಾವ, ಮುಂತಾದ ಗೀತೆಗಳಲ್ಲಿ ಬೇಂದ್ರೆ ಜಾನಪದೀಯ ಸ್ಪಂದನಗಳನ್ನು ಹೊರಡಿಸಿದರೆ , ನಾಕು ತಂತಿಯ ಕವಿತೆಗಳು ಅರ್ಥ ಮಾಡಿಕೊಳ್ಳಲು ಅಸಾಧ್ಯವಾದ ಮೆಟಫಿಸಿಕಲ್ ಕವಿತೆಗಳಂತೆ ಕಂಡವು. ಕಾವ್ಯದ ಮೇಲೆ ತತ್ವ ಶಾಸ್ತ್ರ ದ ಪ್ರಭಾವ ಢಾಳಾಗಿಯೇ ಕಾಣಿಸಿ ಕೊಂಡಿತು. ನಾನು ನೀನಿನ ಆನು ತಾನಿಗೆ .. . ಎಂಬಿತ್ಯಾದಿ ಸಾಲುಗಳು ಅರ್ಥ ಹೊರಡಿಸುವ ಪರಿ ಅರ್ಥವಾಗದೇ ಹೋಯಿತು.
ಬೇಂದ್ರೆ 29 ಕವನ ಸಂಕಲನಗಳನ್ನು ಬರೆದಿದ್ದಾರೆ. ಒಂಭತ್ತು ವಿಮರ್ಶಾ ಸಂಕಲನ, ಹದಿನಾಲ್ಕು ನಾಟಕ, ಒಂದು ಕಥಾ ಸಂಕಲನ, ಎರಡು ಭಾಷಣ, ಏಳು ಅನುವಾದಿತ ಕೃತಿಗಳು, ಐದು ಮರಾಠಿ ಗ್ರಂಥ, ಒಂದು ಇಂಗ್ಲಿಷ್ ಲೇಖನಗಳ ಸಂಕಲನ ಅವರ ಸಾಧನೆಗೆ ಸಾಕ್ಷಿ.
ಕೃತಿ ಶ್ರೇಣಿ :
ಕವನ ಸಂಕಲನ -ಕೃಷ್ಣ ಕುಮಾರಿ, ಗರಿ, ಸಖೀಗೀತ, ಉಯ್ಯಾಲೆ, ನಾದಲೀಲೆ, ಹಾಡು ಪಾಡು, ಗಂಗಾವತರಣ, ಅರಳು ಮರಳು (ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ), ಹೃದಯ ಸಮುದ್ರ, ಮುಕ್ತಕಂಠ, ಚೈತ್ರಾಲಯ, ಜೀವಲಹರಿ, ನಮನ, ಸಂಚಯ, ಉತ್ತರಾಯಣ, ಮುಗಿಲ ಮಲ್ಲಿಗೆ, ಯಕ್ಷ ಯಕ್ಷಿ, ನಾಕು ತಂತಿ, ಮತ್ತೆ ಬಂತು ಶ್ರಾವಣ.
ನಾಟಕ -ಸಾಯೋ ಆಟ, ಉದ್ಧಾರ, ಜಾತ್ರೆ, ದೆವ್ವದ ಮನೆ, ಹೊಸ ಸಂಸಾರ
ಲೇಖನ ಸಂಕಲನ - ಸಾಹಿತ್ಯದ ವಿರಾಟ್ ಸ್ವರೂಪ
ಭಾಷಣ-ಮಾತೆಲ್ಲ ಜ್ಯೋತಿ, ಮತಧರ್ಮ ಮತ್ತು ಆಧುನಿಕ ಮಾನವ
ಮರಾಠಿ - ವಿಠ್ಠಲ ಸಂಪ್ರದಾಯ ಶಾಂತಲಾ
ಪ್ರಶಸ್ತಿ ಹಾರ- ವರಕವಿ, ಹಾಡುಹಕ್ಕಿ ಎಂಬಿತ್ಯಾದಿ ಅಭಿಮಾನದ, ಅಭಿದಾನಗಳ ಜೊತೆಗೆ ಅನೇಕ ಅಭಿನಂದನ ಗ್ರಂಥಗಳೂ ಪ್ರಕಟವಾಗಿವೆ. ಬೇಂದ್ರೆ ವಾಙ್ಮಯ ದರ್ಶನ, ದತ್ತವಾಣಿ, ನಮ್ಮ ಬೇಂದ್ರೆ , ಮೇಘದೂತ, ಮೊದಲಾದ ಹದಿನೇಳು ಗ್ರಂಥಗಳು ಪ್ರಕಟವಾಗಿವೆ. ಶಿವಮೊಗ್ಗದಲ್ಲಿ ನಡೆದ 27ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳದ ಅಧ್ಯಕ್ಷರಾಗಿದ್ದರು.
