ಅಪ್ಪ ಅಂದ್ರೆ ಆಕಾಶವಷ್ಟೇ ಅಲ್ಲ, ಆಕಾಶವನ್ನೂ ಮೀರುವವನು ಅಪ್ಪ!
ಅಪ್ಪ ಎಂಬ ದೈವತ್ವದ ಸಾಕಾರ ಮೂರ್ತಿಯನ್ನು ಹಿಡಿಯಷ್ಟಾದರೂ ಅರ್ಥಮಾಡಿಕೊಳ್ಳಬೇಕೆಂಬ ಪ್ರಯತ್ನಗಳೆಲ್ಲ ಲೆಕ್ಕವಿಲ್ಲದಷ್ಟು ಬಾರಿ ವಿಫಲವಾಗಿದೆ. ಆಗೆಲ್ಲ ಈ ಅಪ್ಪ ಎಂಬ ವ್ಯಕ್ತಿತ್ವದ ಗಹನತೆ ನಮ್ಮ ವಿವೇಚನಕ್ಕೆ ದಕ್ಕುವಂಥದಲ್ಲ ಎಂದು ಸುಮ್ಮನಾಗಿದ್ದೇವೆ. ಅಪ್ಪ ಅಂದ್ರೆ ಯಾರು? ನಮ್ಮ ಬದುಕಿನಲ್ಲಿ ಅಪ್ಪತನದ ಪಾತ್ರವೇನು ಎಂಬುದನ್ನು ಯೋಚಿಸುವುದಕ್ಕೆ ಮತ್ತೊಮ್ಮೆ ಸಮಯಬಂದಿದೆ.
ಜೂನ್ ತಿಂಗಳ ಮೂರನೇ ಭಾನುವಾರವನ್ನು ಪ್ರಪಂಚದ ಹಲವು ದೇಶಗಳು ಅಪ್ಪಂದಿರ ದಿನವನ್ನಾಗಿ ಆಚರಿಸುತ್ತವೆಯಂತೆ. ಈ ಬಾರಿ ಜೂನ್ 18 ರಂದು ವಿಶ್ವದಾದ್ಯಂತ ಅಪ್ಪಂದಿರ ದಿನ ಆಚರಣೆಗೊಳ್ಳುತ್ತಿದೆ! ಅಪ್ಪತನವನ್ನು ನಿಕಷಕ್ಕೊಡ್ಡುವ ಪ್ರಯತ್ನಕ್ಕೆ ಈ ದಿನವೊಂದು ಮುನ್ನುಡಿಯಾದೀತಷ್ಟೆ.
ಅದೇನೋ ಗೊತ್ತಿಲ್ಲ, ಈ ಅಪ್ಪ ನಾವು ಚಿಕ್ಕವರಿದ್ದಾಗಿನಿಂದಲೂ ನಮ್ಮ ಕಣ್ಣಲ್ಲಿ ಹೀರೋ ಆಗಿಯೇ ಉಳಿದುಬಿಟ್ಟಿದ್ದಾನೆ! ಬದುಕಿನ ಪಯಣದ ಲೆಕ್ಕವಿಲ್ಲದಷ್ತು ತಿರುವಿನಲ್ಲಿ ಸಿಕ್ಕ ಸಾವಿರಾರು ಜನರೂ ಅಪ್ಪನ ಸಮಕ್ಕೆ ನಿಲ್ಲುವುದಕ್ಕೆ ಸಾಧ್ಯವೇ ಇಲ್ಲ್ ಎಂಬಷ್ಟರ ಮಟ್ಟಿಗೆ ನಮ್ಮ ಬದುಕನ್ನು ಅಪ್ಪ ಆವರಿಸಿಬಿಟ್ಟಿದ್ದಾನೆ!
ನಾನು ನೋಡಿದ ಮೊದಲ ವೀರ
ಬಾಳು ಕಲಿಸಿದ ಸಲಹೆಗಾರ
ಬೆರಗು ಮೂಡಿಸೋ ಜಾದೂಗಾರ ಅಪ್ಪ...
