ರಂಭೆಯೆಂಬ ವಿಲಾಸಿನಿ
ಜಾನಕಿ
ತುಂಬ ಸುಂದರಿಯರನ್ನು ಸಂಸಾರಸ್ಥರು ಮಹಾಲಕ್ಷ್ಮಿ ಹಾಗಿದ್ದೀಯ ಅಂತಲೂ ಸೌಂದರ್ಯದ ಜೊತೆ ಸ್ವಲ್ಪಮಟ್ಟಿಗಿನ ಚಾಂಚಲ್ಯ ಕೂಡ ಬೆರೆತಿದ್ದರೆ ಅಂಥವರನ್ನು ರಸಿಕರು ರಂಭೆ ಅಂತಲೂ ಕರೆಯುವುದು ಆಡುಮಾತಿನ ಜೊತೆ ಬಂದಿದೆ. ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಹೆಣ್ಣು ಗಂಡನ ಪಾಲಿಗೆ; ಶಯನೇಶು ರಂಭಾ. ಅಂತಃಪುರದಲ್ಲಿ ರಂಭೆಯಂತಿರಬೇಕು.
ಯಾರು ಆ ರಂಭೆ?
ದೇವಲೋಕದ ವಿಲಾಸಿನಿಯರ ಪೈಕಿ ಮೊದಲ ಸ್ಥಾನದಲ್ಲಿರುವಾಕೆ ರಂಭಾ. ಈಕೆ ಅಪ್ಸರೆ. ಕಶ್ಯಪ ಮುನಿಗೆ ಪ್ರಾಧೆ ಎಂಬಾಕೆಯಿಂದ ಹುಟ್ಟಿದ ರಂಭಾ ತುಂಬುರನೆಂಬ ಗಂಧರ್ವನ ಹೆಂಡತಿ.
ಈ ತುಂಬುರನ ಕತೆಯೂ ಆಸಕ್ತಿ ಹುಟ್ಟಿಸುವಂತಿದೆ. ಈತ ಕೂಡ ಕಶ್ಯಪ ಮುನಿಯ ಮಗನೇ. ಆದರೆ ಈತನ ತಾಯಿ ಅರಿಷ್ಟೆ. ಈ ಕಶ್ಯಪನೆಂಬ ಮುನಿಗೆ ಅದೆಷ್ಟು ಮಂದಿ ಪತ್ನಿಯರಿದ್ದರು ಅನ್ನುವುದು ಅಧ್ಯಯನಯೋಗ್ಯ ಸಂಗತಿ. ಅದಕ್ಕಿಂತ ಕುತೂಹಲಕರವಾದದ್ದು ತುಂಬುರ ಮತ್ತು ರಂಭಾ ಮದುವೆಯಾಗಿದ್ದರು ಅನ್ನುವ ವಿಚಾರ. ಯಾಕೆಂದರೆ ಇಬ್ಬರೂ ಒಂದೆ ತಂದೆಯ ಮಕ್ಕಳು.
ಅವರಿಬ್ಬರೂ ಮದುವೆಯಾಗಿದ್ದರು ಅನ್ನುವುದೇ ಅನುಮಾನಾಸ್ಪದ ಕೂಡ. ಯಾಕೆಂದರೆ ಒಮ್ಮೆ ರಂಭೆ ಸ್ವರ್ಗಲೋಕದಿಂದ ಕುಬೇರನ ಮನೆಗೆ ಹೋಗುತ್ತಿದ್ದಾಗ, ದಾರಿಯಲ್ಲಿ ಆಕೆಯನ್ನು ತಡೆದು ಬಲಾತ್ಕಾರವಾಗಿ ಮಾನಭಂಗ ಮಾಡುತ್ತಾನೆ ತುಂಬುರ. ಅದು ಬಲಾತ್ಕಾರನೋ ಅಥವಾ ಅದಕ್ಕೆ ರಂಭೆಯ ಸಮ್ಮತಿ ಇತ್ತೋ ಎನ್ನುವುದೂ ಪ್ರಶ್ನಾರ್ಹವೇ. ಯಾಕೆಂದರೆ ಆಮೇಲೆ ಆಕೆ ಕುಬೇರನ ಮನೆಗೆ ಹೋದಾಗ, ಕುಬೇರ ರಂಭೆಯ ವರ್ತನೆಯನ್ನು ಸಂಶಯದಿಂದ ನೋಡುತ್ತಾನೆ. ಆಗಷ್ಟೇ ಸುಖಿಸಿ ಬಂದ ಲೋಲುಪ ಕಳೆ ಮತ್ತು ತೃಪ್ತಿ ಅವಳಲ್ಲಿರುವುದನ್ನು ಕಂಡು ಅವನಿಗೆ ಅನುಮಾನ ಬರುತ್ತದೆ. ಆತ ಪ್ರಶ್ನಿಸಿದಾಗ ರಂಭೆ ದಾರಿಯಲ್ಲಿ ನಡೆದ ಸಂಗತಿಯನ್ನೆಲ್ಲ ಹೇಳುತ್ತಾಳೆ. ಕುಬೇರ ಸಿಟ್ಟಾಗಿ ತುಂಬುರುವಿಗೆ ರಾಕ್ಷಸನಾಗಿ ಹುಟ್ಟುವಂತೆ ಶಾಪ ಕೊಡುತ್ತಾನೆ.
