Infographics: ಕರ್ನಾಟಕದಲ್ಲಿ ಇನ್ನು 2 ದಿನ ಮಳೆ ಸಂಭವ
ಬೆಂಗಳೂರು, ಸೆಪ್ಟಂಬರ್ 13: ಕರ್ನಾಟಕದಾದ್ಯಂತ ಮುಂಗಾರು ಮಳೆ ಅಬ್ಬರ ಇಳಿಕೆ ಕಂಡಿದೆ. ಉತ್ತರ ಒಳನಾಡು ಹಾಗೂ ಮಲೆನಾಡಿನ ಭಾಗದಲ್ಲಿ ತುಂತುರು, ಜಿಟಿ ಜಿಟಿ ರೂಪದಲ್ಲಿ ಮಳೆ ಆಗುತ್ತಿದ್ದು, ಕರಾವಳಿಯಲ್ಲಿ ಮುಂದಿನ ಎರಡು ದಿನ ಜೋರು ಮಳೆ ಆಗುವ ಸಂಭವವಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ಒಳನಾಡಿನ ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಬಹುತೇಕ ಕ್ಷಿಣಿಸಿದೆ. ಆದರೆ ಕರಾವಳಿ ಭಾಗದಲ್ಲಿ ಸೆ.15ರವರೆಗೆ ಗುಡುಗು, ಮಿಂಚಿನಿಂದ ಕೂಡಿದ ಮಳೆ ಆಗಲಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಒಂದೆರಡು ಕಡೆ ಎರಡು ದಿನ ಸಾಧಾರಣದಿಂದ ಭಾರಿ ಮಳೆ ಆಗಲಿದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ.
ಅಪಾಯಮಟ್ಟ ಮೀರಿದ ಮಲಪ್ರಭಾ-ಘಟಪ್ರಭಾ, ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಭೀತಿ
ಕಳೆದ ಕೆಲವು ದಿವಸಗಳಿಂದ ರಾಜ್ಯದ ಹಲವು ಜಿಲ್ಲೆಗಳಿಗೆ ಸುರಿದ ಮಳೆಯಿಂದಾಗಿ ತಗ್ಗು ಪ್ರದೇಶದ ನಿವಾಸಿಗಳು ಸಾಕಷ್ಟು ತೊಂದರೆಗೀಡಾಗಿದ್ದರು. ರಾಮನಗರ, ಚೆನ್ನಪಟ್ಟಣ ಕೆರೆಗಳು ಕೋಡಿ ಒಡೆದ ಪರಿಣಾಮ ಬೆಂಗಳೂರು-ಮೈಸೂರು ಹೆದ್ದಾರಿ ಸಂಪರ್ಕ ಕಡಿತಗೊಂಡಿತ್ತು. ಅದಲ್ಲದೇ ಬೆಂಗಳೂರಿನಲ್ಲೂ ರಸ್ತೆ, ಬಡಾವಣೆಗಳು ಜಲಾವೃತಗೊಂಡು ಬದುಕು ಅಸ್ತವೆಸ್ತಗೊಂಡಿತ್ತು. ಸದ್ಯ ಮಳೆ ಕಡಿಮೆ ಆದ ಹಿನ್ನೆಲೆಯಲ್ಲಿ ಜನಸಮಾನ್ಯರು ಬದುಕು ಮತ್ತೆ ಸಹಜ ಸ್ಥಿತಿಯತ್ತ ಮರಳುತ್ತಿದೆ.
ರಾಜ್ಯದ ಜಿಲ್ಲೆಗಳಲ್ಲಿ ಆದ ಮಳೆ ಎಷ್ಟು?
ರಾಜ್ಯ ಹಲವು ಜಿಲ್ಲೆಗಳಲ್ಲಿ ಮಂಗಳವಾರವು ಹಗುರದಿಂದ ಸಾಧಾರಣ ಮಳೆ ಮುಂದುವರಿದೆ. ಇನ್ನು ಮಂಗಳವಾರ ಬೆಳಗ್ಗೆ 8.30ರ ಹಿಂದಿನ 24ಗಂಟೆಯಲ್ಲಿ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಅಧಿಕ ಮಳೆ ಬಿದ್ದಿದೆ. ಉತ್ತರ ಕನ್ನಡದ ಕ್ಯಾಸಲ್ ರಾಕ್ನಲ್ಲಿ 13ಸೆಂ.ಮೀ, ಯಲ್ಲಾಪುರ, ಕಮ್ಮರಡಿ, ಅಗರಹರ ಕೋಣಂದೂರಿನಲ್ಲಿ ತಲಾ 6ಸೆಂ.ಮೀ, ಉಡುಪಿಯ ಸಿದ್ದಾಪುರ, ಬೆಳಗಾವಿಯ ಲೊಂಡಾದಲ್ಲಿ ತಲಾ 4ಸೆಂ.ಮೀ. ಮಳೆ ಬಿದ್ದಿದೆ. ಉಳಿದ ಜಿಲ್ಲೆಗಳ ಹಲವೆಡೆ ಆಗಾಗ ತುಂತುರು ಮಳೆ ದಾಖಲಾಗಿದೆ. ಇದರ ಹೊರತು ಎಲ್ಲಿಯೂ ಜೋರು ಮಳೆ ದಾಖಲಾಗಿಲ್ಲ ಎಂದು ಹವಾಮಾನ ಇಲಾಖೆ ವರದಿ ತಿಳಿಸಿದೆ.
