ಕೊಡಗು; ಕೆಲಸ ಖಾಲಿ ಇದೆ, ವೇತನ 20,584 ರೂ.ಗಳು
ಕೊಡಗು, ಡಿಸೆಂಬರ್ 07; ಕೊಡಗು ಜಿಲ್ಲೆಯ ಮಡಿಕೇರಿ ನಗರಸಭೆಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಕರೆಯಲಾಗಿದೆ. ಆಸಕ್ತ ಮತ್ತು ಅರ್ಹರು ನಿಗದಿತ ದಾಖಲೆಗಳ ಜೊತೆ ಅರ್ಜಿಗಳನ್ನು ಸಲ್ಲಿಕೆ ಮಾಡಲು ಡಿಸೆಂಬರ್ 20 ಕೊನೆಯ ದಿನವಾಗಿದೆ.
ಬೆಂಗಳೂರು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶನದಂತೆ ಮಡಿಕೇರಿ ನಗರಸಭೆಗೆ ಸೀನಿಯರ್ ಪ್ರೋಗ್ರಾಮರ್/ ಮಾಹಿತಿ ತಂತ್ರಜ್ಞಾನ ಕನ್ಸಲ್ಟೆಂಟ್ ಅನ್ನು ಹೊರಗುತ್ತಿಗೆ/ ಏಜೆನ್ಸಿ ಮೂಲಕ ನೇಮಕ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ, ವೇತನ ವಿವರ; ಆಸಕ್ತ ಅಭ್ಯರ್ಥಿಗಳು ಸ್ವಯಂ ಅರ್ಜಿ ಮತ್ತು ದೃಢೀಕೃತ ದಾಖಲೆಗಳೊಂದಿಗೆ ಡಿಸೆಂಬರ್ 20ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಇದು ಪೂರ್ಣವಾಗಿ ತಾತ್ಕಾಲಿಕ ಹೊರಗುತ್ತಿಗೆ ಹುದ್ದೆಯಾಗಿರುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ.
ಸೀನಿಯರ್ ಪ್ರೋಗ್ರಾಮರ್/ ಮಾಹಿತಿ ತಂತ್ರಜ್ಞಾನ ಕನ್ಸಲ್ಟೆಂಟ್ ಪ್ರಥಮ ಆದ್ಯತೆಯನ್ನು (3) ಕ್ಕೆ ದ್ವಿತೀಯ ಆದ್ಯತೆಯನ್ನು (2) ಕ್ಕೆ ಹಾಗೂ ತೃತೀಯ ಆದ್ಯತೆಯನ್ನು (1) ಕ್ಕೆ ನೀಡಲಾಗುವುದು. ಡಿಪ್ಲೊಮಾ ಇನ್ ಕಂಪ್ಯೂಟರ್ ಸೈನ್ಸ್ ಅಥವಾ ಬಿ.ಎಸ್ಸಿ (ಕಂಪ್ಯೂಟರ್ ಸೈನ್ಸ್)/ ಬಿಸಿಎ, ಎಂಎಸ್ಸಿ (ಕಂಪ್ಯೂಟರ್ ಸೈನ್ಸ್) ಅಥವಾ ಬಿಇ (ಕಂಪ್ಯೂಟರ್ ಸೈನ್/ ಐಟಿ/ ಎಂಸಿಎ) ವಿದ್ಯಾರ್ಹತೆ ಹೊಂದಿರಬೇಕು.
ನಿಗದಿತ ಮಾಸಿಕ ಕನಿಷ್ಠ ವೇತನ ರೂ. 20,584 ಆಗಿರುತ್ತದೆ. ಏಜೆನ್ಸಿ ಮೂಲಕ ಅರ್ಜಿ ಸಲ್ಲಿಸುವವರು ಮಾತ್ರ ಸೇವಾ ಶುಲ್ಕವನ್ನು ನಮೂದಿಸುವುದು. ಈ ನಿಗದಿತ ವೇತನವು ಪ್ರಥಮ ವರ್ಷಕ್ಕೆ ನಿಗದಿಯಾಗಿದ್ದು, ಮುಂದಿನ ವರ್ಷಗಳಿಗೆ ಸರ್ಕಾರವು ನಿಗದಿ ಪಡಿಸಿರುವಂತೆ/ ಪಡಿಸುವಂತೆ ಸೇವೆಯನ್ನು ಆಧರಿಸಿ ಪರಿಷ್ಕರಿಸಲಾಗುವುದು.
ಹೆಚ್ಚಿನ ವಿವರಗಳಿಗೆ ಕಚೇರಿಯನ್ನು ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತರಾದ ವಿಜಯ್ ಅವರು ತಿಳಿಸಿದ್ದಾರೆ.
ಕಾನೂನು ಪದವೀಧರರಿಂದ ಅರ್ಜಿ ಆಹ್ವಾನ; ನವ ಕಾನೂನು ಪದವೀಧರರಿಗೆ ಪ್ರೋತ್ಸಾಹಧನ ನೀಡುವ ಯೋಜನೆಗೆ 2023-24ನೇ ಸಾಲಿನಲ್ಲಿ ಅರ್ಹ ಫಲಾನುಭವಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿದ್ದು, ಅರ್ಹ ನವ ಕಾನೂನು ಪದವೀಧರು ಅರ್ಜಿ ಸಲ್ಲಿಸಬಹುದದು.