ಹಿಂದಿನ ಕಾಲದ ಶಾಪಗಳನ್ನೇ ನೋಡಿ. ಮೇಲಿನ ಸ್ಥಾನದಲ್ಲಿರುವವನ್ನು ಅದಕ್ಕಿಂತ ಕೆಳಗಿನ ಸ್ಥಾನದಲ್ಲೋ ಜಾತಿಯಲ್ಲೋ ಹುಟ್ಟುವಂತೆ ಹೇಳುವುದೇ ಆಗ ದೊಡ್ಡ ಶಿಕ್ಷೆಯಾಗಿತ್ತು. ಗಂಧರ್ವನೊಬ್ಬನನ್ನು ರಾಕ್ಷಸನಾಗಿ ಹುಟ್ಟುವಂತೆ, ದೇವತೆಯನ್ನು ಮನುಷ್ಯನಾಗಿ ಹುಟ್ಟುವಂತೆ ಶಪಿಸುವವರಿದ್ದರು. ಹಾಗೆ ಶಪಿಸಿಕೊಂಡವರೂ ಆ ಶಿಕ್ಷೆಯಿಂದ ಥರಥರ ನಡುಗಿ ಅದಕ್ಕೊಂದು ಉಃಶಾಪ ಕೇಳುತ್ತಿದ್ದರು. ತಕ್ಷಣವೇ ಅದಕ್ಕೊಂದು ಪರಿಹಾರವೂ ಸಿಗುತ್ತಿತ್ತು.
ಹಾಗೆ ಪರಿಹಾರ ಸಿಗಬೇಕಿದ್ದರೆ ಶಾಪ ಕೊಟ್ಟವರಿಗೆ ಮುಂಬರುವ ವರುಷಗಳಲ್ಲಿ ಏನು ನಡೆಯುತ್ತದೆ ಅನ್ನುವುದು ಗೊತ್ತಿರಬೇಕಿತ್ತು. ಉದಾಹರಣೆಗೆ ಕುಬೇರನಿಂದ ಶಾಪಗ್ರಸ್ತನಾದ ತುಂಬುರು ಕಂಗೆಟ್ಟು ತನ್ನನ್ನು ಶಾಪವಿಮುಕ್ತನನ್ನಾಗಿಸುವ ಬಗೆಯನ್ನು ತಿಳಿಸಬೇಕೆಂದು ಕೇಳಿಕೊಂಡಾಗ ಕುಬೇರ ಹೇಳುತ್ತಾನೆ; ರಾಮಲಕ್ಷ್ಮಣರು ಸೀತಾಸಮೇತರಾಗಿ ಅರಣ್ಯಕ್ಕೆ ಬಂದಾಗ ನೀನು ಅವರನ್ನು ಅಡ್ಡಗಟ್ಟಿ, ಸೀತೆಯನ್ನು ಅಪಹರಿಸಲು ಹೋಗಿ, ರಾಮನಿಂದ ಹತನಾಗಿ ನಿನ್ನ ಮೊದಲಿನ ರೂಪವನ್ನು ಹೊಂದುವೆ’.
