ಊಟದ ವೇಳೆ ರಾಜೀವ್ ಗೌಡ ಯುದ್ಧದ ಕಹಳೆ

ಫೆಬ್ರವರಿ 14ರಂದು ಪ್ರೇಮಿಗಳ ದಿನ ಆಚರಿಸುವುದು ಭಾರತೀಯ ಸಂಸ್ಕೃತಿಗೆ ವಿರುದ್ಧ, ಅಂಥ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಶ್ರೀರಾಮ ಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರು ಹಿಡಿದಿರುವಪಟ್ಟಿಗೆ ಪ್ರತಿಯಾಗಿ ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರೊಫೆಸರಾಗಿರುವ ರಾಜಕೀಯ ವಿಶ್ಲೇಷಕ ರಾಜೀವ್ ಗೌಡ ಅವರು ಬೆಂಗಳೂರಿನ ವಿದ್ಯಾವಂತರಿಗೆ ಕರೆ ನೀಡಿದ್ದಾರೆ.
ವ್ಯಾಲಂಟೈನ್ಸ್ ಡೇ ವಿರುದ್ಧ ಸೇನೆಯ ಬಿಗಿಪಟ್ಟು ಮತ್ತು ಅದರ ವಿರುದ್ಧ ತಿರುಗಿ ಬಿದ್ದಿರುವವರ ನಡುವಿನ ಜಂಗಿ ಕುಸ್ತಿ ಕ್ಲೈಮ್ಯಾಕ್ಸ್ ಹಂತಕ್ಕೆ ತಲುಪುತ್ತಿದೆ. ಆಚರಣೆಗೆ ಅಡ್ಡಿ ಮಾಡುವವರನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪೊಲೀಸ್ ಆಯುಕ್ತ ಬಿದರಿ ಎಚ್ಚರಿಕೆ ನೀಡಿದ್ದರೆ, 'ನೈತಿಕ ಪೊಲೀಸ'ರನ್ನು ಒದ್ದು ಪೊಲೀಸರಿಗೆ ನೀಡುವುದಾಗಿ 'ಅಗ್ನಿ' ಶ್ರೀಧರ್ ಬೆಂಕಿ ಉಗುಳಿದ್ದಾರೆ. ಕೇಂದ್ರ ಮಂತ್ರಿ ರೇಣುಕಾ ಚೌಧರಿಯವರು ಪಬ್ ಭರೋ ಅಂತ ಕರೆ ನೀಡಿದ್ದರೆ, ಆಧುನಿಕ ಮಹಿಳೆಯರ ಗುಂಪೊಂದು ಮುತಾಕರ ಗ್ಯಾಂಗಿಗೆ ತಮ್ಮ ಪಿಂಕ್ ಒಳ ಚಡ್ಡಿ ಉಡುಗೊರೆಯಾಗಿ ನೀಡುವುದಾಗಿ ಸವಾಲು ಎಸೆದಿದೆ.
ಈಗ ಎಕಾನಾಮಿಕ್ಸ್ ಮತ್ತು ಸೋಷಿಯಲ್ ಸೈನ್ಸ್ ನಲ್ಲಿ ಪ್ರೊಫೆಸರಾಗಿರುವ, ಕರ್ನಾಟಕ ಕ್ವಿಜ್ ಅಸೋಸಿಯೇಶನ್ ಸ್ಥಾಪಕ ಕಾರ್ಯದರ್ಶಿ, ಖ್ಯಾತ ಲೇಖಕ ಡಾ. ರಾಜೀವ್ ಗೌಡ ಅವರು ಪ್ರಮೋದ್ ಮತ್ತವರ ಸೇನೆಯ ವಿರುದ್ಧ ಸಾರ್ವಜನಿಕರ ಸೇನೆಯನ್ನು ಕಟ್ಟುತ್ತಿದ್ದಾರೆ. ಭಾರತೀಯ ಸಂಸ್ಕೃತಿಗೆ ಕಂಟಕವಾಗಿರುವ ಸೇನೆಯಂಥ ಮೂಲಭೂತವಾದಿಗಳನ್ನು ಕಿತ್ತೊಗೆಯಬೇಕೆಂದು ಕರೆ ನೀಡಿದ್ದಾರೆ.
