Get Updates
Get notified of breaking news, exclusive insights, and must-see stories!

ಬಡತನವನ್ನೂ ಕಿತ್ತು ತಿನ್ನುವ ಹಸಿವನ್ನು ನೀಗಲು ಮದ್ದುಂಟೆ?

ಮೊನ್ನೆ ತಾನೇ ಒಂದು ಕಿರುಚಿತ್ರ ನೋಡ್ತಾ ಇದ್ದೆ. ನೋಡಿದ ಮೇಲೆ ಮನಸ್ಸೇಕೊ ಮತ್ತೆ ಈ ಹಸಿವಿನ ಯಾತನೆಯನ್ನು ತೋರಿಸಿ ಕಂಗೆಡಿಸಿತ್ತು. ಒಂದು ಪುಟ್ಟ ಹುಡುಗಿಯ ಬಡತನ ಹಸಿವಿನ ಜೊತೆ ಸಾಗುವ ಈ ಕತೆ ಅದೆಂಥವರ ಮನಸ್ಸನ್ನೂ ಕಲಕಿ ಹಾಕುತ್ತದೆ. ಅದರಲ್ಲಿರುವ ಒಂದು ಸನ್ನಿವೇಶ ನನಗೆ ಅತಿಯಾದ ನೋವನ್ನು ಕೊಟ್ಟಿತ್ತು.

ಅದೊಂದು ಮನೆಯಲ್ಲಿ ಊಟದ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಸಾಮಾನ್ಯವಾಗಿ ಎಲ್ಲ ತಾಯಂದಿರ ಒಂದು ಸಮಸ್ಯೆ ತನ್ನ ಮಗು ಸರಿಯಾಗಿ ತಿನ್ನುವುದಿಲ್ಲ ಅನ್ನುವುದು.

ಹೀಗಿರುವಾಗ ಆ ಕಾರ್ಯಕ್ರಮಕ್ಕೆ ಬಂದಿದ್ದ ವೈದ್ಯನ ಹತ್ತಿರ ಬಂದ ಒಬ್ಬಳು ತಾಯಿ ನನ್ನ ಮಗು ಸರಿಯಾಗಿ ಊಟ ಮಾಡುತ್ತ ಇಲ್ಲ. ಅದಕ್ಕೆ ಹಸಿವಾಗಲೂ ಯಾವುದಾದರೂ ಮದ್ದು ಇದ್ದರೆ ಬರೆದು ಕೊಡಿ ಡಾಕ್ಟರ್ ಅಂತಾಳೆ. ಇದನ್ನೆಲ್ಲ ದೂರದಲ್ಲೇ ನಿಂತು ಗಮನಿಸುವ ಆ ಪುಟ್ಟ ಹುಡುಗಿ, ಆದೆ ಮನೆಯಲ್ಲಿ ಕೆಲಸ ಮಾಡುವಳಾಗಿರುತ್ತಾಳೆ. ಬಡತನದ ಬೇಗೆಯನ್ನು ಸಹಿಸಿ ನೊಂದಿರುವ ಜೀವವದು. ನಿಸ್ತೇಜವಾದ ಕಣ್ಣು ಬಡಕಲು ಶರೀರ.

Is there any tonic or injection to get rid of hunger?