ಹಗಲು ಬೆವರಿನ ಕೂಲಿಕಾರ
ರಾತ್ರಿ ಮನೆಯಲಿ ಚೌಕಿದಾರ
ಎಲ್ಲ ಕೊಡಿಸುವ ಸಾಹುಕಾರ ಅಪ್ಪ
ಗದರೋ ಮೀಸೆಕಾರ ಮನಸೇ ಕೋಮಲ
ನಿನ್ನ ಹೋಲೊ ಕರ್ಣ ಯಾರಿಲ್ಲ
ಅಪ್ಪ... ಐ ಲವ್ ಯೂ ಪಾ...
ಚೌಕ ಚಿತ್ರದ ಈ ಹಾಡನ್ನು ಕೇಳುವಾಗೆಲ್ಲ ಒಮ್ಮೆ ಅಪ್ಪನನ್ನು ತಬ್ಬಿ ಅತ್ತುಬಿಡಬೇಕೆಂಬ ಉತ್ಕಟ ಆಸೆಯಾಗುತ್ತದೆ. ಮನೆ ಜನರ ತುತ್ತಿನ ಚೀಲ ತುಂಬುವವನು, ತನ್ನ ಬೆವರಿನಿಂದ ಮನೆಜನರಲ್ಲಿ ನಗು ಮೂಡಿಸುವವನು ಈ ಅಪ್ಪ. ಅಪ್ಪ ಜೊತೆಯಲ್ಲಿದ್ದರೆ ಅದೇನೋ ಹೇಳತೀರದ ಧೈರ್ಯ. ತಲೆಹರಟೆ ಮಕ್ಕಳನ್ನೆಲ್ಲ ಕೊಂಚವಾದರೂ ಹದ್ದುಬಸ್ತಿನಲ್ಲಿಡುವುದಕ್ಕಾಗಿ ಸುಖಾಸುಮ್ಮನೆ ಯಜಮಾನ ಎಂಬ ಹಣೆಪಟ್ಟಿಕಟ್ಟಿಕೊಂಡು, ದರ್ಪದ ನಾಟಕ ಆಡುವವನು ಅಪ್ಪ. ಮನಸ್ಸಲ್ಲಿ ಅವಿತಿಟ್ಟುಕೊಂಡ ಅವ್ಯಕ್ತ ಅಕ್ಕರೆಯನ್ನು, ಪ್ರೀತಿಯನ್ನೂ ಮಾತಿನಲ್ಲಿ ಹೇಳದೆ ಮೌನವಾಗಿಯೇ ಇದ್ದುಬಿಡುವವನು ಅಪ್ಪ. ನಿಜಕ್ಕೂ ಈ ಅಪ್ಪ ಎಂಬ ಯಜಮಾನನ ಮನಸ್ಸಿನಲ್ಲಿರುವ ಮಗುವಿನಂಥ ಮುಗ್ಧ ಮನಸ್ಸನ್ನು ಅರಿತವರೆಷ್ಟು ಜನ?(ಚಿತ್ರ ಕೃಪೆ: ಪಿಟಿಐ)

ಅಪ್ಪ ಅಳುವ ಆ ಹೊತ್ತು...
