ಮೆಟ್ರಿಕ್ಸ್ಟ್ರೀಮ್ ಐಟಿ ಕಂಪನಿಯಲ್ಲಿ ಕನ್ನಡ ರಾಜ್ಯೋತ್ಸವ
ಬೊಮ್ಮನಹಳ್ಳಿಯಲ್ಲಿರುವ ಐಟಿ ಕಂಪೆನಿ ಮೆಟ್ರಿಕ್ಸ್ಟ್ರೀಮ್ ಇನ್ಫೊಟೆಕ್ ಕಂಪೆನಿನಲ್ಲಿ 60ನೇ ಕನ್ನಡ ರಾಜ್ಯೋತ್ಸವವನ್ನು ಈತ್ತೀಚೆಗೆ ಸಂಭ್ರಮದಿಂದ ಆಚರಿಸಲಾಯಿತು. ಕಾರ್ಯಕ್ರಮದ ಅಂಗವಾಗಿ ಭಾಗವತ ಶಿವರಾಮ ಭಟ್ ನೇತೃತ್ವದ ಕರಾವಳಿ ಯಕ್ಷಗಾನ ಕಲಾವಿದರು ಪ್ರದರ್ಶಿಸಿದ 'ಕಂಸ ವಧೆ' ಪ್ರಸಂಗ ಪ್ರೇಕ್ಷಕರ ಮನಸೂರೆಗೊಂಡಿತು.
ಕನ್ನಡೇತರರು ಕನ್ನಡ ಕಲಿಯುವ ಮೂಲಕ ತಮ್ಮ ದಿನನಿತ್ಯದ ಬದುಕನ್ನು ಹೇಗೆ ಸುಲಭವಾಗಿಸಿಕೊಳ್ಳಬಹುದು ಎಂದು ಉದಾಹರಣೆ ಸಹಿತ ಹರೀಶ್ ನರಸಿಂಹಸ್ವಾಮಿ ವಿವರಿಸಿದರು. ಇದೇ ಸಂದರ್ಭದಲ್ಲಿ ಕನ್ನಡ ಕಲಿಕೆಗಾಗಿ ಹರೀಶ್ ಅವರು ಅಭಿವೃದ್ಧಿಪಡಿಸಿರುವ 'ಕೇಳು' ಕಿರು ತಂತ್ರಾಂಶವನ್ನು ಪರಿಚಯಿಸಲಾಯಿತು. ಇದಲ್ಲದೇ ಸಂಸ್ಥೆಯ ಕನ್ನಡೇತರರಿಗಾಗಿ 'ಕನ್ನಡ ಕಲಿ' ಕಾರ್ಯಕ್ರಮವನ್ನು ವಾರದಲ್ಲಿ ಒಂದು ಬಾರಿ ಹಮ್ಮಿಕೊಳ್ಳುವುದಾಗಿ ಯಮುನಾ ಟಿ.ಎನ್. ತಿಳಿಸಿದರು.

ಬಿಟಿಎಂ ಬಡಾವಣೆ ಮತ್ತು ಬೊಮ್ಮನಹಳ್ಳಿಯಲ್ಲಿರುವ ಸಂಸ್ಥೆಯ ನಾಲ್ಕು ಕಚೇರಿಗಳಲ್ಲಿ ಕರ್ನಾಟಕ ರಾಜ್ಯೋತ್ಸವದ ಮಹತ್ವ ತಿಳಿಸುವ ಭಿತ್ತಿಪತ್ರಗಳು ಕನ್ನಡದ ವಾತಾವರಣ ಮೂಡಿಸಿದ್ದವು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಸಿಬ್ಬಂದಿ ಆಯೋಜಿಸಿದ್ದ ಮನರಂಜನೆ ಕಾರ್ಯಕ್ರಮದಲ್ಲಿ 'ಜೋಗದ ಸಿರಿ ಬೆಳಕಿನಲ್ಲಿ...', 'ಹಚ್ಚೇವು ಕನ್ನಡದ ದೀಪ...', ಕೀಲು ಕುದುರೆ, ರಾಜ್ಯದ ವಿವಿಧ ಪ್ರಾದೇಶಿಕ ಸೊಗಡಿನ ಮದುವೆಗಳ ಫ್ಯಾಶನ್ ಶೋ, ಕನ್ನಡ ಹಾಗೂ ಕರ್ನಾಟಕ ಕುರಿತ ರಸಪ್ರಶ್ನೆ ಪ್ರೇಕ್ಷಕರನ್ನು ಸುಮಾರು ಮೂರು ಗಂಟೆಗಳ ಕಾಲ ರಂಜಿಸಿದವು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಉಪಾಧ್ಯಕ್ಷ ಧೀರಜ್ ಪ್ರಸಾದ್, ಟೆಕ್ನಾಲಜಿ ಆಪರೇಶನ್ಸ್ನ ಉಪಾಧ್ಯಕ್ಷ ಸಿಡ್ನಿ ಮುರಳಿ, ಹಣಕಾಸು ವಿಭಾಗದ ಮುಖ್ಯಸ್ಥ ರಾಜೇಶ್ ಶೆಟ್ಟಿ, ಹಾಗೂ ನಾಯಕತ್ವ ತಂಡದ ಬಾಲಾಜಿ ಕುಮಾರ್, ನಿಲೇಶ್ ಶಾಸ್ತ್ರಿ, ಅನಿಲ್ ಭಟ್, ಮನೋಜ್ ರಾಮಾನುಜನ್, ಡಾಮಿನಿಕ್ ಪರೇರಾ, ಅರ್ನಾಬ್ ಚಟ್ಟೋಪಾಧ್ಯಾಯ, ನಾರ್ಬರ್ಟ್ ಕೀಸಲ್, ಜಯಶಂಕರ್ ದಿವಿ, ಭರತ್ ಹೆಗಡೆ, ಸೌರವ್ ಚೇಟಿಯಾ, ಸುಬ್ರಹ್ಮಣ್ಯ ಕೃಷ್ಣಮೂರ್ತಿ ಉಪಸ್ಥಿತರಿದ್ದರು. [ಚಿತ್ರ : ಅಂಬಿಕಾ ಪ್ರಸಾದ್]












Click it and Unblock the Notifications