ಇಷ್ಟು ಹೇಳಬೇಕಿದ್ದರೆ ಕುಬೇರನಿಗೆ ರಾಮಲಕ್ಷ್ಮಣಸೀತೆಯರು ಕಾಡಿಗೆ ಹೋಗುತ್ತಾರೆ ಅನ್ನುವುದು ಮೊದಲೇ ಗೊತ್ತಿದ್ದಿರಬೇಕು. ಕುಬೇರನಿಗೆ ಗೊತ್ತಿಲ್ಲದೇ ಹೋದರೂ ತುಂಬುರುವಿನ ಕತೆ ಬರೆದವನಿಗೆ ವಾಲ್ಮೀಕಿ ಇಂಥದ್ದೊಂದು ಕಾವ್ಯ ಬರೆಯತ್ತಾನೆ ಅನ್ನುವುದೂ ಅದರ ಕತೆ ಹೀಗಿರುತ್ತದೆ ಅನ್ನುವುದು ಗೊತ್ತಿರಬೇಕು. ಒಂದು ಪುರಾಣದ ಜೊತೆಗೆ ಇನ್ನೊಂದು ಪುರಾಣ ತಳಕು ಹಾಕಿಕೊಳ್ಳುವುದೆಂದರೆ ಇದೇ. ಇದನ್ನು ಯಾರೇ ಬರೆದಿರಬಹುದು. ಆದರೆ ಒಂದು ಪುರಾಣದಲ್ಲಿ ಇನ್ನೊಂದು ಪುರಾಣದ ಉಲ್ಲೇಖವಂತೂ ಇದ್ದೆ ಇರುತ್ತದೆ. ಹೀಗಾಗಿ ಪುರಾಣಕ್ಕೆ ಅಷ್ಟೊಂದು ಅಥೆಂಟಿಸಿಟಿ ಸಾಧ್ಯವಾಗಿದೆ.
ಮತ್ತೆ ವಿರಾಧನೆಂಬ ರಾಕ್ಷಸನಾಗಿ ಹುಟ್ಟುವ ಶಾಪ ಪಡೆದ ತುಂಬುರುವಿನ ಮಾತಿಗೆ ಬಂದರೆ, ಆತ ದಂಡಕಾರಣ್ಯವನ್ನು ತನ್ನ ಕಾರ್ಯಕ್ಷೇತ್ರ ಮಾಡಿಕೊಂಡು ಸಾಕಷ್ಟು ಹಿಂಸೆ ಮಾಡುತ್ತಿರುತ್ತಾನೆ. ದಂಡಕಾರಣ್ಯಕ್ಕೆ ರಾಮಸೀತೆಲಕ್ಷ್ಮಣರು ಬಂದ ಸಂಗತಿ ಗೊತ್ತಾಗಿ ಸೀತೆಯನ್ನು ಅಪಹರಿಸಲು ಯತ್ನಿಸುತ್ತಾನೆ. ರಾಮಲಕ್ಷ್ಮಣರಿಂದ ಎರಡೂ ಭುಜಗಳನ್ನು ಕಳೆದುಕೊಂಡು ಸಾಯುತ್ತಾನೆ. ತನ್ನ ಮೊದಲಿನ ರೂಪವನ್ನು ಪಡೆಯುತ್ತಾನೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವಿದೆ; ನಾನು ತುಂಬುರು ಅನ್ನುವ ಗಂಧರ್ವ ಎನ್ನುವುದೂ ಸೀತೆಯನ್ನು ಅಪಹರಿಸಿ, ರಾಮನಿಂದ ಹತನಾಗಬೇಕು ಅನ್ನುವುದೂ ವಿರಾಧನಾಗಿರುವಾಗ ಆತನಿಗೆ ನೆನಪಿರುತ್ತದೆಯೇ? ಸತ್ತು ಮತ್ತೆ ಹಳೆಯ ರೂಪ ತಾಳುವುದಕ್ಕಾಗಿಯೇ ಆತ ಅಪಹರಣ ಮಾಡುತ್ತಾನಾ?
