ಇಂದು ಹನುಮದ್ ವ್ರತ, ಹನುಮ ಜಯಂತಿ ಅಲ್ಲ, ಮುಂದೆ ಓದಿ...
ವೈಷ್ಣವರಿಗೆ ವಿಹಿತವಾಗಿರುವ ವ್ರತಗಳಲ್ಲಿ ಹನುಮದ್ ವ್ರತವೂ ಒಂದು. ಮಾರ್ಗಶಿರ ಮಾಸದ ತ್ರಯೋದಶಿಯಂದು ಆಚರಿಸಬೇಕಾದ ವ್ರತ ಇದಾಗಿದೆ. ಭಾದ್ರಪದ ಶುದ್ಧ ಚತುರ್ದಶಿಯಂದು ಅನಂತವ್ರತ ಇದ್ದಂತೆ ಮಾರ್ಗಶಿರ ಶುಕ್ಲ ತ್ರಯೋದಶಿಯಂದು ಈ ಹನುಮದ್ ವ್ರತ. ಅದು ಅನಂತಪದ್ಮನಾಭನಾದ ಶ್ರೀಹರಿಯ ವ್ರತವಾದರೆ, ಇದು ಭಾವೀ ಪದ್ಮಾಸನರಾದ ಹನುಮದ್ರೂಪಿ ಶ್ರೀವಾಯುದೇವರ ವ್ರತ. ಅದು ಸರ್ವೋತ್ತಮ ವ್ರತವಾದರೆ, ಇದು ಜೀವೋತ್ತಮನ ವ್ರತ.
ಅನಂತವ್ರತದಂತೆ ಇಲ್ಲಿಯೂ ಸಹ ದೋರಕ (ದಾರ) ವನ್ನು ಸಮರ್ಪಿಸಿ ಕಟ್ಟಿಕೊಳ್ಳಬೇಕು. ಅನಂತವ್ರತಕ್ಕೆ ಹದಿನಾಲ್ಕು ಗಂಟುಗಳ ದಾರ ವಿಹಿತವಾಗಿರುವಂತೆ, ಇದಕ್ಕೆ ಹದಿಮೂರು ಗಂಟುಗಳ ದಾರ ವಿಹಿತ.
ಅನೇಕರು ತಪ್ಪಾಗಿ ಇದನ್ನು ಹನುಮಜ್ಜಯಂತಿ ಎಂಬುದಾಗಿ ಆಚರಿಸುವುದುಂಟು ವಾಸ್ತವಾಗಿ ಹನುಜ್ಜಯಂತಿ ಚೈತ್ರ ಶುಕ್ಲ ಪೂರ್ಣಿಮೆಯಂದು ಎಂಬುದು ಪುರಾಣಗಳಲ್ಲಿ ಉಕ್ತವಾಗಿದೆ. ಇದು ಹನುಮದ್ ವ್ರತ, ಅದು ಹನುಮಜ್ಜಯಂತಿ.

ಶ್ರೀವಾಯುದೇವರ ಅವತಾರತ್ರಯಗಳಲ್ಲಿ ಹನುಮದ್ರೂಪ ಮೊದಲನೆಯದು, ಭೀಮಸೇನ ಹಾಗೂ ಮಧ್ವರೂಪಗಳು ಸಹ ವಾಯುರೂಪಗಳೇ ಆಗಿವೆ. ಹನುಮದ್ರೂಪ ಚಿರಂಜೀವಿ ಎಂಬ ಕಾರಣದಿಂದ ಆ ರೂಪಕ್ಕೆ ವಿಶೇಷ ಆರಾಧನೆ ಎಂಬುದು ಮೇಲ್ನೋಟಕ್ಕೆ ಕಾಣುವುದು.
ಮುಖ್ಯವಾಗಿ ಶ್ರೀವಾಯುದೇವರ ಅವತಾರ ರೂಪಗಳು ಸಹ ಮೂಲ ರೂಪದಂತೆ ಶಕ್ತಿ ಸಂಪನ್ನವಾದವು. ಅದರಂತೆ ಆ ಮೂರು ರೂಪಗಳಲ್ಲೂ ಜೀವಭೇದ ಮೊದಲಾದ ಕಾರಣಗಳಿಂದ ಇತರ ದೇವತೆಗಳಲ್ಲಿ ಕಾಣುವ ಶಕ್ತಿಹ್ರಾಸ ಮೊದಲಾದ ದೋಷಗಳು ಕಂಡು ಬರುವುದಿಲ್ಲ.
ಇವೆಲ್ಲವುದರ ಸೂಚಕವಾಗಿ ವಾಯುದೇವರ ಅವತಾರ ರೂಪಕ್ಕೆ ಮುಖ್ಯವಾಗಿ ಪೂಜೆ ಸಲ್ಲುವುದು ಎಂಬುದನ್ನು ಗಮನಿಸಬೇಕು. ಇದರಂತೆ ರುದ್ರಾದಿ ಇತರ ದೇವತೆಗಳಿಗೆ ಅವತಾರ ರೂಪಗಳಿಗೆ ವಿಶೇಷ ಪೂಜೆ ಇಲ್ಲದೆ ಕೇವಲ ಮೂಲರೂಪಗಳಿಗೆ ಮುಖ್ಯ ಪೂಜೆ ಎಂಬುದು ವಿಶೇಷ.
ಶ್ರೀಹರಿವಾಯುಗಳಿಗೆ ಮಾತ್ರ ಅವತಾರ ರೂಪಗಳಿಗೂ ಮೂಲ ರೂಪದಲ್ಲಷ್ಟೆ ವೈಭವ ಪೂಜೆ ಆಗುತ್ತದೆ. ಏಕೆಂದರೆ ಅವರ ಅವತಾರ ರೂಪಗಳು ಸಹ ಮೂಲ ರೂಪದಂತೆ ಸಕಲ ಶಕ್ತಿಸಂಪನ್ನವಾದವು ಎಂಬುದು ಮುಖ್ಯ ಕಾರಣ. ಅದರಲ್ಲೂ ಶ್ರೀಲಕ್ಷ್ಮೀನಾರಾಯಣರ ರೂಪಗಳು ಶ್ರೀವಾಯುದೇವರ ಅವತಾರ ರೂಪಗಳಿಗಿಂತಲೂ ವಿಶಿಷ್ಟವಾದವು.












Click it and Unblock the Notifications