ಕೊಪ್ಪಳದಲ್ಲಿ ಕೆಲಸ ಖಾಲಿ ಇದೆ, ಆಸಕ್ತರು ಸೆ. 20ರೊಳಗೆ ಅರ್ಜಿ ಹಾಕಿ
ಕೊಪ್ಪಳ, ಸೆಪ್ಟೆಂಬರ್ 14: ಕೊಪ್ಪಳ ಜಿಲ್ಲೆಯಲ್ಲಿ ಕೆಲಸ ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಸಿಹಿಸುದ್ದಿ ಇದೆ. ಅತಿಥಿ ಶಿಕ್ಷಕ, ಅರೆಕಾಲಿಕ ಶಿಕ್ಷಕರ ಹುದ್ದೆಗಳಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೆಲಸ ಖಾಲಿ ಇರುವ ಸ್ಥಳ, ಅಭ್ಯರ್ಥಿಗಳು ಅರ್ಜಿ ಸಲ್ಲಿಕೆ ಮಾಡಲು ಅರ್ಹತೆಗಳು, ಅರ್ಜಿ ಸಲ್ಲಿಕೆ ಮಾಡಲು ಕೊನೆಯ ದಿನಾಂಕ ಮುಂತಾದ ಮಾಹಿತಿಗಳನ್ನು ಅಭ್ಯರ್ಥಿಗಳ ಅನುಕೂಲಕ್ಕಾಗಿ ನೀಡಲಾಗಿದೆ.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಕನಕಗಿರಿ ತಾಲೂಕಿನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ 2024-25ನೇ ಸಾಲಿಗೆ ಆಂಗ್ಲ ಮಾಧ್ಯಮದಲ್ಲಿ ಬೋಧನೆಗಾಗಿ ಅತಿಥಿ ಶಿಕ್ಷಕರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಪ್ರಸಕ್ತ ಸಾಲಿಗಾಗಿ ಕನಕಗಿರಿ ಮೊರಾರ್ಜಿ ದೇಸಾಯಿ ಆಂಗ್ಲ ಮಾಧ್ಯಮ ವಸತಿ ಶಾಲೆಯಲ್ಲಿ ಗೌರವಧನದ ಆಧಾರದ ಮೇಲೆ ವಿವಿಧ ವಿಷಯಗಳ ಬೋಧನೆಗಾಗಿ ಆಸಕ್ತ, ಅರ್ಹರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಬಿ.ಎ, ಬಿ.ಎಡ್ ವಿದ್ಯಾರ್ಹತೆ ಹೊಂದಿದ ಕನಿಷ್ಠ 2 ವರ್ಷಗಳ ಅನುಭವ ಹೊಂದಿದ ಕನ್ನಡ ಶಿಕ್ಷಕ 1, ಆಂಗ್ಲ ಶಿಕ್ಷಕ 1, ಉರ್ದು ಶಿಕ್ಷಕ 1 ಹಾಗೂ ಗಣಿತ ಶಿಕ್ಷಕ (ಬಿಎಸ್ಸಿ,ಬಿ. ಎಡ್) 1 ಹುದ್ದೆಗಳಿಗೆ ಆಸಕ್ತರು ಸೆಪ್ಟಂಬರ್ 20ರೊಳಗಾಗಿ ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ ಗಂಗಾವತಿ ತಾಲೂಕಿನ ಹಿರೇಬೆಣಕಲ್ನ ಅಲ್ಪಸಂಖ್ಯಾತರ ಮೊರಾರ್ಜಿ ದೇಸಾಯಿ ಬಾಲಕಿಯರ ಪದವಿ ಪೂರ್ವ ಕಾಲೇಜು ಸಂಪರ್ಕಿಸಬಹುದು. ಮೊಬೈಲ್ ಸಂಖ್ಯೆ 9880958503.
ಅರೆಕಾಲಿಕ ಶಿಕ್ಷಕರ ಹುದ್ದೆ: ಮಿಷನ್ ವಾತ್ಸಲ್ಯ ಯೋಜನೆ ಮಾರ್ಗಸೂಚಿಯಂತೆ ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಾಲಕರ ಸರ್ಕಾರಿ ಬಾಲಮಂದಿರ ಹಾಗೂ ಬಾಲಕಿಯರ ಸರ್ಕಾರಿ ಬಾಲಮಂದಿರಗಳಲ್ಲಿನ ಮಕ್ಕಳಿಗೆ 2024-25ನೇ ಸಾಲಿನಲ್ಲಿ ಯೋಗ/ ದೈಹಿಕ ಶಿಕ್ಷಣ ಹಾಗೂ ಗಣಿತ, ವಿಜ್ಞಾನ ವಿಷಯಗಳಿಗೆ ಬೋಧಿಸಲು ಅಥವಾ ತರಬೇತಿ ನೀಡಲು ಅರೆಕಾಲಿಕ ಶಿಕ್ಷಕರ ಹುದ್ದೆಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
ಬಾಲಕಿಯರ ಬಾಲಮಂದಿರ ಸಂಸ್ಥೆಯಲ್ಲಿ ಯೋಗ/ ದೈಹಿಕ ಶಿಕ್ಷಕರ 1 ಹುದ್ದೆಗೆ ಡಿಪ್ಲೊಮಾ ಇನ್ ದೈಹಿಕ ಶಿಕ್ಷಣ/ ಯೋಗ, ಬಿಪಿಎಡ್/ ಸಿಪಿಎಡ್/ ಸ್ಪೆಷಲ್ ಟ್ರೈನಿಂಗ್ ಇನ್ ಯೋಗ ವಿದ್ಯಾರ್ಹತೆ ಹಾಗೂ ಕನಿಷ್ಠ ಮೂರು ವರ್ಷ ಅನುಭವವನ್ನು ಹೊಂದಿರಬೇಕು.
