Karnataka Budget 2024; 30 ಸಾವಿರ ಹುದ್ದೆಗಳ ನೇಮಕ ಘೋಷಣೆ?
ಬೆಂಗಳೂರು, ಫೆಬ್ರವರಿ 12: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ 2024-25ನೇ ಸಾಲಿನ ಬಜೆಟ್ ಅನ್ನು ಫೆಬ್ರವರಿ 16ರಂದು ಮಂಡಿಸಲಿದ್ದಾರೆ. ಬಜೆಟ್ನಲ್ಲಿ ಸರ್ಕಾರಿ ಹುದ್ದೆಗಳ ನೇಮಕಾತಿ ಕುರಿತು ಸಹ ಘೋಷಣೆ ಮಾಡುವ ನಿರೀಕ್ಷೆ ಇದೆ. ಮಾಹಿತಿಗಳ ಪ್ರಕಾರ 30 ಸಾವಿರ ಹುದ್ದೆಗಳ ನೇಮಕದ ಕುರಿತು ಘೋಷಣೆಯಾಗುವ ಸಾಧ್ಯತೆ ಇದೆ.
ರಾಜ್ಯದಲ್ಲಿ 2.50 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇದೆ. ರಾಜ್ಯದ ಯೋಜನೆಗಳನ್ನು ಜನರಿಗೆ ಸಮಪರ್ಕವಾಗಿ ತಲುಪಿಸಲು ನೌಕರರ ಕೊರತೆ ಇದೆ. ಖಾಲಿ ಹುದ್ದೆಗಳ ಕಾರಣ ಇರುವ ಅಧಿಕಾರಿ/ ಸಿಬ್ಬಂದಿಗಳ ಮೇಲೆ ಒತ್ತಡ ಹೆಚ್ಚಿದೆ. ಆದ್ದರಿಂದ ನೇಮಕಾತಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಲಿದ್ದಾರೆ ಎಂಬ ಮಾಹಿತಿ ಇದೆ.

ವಿವಿಧ ಇಲಾಖೆಗಳು ಈಗಾಗಲೇ ಕರ್ನಾಟಕ ಲೋಕಸೇವಾ ಆಯೋಗಕ್ಕೆ ಭರ್ತಿಯಾಗಬೇಕಾಗಿರುವ ಹುದ್ದೆಗಳ ಕುರಿತು ಪ್ರಸ್ತಾವನೆ ಸಲ್ಲಿಕೆ ಮಾಡಿವೆ. ಆದರೆ ಆರ್ಥಿಕ ಇಲಾಖೆಯ ಒಪ್ಪಿಗೆ ಇನ್ನೂ ಸಿಗದ ಕಾರಣ ಅದು ಬಾಕಿ ಇದೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದರೆ ನೇಮಕಾತಿ ಅಧಿಸೂಚನೆ ಪ್ರಕಟವಾಗಲಿದೆ.
ವಿವಿಧ ಇಲಾಖೆಗಳು: ಮಾಹಿತಿಗಳ ಪ್ರಕಾರ ಕೃಷಿ ಇಲಾಖೆ 34, ಪಶು ಸಂಗೋಪನೆ ಇಲಾಖೆ 30, ಹಣಕಾಸು 195, ಡಿಪಿಆರ್ 92, ಗೃಹ ಇಲಾಖೆ 292, ಆರೋಗ್ಯ 262, ಕಾನೂನು 301, ಲೋಕೋಪಯೋಗಿ 512, ಕಂದಾಯ 106, ಸಾರಿಗೆ ನಿಗಮಗಳ 1650 ಸೇರಿದಂತೆ ವಿವಿಧ ಇಲಾಖೆಗಳ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.
ಕೃಷಿ, ಪಶುಸಂಗೋಪನೆ, ಜಲ ಸಂಪನ್ಮೂಲ, ಆರೋಗ್ಯ ಇಲಾಖೆಗಳಲ್ಲಿನ ತಾಂತ್ರಿಕ ಹುದ್ದೆಗಳನ್ನು ಭರ್ತಿ ಮಾಡಬೇಕಾದ ಅನಿವಾರ್ಯತೆ ಇದೆ. ಆಡಳಿತ ಸುಧಾರಣಾ ಆಯೋಗ ಸರ್ಕಾರಿ ಹುದ್ದೆಗಳ ಸಂಖ್ಯೆ ಕಡಿತ ಮಾಡುವಂತೆ ಸಲಹೆ ನೀಡಿದೆ. ಆದರೆ ಆಡಳಿತ ಯಂತ್ರ ಸುಸೂತ್ರವಾಗಿ ಸಾಗಲು ಹುದ್ದೆಗಳ ಭರ್ತಿ ಅನಿವಾರ್ಯವಾಗಿದೆ.