ಅಪ್ಪ ಎಂಬ ಧೈರ್ಯದ ಪ್ರತಿರೂಪ ಯಾವತ್ತಾದರೂ ಅತ್ತಿದಿದೆಯಾ? ಅಜ್ಜಿ-ಅಜ್ಜ ತೀರಿಹೋದಾಗಲೂ ದುಃಖವನ್ನೆಲ್ಲ ಅದುಮಿಟ್ಟಿಕೊಳ್ಳುವ ಈ ಅಪ್ಪ ಪ್ರೀತಿಯ ಮಗಳು ಮದುವೆಯಾಗಿ ಹೊರಟಾಗ ಮಾತ್ರ ಕಂಡೂ ಕಾಣದಂಥ ಕಣ್ಣೀರು ಹರಿಸುತ್ತಾನೆ! ಉಕ್ಕುವ ದುಃಖದ ಕಣ್ಣಹನಿಯನ್ನೂ ಕಣ್ಣತುದಿಯಲ್ಲೇ ಇಂಗಿಸಿಕೊಂಡು ನಿರ್ಲಿಪ್ತನಾಗಿಬಿಡುತ್ತಾನೆ ಅಪ್ಪ. ಸ್ವಂತ ಮಗ ವೃದ್ಧಾಶ್ರಮಕ್ಕೆ ಕಳಿಸಿದಾಗಲೂ ಅಪ್ಪನ ಕಣ್ಣಲ್ಲಿ ಹನಿಮೂಡಿಲ್ಲ! ತನ್ನ ಕಣ್ಣೀರು ಇಡೀ ಕುಟುಂಬದ ಧೈರ್ಯವನ್ನೇ ಉಡುಗಿಸಿಬಿಟ್ಟೀತು ಎಂಬ ಅರಿವು ಅಪ್ಪನಿಗೆ ಇದ್ದೇ ಇದೆಯಲ್ಲ ಅದಕ್ಕೆಂದೇ ಅಪ್ಪ ಅತ್ತಿದ್ದು ವಿರಳಾತಿ ವಿರಳ. ಅಕಸ್ಮಾತ್ ಅತ್ತರೂ ತೋಟದ ತುದಿಯಲ್ಲೆಲ್ಲೋ ಯಾರಿಗೂ ಕಾಣಿಸದಂತೆ ಬಿಕ್ಕಿಯಾನು!

ಅಪ್ಪ ಅಂದ್ರೆ ಏನೆಲ್ಲ!
ಹೌದು, ಈ ಅಪ್ಪ ಎಂಬ ವ್ಯಕ್ತಿತ್ವವನ್ನು ಪದಗಳ ಪುಂಜದೊಳಗೆ ಪೋಣಿಸೋದು ಕಷ್ಟ. ಅಪ್ಪ ಅಂದ್ರೆ ಧೈರ್ಯ, ವಿಶ್ವಾಸ, ಸಹನೆ, ನಗು ಎಲ್ಲ. ಅಪ್ಪ ಜೊತೆಯಲ್ಲಿದ್ದರೆ ಅದೇನೋ ಹೇಳತೀರದ ಭದ್ರತೆಯ ಭಾವ. ನೂರಾರು ಕಷ್ಟಗಳನ್ನೂ ಎದೆಯಲ್ಲೇ ಬಚ್ಚಿಟ್ಟುಕೊಂಡು ನಗುತ್ತಲೇ ಇರುವವನು ಅಪ್ಪ. ಮನೆಯ ಎಲ್ಲಾ ಜವಾಬ್ದಾರಿಗಳನ್ನು ಹೊತ್ತರೂ, ತಾನು ಸಂತೋಷವಾಗಿಯೇ ಇದ್ದೀನೆಂದು ಮನೆಜನರನ್ನು ಸಂತೈಸುವವನು ಅಪ್ಪ.

ಗಂಗೆಯ ಹಾಗೆ ಈ ಅಪ್ಪ
ಅಪ್ಪನಿಗೆ ಎಷ್ಟೇ ಸಮಸ್ಯೆ ಇದ್ದರೂ ಅದನ್ನು ಯಾರೊಂದಿಗೂ ಹೇಳಿಕೊಳ್ಳೋದಿಲ್ಲ. ಎಲ್ಲವನ್ನೂ ತನ್ನ ಒಡಲಲ್ಲಿಟ್ಟುಕೊಂಡೂ ಏನೂ ಆಗಿಯೇ ಇಲ್ಲ ಎಂಬಂತೆ ಶಾಂತವಾಗಿರುತ್ತಾನ ಅಪ್ಪ. ಒಡಲಲ್ಲಿ ಕೊಚ್ಚಿಕೊಂಡು ಹೋಗುವ ಪ್ರವಾಹವಿದ್ದರೂ, ನೋಡೋದಕ್ಕೆ ಮಾತ್ರ ಶಾಂತವಾಗಿರುವ ಗಂಗೆಯ ಹಾಗೆ!

