ಎಲೆಯ ಮೇಲೆ ಹುಳುಗಳು ಬಂದಾಕ್ಷಣ ತನ್ನ ಅಂಗರಕ್ಷಕರನ್ನು ಕೂಗಿ ಕರೆಯುತ್ತದೆ ಈ ಗಿಡ:ಬಯಲಾಯಿತು ಸಸ್ಯ ಜಗತ್ತಿನ ರಹಸ್ಯ
ಅವು ನಿಂತಲ್ಲೇ ನಿಂತಿರುತ್ತವೆ. ಚಲಿಸುವು ಮಾತೇ ಇಲ್ಲ. ಒಂದೇ ಜಾಗದಲ್ಲಿ ತನ್ನ ಬೇರುಗಳನ್ನು ಗಟ್ಟಿಯಾಗಿ ನೆಲೆಯೂರಿಸಿ ತನ್ನ ಪಾಡಿಗೆ ತನ್ನ ಕೆಲಸ ಮಾಡುತ್ತಾ ಇರುತ್ತದೆ. ಸೂರ್ಯನ ಬೆಳಕನ ಕಿರಣಗಳಿಗೆ ಮೈಯೊಡುತ್ತಾ, ಮೈ ತುಂಬಾ ಹಸಿರು ಎಲೆಗಳನ್ನು ಚಿಗುರೊಡೆಯುತ್ತಾ, ಹೂವು, ಬೀಜಗಳನ್ನು ಬಿಡುತ್ತಾ ನೆಮ್ಮದಿಯಾಗಿ ಬದುಕುತ್ತವೆ. ತನ್ನ ಮೇಲೆ ಹುಳ ಹುಪ್ಪಟೆಗಳು ಬಂದು ಕುಳಿತು ಎಲೆಗಳನ್ನು ತಿನ್ನಲು ಶುರು ಮಾಡಿದಾಗ ಆ ಜಾಗದಿಂದ ಓಡುವ ಶಕ್ತಿ ಅದಕ್ಕಿಲ್ಲ. ಅಥವಾ ಹುಳಗಳ ಮೇಲೆ ಪ್ರತಿದಾಳಿ ಮಾಡಲಾಗುವುದಿಲ್ಲ. ಇವಿಷ್ಟು ಸಸ್ಯಗಳ ಬಗ್ಗೆ ನಮ್ಮಲ್ಲಿ ಇರುವ ಸಾಮಾನ್ಯ ಕಲ್ಪನೆ. ಆದರೆ ವಾಸ್ತವದಲ್ಲಿ ಸಸ್ಯ ಜಗತ್ತು ನಮಗೆ ತಿಳಿಯದೇ ಇರುವ ಅನೇಕ ರಹಸ್ಯಗಳನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿವೆ.
ಮಾನವಕುಲಕ್ಕೆ ತಿಳಿಯದೇ ಇರುವ ಕೆಲವು ನಿಗೂಢ ಲಕ್ಷಣಗಳನ್ನು ಈ ಪ್ರಕೃತಿ ಹೊಂದಿದೆ. ಅವುಗಳಲ್ಲಿ ಸ್ಸಯಗಳ ರಕ್ಷಣಾ ತಂತ್ರ ಕೂಡಾ ಒಂದು. ಸಸ್ಯ ಸಾಮ್ರಾಜ್ಯವು ಲಕ್ಷಾಂತರ ವರ್ಷಗಳಿಂದ ಸದ್ದಿಲ್ಲದೆ ರಕ್ಷಣಾ ತಂತ್ರಗಳನ್ನು ಅಭಿವೃದ್ಧಿಪಡಿಸುತ್ತಿದೆ. ಅವುಗಳಲ್ಲಿ ಕೆಲವು ಬಹಳ ಮೌನವಾಗಿ ನಡೆದು ಹೋಗುತ್ತವೆ. ಇನ್ನು ಕೆಲವನ್ನು ನಾವು ಗಮನಿಸಿಯೂ ಗಮನಿಸದಂತೆ ನಿರ್ಲಕ್ಷಿಸಿ ಬಿಡುತ್ತೇವೆ. ವಿಜ್ಞಾನಿಗಳು ಸಸ್ಯ ಜಗತ್ತಿನ ಒಂದೊಂದೇ ರಹಸ್ಯಗಳನ್ನು ಹೊರಗೆಳೆಯುತ್ತಿದ್ದಾರೆ.