ಇದಕ್ಕಾಗಿ, ಫೆಬ್ರವರಿ 12 ಗುರುವಾರದಂದು ಪ್ರೇಮಿಗಳ ದಿನವನ್ನು ಬೆಂಬಲಿಸುವ ಮತ್ತು ರಾಮಸೇನೆಯ ಉದ್ಧಟತನವನ್ನು ವಿರೋಧಿಸುವ ಎಲ್ಲ ನೌಕರರು ಮತ್ತು ಕಾಲೇಜು ವಿದ್ಯಾರ್ಥಿಗಳು ಸರಿಯಾಗಿ ಊಟದ ವೇಳೆಯಲ್ಲಿ, ಅಂದರೆ ಮಧ್ಯಾಹ್ನ 1.30ಕ್ಕೆ ಕಚೇರಿ ಅಥವಾ ಕಾಲೇಜಿನಿಂದ ಹೊರಬಂದು 'Step out, Stand up and Stamp out' ಎಂಬ ಕೂಗು ಎತ್ತಬೇಕೆಂದು ವಿನಂತಿಸಿಕೊಂಡಿದ್ದಾರೆ. ಕಾಲೇಜು ವಿದ್ಯಾರ್ಥಿ, ನೌಕರರು ಮಾತ್ರವಲ್ಲ ಮನೆಯಲ್ಲಿರುವವರು, ಹೊಟೇಲುಗಳಲ್ಲಿರುವವರು ಎಲ್ಲರೂ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕೆಂದು ಕೇಳಿಕೊಂಡಿದ್ದಾರೆ.
ಆ ಸಮಯ ಬಿಡುವಿನ ವೇಳೆ ಇರುವುದರಿಂದ ಇದಕ್ಕಾಗಿ ಕಚೇರಿ, ಕಾಲೇಜಿನಲ್ಲಿ ಯಾರ ಅನುಮತಿಯನ್ನೂ ಪಡೆಯುವ ಅಗತ್ಯವಿಲ್ಲವೆಂದು ರಾಜೀವ್ ಗೌಡ ತಿಳಿಸಿದ್ದಾರೆ. ಅದಲ್ಲದೆ, ಈ ಅಭಿಯಾನಕ್ಕಾಗಿ ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಕೂಡ ಪಡೆದಿರುವುದಾಗಿ ಹೇಳಿದ್ದಾರೆ.
ಶ್ರೀರಾಮ ಸೇನೆ ವಿರುದ್ಧದ ತಿಕ್ಕಾಟ ವಿರಾಟ್ ರೂಪವನ್ನು ಪಡೆಯುತ್ತಿದೆ. ಮಹಾತ್ಮಾ ಗಾಂಧಿ ರಸ್ತೆ ಮತ್ತು ಬ್ರಿಗೇಡ್ ರಸ್ತೆಯ ಪಬ್ ಗಳು ಫೆಬ್ರವರಿ 14ರಂದು ತುಂಬಿ ತುಳುಕಲಿವೆ. ಫ್ರೀ ಹಗ್ (Free Hug) ಮುಕ್ತವಾಗಿ ನಡೆಯಲಿವೆ. ಪಬ್ ಸಂಸ್ಕೃತಿ ಪರ ಮಹಿಳೆಯರಿಂದ ಪಿಂಕ್ ಚಡ್ಡಿ ಮತ್ತು ಮುತಾಲಿಕರಿಂದ ಸೀರೆಯ ವಿನಿಮಯ ನಡೆಯಲಿದೆ. ಇನ್ನೊಂದು ಸಂಘಟನೆ 'ಕಾಮಸೂತ್ರ ಅಭ್ಯಸಿಸಿ, ಅದು ಭಾರತೀಯ ಸಂಸ್ಕೃತಿ ಮುತಾಲಿಕರೇ' ಎಂದು ಕೆಣಕಿದೆ. ಪ್ರೇಮಿಗಳು ಎಂದಿನಂತೆ ಕದ್ದುಮುಚ್ಚಿ ಪ್ರೇಮ ನಿವೇದನೆ ಮಾಡಲಿದ್ದಾರೆಯೇ ಅಥವಾ ರಾಜಾರೋಶವಾಗಿ ಮುಕ್ತವಾಗಿ ನಿವೇದನೆ ಮಾಡಿಕೊಳ್ಳಲಿದ್ದಾರೆಯೋ ಫೆಬ್ರವರಿ 14ರಂದು ತಿಳಿಯಲಿದೆ.
(ದಟ್ಸ್ ಕನ್ನಡ ವಾರ್ತೆ)
ಪೂರಕ ಓದಿಗೆ












Click it and Unblock the Notifications