ಬಾಲಕರ ಸರ್ಕಾರಿ ಬಾಲಮಂದಿರ ಸಂಸ್ಥೆಯಲ್ಲಿ ಗಣಿತಿ/ವಿಜ್ಞಾನ ಶಿಕ್ಷಕರ 1 ಹುದ್ದೆಗೆ ಬಿಎಸ್ಸಿ, ಬಿಎಡ್, ಎಮ್ ಎಸ್ಸಿ, ಬಿ.ಎಡ್ ವಿದ್ಯಾರ್ಹತೆ ಹೊಂದಿರಬೇಕು ಹಾಗೂ ಕನಿಷ್ಠ ಮೂರು ವರ್ಷ ಅನುಭವವನ್ನು ಹೊಂದಿದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 21 ರಿಂದ 38 ವರ್ಷದ ವಯೋಮಾನದವರಾಗಿರಬೇಕು. ಬಾಲಕಿಯರ ಸರ್ಕಾರಿ ಬಾಲಮಂದಿರ ಸಂಸ್ಥೆಯ ಹುದ್ದೆಗೆ ಕಡ್ಡಾಯವಾಗಿ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಪ್ರತಿದಿನ ನಿಗದಿತ ಸಮಯಕ್ಕೆ ಸರಿಯಾಗಿ ಸಂಬಂಧಿಸಿದ ಸಂಸ್ಥೆಗಳಿಗೆ ಬಂದು ಕಡ್ಡಾಯವಾಗಿ ಅಲ್ಲಿಯೇ ಬೋಧನೆ/ ತರಬೇತಿ ನೀಡಬೇಕು.
ಅಭ್ಯರ್ಥಿಗಳು ಅಂಗೀಕೃತ ಸಂಸ್ಥೆ ಹಾಗೂ ವಿಶ್ವವಿದ್ಯಾಲಯಗಳಿಂದ ಸಂಬಂಧಿಸಿದ ತರಬೇತಿ/ ಪದವಿ ಪಡೆದಿರಬೇಕು. ಅಭ್ಯರ್ಥಿಗಳು 2024-25ನೇ ಸಾಲಿನಲ್ಲಿ ಒಂದು ವರ್ಷದ ಅವಧಿಗೆ ತಾತ್ಕಾಲಿಕವಾಗಿ ಅರೆಕಾಲಿಕ ಸಂಚಿತ ಗೌರವಧನದ ಅಧಾರದ ಮೇಲೆ ಸೇವೆ/ ಕಾರ್ಯ ನಿರ್ವಹಿಸಬೇಕಾಗಿರುತ್ತದೆ. ಈ ಹುದ್ದೆಗಳು ಅರೆಕಾಲಿಕ ಹಾಗೂ ತಾತ್ಕಾಲಿಕ ಆಧಾರದ ಹುದ್ದೆಯಾಗಿದ್ದು, ಯಾವುದೇ ಕಾರಣಕ್ಕೂ ಖಾಯಂಗೊಳಿಸುವ, ಮುಂದುವರೆಸುವ ಪ್ರಮೇಯವಿರುವುದಿಲ್ಲ.
ಸಿಬ್ಬಂದಿಗಳ ಸೇವೆಯು ಪ್ರಧಾನ ಕಚೇರಿ ನಿರ್ದೇಶನ ಆದೇಶದಂತೆ ಮತ್ತು ಅನುದಾನದ ಲಭ್ಯತೆಯ ಆಧಾರದ ಮೇಲೆ ನಿರ್ವಹಿಸಲ್ಪಡುತ್ತದೆ. ಅನುದಾನದ ಲಭ್ಯತೆಗನುಗುಣವಾಗಿ ಗೌರವಧನದ ಆಧಾರದ ಮೇಲೆ ಪಾವತಿಸಲು ಕ್ರಮವಹಿಸಲಾಗುತ್ತದೆ. ಸೇವೆ ತೃಪ್ತಿಕರವಿಲ್ಲವೆಂದು ಕಂಡುಬಂದಲ್ಲಿ ಯಾವುದೇ ಸಂದರ್ಭದಲ್ಲಿ ತೆಗೆದುಹಾಕಲಾಗುವುದು. ಸ್ಥಳೀಯ ಅಭ್ಯರ್ಥಿಗಳಿಗೆ ಹಾಗೂ ಹೆಚ್ಚಿನ ಶೈಕ್ಷಣಿಕ ಅರ್ಹತೆ ಮತ್ತು ಅನುಭವ ಹೊಂದಿದವರಿಗೆ ಆದ್ಯತೆ ನೀಡಲಾಗುತ್ತದೆ.
ಆಯ್ಕೆಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಪೊಲೀಸ್ ಪರಿಶೀಲನಾ ವರದಿ ಸಲ್ಲಿಸಬೇಕು. ಅಭ್ಯರ್ಥಿಗಳ ಆಯ್ಕೆಯಲ್ಲಿ ಆಯ್ಕೆ ಸಮಿತಿಯ ತೀರ್ಮಾನವೇ ಅಂತಿಮ ತೀರ್ಮಾನವಾಗಿರುತ್ತದೆ.
ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸೆಪ್ಟೆಂಬರ್ 20 ಸಂಜೆ 5 ಗಂಟೆಯೊಳಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಾರ್ಯಾಲಯ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಜಿಲ್ಲಾಡಳಿತ ಭವನ ಕೊಪ್ಪಳ ಇಲ್ಲಿಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 08539-225030.












Click it and Unblock the Notifications