Get Updates
Get notified of breaking news, exclusive insights, and must-see stories!

#LifeAfterCorona:ಅಪನಂಬಿಕೆಯ ಲೋಕವನ್ನು ಸೃಷ್ಟಿಸಿದೆ

'ಒನ್ಇಂಡಿಯಾ ಕನ್ನಡ' #LifeAfterCorona, #ಕೊರೊನಾನಂತರದಬದುಕು ಹ್ಯಾಶ್‌ಟ್ಯಾಗ್‌ ಅಡಿಯಲ್ಲಿ ತಜ್ಞರು, ಆಲೋಚನೆ ಮಾಡುವವರಿಂದ ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಪ್ರಶ್ನೆಗೆ ಅಭಿಪ್ರಾಯ ಸಂಗ್ರಹ ಅಭಿಯಾನ ಆರಂಭಿಸಿದೆ. ಈ ಸರಣಿಯಲ್ಲಿ ನಾಲ್ಕನೇ ಲೇಖನವಾಗಿ ಹಿರಿಯ ಪತ್ರಕರ್ತ ಜಿ.ಎನ್ ಮೋಹನ್ ಅವರ ಪ್ರತಿಕ್ರಿಯೆಯನ್ನು ಇಲ್ಲಿ ಪ್ರಸ್ತುತಪಡಿಸಲಾಗಿದೆ.

ಕೊರೊನಾ ನಂತರದ ಬದುಕು ಹೇಗಿರಬಹುದು? ಎಂಬ ಮುಖ್ಯ ಪ್ರಶ್ನೆ ಜೊತೆಗೆ ಈ ಕೆಳಗಿನ ನಾಲ್ಕು ಪ್ರಶ್ನೆಗಳಿಗೆ ಉತ್ತರವನ್ನು ನೀವು ಕಳಿಸಬಹುದು

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?
2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?
3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?
4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ನಿಮ್ಮ ಬರಹ/ವಿಡಿಯೋವನ್ನು ಇಮೇಲ್ ([email protected]) ಮಾಡಿ, ಅಥವಾ ವಾಟ್ಸಾಪ್ ಸಂಖ್ಯೆಗೆ ಕಳಿಸಿ

ಕೊರೊನಾ ನಂತರದ ಬದುಕು ಮೊದಲಿನ ಸ್ಥಿತಿಗೆ ಮರಳುವುದಿಲ್ಲ ಎಂದು ಹೇಳಿದ್ದಾರೆ. ಕೊರೊನಾ ನಂತರ ಜನಜೀವನದಲ್ಲಿ ದೊಡ್ಡ ಮಟ್ಟದ ಬದಲಾವಣೆ ನಿರೀಕ್ಷೆಯೂ ಕಷ್ಟ ಎನ್ನುವ ಮಾತುಗಳಿವೆ. ಈ ಕುರಿತು ಇನ್ನಷ್ಟು ಆಳವಾದ ಒಳನೋಟಗಳು ಈ ಕಾಲದ ಅಗತ್ಯ. ಈ ನಿಟ್ಟಿನಲ್ಲಿ ಜೆನ್ ಮೋಃಹನ್ ಅವರ ಅನಿಸೆಕೆ, ಅಭಿಪ್ರಾಯ, ಆತಂಕ, ಮುನ್ನೋಟವುಳ್ಳ ಪ್ರತಿಕ್ರಿಯೆಯನ್ನು ಮುಂದೆ ಓದಿ...

ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

1. ಕೊರೊನಾ ಸೃಷ್ಟಿಸಿರುವ ಈ ಬಿಕ್ಕಟ್ಟನ್ನು ವೈಯಕ್ತಿಕವಾಗಿ ಹೇಗೆ ಎದುರಿಸುತ್ತಿದ್ದೀರಾ?

ಇದ್ದಕ್ಕಿದ್ದಂತೆ ನಾನು ಒಂಟಿ ಎನಿಸಿದೆ. ಸದಾ ಜನರೊಟ್ಟಿಗೆ ಬೆರೆಯುವ, ಅವರ ಜೊತೆಗೆ ಇದ್ದು ಬದುಕು ಮಾಡುವ ನನಗೆ ರಾತ್ರೋರಾತ್ರಿ ಎರಗಿದ ಕೊರೊನಾ ಇನ್ನು ನಿನಗೆ ನೀನೇ ಎನ್ನುವ ಭಯಾನಕ ಸ್ಥಿತಿಯನ್ನು ಅರಿವು ಮಾಡಿಸುತ್ತಿದೆ. ಏಕಾಂತ ಮತ್ತು ಲೋಕಾಂತ ಎರಡರ ನಡುವಿನ ತಾಕಲಾಟದಲ್ಲಿ ನಾನಿದ್ದೇನೆ.