ಸಸ್ಯಗಳಲ್ಲಿರುವ ಮುಳ್ಳುಗಳು, ವಿಷಕಾರಿ ಹಣ್ಣುಗಳು ಮತ್ತು ವಿಷಕಾರಿ ಎಲೆಗಳು ಸಾಕಷ್ಟು ಪ್ರಸಿದ್ಧವಾಗಿವೆ. ಆದರೆ, ಇದೆಲ್ಲ ರಕ್ಷಣಾ ವ್ಯವಸ್ಥೆಯ ಒಂದು ರೀತಿಯಾದರೆ, ನಮಗೆ ಅಗೋಚರವಾಗಿರುವ ಮತ್ತು ವಾಸನೆಯಿಲ್ಲದ ರಾಸಾಯನಿಕಗಳೊಂದಿಗೆ ಕಾರ್ಯನಿರ್ವಹಿಸುವ ಸಸ್ಯ ರಕ್ಷಣೆಯ ಮತ್ತೊಂದು ಪದರವಿದೆ. ಇದನ್ನು ಸಸ್ಯಗಳ ಪರೋಕ್ಷ ರಕ್ಷಣಾ ವ್ಯವಸ್ಥೆ ಎಂದು ಕರೆಯಲಾಗುತ್ತದೆ.
ಈ ಸಸ್ಯ ಕೀಟಗಳನ್ನು ಹೇಗೆ ದೂರವಿಡುತ್ತದೆ:
ಒಂದು ಮರಿಹುಳು ಸಾಮಾನ್ಯ ಹುರುಳಿ ಗಿಡವನ್ನು ಅಗಿಯಲು ಪ್ರಾರಂಭಿಸಿದಾಗ, ಆ ಗಿಡ ಹಾಗೆಯೇ ಹುಳವನ್ನು ಓಡಿಸಲು ಸಾಧ್ಯವಾಗುವುದಿಲ್ಲ. ಅದಕ್ಕೊಂದು ಸಪೋರ್ಟ್ ಬೇಕಾಗುತ್ತದೆ. ಸೈನ್ಸ್ ಅಡ್ವಾನ್ಸಸ್ನಲ್ಲಿ ಪ್ರಕಟವಾದ ಇತ್ತೀಚಿನ ಅಧ್ಯಯನದ ಪ್ರಕಾರ, ವಿಶ್ವದ ಅತ್ಯಂತ ವ್ಯಾಪಕವಾಗಿ ಬೆಳೆಯುವ ಆಹಾರ ಬೆಳೆಗಳಲ್ಲಿ ಒಂದಾದ ಬೀನ್ ಫಾಸಿಯೋಲಸ್ ವಲ್ಗ್ಯಾರಿಸ್, ಮರಿಹುಳುಗಳ ದಾಳಿಯ್ನು ನಿಯಂತ್ರಿಸಲು ಆಸಕ್ತಿದಾಯಕ ಪ್ರತಿಕ್ರಿಯೆಯನ್ನು ನೀಡುತ್ತದೆ ಎನ್ನುವುದನ್ನು ಕಂಡುಹಿಡಿಯಲಾಗಿದೆ.
