ಬೆಂಗಳೂರಲ್ಲಿ ಉದ್ಯೋಗ ಮೇಳ: ಉಚಿತ ಬಸ್ ವ್ಯವಸ್ಥೆ, ಮಾರ್ಗಗಳು
ಬೆಂಗಳೂರು, ಫೆಬ್ರವರಿ 25; ಕರ್ನಾಟಕ ಸರ್ಕಾರ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಬೆಂಗಳೂರು ನಗರದಲ್ಲಿ ಫೆಬ್ರವರಿ 26 ಮತ್ತು 27ರಂದು ಆಯೋಜಿಸಿದೆ. ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳಿಗೆ ಅನುಕೂಲವಾಗುವಂತೆ ಉಚಿತ ಬಸ್ ವ್ಯವಸ್ಥೆ ಮಾಡಲಾಗಿದೆ. ಉದ್ಯೋಗ ಮೇಳಕ್ಕೆ ಆಗಮಿಸುವ ಅಭ್ಯರ್ಥಿಗಳು ಇದರ ಉಪಯೋಗ ಪಡೆದುಕೊಳ್ಳಬಹುದು.
ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ ಬೆಂಗಳೂರಿನ ಅರಮನೆ ಮೈದಾನದಲ್ಲಿ ರಾಜ್ಯ ಮಟ್ಟದ ಬೃಹತ್ ಉದ್ಯೋಗ ಮೇಳವನ್ನು ಫೆಬ್ರವರಿ 26ರ ಸೋಮವಾರ ಮತ್ತು ಫೆಬ್ರವರಿ 27ರ ಮಂಗಳವಾರ ಆಯೋಜನೆ ಮಾಡಿದೆ. ಈಗಾಗಲೇ ಇದಕ್ಕಾಗಿ ಆನ್ಲೈನ್ ಮೂಲಕ ನೋಂದಣಿ ನಡೆಯುತ್ತಿದೆ.

ಈ ಬೃಹತ್ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲು ಸಹಾಯಕವಾಗುವಂತೆ ಬೆಳಗ್ಗೆ 9 ರಿಂದ ಸಂಜೆ 5.30ರ ತನಕ ಉಚಿತ ಬಸ್ ಸೇವೆಯನ್ನು ಒದಗಿಸಲಾಗುತ್ತದೆ. ಬೆಂಗಳೂರು ನಗರದ ವಿವಿಧ ಪ್ರದೇಶಗಳಿಂದ ಈ ಬಸ್ಗಳು ಸಂಚಾರ ನಡೆಸುತ್ತವೆ.
ಬಸ್ ಮಾರ್ಗಗಳು: ಬೃಹತ್ ಉದ್ಯೋಗ ಮೇಳಕ್ಕೆ ತಲುಪಲು ಉಚಿತ ಬಸ್ಗಳ ವ್ಯವಸ್ಥೆ ಮಾಡಿದ್ದು, ಬಸ್ ಇರುವ ಸ್ಥಳಗಳ ಪಟ್ಟಿಯನ್ನು ಅಭ್ಯರ್ಥಿಗಳ ಮಾಹಿತಿಗಾಗಿ ಪ್ರಕಟಿಸಲಾಗಿದೆ. ಉದ್ಯೋಗ ಮೇಳಕ್ಕೆ ಎರಡು ದಿನಗಳ ಹಾಜರಾಗುವ ಅಭ್ಯರ್ಥಿಗಳು ಈ ಬಸ್ಗಳ ಸದುಪಯೋಗ ಪಡೆದುಕೊಂಡು ಸಂಚಾರ ನಡೆಸಬಹುದು.
ಬೃಹತ್ ಉದ್ಯೋಗ ಮೇಳದಲ್ಲಿ ಭಾಗಿಯಾಗಲು ಬೆಂಗಳೂರಿನ ವಿವಿಧ ಪ್ರಮುಖ ನಿಲ್ದಾಣಗಳಿಂದ ಉಚಿತ ಬಸ್ ವ್ಯವಸ್ಥೆಯನ್ನು ಮಾಡಲಾಗಿದ್ದು ಈ ಕುರಿತ ವಿವರ. pic.twitter.com/iuUnvvs3GU
— 𝐊.𝐒.𝐃.𝐂 - ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ (@Skill_Karnataka) February 24, 2024
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಬಸ್ಗಳು ಬೃಹತ್ ಉದ್ಯೋಗ ಮೇಳ ನಡೆಯುವ ಸ್ಥಳಗಳಿಗೆ ಬೆಂಗಳೂರು ನಗರದ ವಿವಿಧ ಪ್ರದೇಶಗಳಿಂದ ಸಂಚಾರ ನಡೆಸುತ್ತವೆ. ಬಸ್ ಮಾರ್ಗ, ಸಮಯದ ವಿವರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ.