ಕೊನೆ ಯಾವಾಗ ಮತ್ತು ಹೇಗೆ ಆಗಬಹುದು

ಕೊನೆ ಯಾವಾಗ ಮತ್ತು ಹೇಗೆ ಆಗಬಹುದು

2. ವೈದ್ಯಲೋಕದ ಈ ಸವಾಲವನ್ನು ಹೇಗೆ ಅರ್ಥೈಸುತ್ತೀರಾ? ಇದರ ಕೊನೆ ಯಾವಾಗ ಮತ್ತು ಹೇಗೆ ಆಗಬಹುದು ಅಂತ ಅನ್ನಿಸುತ್ತಿದೆ?

ಕೊರೊನಾ ಕೇವಲ ವೈದ್ಯಲೋಕಕ್ಕೆ ಎದುರಾದ ಸವಾಲಲ್ಲ. ಅದು ಎಲ್ಲಾ ರಂಗಗಳನ್ನೂ ಕಿತ್ತು ತಿನ್ನಲಿದೆ. ಆದರೆ ತಕ್ಷಣದ ಪರಿಹಾರ ಒದಗಬೇಕಿರುವುದು ವೈದ್ಯ ಲೋಕದಿಂದ. ಶಸ್ತ್ರಾಸ್ತ್ರ ಮಾರುಕಟ್ಟೆಯೇ ದೊಡ್ಡ ಉದ್ಯಮವಾದ, ಜಗತ್ತಿನ ನಡುವಿನ ಬಾಂಧವ್ಯ ಇದೇ ಆಧಾರದ ಮೇಲೆ ರೂಪಿತವಾಗುತ್ತಿರುವ ಈ ಕಾಲದಲ್ಲಿ ಆರೋಗ್ಯ ಎನ್ನುವುದು ಯಾವ ದೇಶಕ್ಕೂ ಮೊದಲ ಆಯ್ಕೆಯಾಗಿಲ್ಲ. ಮನುಷ್ಯನಿಗೆ ಬದುಕಲು ಬೇಕಿರುವುದು ಅನ್ನ ನೀರು ಗಾಳಿ ಮತ್ತು ಆರೋಗ್ಯ. ನಾವು ಗಮನಿಸಿದರೆ ಈ ಎಲ್ಲವನ್ನೂ ಶಸ್ತ್ರಾಸ್ತ್ರ ಪ್ರೇರಿತ ಸರ್ಕಾರಗಳು ಕಡೆಗಣಿಸುತ್ತಲೇ ಬಂದಿವೆ. ಅಷ್ಟೇ ಅಲ್ಲ, ಕಲುಷಿತಗೊಳಿಸುತ್ತಲೂ ಬಂದಿವೆ.

ಆರೋಗ್ಯದ ಮೇಲೆ ಎರಗಿರುವ ದೊಡ್ಡ ವಿಪತ್ತನ್ನು ಎದುರಿಸುವ ಯಾವ ಯೋಜನೆಯೂ ಇಲ್ಲದ ಕಾರಣದಿಂದಲೇ ಜಗತ್ತಿನ ಬಹುತೇಕ ಎಲ್ಲಾ ದೇಶಗಳೂ ಕೊರೊನಾದಿಂದ ತತ್ತರಿಸುತ್ತಿವೆ. ಜಗತ್ತಿನ ಉಳಿವಿಗೆ ಬೇಕಿರುವುದು ಸೈನ್ಯವಲ್ಲ, ವೈದ್ಯ ಸೈನಿಕರು ಎನ್ನುವುದು ಅರಿವಾಗಬೇಕು. ಅಂತಹ ಸನ್ನಿವೇಶವನ್ನು ಕೊರೊನ ಸೃಷ್ಟಿಸಿದೆ. ವೈದ್ಯಲೋಕಕ್ಕೆ ಆಸರೆಯಾಗಿ ನಿಂತ, ಸಮಾಜಕ್ಕೆ ಆರೋಗ್ಯದ ಅಗತ್ಯವೇನು ಎಂಬುದನ್ನು ಅರಿತ ದೇಶ, ರಾಜ್ಯಗಳು ಮಾತ್ರ ಈ ಭಿಕ್ಕಟ್ಟನ್ನು ಎದುರಿಸಿದೆ. ಒಂದೆಡೆ ಕ್ಯೂಬಾ, ಇನ್ನೊಂದೆಡೆ ಕೇರಳ ಇದಕ್ಕೆ ಉದಾಹರಣೆ. ವೈದ್ಯ ಲೋಕಕ್ಕೆ ಬೇಕಿರುವುದು ಅದರ ಪ್ರಾಮುಖ್ಯತೆಯನ್ನು ಅರಿತ ಸಮಾಜ ಮಾತ್ರ.

ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲವಾಗುತ್ತದೆಯೆ?

ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲವಾಗುತ್ತದೆಯೆ?

3. 'ಕೊರೊನಾ ನಂತರ ಹಳೇ ವ್ಯವಸ್ಥೆಯೇ ಇನ್ನಷ್ಟು ಬಲಗೊಳ್ಳುತ್ತದೆ, ಶ್ರೀಮಂತರು ಹಾಗೂ ಆಳುವ ವ್ಯವಸ್ಥೆಗಳು ಇನ್ನಷ್ಟು ಪ್ರಬಲರಾಗುತ್ತಾರೆ' ಎಂಬ ವಿಶ್ಲೇಷಣೆ ಇದೆ, ನಿಮಗೆ ಏನು ಅನ್ನಿಸುತ್ತದೆ?

ಕೊರೊನ ಅಪನಂಬಿಕೆಯ ಲೋಕವನ್ನು ಸೃಷ್ಟಿಸಿದೆ. ಈ ಅಪನಂಬಿಕೆ ಉಳ್ಳವರನ್ನು ಮತ್ತಷ್ಟು ಆಸೆಬುರುಕರನ್ನಾಗಿ, ಎಲ್ಲವನ್ನೂ ಇನ್ನಷ್ಟು ಶೇಖರಿಸುವ ಮನಸ್ಸುಳ್ಳವರನ್ನಾಗಿ ಮಾಡುತ್ತದೆ. ಇಂದು ಇಡೀ ಜಗತ್ತಿನ ಸಂಪತ್ತೇ ಬೆರಳೆಣಿಕೆಯ ಜನರ ಕೈನಲ್ಲಿ ಇರುವಾಗ ಕೊರೊನೋತ್ತರ ಪರಿಸ್ಥಿತಿ ಈ ವರ್ಗ ಇನ್ನಷ್ಟು ಶೋಷಕರಾಗಿ ಬದಲಾಗಲು ಕಾರಣವಾಗುತ್ತದೆ. ಆಳುವ ವ್ಯವಸ್ಥೆ ರೂಪುಗೊಂಡಿರುವುದೇ ಉಳ್ಳವರ ಹಣದಲ್ಲಿ ಮತ್ತು ಉಳ್ಳವರ ಕಣ್ಣೋಟದಲ್ಲಿ. ಹಾಗಾಗಿ ಆಳುವ ವ್ಯವಸ್ಥೆಗಳು ಜನಲೋಕದಿಂದ ದೂರವೇ ಉಳಿಯುವ ಸಾಧ್ಯತೆಯೇ ಹೆಚ್ಚು. ಇದು ಈಗಾಗಲೇ ಹೆಚ್ಚಿರುವ ಜನಸಾಮಾನ್ಯರ ನೋವಿಗೆ ಮತ್ತಷ್ಟು ಸೇರಿಸುತ್ತದೆ.

ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು?

ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು?

4. ಮುಂದಿನ ಕೆಲವು ದಿನಗಳಲ್ಲಿ ಕೊರೊನಾ ಒಡ್ಡುವ ಸವಾಲುಗಳು ಹೇಗಿರಬಹುದು? ಅದಕ್ಕಾಗಿ ಸಿದ್ಧತೆ ಹೇಗಿರಬೇಕು?

