ಹಾಲು ಒಕ್ಕೂಟದಲ್ಲಿನ 1,400 ಹುದ್ದೆಗಳು ಶೀಘ್ರ ಭರ್ತಿ
ಮೈಸೂರು, ನವೆಂಬರ್ 24 : "ರಾಜ್ಯದ ಎಲ್ಲಾ ಹಾಲು ಒಕ್ಕೂಟದಲ್ಲಿ ಖಾಲಿ ಇರುವ 1,400 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ" ಎಂದು ಸಹಕಾರ ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ಮೈಸೂರಿನಲ್ಲಿ ಮಂಗಳವಾರ ಮಾತನಾಡಿದ ಸಚಿವರು, " ಬೆಂಗಳೂರು ಹಾಲು ಒಕ್ಕೂಟದಲ್ಲಿ 292, ಮಂಡ್ಯ, ಮಂಗಳೂರು, ವಿಜಯಪುರ ಹಾಲು ಒಕ್ಕೂಟಗಳ ಹುದ್ದೆಗಳ ಭರ್ತಿಗೆ ಒಪ್ಪಿಗೆ ನೀಡಲಾಗಿದೆ" ಎಂದರು.

"2021ರ ಜೂನ್ ವೇಳೆಗೆ 40 ಸಾವಿರ ಸಹಕಾರ ಸಂಘಗಳಲ್ಲಿ ಖಾಲಿ ಇರುವ 5 ಸಾವಿರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ" ಎಂದು ಸಚಿವ ಎಸ್. ಟಿ. ಸೋಮಶೇಖರ್ ಹೇಳಿದರು.
ಹಲವು ನೇಮಕಾತಿ ಸ್ಥಗಿತ; ಕೋವಿಡ್ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಲಾಗಿತ್ತು. ಪರಿಣಾಮ ಸರ್ಕಾರಕ್ಕೆ ಅಪಾರವಾದ ನಷ್ಟ ಉಂಟಾಗಿದೆ. ಇದರಿಂದಾಗಿ ಕರ್ನಾಟಕ ಸರ್ಕಾರ ಹಲವು ಇಲಾಖೆಗಳ ನೇಮಕಾತಿಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ, ಕೆಲವು ನೇಮಕಾತಿ ರದ್ದಾಗಿದೆ.
ಆರ್ಥಿಕ ಪರಿಸ್ಥಿತಿ ಮತ್ತು ವಿವಿಧ ತಾಂತ್ರಿಕ ಕಾರಣಗಳನ್ನು ಮುಂದಿಟ್ಟುಕೊಂಡು ಹಲವು ಇಲಾಖೆಗಳ ನೇಮಕಾತಿ ರದ್ದುಪಡಿಸಿದೆ. ಅತಿ ಅಗತ್ಯ ಇರುವ ಹುದ್ದೆಗಳ ಭರ್ತಿಗೆ ಮಾತ್ರ ಅನುಮತಿಯನ್ನು ನೀಡಲಾಗಿದೆ.
ಪ್ರಸ್ತುತ ಸ್ಥಗಿತಗೊಂಡಿರುವ ಸರ್ಕಾರಿ ಇಲಾಖೆಗಳ ನೇಮಕಾತಿ ಮತ್ತೆ ಯಾವಾಗ ಆರಂಭವಾಗಲಿದೆ? ಎಂಬುದು ಖಚಿತವಾಗಿಲ್ಲ. ನೇಮಕಾತಿ ಮುಂದೂಡಿರುವುದರಿಂದ ವಯೋಮಿತಿ ಹೆಚ್ಚಾಗಲಿದ್ದು, ಹಲವಾರು ಅಭ್ಯರ್ಥಿಗಳು ಸರ್ಕಾರಿ ಉದ್ಯೋಗ ಕೈ ತಪ್ಪುವ ಭೀತಿಯಲ್ಲಿದ್ದಾರೆ.












Click it and Unblock the Notifications