ಸ್ನೇಹಜೀವಿ ಅನಂತ್ ಕುಮಾರ್ ವ್ಯಕ್ತಿಚಿತ್ರ: ಸಚಿತ್ರ ವಿವರ
ಬೆಂಗಳೂರು, ನವೆಂಬರ್ 12: ಸೋಮವಾರ ಬೆಳಗ್ಗಿನ ಜಾವ 2 ಗಂಟೆಗೆ ಇಹಲೋಕ ತ್ಯಜಿಸಿದ ಬೆಂಗಳೂರು ದಕ್ಷಿಣ ಕ್ಷೇತ್ರದ ಬಿಜೆಪಿ ಸಂಸದ ಅನಂತ್ ಕುಮಾರ್(59) ನಿಧನಕ್ಕೆ ದೇಶದಾದ್ಯಂತ ಗಣ್ಯರು ಕಂಬನಿ ಮಿಡಿದಿದ್ದಾರೆ.
1959 ಜುಲೈ 22 ರಂದು ಬೆಂಗಳೂರಿನಲ್ಲಿ ಜನಿಸಿದ ಅವರು ಎಬಿವಿಪಿ, ಆರೆಸ್ಸೆಸ್ ಸಂಪರ್ಕಕ್ಕೆ ಬಂದು ಹಂತ ಹಂತವಾಗಿ ಬೆಳೆದು ಕೇಂದ್ರ ಸಚಿವರಾಗುವವರೆಗೆ ರಾಜಕೀಯ ಅನುಭವ ಪಡೆದವರು. ವಾಜಪೇಯಿ ಅವರ ನೇತೃತ್ವದ ಸರ್ಕಾರದ ನಾಗರಿಕ ವಿಮಾನಯಾನ ಸಚಿವರಾಗುವ ಮೂಲಕ ಅತೀ ಕಿರಿಯ ವಯಸ್ಸಿನ ಕೇಂದ್ರ ಸಚಿವ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದರು.
ರಾಜಕೀಯ, ಸಮಾಜಸೇವೆ, ಮಾನವೀಯ ಅಂತಃಕರಣ... ವಿಶ್ವಸಂಸ್ಥೆಯಲ್ಲಿ ಕನ್ನಡದಲ್ಲೇ ಮಾತನಾಡಿ ಕನ್ನಡದ ಅಸ್ಮಿತೆಯನ್ನು ಸ್ಪುರಿಸಿದ ಅನಂತ್ ಕುಮಾರ್ ಇನ್ನಿಲ್ಲ ಎಂಬ ಸುದ್ದಿ ಅರಗಿಸಿಕೊಳ್ಳುವುದಕ್ಕೆ ಸಾಧ್ಯವಾಗದ್ದು.
ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಲಂಡನ್ನಿನಲ್ಲಿ ಚಿಕಿತ್ಸೆ ಪಡೆದು, ನಂತರ ಬೆಂಗಳೂರಿನ ಚಾಮರಾಜ ಪೇಟೆಯಲ್ಲಿರುವ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅಕಾಲಿಕ ಮರಣಕ್ಕೆ ತುತ್ತಾದ ಅವರ ಸಂಕ್ಷಿಪ್ತ ವ್ಯಕ್ತಿಚಿತ್ರ ಇಲ್ಲಿದೆ.

ಬೆಂಗಳೂರಿನಲ್ಲಿ ಜನನ
* 1959 ಜುಲೈ 22 ರಂದು ಬೆಂಗಳೂರಿನಲ್ಲಿ ಜನನ
* ತಂದೆ ಎಚ್ ಎನ್ ನಾರಾಯಣ ಶಾಸ್ತ್ರಿ, ತಾಯಿ ಗಿರಿಜಾ ಶಾಸ್ತ್ರಿ.
* ಕೆ ಎಸ್ ಆರ್ಟ್ಸ್ ಕಾಲೇಜ್ ಹುಬ್ಬಳ್ಳಿಯಲ್ಲಿ ಬಿ ಎ ಪದವಿ.
* ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡದಿಂದ ಎಲ್ ಎಲ್ ಬಿ ಪದವಿ.
* ಚಿಕ್ಕ ವಯಸ್ಸಿನಿಂಡಲೂ ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್)ಮತ್ತು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್(ಎಬಿವಿಪಿ)ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು.
* ಪತ್ನಿ ತೇಜಸ್ವಿನಿ ಅನಂತ ಕುಮಾರ್, ಇಬ್ಬರು ಹೆಣ್ಣು ಮಕ್ಕಳು ಐಶ್ವರ್ಯ ಮತ್ತು ವಿಜೇತಾ