ಮೊದಲನೆಯದಾಗಿ ಮನುಷ್ಯನ ಆರೋಗ್ಯ ಮುಖ್ಯ ಎನ್ನುವ ಸಮಾಜ ಸೃಷ್ಟಿಯಾಗಬೇಕು. ಜನರು ಬದುಕಬೇಕು ಎನ್ನುವ ಕಲ್ಪನೆಯಿದ್ದರೆ ಮಾತ್ರ ಅದು ಸಾಧ್ಯ. ಆದರೆ ಇಂದು ಆರೋಗ್ಯ ವ್ಯವಸ್ಥೆ ಹಣ ಮಾಡುವ ಒಂದು ಜಾಲವಾಗಿ ರೂಪುಗೊಳ್ಳುತ್ತಿದೆ. ಆತಂಕವನ್ನು ಎನ್ಕ್ಯಾಷ್ ಮಾಡಿಕೊಳ್ಳುವ ಒಂದು ದೊಡ್ಡ ಜಾಲ ಜಗತ್ತಿನ ಎಲ್ಲೆಡೆ ತಲೆ ಎತ್ತಿ ನಿಂತಿದೆ. ಹಾಗಾಗಿಯೇ ಔಷಧ ಲೋಕ ಕರಾಳ ದಂಧೆಯಾಗಿ ರೂಪುಗೊಂಡಿದೆ. ಆಸ್ಪತ್ರೆ ವ್ಯವಸ್ಥೆ, ವಿಮಾ ವ್ಯವಸ್ಥೆಗಳು ಈ ಕರಾಳ ಜಾಲದಲ್ಲಿವೆ. ಈ ಎಲ್ಲಾ ವ್ಯವಸ್ಥೆಗಳೂ ಆಳುವ ವರ್ಗವನ್ನು ಪೋಷಿಸುತ್ತಿರುವ ಕಾರಣ ಮತ್ತು ಉಳ್ಳವರಿಗೆ ಯಾವುದೇ ರೀತಿಯಲ್ಲೂ ಸಮಸ್ಯೆಯಾಗದ ಕಾರಣ ಈ ಜಾಲ ಇನ್ನಷ್ಟು ಭೀಕರವಾಗಲಿದೆ. ಅರೋಗ್ಯ ದಂಧೆ ಅತಿ ದೊಡ್ಡದಾಗಿ ತಲೆ ಎತ್ತಲಿದೆ. ಶಸ್ತ್ರಾಸ್ತ್ರದಂತೆಯೇ ಔಷಧ ಅಸ್ತ್ರವೂ ಬಲಿಷ್ಠರ ಕೈನಲ್ಲಿ ಮಾತ್ರ ಉಳಿಯುವ ಲಕ್ಷಣಗಳು ಇವೆ. ಜನಸಾಮಾನ್ಯ ಮುಖ್ಯವಾದ ಜಗತ್ತು ಕಳೆದುಹೋಗಲಿದೆಯೇ ಎನ್ನುವ ಆತಂಕ ನನಗಿದೆ. ವಲಸೆ, ಸಾವು, ಹಸಿವಿಗೆ ಈಗ ತುತ್ತಾಗಿರುವವರೂ ಯಾರು ಎಂದು ನೋಡಿದಾಗ ಈ ಪರಿಸ್ಥಿತಿ ಹಲವು ಪಟ್ಟು ದೊಡ್ಡದಾಗುವ ಲಕ್ಷಣವೇ ಕಣ್ಣ ಮುಂದೆ ಕಂಡು ಬೆಚ್ಚುತ್ತೇನೆ. ನನ್ನ ಆತಂಕ ಸುಳ್ಳಾಗಲಿ.

ಜಿ.ಎನ್ ಮೋಹನ್ ಸಂಕ್ಷಿಪ್ತ ಪರಿಚಯ

ಜಿ.ಎನ್ ಮೋಹನ್ ಸಂಕ್ಷಿಪ್ತ ಪರಿಚಯ

ಹಿರಿಯ ಪತ್ರಕರ್ತರಾಗಿರುವ ಜಿ.ಎನ್. ಮೋಹನ್ ಅವರು''ಅವಧಿ'' ವೆಬ್ ಮ್ಯಾಗಜಿನ್‌ನ ಪ್ರಧಾನ ಸಂಪಾದಕರಾಗಿದ್ದಾರೆ. ಪ್ರಜಾವಾಣಿ ದಿನಪತ್ರಿಕೆ ಮತ್ತು ಈ-ಟಿವಿ, ಸಮಯ ಸುದ್ದಿವಾಹಿನಿಗಳಲ್ಲಿ ಹೀಗೆ ಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿದ್ದ ಮೋಹನ್ ಅವರು ಕವಿ, ಸಾಹಿತಿಯಾಗಿ ಕೂಡಾ ಪರಿಚಿತರು. ಮೊದಲ ಕೃತಿ 'ನನ್ನೊಳಗಿನ ಹಾಡು ಕ್ಯೂಬಾ'. ವಾಹ್‌ ಮೀಡಿಯಾ, ಕಾಫಿ ಕಪ್ಪಿನೊಳಗೆ ಕೊಲಂಬಸ್, ಮೀಡಿಯಾ ಮಿರ್ಚಿ, ಸಿರಿಪಾದ, ಪ್ರಶ್ನೆಗಳಿರುವುದು ಶೇಕ್ಸ್‌ಪಿಯರ್‌ ನಿಗೆ ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+