ಮರಿಹುಳು ಸಸ್ಯವನ್ನು ತಿನ್ನುವಾಗ, ಸಸ್ಯದ ಎಲೆಗೆ ಗಾಯವಾಗುತ್ತದೆ. ಕೀಟದ ಲಾಲಾರಸದಲ್ಲಿರುವ ಸಂಯುಕ್ತವು ಸಸ್ಯದ ಎಲೆಗಳ ಗಾಯಕ್ಕೆ ತಲುಪಿದಾಗ ಅದು ಸಸ್ಯಕ್ಕೆ ಅಲರ್ಟ್ ಸಿಗ್ನಲ್ ಸಿಗುತ್ತದೆ. ಅಂದರೆ ತನ್ನ ಮೇಲೆ ಯಾವುದೋ ಕೀಟ ದಾಳಿ ಮಾಡುತ್ತಿದೆ ತನಗೆ ಹಾನಿಯುಂಟು ಮಾಡುತ್ತಿದೆ ಎನ್ನುವುದನ್ನು ಸಸ್ಯ ಅರಿತುಕೊಳ್ಳುತ್ತದೆ. ಆಗ ತನ್ನ ರಕ್ಷಣೆಗೋಸ್ಕರ ಸಸ್ಯವು ಒಂದು ನಿರ್ದಿಷ್ಟ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಈ ರಾಸಾಯನಿಕ ಗಾಳಿಯ ಮೂಲಕ ಪಸರಿಸಿದಾಗ ಪರಾವಲಂಬಿ ಕಣಜಗಳನ್ನು ಆಕರ್ಷಿಸುತ್ತದೆ. ಆ ಪರಾವಲಂಬಿ ಕಣಜದ ಹುಳಗಳು ಸಸ್ಯದ ಬಳಿ ಬಂದು, ಎಲೆ ತಿನ್ನುತ್ತಿರುವ ಮರಿಹುಳುಗಳನ್ನು ಪತ್ತೆ ಮಾಡಿ, ಅವುಗಳನ್ನು ತಿನ್ನುತ್ತವೆ. ಅಥವಾ ಅವುಗಳ ದೇಹದೊಳಗೆ ಮೊಟ್ಟೆಗಳನ್ನು ಇಡುತ್ತವೆ. ಇಲ್ಲಿಗೆ ಆ ಮರಿ ಹುಳಗಳು ಸಸ್ಯಕ್ಕೆ ಹಾನಿ ಉಂಟು ಮಾಡುವುದು ಸಾಧ್ಯವಾಗುವುದಿಲ್ಲ.
ರಕ್ಷಣಾ ಬೆಂಬಲಗಳನ್ನು ಬಯಸುವ ಸಸ್ಯ:
ಸಸ್ಯವು ವಿವಿಧ ರೀತಿಯ ಹಾನಿಗಳನ್ನು ಹೇಗೆ ಪ್ರತ್ಯೇಕಿಸುತ್ತದೆ ಎಂಬುದನ್ನು ಈ ಅಧ್ಯಯನವು ಹೇಳುತ್ತದೆ. ಕೀಟದಿಂದ ಉಂಟಾಗುವ ಯಾವುದೇ ಗಾಯವು ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ. ಇಲ್ಲಿ ಮರು ಹುಳುವಿನ ಲಾಲಾರಸವೇ ಅದಕ್ಕೆ ಮುಳ್ಳಾಗುವುದು. ಆ ಲಾಲಾರಸದಲ್ಲಿರುವ ರಾಸಾಯನಿಕ ಸಂಯುಕ್ತವು ಸಸ್ಯದ ಅಲರ್ಟ್ ಸಿಸ್ಟಮ್ ಅನ್ನು ಅನ್ಲಾಕ್ ಮಾಡುವ ಒಂದು ರೀತಿಯ ಜೈವಿಕ ಕೀಲಿಯಾಗಿ ಕಾರ್ಯನಿರ್ವಹಿಸುತ್ತದೆ.
