ಮೈಸೂರಿನಲ್ಲಿ ಜನವರಿ 4ರಿಂದ 8ರ ತನಕ ಉದ್ಯೋಗ ಮೇಳ
ಮೈಸೂರು, ಡಿಸೆಂಬರ್ 28; ಮೈಸೂರಿನಲ್ಲಿ ಬೃಹತ್ ಉದ್ಯೋಗ ಮತ್ತು ಕೌಶಲ್ಯ ಮೇಳ ಆಯೋಜನೆ ಮಾಡಲಾಗಿದೆ. ಜನವರಿ 4 ರಿಂದ 8ರ ತನಕ ವಿವಿಧ ಸ್ಥಳಗಳಲ್ಲಿ ಮೇಳ ನಡೆಯಲಿದೆ.
ಕೆ. ಆರ್. ಕ್ಷೇತ್ರದ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಉದ್ಯೋಗ ಮತ್ತು ಕೌಶಲ್ಯ ಮೇಳ ನಡೆಯಲಿದೆ ಎಂದು ಬಿಜೆಪಿ ಶಾಸಕ ಎಸ್. ಎ. ರಾಮದಾಸ್ ಫೇಸ್ ಬುಕ್ನಲ್ಲಿ ಪೋಸ್ಟ್ ಹಾಕಿದ್ದಾರೆ.
ಶಾಸಕರು ಜನವರಿ 4ರಿಂದ ನಡೆಯುವ ಉದ್ಯೋಗ ಮತ್ತು ಕೌಶಲ್ಯ ನೋಂದಣಿ ಕಾರ್ಯಕ್ರಮದ ಪೂರ್ವ ಸಿದ್ಧತೆಯಾಗಿ ವಿವಿಧ ಅಧಿಕಾರಿಗಳ ಸಭೆಯನ್ನು ನಡೆಸಿದರು.

ಜನವರಿ 4 ರಿಂದ 8ರ ತನಕ ಮಂಗಳವಾರದಿಂದ ಶನಿವಾರದ ತನಕ ಬೆಳಗ್ಗೆ 9 ರಿಂದ ಸಂಜೆ 5 ಗಂಟೆಯ ತನಕ ಉದ್ಯೋಗ ಮತ್ತು ಕೌಶಲ್ಯ ಮೇಳ ನಡೆಯಲಿದೆ.
ಜನವರಿ 4, 2022ರಂದು ವಿದ್ಯಾಶಂಕರ ಕಲ್ಯಾಣ ಮಂಟಪ, ಗನ್ ಹೌಸ್ ವೃತ್ತದ ಬಳಿ. ಜನವರಿ 5ರಂದು ಒಕ್ಕಲಿಗರ ಹಾಸ್ಟೆಲ್, 2ನೇ ಮೇನ್, ವಿದ್ಯಾರಣ್ಯಪುರಂನಲ್ಲಿ ಉದ್ಯೋಗ ಮೇಳ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಜನವರಿ 6ರಂದು ನಿತ್ಯಾನಂದ ಕಲ್ಯಾಣ ಮಂಟಪ, ಸ್ಟರ್ಲಿಂಗ್ ಟಾಕೀಸ್ ಬಳಿ. ಜನವರಿ 7ರಂದು ಭ್ರಮರಾಂಭ ಕಲ್ಯಾಣ ಮಂಟಪ ಶ್ರೀರಾಂಪುರ 2ನೇ ಹಂತ ಮತ್ತು ಜನವರಿ 8ರಂದು ಸಾಮ್ರಾಟ್ ಕಲ್ಯಾಣ ಮಂಟಪ, ಉದಯರವಿ ರಸ್ತೆ, ಕುವೆಂಪು ನಗರ ಇಲ್ಲಿ ಉದ್ಯೋಗ ಮೇಳ ನಡೆಯಲಿದೆ.
ಶಿವಮೊಗ್ಗ ಕೋರ್ಟ್ನಲ್ಲಿ ಕೆಲಸ ಖಾಲಿ ಇದೆ; ಶಿವಮೊಗ್ಗ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಘಟಕದ ವಿವಿಧ ನ್ಯಾಯಾಲಯಗಳಲ್ಲಿ ಖಾಲಿ ಇರುವ ಬೆರಳಚ್ಚುಗಾರರ 9 ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಕರೆಯಲಾಗಿದೆ. ಅಭ್ಯರ್ಥಿಗಳು ಆನ್ಲೈನ್ ಮೂಲಕ ಮಾತ್ರ 2021ರ ಡಿಸೆಂಬರ್ 27 ರಿಂದ 2022 ರ ಜನವರಿ 30ರ ರಾತ್ರಿ 11.59 ರವರೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಪದವಿಪೂರ್ವ ಶಿಕ್ಷಣ ಪರೀಕ್ಷಾ ಮಂಡಳಿಯು ನಡೆಸುವ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ಮೂರು ವರ್ಷಗಳ ಡಿಪ್ಲೊಮಾ ಕಮರ್ಷಿಯಲ್ ಪ್ರಾಕ್ಟಿಸ್ ಪರೀಕ್ಷೆಯಲ್ಲಿ ಉತ್ತೀರ್ಣ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.