1959-- ಅರಳು ಮರಳು- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
1968-ಪದ್ಮಶ್ರೀ
1969-ಕೇಂದ್ರ ಸಾಹಿತ್ಯ ಅಕಾಡೆಮಿಯ ಗೌರವ ಫೆಲೋಶಿಪ್
1968-ಮೈಸೂರು ವಿವಿಯ ಡಾಕ್ಟರೇಟ್.
1979-ಉಡುಪಿ ಮಠದ ಕರ್ನಾಟಕ ಕವಿ ಕುಲತಿಲಕ ಬಿರುದು
1974-ನಾಕು ತಂತಿಗೆ ಜ್ಞಾನ ಪೀಠ
ಬೇಂದ್ರೆ ಬದುಕಿದ್ದು ಎಂಬತ್ತೆೈದು ವರ್ಷ. [ಜನನ- 31.01.1896 (ಧಾರವಾಡ), ಮರಣ- 26.10, 1981]
ನಸುನಗುತ ಬಂದೇವ, ನಗುನಗುತ ಬಾಳೋಣ ತುಸುನಗುತ ತೆರಳೋಣ
ಬಡನೂರು ವರುಷವಾ ಹರುಷಾದಿ ಕಳೆಯೋಣ ಯೋಕಾರೆ ಕೆರಳೋಣ
ಅಂದವರು ಅವರು. ಅವರ ಪ್ರಾಸಬದ್ಧತೆ, ಅರ್ಥ ಪೂರ್ಣತೆ, ಕಾವ್ಯ ಸಂದಿಗ್ಧತೆಗಳಿಗೆ ಉದಾಹರಣೆಯಾಗಿ ಈ ಸಾಲುಗಳನ್ನು ನೋಡಿ.
ನಲ್ಲ ಮುಟ್ಟಿದ ಗಲ್ಲ, ನಲ್ಲೆಯ ಮೈಯೆಲ್ಲ
ಹಿಗ್ಗಿನ ಮುಳ್ಳಿಗೆ ಸಿಕ್ಕಾಂಗ
ಜುಮ್ ಜುಮ್ ರುಮುಜುಮು ಗುಂಗುಣು ದುಮು ದುಮು
ನಾದದ ನದಿಯಾಂದು ನಡೆಧಾಂಗ
ಗಲ್ಲ ಗಲ್ಲಕೆ ಹಚ್ಚಿ ನಲ್ಲ ನಲ್ಲೆಯರಿರುಳು
ಗುಜುಗಜು ಗುಲುಗುಲು ನುಡಿಧಾಂಗ
ನಂಬಿಸಿ ರಂಬಿಸಿ, ಚುಂಬಿಸಿ ಎಡೆಗೊಂಬಿ
ಬಿಂಬಿಸಿ ಎದೆಯಾಳಗ ಅಂದಾಂಗ...
ಇಂಥ ನುಡಿಗಾರುಡಿಗನಿಗೆ, ಕಾವ್ಯ ಬ್ರಹ್ಮನಿಗೆ, ಪದಗಳ ಶಕ್ತಿಯನ್ನು ಪದ್ಯದಲ್ಲಿ ಸಾಕಾರವಾಗಿಸಿದ ಪದ ಪುರುಷನಿಗೆ ನಮ್ಮ ನಮನ

























Please read our comments policy before posting