ಸ್ವಲ್ಪ ಹೊತ್ತಿಗೆ ಮೆಲ್ಲನೆ ಬಂದ ಆ ಹುಡುಗಿ ಅದೇ ವೈದ್ಯನ ಹತ್ತಿರ ಬಂದು ತನಗೂ ಒಂದು ಮದ್ದು ಬೇಕು ಅನ್ನುತ್ತಾಳೆ. ಅವಳು ಹೇಳಿದನ್ನು ಕೇಳಿ ಆ ವೈದ್ಯನೂ ದಂಗಾಗಿ ಹೋಗುತ್ತಾನೆ. "ಡಾಕ್ಟರ್, ಹಸಿವೆನೇ ಆಗದೆ ಇರುವಂತ ಮದ್ದು ಇದ್ದರೆ ಬರೆದು ಕೊಡಿ. ನನಗೆ ನನ್ನ ತಮ್ಮನಿಗೆ ಮತ್ತೆ ನನ್ನ ಅಮ್ಮನಿಗೆ". ಬಹುಶಃ ಈ ಮಾತು ಅದೆಂಥವನ ಮನಸ್ಸನ್ನು ಕರಗಿಸಬಹುದು. ಕ್ಷಣಕಾಲ ನಾನು ಕೂಡ ಬೆಚ್ಚಿಬಿದ್ದಿದ್ದೆ. ಈ ಹಸಿವು ಅನ್ನುವುದು ನಮ್ಮನ್ನು ಆದ್ಯಾವ ಮಟ್ಟಿಗೆ ದೈನೇಸಿ ಮಾಡಿ ಬಿಡುತ್ತದೆ. ಒಂದು ಹೊತ್ತಿನ ಊಟಕ್ಕೂ ಪರದಾಡುವ ಈ ಜೀವಗಳ ನೋವು ಯಾರಿಗೂ ಅರಿಯಲು ಸಾಧ್ಯವಿಲ್ಲ.

ಈ ಭೂಮಿಯ ಮೇಲಿನ ಸಕಲ ಜೀವರಾಶಿಗೂ ಹಸಿವಿನ ಅರಿವು ಇದ್ದೇ ಇರುತ್ತದೆ.. ಇಲ್ಲಿ ಹುಟ್ಟಿನ ಜೊತೆಗೆ ಹಸಿವೂ ಜನ್ಮ ತಾಳಿರುತ್ತದೆ. ಹಸಿವು ಸಕಲ ಜೀವರಾಶಿಯನ್ನು ಕಾಡುವ ಒಂದು ದಾರುಣ ಸ್ಥಿತಿ.

ಆವತ್ತು ನಾನು ನೋಡಿದ ಆ ಹುಡುಗನ ಸ್ಥಿತಿಯೂ ಹೀಗೆ ಇತ್ತು.. ಹರಿದ ಬಟ್ಟೆಯನ್ನು ಕಚ್ಚಿಕೊಂಡು ಅದೇನನ್ನೋ ಹೇಳುತ್ತಿದ್ದ.. ಎಲ್ಲರೂ ಕುತೂಹಲದಿಂದ ಅವನ ಕಡೆ ನೋಡುತ್ತಿದ್ದರು. ಅವನು ಹೊಟ್ಟೆ ತೋರಿಸಿ ಹಸಿವು ಅಂತ ಪೆಕರುಪೆಕರಾಗಿ ಹೇಳುವಾಗ ನಗುವವರೇ ಜಾಸ್ತಿಯಾಗಿದ್ದರು. ಪಾಪ ಅದೆಷ್ಟು ಹಸಿವಾಗಿತ್ತೊ? ಯಾರೋ ಒಬ್ಬರು ಒಂದು ಬ್ರೆಡ್ ಕೊಟ್ಟರು. ಅದನ್ನಾತ ಗಬಗಬನೇ ತಿಂದು ಮುಗಿಸಿದ.

Is there any tonic or injection to get rid of hunger?

ಈ ಹಸಿವು ಬಾಯಾರಿಕೆ ಯಾರನ್ನೂ ಕಾಡದೆ ಬಿಡಲಾರದು, ಅವನು ಹುಚ್ಚನಾಗಿದ್ದರೂ ಕೂಡ. ಮುಂದೆ ಅವನು ನಮ್ಮೂರ ಶಾಲೆಯ ಜಗಲಿಯಲ್ಲಿ ಇಲ್ಲವೇ ಬಾವಿಯ ಪಕ್ಕ ಇದ್ದ ಕಟ್ಟೆಯ ಮೇಲೆ ಮಲಗುತ್ತಿದ್ದ. ನನಗಂತು ಮನೆಯಲ್ಲಿ ಅದೇನೂ ಮಾಡಿದರೂ ಮೊದಲು ನೆನಪಾಗುತ್ತಿದ್ದದೆ ಅವನ ಅದೇ ಹಸಿದ ಮುಖ. ತಟ್ಟೆ ತುಂಬಾ ಹಾಕಿಕೊಂಡು ಹೋಗಿ ಅವನ ಮುಂದೆ ಇಟ್ಟು ಕೈ ಸನ್ನೆಯಲ್ಲಿ ತಿನ್ನು ಅಂತ ತಿನ್ನಿಸಿ ಬಂದಾಗಲೇ ಸಮಧಾನ. ಅವನೋ ಅದೆಷ್ಟು ತಿಂಡಿ ಇದ್ದರೂ ಮುಗಿಸುತ್ತಿದ್ದ. "ಅವನೊಬ್ಬ ಹುಚ್ಚ" ಎಂದು ಎಲ್ಲರೂ ಕರೆಯುತ್ತಿದ್ದರು. ಆದರೆ ಆತ ಯಾವತ್ತೂ ಯಾರಿಗೂ ಕೆಡುಕು ಮಾಡಿದವನಲ್ಲ.

