ಕತೆ, ಮಾತು, ವಕ್ರೋಕ್ತಿ ಎಲ್ಲಾ ಮೇಳೈಸಿದ ಹೊತ್ತು!
ವಿಶ್ವೇಶ್ವರ
ಭಟ್ರ
ಪುಸ್ತಕ
ಬಿಡುಗಡೆ
ಸಮಾರಂಭದಲ್ಲಿ
ಗಿರಿಜಾ
ಭಟ್ರ
ಕರುಳಿನ
ಮಾತುಗಳಿದ್ದವು...
ರವಿ
ಬೆಳಗೆರೆ,
ಟಿ.ಎನ್.ಸೀತಾರಾಂರ
ಮಾತುಗಳಿದ್ದವು...
ಎಲ್ಲಾ
ಸೇರಿ
‘ನೂರೆಂಟು
ಮಾತು’...
ಮಾತಿನ
ಅರಮನೆ...
ವಿಶ್ವೇಶ್ವರಭಟ್ ಅವರ ‘ಸುದ್ದಿಮನೆ ಕಥೆ’ ಕೃತಿ ಕುರಿತು ಮಾತನಾಡುವ ನೆಪವಿಟ್ಟುಕೊಂಡು ಪತ್ರಿಕಾಲಯದೊಳಗೆ ನಡೆಯುವ , ನಿಮಗೆ ಗೊತ್ತಿಲ್ಲದ ಅನೇಕ ಸಂಗತಿಗಳನ್ನು ರವಿ ಬೆಳಗೆರೆ ಅಂದು ಬಿಚ್ಚಿಟ್ಟರು. ರವಿಯ ಭಾಷಣದಲ್ಲಿ ಮುಖ್ಯವಾಗಿ ಸುದ್ದಿಮನೆಯಲ್ಲಿ ನಡೆಯುವ ಪತ್ರಕರ್ತನ ಮತ್ತು ಪ್ರಕಾಶಕನ ಹಾಗೂ ಮಾಲೀಕರ ಮನೋವ್ಯಾಪಾರಗಳು ವಸ್ತುನಿಷ್ಠವಾಗಿ ಕೆಲವೊಮ್ಮೆ ವ್ಯಕ್ತ್ತಿನಿಷ್ಠವಾಗಿ ಬೆತ್ತಲೆಯಾದವು.
ಸುದ್ದಿಮನೆ ಕಥೆ, ನೂರೆಂಟುಮಾತು, ನಿಮಗೆ ಗೊತ್ತಿಲ್ಲದ ಗೋಯಂಕ ಹಾಗೂ ಮತ್ತಷ್ಟು ವಕ್ರತುಂಡೋಕ್ತಿಗಳು... ಪತ್ರಕರ್ತ ವಿಶ್ವೇಶ್ವರಭಟ್ ಅವರು ರಚಿಸಿದ ನಾಲಕ್ಕು ಪುಸ್ತಕಗಳು ಭಾನುವಾರ(ಡಿ.24) ಬೆಂಗಳೂರಿನ ಇನ್ಸ್ಟಿಟ್ಯೂಟ್ ಆಪ್ ವಲ್ಡ್ ರ್ ಕಲ್ಚರ್ ಸಭಾಂಗಣದಲ್ಲಿ ಬಿಡುಗಡೆ ಆದವು. ಜನ ಕಿಕ್ಕಿರಿದು ನೆರೆದಿದ್ದರು. ಲೇಖಕರ ಅಮ್ಮ ಗಿರಿಜಾ ಭಟ್, ಟಿ. ಎನ್. ಸೀತಾರಾಂ, ಮಾಳವಿಕಾ ಮತ್ತು ರವಿ ಬೆಳಗೆರೆ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.
ನೂರೆಂಟುಮಾತು ಕೃತಿಯಲ್ಲಿ ಬಿಡಿಬಿಡಿ ಲೇಖನದ ರೂಪದಲ್ಲಿ ಅನಾವರಣಗೊಳ್ಳುವ ಚಿಂತನೆಗಳು ಮುಖ್ಯವಾಗಿ ಮಾನವೀಯ ಸಂವೇದನೆ ಹಾಗೂ ಜನಪರ ಕಾಳಜಿಗಳನ್ನು ಅಭಿವ್ಯಕ್ತಗೊಳಿಸುತ್ತವೆ ಎಂದು ಸೀತಾರಾಂ ಉದಾಹರಣೆಗಳ ಮೂಲಕ ವಿವರಿಸಿದರು. ಸಾರ್ವಜನಿಕ ಹಿತಾಸಕ್ತಿಯ ವಿಷಯಗಳನ್ನು ಉದ್ವೇಗವಿಲ್ಲದೆ ಪದರಪದರವಾಗಿ ದಾಖಲಿಸುವ ಕೃತಿ ’ನೂರೆಂಟುಮಾತು’ ಎಂದು ಸೀತಾರಾಂ ಅಭಿಪ್ರಾಯಪಟ್ಟರು.