ವಿವಿಧ ಇಲಾಖೆಗಳಲ್ಲಿ ಹುದ್ದೆಗಳು ಖಾಲಿ ಇರುವ ಕಾರಣ ಸುಮಾರು 1.50 ಲಕ್ಷ ಜನರು ಗುತ್ತಿಗೆ ಮತ್ತು ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಆದರೂ ಸಹ ಸಾವಿರಾರು ಹುದ್ದೆಗಳು ಖಾಲಿ ಇವೆ. ಕರ್ನಾಟಕದ ಸರ್ಕಾರಿ ನೌಕರರ ಸಂಘ ಸಹ 7ನೇ ರಾಜ್ಯ ವೇತನ ಆಯೋಗಕ್ಕೆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಲು ಶಿಫಾಸರು ಮಾಡಬೇಕು ಎಂದು ಮನವಿ ಮಾಡಿದೆ.
ಈಗಾಗಲೇ ಆರ್ಥಿಕ ಇಲಾಖೆ ಗೆಜೆಟೆಡ್ ಪ್ರೊಬೆಷನರ್ಸ್ ನೇಮಕಾತಿ ಪ್ರಕ್ರಿಯೆಗೆ ಒಪ್ಪಿಗೆ ನೀಡಿದೆ. ಸುಮಾರು 384 ಹುದ್ದೆಗಳ ನೇಮಕಾತಿಗೆ ಶೀಘ್ರವೇ ಕರ್ನಾಟಕ ಲೋಕಸೇವಾ ಆಯೋಗ ಅಧಿಸೂಚನೆಯನ್ನು ಪ್ರಕಟಿಸಲಿದೆ.
ಕರ್ನಾಟಕದ ಜನಸಂಖ್ಯೆ 3 ಕೋಟಿ ಇದ್ದಾಗ 7.69 ಲಕ್ಷ ಹುದ್ದೆಗಳು ಇದ್ದವು. ಇತ್ತು. ಈಗ 7 ಕೋಟಿಗೆ ತಲುಪಿದರೂ ಸಹ ಹುದ್ದೆಗಳ ಸಂಖ್ಯೆ ಹೆಚ್ಚಳವಾಗಿಲ್ಲ. ಪ್ರತಿವರ್ಷ ನೌಕರರು ನಿವೃತ್ತರಾಗುತ್ತಾರೆ. ಆದರೆ ಅದಕ್ಕೆ ಸರಿಯಾಗಿ ನೇಮಕಾತಿ ನಡೆಯುತ್ತಿಲ್ಲ. ಆದ್ದರಿಂದ ಈಗ ನೇಮಕಾತಿ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ.
ಬಜೆಟ್ನಲ್ಲಿ ಘೋಷಣೆಗೊಂಡ ಬಳಿಕ ಕರ್ನಾಟಕ ಲೋಕಸೇವಾ ಆಯೋಗ ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಿ, ಹುದ್ದೆಗಳನ್ನು ಭರ್ತಿ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.
ಹೊಸ ಹುದ್ದೆಗಳ ನೇಮಕಾತಿ ಮಾಡಿಕೊಂಡರೆ ಸರ್ಕಾರಕ್ಕೆ ಆರ್ಥಿಕ ಹೊರೆಯೂ ಸಹ ಹೆಚ್ಚಲಿದೆ. ಈಗಾಗಲೇ ಸರ್ಕಾರ 7ನೇ ರಾಜ್ಯ ವೇತನ ಆಯೋಗ ರಚನೆ ಮಾಡಿದೆ. ಆಯೋಗದ ಶಿಫಾರಸು ಅನ್ವಯ ವೇತನ, ಪಿಂಚಣಿ ಏರಿಕೆ ಮಾಡಬೇಕಾದರೆ ಸಹ ಆರ್ಥಿಕ ಹೊರೆಯನ್ನು ಎದುರಿಸಬೇಕಿದೆ.












Click it and Unblock the Notifications