ನಮ್ಮೂರ ಕೆಲ ಪುಂಡು ಪೋಕರಿಗಳು ಅವನನ್ನು ಅದ್ಯಾವ ಮಟ್ಟಿಗೆ ಕೆಡಿಸಿದ್ದರು ಎಂದರೆ ತಾವು ಸೇದುವ ಬೀಡಿ ಸಿಗರೇಟುಗಳನ್ನು ಬಲವಂತವಾಗಿ ಸೇದಿಸುತ್ತಿದ್ದರು.. ಪಾಪ ಅವನು ಮೊದ ಮೊದಲು ಕೊಸರಾಡುತ್ತಿದ್ದರೂ ತಿಂಡಿ ತೋರಿಸಿ ಸೇದು ಇಲ್ಲಂದ್ರೆ ತಿಂಡಿ ಸಿಗಲ್ಲ ಅನ್ನುತ್ತಿದ್ದರು. ಅವನು ಹಸಿವಿಗಾಗಿ ಅದನ್ನು ಸೇದಿ ಕ್ರಮೇಣ ಅದಕ್ಕೆ ಅಭ್ಯಾಸವಾಗಿ ಬಿಟ್ಟ. ಮುಂದೆ ಎಲ್ಲರಲ್ಲೂ ಬೀಡಿಗಾಗಿ ಕೈ ಚಾಚಲು ಶುರು ಮಾಡಿದ. ಅವನ ಹಸಿವು, ಅಮಾಯಕತೆಯನ್ನೇ ಬಂಡವಾಳ ಮಾಡಿಕೊಂಡ ಜನರನ್ನು ಕಂಡಾಗಲೆಲ್ಲ ಅಸಹ್ಯ ಅನಿಸುತ್ತಿತ್ತು.

ಅಮ್ಮ ತುಂಬಾ ಹಸಿವು ಏನಾದರೂ ತಿನ್ನುವುದಕ್ಕೆ ಕೊಡಿ ಎಂದೂ ಯಾರಾದರೂ ಬಂದು ಕೈ ಚಾಚಿ ಕೇಳುವಾಗ ಮನಸ್ಸು ಭಾರವಾಗುತ್ತದೆ. ನಡೆಯಲು ತ್ರಾಣವಿಲ್ಲದವನ್ನು ನೋಡಿದಾಗ ಹಸಿವಿನ ಯಾತನೆಯ ಅರಿವಾಗುತ್ತದೆ. ಇಂತಹ ನೂರಾರು ಜೀವಗಳು ಬೀದಿ ಬೀದಿಯಲ್ಲಿ ತಿರುಗುತ್ತಾ ಒಂದೊತ್ತಿನ ತುತ್ತಿಗಾಗಿ ಬೇಡುತ್ತಿರುತ್ತದೆ.

Is there any tonic or injection to get rid of hunger?