ರವಿಬೆಳಗೆರೆ ಮತ್ತು ವಿಶ್ವೇಶ್ವರಭಟ್ಟರ ಬರಹಗಳನ್ನು ತಾವು ಚಾಚೂ ತಪ್ಪದೆ ಓದುವುದಾಗಿ ನಟಿ ಮಾಳವಿಕಾ ಹೇಳಿದರು. ತಾವು ಬೆಳೆಯಲು ಕಾರಣರಾದ ನಿರ್ದೇಶಕ ಸೀತಾರಾಂ ಅವರ ಪ್ರೋತ್ಸಾಹ ಮತ್ತು ರವಿ ಹಾಗೂ ಭಟ್ಟರ ಸ್ನೇಹಸಂಪನ್ನತೆಯನ್ನು ಮಾಳವಿಕಾ ಕೊಂಡಾಡಿದರು.
ಅಕ್ಷರ ಕಲಿಯದ ಎಂದೂ ಶಾಲೆಗೆ ಹೋಗದ ಭಟ್ಟರ ತಾಯಿ ಗಿರಿಜಾಭಟ್ ಅವರ ಮಾತುಗಳಲ್ಲಿ ಶೈಕ್ಷಣಿಕ ವಿವೇಕ ಇರಲಿಲ್ಲ. ತಾಯಿ ಕರುಳು ಮಾತ್ರ ಮಾತನಾಡಿದುದು ಅಂದಿನ ಸಮಾರಂಭದ ವೈಶಿಷ್ಟ್ಯಗಳಲ್ಲಿ ಪ್ರಮುಖ ಸ್ಥಾನ ಪಡೆಯಿತು.
ತಾವು ರಚಿಸಿದ ನಾಲಕ್ಕು ಪುಸ್ತಕಗಳಲ್ಲಿ ಮುಖ್ಯವಾಗಿ ‘ನಿಮಗೆ ಗೊತ್ತಿಲ್ಲದ ಗೋಯಂಕ’ ಕುರಿತು ಲೇಖಕ ವಿಶ್ವೇಶ್ವರಭಟ್ ಸವಿಸ್ತಾರವಾಗಿ ಮಾತನಾಡಿದರು. ಈ ಪುಸ್ತಕಗಳನ್ನು ನೀವು ಕೊಂಡು ಓದಬೇಕು. ಗಾಂಧಿಬಜಾರ್ ಮುಖ್ಯರಸ್ತೆಯಲ್ಲಿರುವ (ವಿದ್ಯಾರ್ಥಿ ಭವನ್ ಹೊಟೆಲ್ನಿಂದ ಸ್ಪಲ್ಪ ಮುಂದೆ) ಅಂಕಿತ ಪ್ರಕಾಶನದಲ್ಲಿ (ಪ್ರಕಾಶ್ ಕಂಬತ್ತಳ್ಳಿ : 93433 30002) ದೊರೆಯುವ ಇಂಡಿಯನ್ ಎಕ್ಸ್ಪ್ರೆಸ್ ಸಾರಥಿ ದಿವಂಗತ ಗೋಯಂಕರ ಪುಸ್ತಕ ಓದಿದರೆ ನಿಮಗೆ ಸಂಯುಕ್ತ ಕರ್ನಾಟಕ ಪತ್ರಿಕೆಯ ಶಾಮರಾಯರು ಅರ್ಥವಾಗುತ್ತಾರೆ.
‘ಸುದ್ದಿಮನೆಯ ಕಥೆಗಳು’ ಚಂದಮಾಮ ಕತೆಗಳಿಗಿಂತ, ತ್ರಿಶೂಲ್, ಶೋಲೆ, ಭೂತಯ್ಯನ ಮಗ ಅಯ್ಯು ಕತೆಗಳಿಗಿಂತ ರೋಚಕವಾಗಿರುವುದು ನಿಮಗೇ ಗೊತ್ತಾಗುತ್ತದೆ. ಅವತ್ತಿನಿಂದ ಪತ್ರಿಕೆ ಓದುವಾಗಿನ ನಿಮ್ಮ ಮನಸ್ಸು ಬೇರೆಯೇರೀತಿ ಸಿದ್ಧಗೊಂಡಿರುತ್ತದೆ.
ಬಾಟಮ್ ಐಟಂ : ವಿಶ್ವೇಶ್ವರ ಭಟ್ರ ಪುಸ್ತಕಗಳ ಬಿಡುಗಡೆ ಸಮಾರಂಭ ಕೊನೆ ಘಟ್ಟ ತಲುಪಿದಾಗ, ರವಿ ಬೆಳಗೆರೆ ಸಾಂತಾಕ್ಲಾಸ್ನ ರೀತಿ ತಮ್ಮ ‘ಬಾಟಮ್ ಐಟಂ’ ಪುಸ್ತಕದ ಕಟ್ಟು ತೆಗೆದರು. ಭಟ್ರ ತಾಯಿ ಗಿರಿಜಾ ಭಟ್ ಅವರಿಂದ ಬಿಡುಗಡೆ ಮಾಡಿಸಿದರು.