ಏಳು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ
ಕರ್ನಾಟಕದಲ್ಲಿ ಮಳೆ ಕಡಿಮೆಯಾದರೂ ಚಳಿ ಹಾಗೂ ಮೋಡ ಕವಿದ ವಾತಾವರಣ ಮುಂದುವರಿಯಲಿದೆ. ದಕ್ಷಿಣ ಒಳನಾಡು ವ್ಯಾಪ್ತಿಗೆ ಒಳಪಡುವೆ ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಹಾಗೂ ಕರಾವಳಿಯ ಮೂರು ಜಿಲ್ಲೆಗಳಲ್ಲಿ ಸುಮಾರು 12ಸೆಂ.ಮೀ.ವರೆಗೆ ಮಳೆ ಬರುವ ಸಾಧ್ಯತೆ ಇದೆ. ಹೀಗಾಗಿ ಈ ಜಿಲ್ಲೆಗಳಿಗೆ ಮುಂದಿನ ಎರಡು ದಿನ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ. ಇದರ ಹೊರತು ಹವಾಮಾನದಲ್ಲಿ ಯಾವುದೇ ಗಮನಾರ್ಹ ಬದಲಾವಣೆಗಳು ಇಲ್ಲ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಬೆಂಗಳೂರಲ್ಲಿ ಮಂಗಳವಾರ ಸೋನೆ ಮಳೆ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಂಗಳವಾರ ಮಧ್ಯಾಹ್ನದ ಬಳಿಕ ಒಂದೆರಡು ಕಡೆಗಳಲ್ಲಿ ಸೋನೆ ಮಳೆ ಸುರಿದಿದೆ. ನಗರಾದ್ಯಂತ ಮೋಡ ಮುಸುಕಿನ ವಾತಾವರಣ ಆವರಿಸಿದ್ದು, ಚಳಿ ಸಹ ಹೆಚ್ಚಾಗಿದೆ. ಇದೇ ರೀತಿಯ ವಾತಾವರಣ ಮುಂದಿನ 48ಗಂಟೆ ಮುಂದುವರಿಯಲಿದೆ. ಆಗಾಗ ಕೆಲವು ಕಡೆಗಳಲ್ಲಿ ಹಗುರ ಮಳೆ ಬೀಳುವ ಸಾಧ್ಯತೆ ಇದೆ. ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಮತ್ತು ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ಕಂಡು ಬರಲಿದೆ ಎಂದು ಕರ್ನಾಟಕ ರಾಜ್ಯ ಹವಾಮಾನ ಕೇಂದ್ರ ತಿಳಿಸಿದೆ.
ಕರ್ನಾಟಕದ ಪ್ರಮುಖ ನಗರದ ತಾಪಮಾನ, ತೇವಾಂಶ ಮಾಹಿತಿ
ರಾಜ್ಯ ರಾಜಧಾನಿ ಬೆಂಗಳೂರಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 42ರಷ್ಟು ಹಾಗೂ ಗಾಳಿಯ ವೇಗ ಗಂಟೆಗೆ 44ಕಿ.ಮೀ. ದಾಖಲಾಗಿದೆ. ಬಾಗಲಕೋಟೆ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 62ರಷ್ಟು ತೇವಾಂಶ ಇದ್ದು, ಮಂಗಳೂರಿನಲ್ಲಿ 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 84ರಷ್ಟು ತೇವಾಂಶ ಕಂಡು ಬಂದಿದೆ. ಅದೇ ರೀತಿ ಶಿವಮೊಗ್ಗದಲ್ಲಿ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 69ರಷ್ಟು ತೇವಾಂಶ ಇದ್ದು, ಮೈಸೂರಿನಲ್ಲಿ 29 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 58ರಷ್ಟು ದಾಖಲಾಗಿದೆ. ಬಳ್ಳಾರಿಯಲ್ಲಿ 31ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, ತೇವಾಂಶ 61 ಇದೆ.
ರಾಯಚೂರಲ್ಲಿ 32ಡಿಗ್ರಿ ಸೆಲ್ಸಿಯಸ್ ಗರಿಷ್ಠ ಮತ್ತು 56ರಷ್ಟು ತೇವಾಂಶ, ಚಿತ್ರದುರ್ಗ 28ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 64ರಷ್ಟು ತೇವಾಂಶ ಇದ್ದರೆ ಕಲಬುರಗಿ ಜಿಲ್ಲೆಯಲ್ಲಿ 28 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 80ರಷ್ಟು ತೇವಾಂಶ ಇದ್ದು, ಚಿಕ್ಕಮಗಳೂರು 29ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಮತ್ತು 79ರಷ್ಟು ತೇವಾಂಶ ಕಂಡು ಬಂದಿದೆ.