ಇದಕ್ಕೆಲ್ಲ ಕಾರಣ ಈ ಹಸಿವು ಅನ್ನುವುದೇ ನೋವಿನ ವಿಷಯ ಇದು ಬೆಳಕಿನಷ್ಟೆ ಸತ್ಯವಾದದು ಕೂಡ. ಅತಿ ಬುದ್ದಿವಂತನಾದ ಮನುಷ್ಯ ಮಾಡುವ ಅತಿ ದಡ್ಡತನದ ಕೆಲಸ ಈ ಆಹಾರವನ್ನು ಮುಲಾಜಿಲ್ಲದೆ ಹಾಳು ಮಾಡುವುದು. ನಾವು ದಿನನಿತ್ಯ ಬಳಸುವ ಪದಾರ್ಥಗಳು ಮುಲಾಜಿಲ್ಲದೆ ಮಣ್ಣು ಪಾಲಾಗುತ್ತ ಇರುತ್ತದೆ.

ಅನ್ನವೆ ಜೀವಕ್ಕೆ ಅಶ್ರಯ. ನಮ್ಮ ಉಪನಿಷತ್ತಿನ ಪ್ರಕಾರ ಅನ್ನದಲ್ಲಿ ದೇವರಿದ್ದಾನೆ ಅನ್ನುವುದು ಸತ್ಯ. ಇವತ್ತಿಗೂ ನಮ್ಮ ದೇಶದಲ್ಲಿ ಅಸಂಖ್ಯ ಹಸಿದ ಹೊಟ್ಟೆಗಳಿವೆ. ಆದರೆ ಅಷ್ಟೆ ಪ್ರಮಾಣದ ಆಹಾರಗಳು ಸದ್ದಿಲ್ಲದೆ ಮಣ್ಣು ಪಾಲಾಗುತ್ತಿದೆ. ಒಮ್ಮೆ ಯೋಚಿಸಿ ನೋಡಿದರೂ ಸಾಕು. ಈ ಆಹಾರ ಎಸೆಯುವ ಬದಲು ಹಸಿದವರ ಹೊಟ್ಟೆ ಸೇರಿದರೆ ಅದೆಂಥಹ ಪುಣ್ಯದ ಕೆಲಸ ಅಲ್ಲವೇ ಎಂದು.

ಇನ್ನು ಸಭೆ ಸಮಾರಂಭಗಳಲ್ಲಿ ಯಥೇಚ್ಛವಾಗಿ ಬಳಸುವ ಆಹಾರಗಳು ಹೊಟ್ಟೆಗಿಂತ ಜಾಸ್ತಿಯಾಗಿ ಕಸದ ತೊಟ್ಟಿಗಳನ್ನು ಸೇರುವುದು ವಿಷಾದನೀಯ. ಅತಿಯಾಗಿ ಬಡಿಸಿಕೊಂಡು ಹಾಳು ಮಾಡುವ ನಾವು ಒಂದು ಕ್ಷಣವೂ ಅನ್ನದ ಮಹತ್ವವನ್ನು ಅರಿಯುವುದೇ ಇಲ್ಲ. ಇನ್ನೆಲ್ಲೊ ಹಸಿದು ಕುಳಿತಿರುವ ಮುಖ ನಮ್ಮ ಕಣ್ಣುಮುಂದೆ ಕ್ಷಣಮಾತ್ರಕ್ಕೂ ಸುಳಿಯುವುದಿಲ್ಲ.

ನಾವು ತಂತ್ರಜ್ಞಾನ, ಆಹಾರ ಸಂಸ್ಕರಣೆ, ಒಟ್ಟು ಆಹಾರ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿದ್ದೇವೆ ಎಂದು ಹೇಳಿಕೊಳ್ಳುವ ಅಭಿವೃದ್ಧಿಶೀಲ ರಾಷ್ಟ್ರಗಳು ಕೂಡ ಹಸಿವಿನ ಕುಣಿಕೆಯಿಂದ ಹೊರಬಂದಿಲ್ಲ. ಅಲ್ಲಿ ಇವತ್ತಿಗೂ ಹಸಿವಿನಿಂದ ಸಾಯುವವರ ಸಂಖ್ಯೆ ಅಧಿಕವಾಗಿದೆ. ಆ ದೇಶಗಳಲ್ಲಿ ಈಗಲೂ ಅಪೌಷ್ಟಿಕತೆಯಿಂದ ಸಾಯುವವರ ಸಂಖ್ಯೆ ಆತಂಕ ಹುಟ್ಟಿಸುವಂತಿದೆ. ನಮ್ಮ ಮುಂದೆ ಲಭ್ಯವಿರುವ ಅಂಕಿ-ಸಂಖ್ಯೆಗಳ ಪ್ರಕಾರ, ವಿಶ್ವದಲ್ಲಿ ಒಂಭತ್ತು ಮಂದಿಗೆ ಒಬ್ಬ ಹಸಿವಿನಿಂದ ಬಳಲುತ್ತಿದ್ದಾನೆ. ಅಂದರೆ ಜಗತ್ತಿನ ಜನಸಂಖ್ಯೆಗೆ ಲೆಕ್ಕ ಹಾಕಿದರೆ ಅಂದಾಜು 795 ಮಿಲಿಯನ್ ಮಂದಿ ಈಗಲೂ ಹಸಿವಿನಿಂದ ಬಳಲುತ್ತಿದ್ದಾರೆ.