ಕೆಂಪೇಗೌಡ ಬಸ್ ನಿಲ್ದಾಣ ಮತ್ತು ಕೆಂಪೇಗೌಡ ಮೆಟ್ರೋ ನಿಲ್ದಾಣದಿಂದ (ಮೆಜೆಸ್ಟಿಕ್)-ಅರಮನೆ ಮೈದಾನ ಪ್ರತಿ 30 ನಿಮಿಷಕ್ಕೆ ಉಚಿತ ಬಸ್ಗಳು ಸಂಚಾರ ನಡೆಸುತ್ತವೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸುವ ನೂರಾರು ಅಭ್ಯರ್ಥಿಗಳು ಮೆಜೆಸ್ಟಿಕ್ಗೆ ಆಗಮಿಸುವುದರಿಂದ ಅಲ್ಲಿಂದ ಉಚಿತ ಬಸ್ಗಳಲ್ಲಿ ಸಂಚಾರ ನಡೆಸಬಹುದು.
ಡಾ. ಬಿ. ಆರ್. ಅಂಬೇಡ್ಕರ್ ಮೆಟ್ರೋ ನಿಲ್ದಾಣ (ವಿಧಾನಸೌಧ ಪ್ರವೇಶ ದ್ವಾರ)-ಅರಮನೆ ಮೈದಾನ. ಪ್ರತಿ 30 ನಿಮಿಷಕ್ಕೊಂದು ಬಸ್ಗಳ ಸಂಚಾರ. ಕಂಟೋನ್ಮೆಂಟ್ ರೈಲು ನಿಲ್ದಾಣದಿಂದ-ಅರಮನೆ ಮೈದಾನ ಪ್ರತಿ 30ನಿಮಿಷಕ್ಕೊಂದು ಬಸ್ಗಳ ಸಂಚಾರ.
ಶಾಂತಿನಗರ ಬಸ್ ನಿಲ್ದಾಣ-ಅರಮನೆ ಮೈದಾನ ನಡುವೆ ಪ್ರತಿ 15 ನಿಮಿಷಕ್ಕೊಂದು ಬಸ್ಗಳು ಸಂಚಾರ ನಡೆಸುತ್ತವೆ. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಮೆಜೆಸ್ಟಿಕ್-ಅರಮನೆ ಮೈದಾನ ಪ್ರತಿ 30 ನಿಮಿಷಕ್ಕೊಂದು ಬಸ್ಗಳ ಸಂಚಾರ. ಸ್ಯಾಟಲೈಟ್ ಬಸ್ ನಿಲ್ದಾಣ ಮತ್ತು ಕೆಂಗೇರಿ ಮೆಟ್ರೋ ನಿಲ್ದಾಣ-ಅರಮನೆ ಮೈದಾನ ಪ್ರತಿ 1 ಗಂಟೆಗೊಮ್ಮೆ ಬಸ್ಗಳ ಸಂಚಾರ.
ಎಲ್ಲಾ ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳು ಈ ಬೃಹತ್ ಉದ್ಯೋಗ ಮೇಳದಲ್ಲಿ ಉಚಿತವಾಗಿ ಪಾಳ್ಗೊಳ್ಳಬಹುದು. 50 ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಹಾಗೂ ರಾಜ್ಯದ ಎಲ್ಲಾ ವಲಯಗಳಿಂದ ಪ್ರತಿಷ್ಠಿತ ಬೃಹತ್, ಮಧ್ಯಮ ಮತ್ತು ಸಣ್ಣ ಉದ್ಯೋಗದಾತ ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲಿವೆ.
ಯುವ ಜನತೆಗೆ ಉದ್ಯೋಗಾವಕಾಶ ಕಲ್ಪಿಸಲು ಕರ್ನಾಟಕ ಸರ್ಕಾರ ಕೈಗೊಂಡ ಪ್ರಮುಖ ಕಾರ್ಯಕ್ರಮ ಇದಾಗಿದೆ. ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳುವ ಬಯಸುವ ಅಭ್ಯರ್ಥಿಗಳು ನೋಂದಣಿಗಾಗಿ https://skillconnect.kaushalkar.com ವೆಬ್ಸೈಟ್ಗೆ ಭೇಟಿ ನೀಡಬಹುದು.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಫೆಬ್ರವರಿ 26 ಮತ್ತು 27ರಂದು ನಡೆಯುವ ಯುವ ಸಮೃದ್ಧಿ ಸಮ್ಮೇಳನ, ಬೃಹತ್ ಉದ್ಯೋಗ ಮೇಳಕ್ಕಾಗಿ ಸಿದ್ದತೆಗಳು ಪೂರ್ಣಗೊಂಡಿವೆ. ಶನಿವಾರ ಸ್ಥಳಕ್ಕೆ ಭೇಟಿ ನೀಡಿ ಕೌಶಲ್ಯಾಭಿವೃದ್ಧಿ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಪರಿಶೀಲನೆ ನಡೆಸಿ, ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.












Click it and Unblock the Notifications