ನಿಗದಿತ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ಸ್ವಯಂ ದೃಢೀಕರಿಸಿದ ದಾಖಲೆ ಪ್ರತಿಗಳೊಂದಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ, ಕೊಡಗು ಮಡಿಕೇರಿ ಮತ್ತು 2ನೇ ಅಪರ ಜಿಲ್ಲಾ ಮತ್ತು ಸೆಷನ್ ನ್ಯಾಯಾಲಯ, ಕೊಡಗು ಮಡಿಕೇರಿ (ಕಾರ್ಯ ನಿರ್ವಹಣೆ ವಿರಾಜಪೇಟೆ), ಹಿರಿಯ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ, ಸೋಮವಾರಪೇಟೆ, ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ, ಪೊನ್ನಂಪೇಟೆ ಹಾಗೂ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್ಸಿ ನ್ಯಾಯಾಲಯ, ಕುಶಾಲನಗರ ಇಲ್ಲಿಗೆ ಸಂಬಂಧಪಟ್ಟ ಹಿರಿಯ ನ್ಯಾಯಾಧೀಶರುಗಳ ಮುಖಾಂತರ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಲು ಜನವರಿ 12 ಕೊನೆ ದಿನ.
ಆಸಕ್ತರು ಹೆಚ್ಚಿನ ಮಾಹಿತಿಗೆ ಪ್ರಧಾನ ಜಿಲ್ಲಾ ಮತ್ತು ಸೆಷನ್ ನ್ಯಾಯಾಧೀಶರ ಕಚೇರಿ, ಮಡಿಕೇರಿ ಇಲ್ಲಿಗೆ ಸಂಪರ್ಕಿಸಬಹುದು. ಈ ಯೋಜನೆಯು 2023-24 ನೇ ಸಾಲಿನಲ್ಲಿ ಅನುಷ್ಠಾನಗೊಳ್ಳುತ್ತಿದ್ದು, ಈ ಯೋಜನೆಯಡಿ ಅರ್ಜಿ ಸಲ್ಲಿಸುವ ಅರ್ಹ ಅಭ್ಯರ್ಥಿಗಳು ಕರ್ನಾಟಕ ರಾಜ್ಯ ವಕೀಲರ ಷರತ್ತಿನಡಿಯಲ್ಲಿ 2022ರ ಜೂನ್ 1 ರಿಂದ 2023ರ ಮೇ 31ರವರೆಗಿನ ಅವಧಿಯಲ್ಲಿ ವಕೀಲ ವೃತ್ತಿಗೆ ನೋಂದಾಯಿಸಿದವರಿಗೆ ಮಾತ್ರ ಅನ್ವಯ.
ಈ ಯೋಜನೆಯಡಿಯಲ್ಲಿ ಪ್ರೋತ್ಸಾಹಧನ ಮೊತ್ತ ಪ್ರತಿ ಮಾಸಿಕ ರೂ. 2 ಸಾವಿರ ಒಟ್ಟು 24 ತಿಂಗಳುಗಳ ಅವಧಿಗೆ ಸೀಮಿತವಾಗಿರುವುದು. ಸರ್ಕಾರಿ, ಅರೆ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿ ವಯೋನಿವೃತ್ತಿ ಕಡ್ಡಾಯ ನಿವೃತ್ತಿ ಮತ್ತು ಸ್ವಇಚ್ಚಾ ನಿವೃತ್ತಿ ಹೊಂದಿದ ನಂತರ ವಕೀಲ ವೃತ್ತಿ ನಡೆಸಲು ಇಚ್ಚಿಸುವ ಕಾನೂನು ಪದವೀಧರರು ಮತ್ತು ಅಂತಹ ಯಾವುದೇ ಸೇವೆಯಿಂದ ತೆಗೆದುಹಾಕಲ್ಪಟ್ಟ ಕಾನೂನು ಪದವೀಧರರು ಪ್ರೋತ್ಸಾಹಧನ ಪಡೆಯಲು, ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಈ ಯೋಜನೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಯ/ ಕುಟುಂಬದ ವಾರ್ಷಿಕ ವರಮಾನದ ಮಿತಿಯು ರೂ. 40 ಸಾವಿರ ಮೀರತಕ್ಕದ್ದಲ್ಲ. ಇಂತಹುದೇ ಸೌಲಭ್ಯವನ್ನು ಈ ಯೋಜನೆ/ ಇತರೆ ಯೋಜನೆಯಡಿ ಅಥವಾ ರಾಜ್ಯ ಸರ್ಕಾರದ ಬೇರೆ ಯಾವುದೇ ಇಲಾಖೆಯ ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿಗಳು ಈ ಯೋಜನೆಯ ಸೌಲಭ್ಯಗಳಿಗೆ ಅರ್ಹರಾಗುವುದಿಲ್ಲ.












Click it and Unblock the Notifications