ನಗಿಸುವವರು ಬೇಕಾಗಿದ್ದಾರೆ, ಅರ್ಜಿ ಹಾಕಿ
ಮೊನ್ನೆ ಅರಾ ಮಿತ್ರ ಬೆಳಗಾವಿಯಲ್ಲಿ ಅಲವತ್ತು ಕೊಳ್ಳಾಯಿದ್ರು. ನಗೋದೂ ಒಂದು ದೊಡ್ಡಸ್ತಿಕೆ ವಿಷ್ಯಾನ ಎನ್ನುವುದು ಅವರು ಹಾಕಿದ ಪ್ರಶ್ನೆ. ಅವರು ಹೇಳೋದು ನಿಜನೇ. ಇದೇ ನಿಜವನ್ನು ಕನ್ನಡನಾಡಿನ ಇತರ ಎಲ್ಲ ಜನಪ್ರಿಯ ಹಾಸ್ಯಗಾರರು, ಹಾಸ್ಯಗಾರ್ತಿಯರು ಹೇಳ್ತಾರೆ. ಬಾಯ್ತುಂಬ ಒಂದು ನಿಮಿಷ ನಕ್ಕರೆ ನಿಮ್ಮ ಗಂಟೇನೂ ಹೋಗಲ್ಲ, ಹಾಗೇನೇ ಆರೋಗ್ಯನೂ ಇಂಪ್ರೂವ್ ಆಗತ್ತೆ ಅಂತ ವೈದ್ಯರು ಹೇಳ್ತಾನೇ ಇರ್ತಾರೆ.
ಇಷ್ಟೆಲ್ಲ ಆದ್ರೂನೂವೆ ಕನ್ನಡಿಗರ ಮೊಗದಲ್ಲಿ ಮಂದಹಾಸ ಮೂಡುವುದು ಕೃಷ್ಣಪಕ್ಷದ ಚಂದ್ರನಂತೆ ದಿನೇದಿನೇ ಕಡಿಮೆ ಕಳೆಗುಂದುತ್ತಿದೆ. ಯಾಕಂದ್ರೆ, ಹೊಸ ಹೊಸ ಜೋಕುಗಳನ್ನು ಸಿಡಿಸುವವರು ಇಲ್ಲಿ ಕಾಣ್ತಾನೇ ಇಲ್ಲ. ಅವರವರೇ ಹಳೆ ಜೋಕರುಗಳನ್ನ ನೋಡಿನೋಡಿ, ಅವೇ ಹಳೇ ಜೋಕುಗಳನ್ನು ಕೇಳಿಕೇಳಿ ಸಖತ್ ಬೇಜಾರಾಗಿದೆ.
ಒಳಗೊಳಗೆ ಮುಸಿಮುಸಿ ನಗುತ್ತಿದ್ದ ಕನ್ನಡಿಗರನ್ನು ಸಭಾಂಗಣಕ್ಕೆ ಕರೆದುತಂದು ಹಾಸ್ಯದ ಹೊನಲಿನ ರುಚಿ ತೋರಿಸಿದ ಕೀರ್ತಿ ನಮ್ಮ ಹಾಸ್ಯಗಾರರಿಗೆ ಸಲ್ಲುತ್ತದೆ. ಇದೆಲ್ಲ ಹೊಸತರಲ್ಲಿ ತುಂಬಾ ಚೆನ್ನಾಗಿತ್ತು. ಬರ್ತಾ ಬರ್ತಾ ಎಲ್ಲ ಟಿವಿ ಚಾನಲ್ಲುಗಳೂ ಹಾಸ್ಯಲೋಕ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಆರಂಭಿಸಿದ ನಂತರ ಎಲ್ಲ ಜೋಕುಗಳನ್ನು ಎಲ್ಲರೂ ಕೇಳಿ ನಕ್ಕಾಯಿತು. ಮತ್ತೆ ಅದೇ ಜೋಕುಗಳನ್ನು ಕೇಳುವುದಕ್ಕೆ ಕನ್ನಡಿಗರು ಇನ್ನು ಸಿದ್ಧವಿಲ್ಲ ಎಂಬ ವಾತಾವರಣ ಈಗ ನಿರ್ಮಾಣವಾಗಿದೆ.
ಸಭಾಂಗಣಗಳಲ್ಲಿ, ಟಿವಿಗಳಲ್ಲಿ, ಸಂಘ ಸಂಸ್ಥೆಯ ಕಾರ್ಯಕ್ರಮಗಳಲ್ಲಿ, ದುಬೈನಲ್ಲಿ, ಮಸ್ಕಟ್ ನಲ್ಲಿ, ಕುವೈತಿನಲ್ಲಿ, ಅಮೆರಿಕಾದಲ್ಲಿ, ಸಿಂಗಪೂರದಲ್ಲಿ, ಆಸ್ಟ್ರೇಲಿಯದಲ್ಲಿ ಮತ್ತೆಲ್ಲ ಜಗತ್ತಿನ ಮೂಲೆ ಮೂಲೆಗಳಲ್ಲಿರುವ ಕನ್ನಡಿಗರು ನಗೆ ಬಾಂಬುಗಳನ್ನು, ಸ್ಟಾಂಡ್ ಅಪ್ ಕಾಮಿಡಿಗಳನ್ನು ಎಂಜಾಯ್ ಮಾಡಿ ಮುಗಿಸಿದ್ದಾರೆ. ಹೊಸ ನಗೆ ಹೂವುಗಳನ್ನು ಮೂಸಲು ಮತ್ತು ಮುಡಿಯಲು ಹಾತೊರೆಯುತ್ತಿದ್ದಾರೆ.
ಈಗ ನಗುವ ಕನ್ನಡಿಗರಿಗೆ ಬೇಕಾಗಿರುವುದು ಕೇವಲ ಹೊಸ ಜೋಕುಗಳು. ಹೊಸ ಹೊಸ ಹಾಸ್ಯಗಾರರು. ಹೊಸಬರು ಬಂದು ನಮ್ಮನ್ನೆಲ್ಲ ನಗಿಸುವಂತಾಗಲಿ. ಹಳೆಯ, ಅಂದರೆ ಸರಕು ಖಾಲಿಮಾಡಿಕೊಂಡಿರುವ ಕನ್ನಡ ಆಸ್ಥಾನದ ತೆನಾಲಿ ರಾಮರು ಹಿಂದೆ ಸರಿದು ಹೊಸಬರನ್ನು ಬೆಳೆಸಲಿ ಮತ್ತು ಪ್ರೋತ್ಸಾಹಿಸಲಿ ಎಂದು ಆಶಿಸುತ್ತೇನೆ.