ವಿಪರ್ಯಾಸವೆಂದರೆ ಇವತ್ತಿಗೂ ದೇಶದ್ಯಾಂತ ಸಾವಿರಾರು ಟನ್ ಆಹಾರಗಳು ವ್ಯರ್ಥವಾಗುತ್ತಿದೆ ಅನ್ನುವ ಸುದ್ದಿ ಕೇಳಿದಾಗ ನಾವು ಬೆಚ್ಚಿಬೀಳುತ್ತೇವೆ. ನಮ್ಮ ಸುತ್ತಮುತ್ತ ಮನೆಯ ಕಸದ ತೊಟ್ಟಿಗಳಲ್ಲಿ ಚೆಲ್ಲಿರುವ ಆಹಾರಗಳು ಹಸಿದ ಹೊಟ್ಟೆಗಳನ್ನು ಅಣಕಿಸುತ್ತದೆ.

ನಮ್ಮ ಸಮಾಜದ ಸಂಪನ್ಮೂಲದ ಒಂದು ಕೊಡುಗೆ ಈ ಆಹಾರ ಇದನ್ನು ನಾವೇ ಹಾಳು ಮಾಡುವುದು ಅದೆಷ್ಟು ಸರಿ? ನಮ್ಮ ಹೊಟ್ಟೆ ತುಂಬಿದ ನಂತರ ಮಿಕ್ಕಿದ್ದು ನಮ್ಮದಲ್ಲ ಅದು ಹಸಿದವನದು ಅನ್ನುವ ಸತ್ಯ ಅರಿವಾದರೂ ಸಾಕು. ಅದಕ್ಕಾಗಿ ನಾವು ಬಳಸುವ ಆಹಾರವನ್ನು ಮಿತವಾಗಿ ಬಳಸುವ ಪದ್ಧತಿಯನ್ನು ಅನುಸರಿಸಬೇಕು. ಈ ಜಾಗೃತಿ ನಮ್ಮಿಂದಲೇ ಶುರುವಾದಾಗ ಹಾದಿ ಬೀದಿಯಲ್ಲಿ ಕಾಡಿ ಬೇಡುವ ಹಸಿದ ಮುಖಗಳು ಕ್ರಮೇಣ ಕಡಿಮೆಯಾಗುತ್ತದೆ.

ಆಗ ಮಾತ್ರ ನಮ್ಮೊಳಗಿನ ಮಾನವೀಯತೆಗೊಂದು ಅರ್ಥ ದೊರಕಬಹುದು. ಅದೆಷ್ಟು ಹಸಿವನ್ನು ತಣ್ಣಗಾಗಿಸಿದ ಭಾಗ್ಯವೂ ನಮ್ಮನ್ನು ಸಂತುಷ್ಟವಾಗಿಸಬಹುದು.
ಈ ಮಾನವೀಯತೆಯ ಮೆರೆಯಲು ನಾವು ಸಿದ್ದವಾಗಬೇಕು. ಹಸಿವು ಮುಕ್ತ ಜಗತ್ತನ್ನು ರೂಪಿಸಲು ನಾವು ಬದ್ದರಾಗಬೇಕು‌.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+