ತುರ್ತುಪರಿಸ್ಥಿತಿಯಲ್ಲಿ ಜೈಲುವಾಸ
* ಇಂದಿರಾ ಗಾಂಧಿ ಸರ್ಕಾರದ ಅವಧಿಯಲ್ಲಿ ಘೋಷಣೆಯಾದ ತುರ್ತುಪರಿಸ್ಥಿತಿ ಸಮಯದಲ್ಲಿ ಜೈಲುವಾಸ.
* ಎಬಿವಿಪಿಯ ರಾಜ್ಯ ಕಾರ್ದರ್ಶಿಯಾಗಿ ನಂತರ 1985 ರಲ್ಲಿ ರಾಷ್ಟ್ರ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದರು.
* ನಂತರ ಬಿಜೆಪಿಗೆ ಸೇರಿದ ಅವರನ್ನು ಭಾರತೀಯ ಯುವ ಮೋರ್ಚಾ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಯಿತು.
* 1996 ರಲ್ಲಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸದಸ್ಯರಾಗಿ ಆಯ್ಕೆ
* 1998 ರಲ್ಲಿ ಮೊದಲ ಬಾರಿಗೆ ವೆಬ್ ಸೈಟ್ ವೊಂದನ್ನು ಚುನಾವಣೆಯ ಉದ್ದೇಶದಿಂದ ಆರಂಭಿಸಿದರು. ಈ ರೀತಿ ರಾಜಕಾರಣಿಯಾಗಿ ವೆಬ್ ಸೈಟ್ ತಯಾರಿಸಿದವರಲ್ಲಿ ಅನಂತ್ ಕುಮಾರ್ ಮೊದಲಿಗರೆನ್ನಿಸಿದರು.

ಅತೀ ಕಿರಿ ವಯಸ್ಸಿನ ಕೇಂದ್ರ ಸಚಿವ
* ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದ ಅವಧಿಯಲ್ಲಿ ನಾಗರಿಕ ವಿಮಾನಯಾನ ಸಚಿವರಾಗಿ ಸೇವೆ ಸಲ್ಲಿಸಿದರು.
* 1999 ರಲ್ಲಿ ಅತ್ಯಂತ ಕಿರಿ ವಯಸ್ಸಿನ ಕೇಂದ್ರ ಸಚಿವರು ಎಂಬ ಹೆಗ್ಗಳಿಕೆಗೆ ಪಾತ್ರರಾದರು.
* ಸತತ ಮೂರು ಬಾರಿ ಕೇಂದ್ರ ಸಚಿವರಾಗಿ ಆಯ್ಕೆಯಾದ ಅವರು ಬಿಜೆಪಿ ಪ್ರಮುಖ ನಾಯಕರಲ್ಲೊಬ್ಬರಾದರು.
* 2003 ರಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷರಾಗಿದ್ದ ಅವರ ಅವಧಿಯಲ್ಲಿ ವಿಧಾನಸಭೆಯಲ್ಲಿ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 2004 ರಲ್ಲಿ ಅತೀ ಹೆಚ್ಚು ಲೋಕಸಭೆ ಕ್ಷೇತ್ರಗಳಲ್ಲೂ ಬಿಜೆಪಿ ಗೆಲುವು ಸಾಧಿಸಿತ್ತು.
* 2004 ರಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ದರ್ಶಿಯಾಗಿ ಅವರು ಆಯ್ಕೆಯಾದರು.
* ಬಿಹಾರ, ಮಧ್ಯಪ್ರದೇಶ, ಛತ್ತೀಸ್ ಗಢ ಮತ್ತಿತರ ರಾಜ್ಯಗಳಲ್ಲೂ ಬಿಜೆಪಿಯನ್ನು ಬೆಳೆಸುವಲ್ಲಿ ಅವರ ಕೊಡುಗೆ ಅಪಾರ.
* 2014 ರ ಮೇ 26 ರಂದು ಅವರನ್ನು ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವರನ್ನಾಗಿ ನೇಮಿಸಲಾಗಿತ್ತು

ರಾಜಕೀಯದಾಚೆ ಸಮಾಜಸೇವೆ
* ರಾಜಕಾರಣದ ಹೊರತಾಗಿ ಸಾಮಾಜಿಕ ಸೇವೆಗಳಲ್ಲೂ ಅನಂತ ಕುಮಾರ್ ತಮ್ಮನ್ನು ತಾವು ತೊಡಗಿಸಿಕೊಂಡವರು.
* ಅದಮ್ಯ ಚೇತ ಪ್ರತಿಷ್ಠಾನದ ಮಕ್ಕಳಿಗೆ ಮಧ್ಯಾಹ್ನದ ಬಿಸಿ ಊಟ ಒದಿಗಿಸುವ ಕೆಲಸವನ್ನೂ ಅತ್ಯಂತ ಶ್ರದ್ಧೆಯಿಂದ ಮಾಡಿದವರು ಅನಂತ ಕುಮಾರ್
* ಬೆಂಗಳೂರಿನಲ್ಲಿ ಹಸಿರು ಉಳಿಸುವ ಸಲುವಾಗಿ ಪರಿಸರ ಸಂರಕ್ಷಣೆಗೆ ಸಂಬಂಧಿಸಿದ ಹತ್ತು ಹಲವಾರು ಕಾರ್ಯಕ್ರಮಗಳನ್ನು ಮಾಡಿದರು.
* ಇತ್ತೀಚೆಗೆ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಅವರು ಲಂಡನ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
* ನಂತರ ಬೆಂಗಳೂರಿಗೆ ಮರಳಿ ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು.












Click it and Unblock the Notifications