ಗಾಳಿಯ ಮೂಲಕ ಸಸ್ಯಗಳ ಸಂವಹನ:
ಇಲ್ಲಿ ಸಸ್ಯವು ಗಾಳಿಯ ಮೂಲಕವೇ ಸಂವಹನ ನಡೆಸುತ್ತವೆ. ಇಲ್ಲಿ ಏರ್ ಬೋರ್ನ್ ಸಿಗ್ನಲ್ಗಳ ಮೂಲಕ ಮಾತುಕತೆ ನಡೆಯುವುದು ಇನ್ನೊಂದು ಸಸ್ಯದೊಂದಿಗೆ ಅಲ್ಲ. ಬದಲಾಗಿ ತನ್ನ ಶತ್ರುಗಳನ್ನು ಬೇಟೆಯಾಡುವ ಕಣಜದ ಹುಳಗಳೊಂದಿಗೆ. ಈ ಕಣಜದ ಹುಳಗಳೊಂದಿಗೆ ಈ ಸಸ್ಯಗಳು ನೇರವಾಗಿ ಗಾಳಿಯ ಮೂಲಕ ಸಂವಹನ ನಡೆಸುತ್ತದೆ. ಸಸ್ಯ ಬಿಡುಗಡೆ ಮಾಡುವ ರಾಸಾಯನಿಕದ ವಾಸನೆಯಿಂದ ಸೆಳೆಯಲ್ಪಟ್ಟ ಕಣಜಗಳು ಮೂಲದ ಕಡೆಗೆ ಆಕರ್ಷಿತವಾಗುತ್ತವೆ.ಅದಕ್ಕೆ ಅನುಗುಣವಾಗಿ ಮರಿಹುಳುಗಳೊಂದಿಗೆ ವ್ಯವಹರಿಸುತ್ತವೆ. ಇದನ್ನು ವಿಶೇಷವಾಗಿ ಗಮನಾರ್ಹವಾಗಿಸುವುದು ಅದರಲ್ಲಿರುವ ನಿರ್ದಿಷ್ಟತೆ. ಸಸ್ಯವು ಯಾವುದೇ ಸಾಮಾನ್ಯ ಒತ್ತಡ ಸಂಕೇತವನ್ನು ಬಿಡುಗಡೆ ಮಾಡುವುದಿಲ್ಲ. ಇದು ಮರಿಹುಳುಗಳ ಲಾಲಾರಸದಲ್ಲಿರುವ ನಿರ್ದಿಷ್ಟ ಆಣ್ವಿಕ ಪ್ರಚೋದಕಕ್ಕೆ ಪ್ರತಿಕ್ರಿಯಿಸುತ್ತದೆ.
ಈ ಮಟ್ಟದ ನಿಖರತೆಯು ರಾತ್ರೋರಾತ್ರಿ ಸಂಭವಿಸಿದ್ದಲ್ಲ. ಸಸ್ಯಗಳು, ಕೀಟಗಳು ಮತ್ತು ಪರಭಕ್ಷಕಗಳು ಲಕ್ಷಾಂತರ ವರ್ಷಗಳಿಂದ ಪರಸ್ಪರ ಅಕ್ಕಪಕ್ಕದಲ್ಲಿ ವಿಕಸನಗೊಳ್ಳುತ್ತಿವೆ.ಆದರೂ ಈ ವ್ಯವಸ್ಥೆಯು ಪ್ರತಿ ಬಾರಿಯೂ ಸದ್ದಿಲ್ಲದೆ ಮತ್ತು ವಿಶ್ವಾಸಾರ್ಹವಾಗಿ ಕಾರ್ಯನಿರ್ವಹಿಸುತ್ತದೆ. ಫಾಸಿಯೋಲಸ್ ವಲ್ಗ್ಯಾರಿಸ್ ವಿಲಕ್ಷಣ ಅಥವಾ ಅಪರೂಪದ ಜಾತಿಯಲ್ಲ. ಇದು ಕಿಡ್ನಿ ಬೀನ್ಸ್, ಕಪ್ಪು ಬೀನ್ಸ್, ನೇವಿ ಬೀನ್ಸ್ ಮತ್ತು ಪಿಂಟೊ ಬೀನ್ಸ್ಗಳ ಹಿಂದಿನ ಸಸ್ಯವಾಗಿದ್ದು, ಇದನ್ನು ಪ್ರಪಂಚದಾದ್ಯಂತ ಬೆಳೆಯಲಾಗುತ್ತದೆ. ಬಹುತೇಕ ಎಲ್ಲಾ ಪಾಕಪದ್ಧತಿಗಳಲ್ಲಿ ಇದನ್ನು ಬಳಸಲಾಗುತ್ತದೆ. ದಶಕಗಳಿಂದ ಇದರ ಬಗ್ಗೆ ವ್ಯಾಪಕವಾಗಿ ಅಧ್ಯಯನ ಮಾಡಲಾಗುತ್ತದೆ.
(ಬರಹ: ರಂಜಿತಾ ಆರ್.ಕೆ.)














Click it and Unblock the Notifications