ಅಭ್ಯರ್ಥಿ ಸಾರ್ವಜನಿಕ ಶಿಕ್ಷಣ ಇಲಾಖೆಯು ನಡೆಸುವ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಹಿರಿಯ ದರ್ಜೆ ಪರೀಕ್ಷೆ ಉತ್ತೀರ್ಣಗೊಂಡಿರಬೇಕು ಅಥವಾ ಡಿಪ್ಲೊಮಾ ಸೆಕ್ರೇಟರಿಯಲ್ ಪ್ರಾಕ್ಟೀಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಯು ಕನಿಷ್ಟ 18 ವರ್ಷ ಪೂರೈಸಿರತಕ್ಕದ್ದು. ಸಾಮಾನ್ಯ ವರ್ಗಕ್ಕೆ 35 ವರ್ಷಗಳು, 2ಎ/ 2ಬಿ/ 3ಎ/3ಬಿ ಅಭ್ಯರ್ಥಿಗೆ 38 ವರ್ಷಗಳು ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಪ್ರವರ್ಗ-1ರ ಅಭ್ಯರ್ಥಿಗೆ 40 ವರ್ಷದ ಗರಿಷ್ಟ ವಯೋಮಿತಿ ನಿಗದಿ ಮಾಡಲಾಗಿದೆ.
ಅರ್ಜಿಗಳನ್ನು ಸಲ್ಲಿಸುವ ಸಾಮಾನ್ಯ ವರ್ಗಕ್ಕೆ ಸೇರಿದ ಅಭ್ಯರ್ಥಿಗಳು 200 ರೂ., ಪ್ರವರ್ಗ-2ಎ/ 2ಬಿ ಮತ್ತು 3ಎ, 3ಬಿಗೆ ಸೇರಿದ ಅಭ್ಯರ್ಥಿಗಳು 100 ರೂ. ಶುಲ್ಕವನ್ನು ಪಾವತಿ ಮಾಡಬೇಕು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ-1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ ಶುಲ್ಕ ಪಾವತಿಯಿಂದ ವಿನಾಯಿತಿ ಇದೆ.
ಅರ್ಜಿ ಸಲ್ಲಿಕೆ, ಸೂಚನೆಗಳು, ಹುದ್ದೆ ವರ್ಗೀಕರಣ, ವಯೋಮಿತಿ ಸಡಿಲಿಕೆ, ಆಯ್ಕೆ ವಿಧಾನ ಮತ್ತು ಹೆಚ್ಚಿನ ಮಾಹಿತಿಗಾಗಿ ವೆಬ್ ಸೈಟ್ಗೆ ಭೇಟಿ ನೀಡಬಹುದಾಗಿದೆ. https://karnatakajudiciary.kar.nic.in/districtrecruitment
ತಾತ್ಕಾಲಿಕ ಹುದ್ದೆಗೆ ನೇರ ಸಂದರ್ಶನ; ಧಾರವಾಡ ಕೃಷಿ ಮಹಾವಿದ್ಯಾಲಯದ ಜೀವ ರಸಾಯನಶಾಸ್ತ್ರ ವಿಭಾಗದಲ್ಲಿ ಪದವೀಧರ ಸಹಾಯಕರ ಹುದ್ದೆಗೆ ಅರ್ಜಿ ಕರೆಯಲಾಗಿದೆ. 179 ದಿನಗಳ ಅವಧಿಗೆ ತಾತ್ಕಾಲಿಕವಾಗಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಎಂಎಸ್ಸಿ (ಅಗ್ರಿ) ಸಸ್ಯ ಜೀವರಸಾಯಶಾಸ್ತ್ರ ವಿದ್ಯಾರ್ಹತೆಯನ್ನು ಹೊಂದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಅರ್ಜಿ ನಮೂನೆಗಳೊಂದಿಗೆ ತಮ್ಮ ವಿದ್ಯಾರ್ಹತೆಗೆ ಸಂಬಂಧಪಟ್ಟ ಎಲ್ಲ ಮೂಲ ದಾಖಲೆಗಳ ಎರಡು ಪ್ರತಿಗಳೊಂದಿಗೆ ಜನವರಿ 3ರಂದು ಬೆಳಗ್ಗೆ 11 ಗಂಟೆಗೆ ಧಾರವಾಡ ಕೃಷಿ ಮಹಾವಿದ್ಯಾಲಯದ ಡೀನ್ (ಕೃಷಿ) ಕಛೇರಿಗೆ ಸಂದರ್ಶನಕ್ಕೆ ಹಾಜರಾಗಬೇಕು.












Click it and Unblock the Notifications