ಸಾಮಾನ್ಯವಾಗಿ ಮತ್ತೊಂದು ಜನ್ಮ ಎತ್ತಿದಾಗ ಹಿಂದಿನ ಜನ್ಮದ ನೆನಪೂ ಇರುವುದಿಲ್ಲ ಅನ್ನುತ್ತದೆ ಪುರಾಣ. ಯಾಕೆಂದರೆ ಹಿಂದಿನ ಜನ್ಮದ ನೆನಪಿದ್ದರೆ ವಿರಾಧ ಬೇರೆಯವರನ್ನು ಹಿಂಸಿಸುತ್ತಿರಲಿಲ್ಲ. ಸೀತೆಯನ್ನು ಅಪಹರಿಸಿ ರಾಮನಿಂದ ಕೊಲ್ಲಲ್ಪಡುವುದು ಕೂಡ ಒಂದು ನಾಟಕದಂತೆ ಭಾಸವಾಗುತ್ತಿತ್ತು. ಆ ಅಪಹರಣಕ್ಕಾಗಲೀ ಯುದ್ಧಕ್ಕಾಗಲೀ ತೀವ್ರತೆ ಇರುತ್ತಿರಲಿಲ್ಲ.
ಇಲ್ಲಿ ಪುನರ್ಜನ್ಮವನ್ನೂ ಕರ್ಮಸಿದ್ಧಾಂತವನ್ನೂ ನಂಬುವವರಿಗೊಂದು ಪ್ರಶ್ನೆ. ರಾಕ್ಪಸರೂಪದಲ್ಲಿದ್ದಾಗ ತುಂಬುರು ಮಾಡಿದ ಪಾಪಗಳು ಯಾರ ಲೆಕ್ಕಕ್ಕೆ ಜಮಾ ಆಗುತ್ತವೆ. ಅವುಗಳಿಗೆ ಯಾರು ಹೊಣೆ? ವಿರಾಧನಿಗೆ ಪುನರ್ಜನ್ಮ ಇಲ್ಲ. ಹೀಗಾಗಿ ಆತ ತನ್ನ ಪಾಪದ ಫಲವನ್ನು ಮುಂದಿನ ಜನ್ಮದಲ್ಲಿ ಅನುಭವಿಸುವಂತಿಲ್ಲ. ತುಂಬುರನ ಪಾಲಿಗೆ ವಿರಾಧನ ಜನ್ಮವೇ ಒಂದು ಶಿಕ್ಷೆ. ಹೀಗಾಗಿ ಶಿಕ್ಷೆಯ ಅವಧಿಯ ಪಾಪ ಅವನನ್ನು ಅಂಟಿಕೊಳ್ಳುವುದಿಲ್ಲ. ಹಾಗಿದ್ದರೆ ಆ ಪಾಪ ಯಾರದು?
ಅದಿರಲಿ, ಮತ್ತೆ ರಂಭೆಯ ಸಂಗಕ್ಕೆ ಬಂದರೆ;
ದೇವಲೋಕದ ವೇಶ್ಯೆಯರ ಪೈಕಿ ಅತ್ಯಂತ ಜನಪ್ರಿಯಳಾದ ಈಕೆ ಕುಬೇರನ ಕೊನೆಯ ಮಗನಾದ ನಳಕೂಬರನ ಪ್ರೇಯಸಿಯೂ ಆಗಿದ್ದಳು. ತಂದೆ ಮತ್ತು ಮಗನನ್ನು ಏಕಕಾಲಕ್ಕೆ ಪ್ರೇಮಿಸುವುದು ಪುರಾಣದ ಪೈಕಿ ಅಧರ್ಮವೂ ಅಲ್ಲ , ಪಾಪವೂ ಅಲ್ಲ. ಅಷ್ಟಕ್ಕೂ ಇದು ನಡೆದದ್ದು ದೇವಲೋಕದಲ್ಲಿ. ಅಲ್ಲಿ ಕಟ್ಟುಪಾಡುಗಳೇ ಇಲ್ಲ.
ರಂಭೆಯ ಕಥೆ ಸದ್ಯಕ್ಕಿಷ್ಟು ಸಾಕು.
(ಸ್ನೇಹಸೇತು : ಓ ಮನಸೇ...)












Click it and Unblock the Notifications