ಬಜೆಟ್ ನಿರೀಕ್ಷೆ 2021; ಉದ್ಯೋಗ ಸೃಷ್ಟಿಗೆ ವಿಶೇಷ ಗಮನ ಬೇಕು
ಬೆಂಗಳೂರು, ಜನವರಿ 21: ಫೆಬ್ರವರಿ 1ರಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ 2021ನೇ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ. ಕೋವಿಡ್ ಪರಿಸ್ಥಿತಿಯಿಂದಾಗಿ ಜನರು, ವಿವಿಧ ವಲಯಗಳು ಸಂಕಷ್ಟಕ್ಕೆ ಸಿಲುಕಿದ್ದು, ಬಜೆಟ್ ಮೇಲೆ ನಿರೀಕ್ಷೆ ಹೆಚ್ಚಿದೆ.
ಬಜೆಟ್ನಲ್ಲಿ ಉದ್ಯೋಗ ವಲಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂಬ ಕೂಗು ಜೋರಾಗಿದೆ. ಇದಕ್ಕೆ ಕಾರಣವೂ ಇದೆ. 2020ರ ಮಾರ್ಚ್ನಲ್ಲಿ ಲಾಕ್ ಡೌನ್ ಘೋಷಣೆಯಾದ ಬಳಿಕ ಹಲವಾರು ಜನರು ಕೆಲಸ ಕಳೆದುಕೊಂಡಿದ್ದಾರೆ.
ಈಗ ಜನಜೀವನ ಸಹಜ ಸ್ಥಿತಿಗೆ ಮರಳುತ್ತಿದ್ದು, ಹೊಸ ಕೆಲಸಗಳಿಗಾಗಿ ಹುಡುಕಾಟ ಮುಂದುವರೆದಿದೆ. ತಯಾರಿಕಾ ಮತ್ತು ಸೇವಾ ವಲಯಗಳಲ್ಲಿ ಕಾರ್ಮಿಕರ ಕೊರತೆ ಬಹುದೊಡ್ಡ ಮಟ್ಟದಲ್ಲಿ ಎದುರಾಗಿದೆ.

ತಯಾರಿಕಾ ಮತ್ತು ಸೇವಾ ವಲಯಗಳ ಚೇತರಿಕೆಗಾಗಿ ಹಣಕಾಸು ಸಚಿವರು ಈ ವಲಯಗಳಿಗೆ ಆದ್ಯತೆ ನೀಡಬೇಕು ಎಂಬುದು ತಜ್ಞರ ಅಭಿಮತ. ಮಹಾನಗರಗಳಲ್ಲಿ ಇದ್ದ ಕೆಲಸಗಳನ್ನು ಬಿಟ್ಟು ತಾಲೂಕು, ಗ್ರಾಮಗಳಿಗೆ ಹೋದ ಜನರು, ಸ್ಥಳೀಯವಾಗಿ ಉದ್ಯೋಗ ಹುಡುಕಾಟದಲ್ಲಿ ನಿರತರಾಗಿದ್ದಾರೆ.
ಸೇವಾ ಕ್ಷೇತ್ರದಲ್ಲಿ ತುರ್ತಾಗಿ ಉದ್ಯೋಗಗಳನ್ನು ಸೃಷ್ಟಿ ಮಾಡಬಹುದು ಎಂಬ ವಾದವೂ ಕೇಳಿ ಬರುತ್ತಿದೆ. ಭಾರತದ ಉದ್ಯೋಗ ಸೃಷ್ಟಿಯಲ್ಲಿ ಸೇವಾ ವಲಯದಲ್ಲಿ ಶೇ 40ರಷ್ಟು ಅವಕಾಶವಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಕೋವಿಡ್ ಪರಿಸ್ಥಿತಿಯ ನಡುವೆಯೇ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್ ಅನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿತ್ತು. 'ಆತ್ಮ ನಿರ್ಭರ ಭಾರತ' ಘೋಷಣೆಯನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದರು.
ಮಹಾನಗರದಲ್ಲಿದ್ದ ಕೆಲಸ ಬಿಟ್ಟು ಪಟ್ಟಣ, ಗ್ರಾಮಗಳನ್ನು ಸೇರಿದ ಜನರು ಅಲ್ಲಿಯೇ ಚಿಕ್ಕ ತಯಾರಿಕಾ ಘಟಕಗಳನ್ನು ಆರಂಭಿಸಲು ಪ್ರಯತ್ನವನ್ನು ನಡೆಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಯಾಗಲಿದೆ. ಆದರೆ, ಉದ್ಯಮ ಆರಂಭಿಸುವವರಿಗೆ ಬಜೆಟ್ನಲ್ಲಿ ಸಹಕಾರಿಯಾಗುವ ಘೋಷಣೆಯಾಗಬೇಕಿದೆ.
ವಲಸೆ ಕಾರ್ಮಿಕರು; ಲಾಕ್ ಡೌನ್ ಘೋಷಣೆ ಬಳಿಕ ಲಕ್ಷಾಂತರ ವಲಸೆ ಕಾರ್ಮಿಕರು ತವರು ರಾಜ್ಯ, ತವರು ಜಿಲ್ಲೆಗಳಿಗೆ ವಾಪಸ್ ಆಗಿದ್ದಾರೆ. ಅವರು ಪುನಃ ನಗರಕ್ಕೆ ಬಂದು ಬದುಕು ಕಟ್ಟಿಕೊಳ್ಳಬೇಕು ಎಂದರೆ ಮಹಾನಗರದಲ್ಲಿ ಉದ್ಯೋಗ ಸೃಷ್ಟಿಯಾಗುವ ಅನಿವಾರ್ಯತೆ ಇದೆ.
ಕೋವಿಡ್ ಸಂದರ್ಭದಲ್ಲಿ ಆರೋಗ್ಯ, ಮೂಲ ಸೌಕರ್ಯ, ಸಾರಿಗೆ, ಉದ್ಯೋಗ ಸೃಷ್ಟಿ ಹೀಗೆ ವಿವಿಧ ವಲಯಗಳಿಗೆ ಬಜೆಟ್ನಲ್ಲಿ ಹೆಚ್ಚಿನ ಮಾನ್ಯತೆ ಸಿಗಬೇಕಿದೆ. ನಿರ್ಮಲಾ ಸೀತಾರಾಮನ್ ಮಂಡಿಸುವ ಬಜೆಟ್ ಮೇಲೆ ಅಪಾರವಾದ ನಿರೀಕ್ಷೆಗಳಿವೆ.












Click it and Unblock the Notifications