ಮುಂಬಯಿಯಲ್ಲೇ ಕನ್ನಡ ಹೆಚ್ಚು ಜೀವಂತ- ಬಲ್ಲಾಳ
ಬೆಂಗಳೂರು : ಹಿರಿಯ ಕಾದಂಬರಿಕಾರ ವ್ಯಾಸರಾಯ ಬಲ್ಲಾಳರ ‘ಮುಂಬಯಿ ದಿನಾಂಕ..’ ಕೃತಿಯನ್ನು ನಿವೃತ್ತ ನ್ಯಾಯಮೂರ್ತಿ ಕೋ.ಚೆನ್ನಬಸಪ್ಪ ಭಾನುವಾರ (ಮೇ11) ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಿದರು.
ನೋವು ಬಲ್ಲಾಳರ ಎಲ್ಲ ಕೃತಿಗಳ ಮೂಲವಾಗಿದ್ದು , ನಿರ್ದಿಷ್ಟ ಗುರಿ ಹಾಗೂ ತತ್ವ ನಿಷ್ಠೆ ಬಲ್ಲಾಳರ ಬರಹಗಳಲ್ಲಿ ಎದ್ದು ಕಾಣುತ್ತವೆ ಎಂದು ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕೋ.ಚೆನ್ನಬಸಪ್ಪ ಹೇಳಿದರು.
ಬಲ್ಲಾಳರನ್ನು ಮಹಿಳಾ ಲೇಖಕ ಎನ್ನುವುದು ಹೆಚ್ಚು ಸೂಕ್ತ . ಮುಂಬಯಿ ಜೀವನದ ಅನುಭವಗಳ ಜೊತೆಯಲ್ಲಿಯೇ ಬುದ್ಧಿ ಜೀವಿಗಳ ಅಪ್ರಾಮಾಣಿಕತೆಯ ಬಗೆಗೂ ಬಲ್ಲಾಳರು ತಮ್ಮ ‘ಮುಂಬಯಿ ದಿನಾಂಕ..’ ಕೃತಿಯಲ್ಲಿ ಚರ್ಚಿಸಿದ್ದಾರೆ ಎಂದು ಪುಸ್ತಕದ ಬಗ್ಗೆ ಮಾತನಾಡಿದ ಜನಪ್ರಿಯ ಕತೆಗಾರ ಜಯಂತ ಕಾಯ್ಕಿಣಿ ಅಭಿಪ್ರಾಯಪಟ್ಟರು.
ತ್ರಿಭಾಷಾ ಸೂತ್ರಕ್ಕೆ ವಿರೋಧ
ಶಿಕ್ಷಣ ಕ್ಷೇತ್ರದಲ್ಲಿನ ತ್ರಿಭಾಷಾ ಸೂತ್ರದಿಂದ ಕನ್ನಡ ಭಾಷೆಯ ಬೆಳವಣಿಗೆಗೆ ತೊಡಕುಂಟಾಗುವುದರಿಂದ ತಾವು ತ್ರಿಭಾಷಾ ಸೂತ್ರವನ್ನು ವಿರೋಧಿಸುವುದಾಗಿ ವ್ಯಾಸರಾಯ ಬಲ್ಲಾಳರು ಹೇಳಿದರು.
ಕರ್ನಾಟಕದ ಜನರಿಗೇ ಕನ್ನಡದ ಬಗೆಗೆ ತಾತ್ಸಾರ ಭಾವನೆ ಉಂಟಾಗುತ್ತಿದೆ. ಕನ್ನಡಿಗರ ಸ್ವಾಭಿಮಾನ ಕಡಿಮೆಯಾಗುತ್ತಿದೆ. ಏಕೆ ಹೀಗಾಗುತ್ತಿದೆ ಎನ್ನುವ ಕುರಿತು ಸಮಾಜಶಾಸ್ತ್ರಜ್ಞರು ಗಂಭೀರ ಚಿಂತನೆ ನಡೆಸಬೇಕಿದೆ.
ಮುಂಬಯಿಯಲ್ಲಿರುವ ಕನ್ನಡಿಗರಿಗೆ ಕನ್ನಡದ ಬಗ್ಗೆ ಪ್ರಾಮಾಣಿಕವಾದ ಕಳಕಳಿಯಿದೆ. ಅಲ್ಲಿ ಹತ್ತಾರು ಜಾತಿ ಸಂಘ ಸಂಸ್ಥೆಗಳಿದ್ದರೂ ವ್ಯವಹಾರ ಕನ್ನಡದಲ್ಲಿಯೇ ನಡೆಯುತ್ತದೆ. ಆದರೆ ಕರ್ನಾಟಕದಲ್ಲಿ ಮಾತ್ರ ಪರಿಸ್ಥಿತಿ ಸಂಪೂರ್ಣ ತದ್ವಿರುದ್ಧ ಎಂದು ಬಲ್ಲಾಳ ವಿಷಾದಿಸಿದರು.
‘ಮುಂಬಯಿ ದಿನಾಂಕ..’ ಪ್ರಕಟಿಸಿರುವ ನವ ಕರ್ನಾಟಕ ಪ್ರಕಾಶನದ ಆರ್.ಎಸ್.ರಾಜಾರಾಂ, ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಗುರುಲಿಂಗ ಕಾಪಸೆ ಮುಂತಾದವರು ಕಾರ್ಯಕ್ರಮದಲ್ಲಿ ಹಾಜರಿದ್ದರು.
(ಇನ್ಫೋ ವಾರ್ತೆ)
ಪೂರಕ ಓದಿಗೆ-
ವ್ಯಾಸರಾಯ ಬಲ್ಲಾಳರೊಂದಿಗೆ ಮಾತುಕತೆ ಮುಖಪುಟ / ಸಾಹಿತ್ಯ ಸೊಗಡು












Click it and Unblock the Notifications