ಅಪ್ಪ ಅಂದ್ರೆ ಸಮಚಿತ್ತ
ಅಪ್ಪ ಎಂಬ ಈ ಆಸಾಮಿ ದುಃಖಕ್ಕೆ ಕುಗ್ಗಿದ್ದನ್ನಂತೂ ನೋಡಿಲ್ಲ. ಕಡೇ ಪಕ್ಷ ತೀರಾ ಖುಷಿಯಾದಾಗ ಅಪ್ಪ ಉಬ್ಬಿದ್ದಾರಾ ಅಂದ್ರೆ ಅದೂ ಇಲ್ಲ. ಬದುಕಿನ ಪ್ರತಿ ಸನ್ನಿವೇಶದಲ್ಲೂ ಅಪ್ಪ ಸಮಚಿತ್ತ ಕಾಯ್ದುಕೊಳ್ಳುತ್ತಾರೆ. ತನ್ನ ಮಣಬಾರದ ಜವಾಬ್ದಾರಿಗಳನ್ನು, ನೋವನ್ನು ಯಾರೊಂದಿಗೂ ಹಂಚಿಕೊಳ್ಳದೆ, ಪ್ರೀತಿ ಹಂಚುವಾಗ ಮಾತ್ರ ಉದಾರತೆ ತೋರುವವನು ಅಪ್ಪ.

ಅಪ್ಪ ಎಂಬ ವ್ಯಕ್ತಿತ್ವಕ್ಕೆ ಮಸಿಬಳಿಯುವವರು
ಅಪ್ಪ ನಿಜಕ್ಕೂ ದೈವತ್ವದ ಸಅಕಾರಮೂರ್ತಿಯೇ. ಆದರೆ ಇಂದಿನ ಕ್ರೂರ ಜಗತ್ತಿನಲ್ಲಿ ತಾವೇ ಹೆತ್ತ ಹೆಣ್ಣು ಮಗುವನ್ನು ಕಾಮದ ಕಣ್ಣಿನಿಂದ ನೋಡುವ ಅಪ್ಪಂದಿರಿದ್ದಾರೆ, ಹೆಣ್ಣು ಭ್ರೂಣವೆಂದು ತಿಳಿದು ಅನ್ನು ಹುಟ್ಟುವ ಮೊದಲೇ ಸಾಯಿಸುವವರಿದ್ದಾರೆ, ಹೆಣ್ನು ಮಕ್ಕಳನ್ನು ಮಾರುವವರಿದ್ದಾರೆ, ಮರ್ಯಾದಾ ಹತ್ಯೆಯ ಹೆಸರಿನಲ್ಲಿ ಮಕ್ಕಳನ್ನೇ ಕೊಂದವರಿದ್ದಾರೆ. ಇಂಥವರು ಅಪ್ಪ ಎಂಬ ವ್ಯಕ್ತವಕ್ಕೆ ಕಳಂಕ ತರುವವರು, ಅಪ್ಪ ಎಂಬ ಮಹೋನ್ನತ ವ್ಯಕ್ತಿತ್ವಕ್ಕೆ ಮಸಿಬಳಿಯುವವರು. ಆದರೆ ಇಂಥ ಅಪ್ಪಂದಿರುವ ಬೆರಳಣಿಕೆಯಷ್ಟೇ ಎಂಬುದು ಸಮಾಧಾನದ ಸಂಗತಿ.

ಅಪ್ಪಂದಿರಿಗೆ ಕೋಟಿ ನಮನ
ಪ್ರತಿಯೊಬ್ಬ ವ್ಯಕ್ತಿಯ ಬದುಕಿನಲ್ಲೂ ಮಹೋನ್ನತ ಸ್ಥಾನವನ್ನು ನಿರ್ವಹಿಸುವ, ಪ್ರೀತಿಯನ್ನು ಅವ್ಯಕ್ತವಾಗಿಯೇ ಉಳಿಸಿಕೊಳ್ಳುವ ಅಪ್ಪ ಎಂಬ ಭಾಷೆಗೆ ನಿಲುಕದ, ಮಾತಿಗೆ ಮೀರಿದ, ಪ್ರಶ್ನಾತೀತ ವ್ಯಕ್ತಿತ್ವದ ಬಗ್ಗೆ ಎಷ್ಟು ಬರೆದರೂ ಮುಗಿಯದು. ಎಲ್ಲವನ್ನೂ ಹೇಳಿದ ಮೇಲೂ ಏನೋ ಉಳಿದುಬಿಡುವಂಥ ವ್ಯಕ್ತಿತ್ವ ಅಪ್ಪನದು. ಅಪ್ಪ ಅಂದ್ರೆ ಆಕಾಶವಷ್ಟೇ ಅಲ್ಲ, ಆಕಾಶವನ್ನು ಮೀರಿದ ವ್ಯಕ್ತಿತ್ವ ಅಪ್ಪನದು. ಅಂಥ ಅಪ್ಪನನ್ನು ಪಡೆದ ನಾವೆಲ್ಲರೂ ಧನ್ಯರು. ನಮ್ಮೆಲ್ಲರ ಬದುಕಿಗೊಂದು ಅರ್ಥ ನೀಡಿದ ಅಪ್ಪನಿಗೆ ಕೋಟಿ ನಮನ. ಅಪ್ಪಂದಿರ ದಿನದಂದು ವಿಶ್ವದ ಎಲ್ಲಾ ಅಪ್ಪಂದಿರಿಗೂ ಮಕ್ಕಳಿಂದ ಹಾರ್ದಿಕ ಶುಭಾಶಯಗಳು.
-
IMD Weather Forecast: ಈ ಭಾಗಗಳಲ್ಲಿ ಮುಂದಿನ 3 ದಿನ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆ -
ರಾಮಚಂದ್ರ ರಾವ್ ಪ್ರಕರಣ: 'ಎಐ' ಅಲ್ಲ ಅಸಲಿ ವಿಡಿಯೋ; ಎಫ್ಎಸ್ಎಲ್ ವರದಿಯಲ್ಲಿ ಬಯಲಾಯ್ತು ಸತ್ಯ -
New Railway Lines: ಬಿರೂರು-ಶಿವಮೊಗ್ಗ ರೈಲು ಹಳಿ ಡಬ್ಲಿಂಗ್, ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ಸಂಪರ್ಕಕ್ಕೆ ಒತ್ತಾಯ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Anil Kumble: ವಿರಾಟ್ ಕೊಹ್ಲಿ-ಬೆಂಗಳೂರು ನಡುವಿನ ಅವಿನಾಭಾವ ಸಂಬಂಧದ ಬಗ್ಗೆ ಕನ್ನಡಿಗ ಅನಿಲ್ ಕುಂಬ್ಳೆ ಮನದಾಳದ ಮಾತು -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
March 19 Horoscope: ಈ ರಾಶಿಯವರಿಗೆ ಶುಭಸುದ್ದಿ, ಇತರರಿಗೆ ಎಚ್ಚರಿಕೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
SCR Railway Recruitment 2026: ಲಿಖಿತ ಪರೀಕ್ಷೆ ಇಲ್ಲದೇ ನೇಮಕಾತಿ, 2801 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ












Click it and Unblock the Notifications