ಸಂಭ್ರಮದ ಗೌರಿ ಹಬ್ಬಕ್ಕೆ ಇಲ್ಲಿವೆ 9 ಸಲಹೆ
ಸಮಸ್ತ ಹಿಂದು ಸಮುದಾಯ, ಅದರಲ್ಲೂ ವಿಶೇಷವಾಗಿ ದಕ್ಷಿಣ ಭಾರತೀಯರು ಇಂದು(ಆಗಸ್ಟ್ 24) ಸಂಭ್ರಮದ ಗೌರಿ ಹಬ್ಬವನ್ನು ಆಚರಿಸುತ್ತಿದ್ದಾರೆ. ಪ್ರತಿ ವರ್ಷ ಭಾದ್ರಪದ ಮಾಸದ ಶುಕ್ಲ ಪಕ್ಷದ ತದಿಗೆಯಂದು ನಡೆಯುವ ಗೌರಿ ಹಬ್ಬ ಹೆಂಗೆಳೆಯರ ಪಾಲಿಗೆ ಅತ್ಯಂತ ಶ್ರೇಷ್ಠ ಹಬ್ಬ.
ಈ ದಿನ ಕೈಗೊಳ್ಳುವ ಸ್ವರ್ಣ ಗೌರಿ ವ್ರತದಿಂದ ಹೆಂಗೆಳೆಯರ ಇಷ್ಟಾರ್ಥ ಸಿದ್ಧಿಸುತ್ತದೆ ಎಂಬ ನಂಬಿಕೆಯಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳು ನಾಡಿನಲ್ಲಿ ಈ ಹಬ್ಬವನ್ನು ಅತ್ಯಂತ ಸಂಭ್ರಮದಿಂದ ಆಚರಿಸಲಾಗುತ್ತದೆ. ಗೌರಿ ಹಬ್ಬದಂದು ಗೌರಿ ಹಬ್ಬದಂದು ತವರಿಗೆ ತೆರಳುವ ಗೌರಿಯನ್ನು, ಮಗ ಗಣಪತಿ ಮರುದಿನ ಅಂದರೆ ಚೌತಿಯಂದು ಕೈಲಾಸಕ್ಕೆ ಹಿಂದಿರುಗಿ ಕರೆದೊಯ್ಯುತ್ತಾನೆ. ತವರಿಗೆ ಬಂದ ಗೌರಿಗೆ ಆಕೆಯ ತವರಿನವರು ತಮ್ಮ ಯಥಾನುಶಕ್ತಿ ಉಡುಗೊರೆ ನೀಡಬಹುದು. ಸೀರೆ, ಹಣ ಇತ್ಯಾದಿ ಯಾವುದೇ ರೂಪದಲ್ಲಿ ನೀಡುವ ಈ ಉಡುಗೊರೆಯನ್ನು ಮಂಗಳದ್ರವ್ಯ ಎಂದು ಕರೆಯಲಾಗುತ್ತದೆ.
ಸುವರ್ಣ ಗೌರಿ ವ್ರತ: ತಿಳಿದಿರಲಿ ಈ 17 ಸಂಗತಿ
ಸುಮಂಗಲಿಯರು ಕುಟುಂಬದ ಆಯುರಾರೋಗ್ಯ ಬೇಡಿ, ಶ್ರದ್ಧೆ-ಭಕ್ತಿಯಿಂದ ಈ ದಿನವನ್ನು ಆಚರಿಸಿ, ಕನಿಷ್ಠ ಐದು ಮುತ್ತೈದೆಯರಿಗೆ ಬಾಗಿನ ನೀಡುವ ಪದ್ಧತಿ ನಡೆದುಕೊಂದು ಬಂದಿದೆ. ದಾನ ಮಾಡುವ ಮೂಲಕ ಭಗವಂತನ ಕೃಪೆಗೆ ಪಾತ್ರವಾಗುವ ಉದ್ದೇಶ ಈ ನಡೆಯ ಹಿಂದಿದೆ.
ಇಂದು ಗೌರಿ ಹಬ್ಬ ಆಚರಿಸುತ್ತಿರುವ ಎಲ್ಲರಿಗೂ ಹಬ್ಬದ ಶುಭಾಶಯಗಳು. ಗೌರಿ ಹಬ್ಬದ ಆಚರಣೆಯೆ ಕುರಿತು ಒಂದಷ್ಟು ಸಲಹೆಗಳು ನಿಮಗಾಗಿ ಇಲ್ಲಿವೆ.
ಶುದ್ಧ ಬಟ್ಟೆ ಧರಿಸಿ ಪೂಜೆಗೆ ಅಣಿಯಾಗಿ
ಸ್ನಾನ ಮಾಡಿ, ಹೊಸ ಬಟ್ಟೆ ಅಥವಾ ಶುದ್ಧವಾದ ಬಟ್ಟೆ ತೊಟ್ಟು ಪೂಜೆಗೆ ಅಣಿಯಾಗಿ. ಹಬ್ಬ ಹೊಸತನವನ್ನೂ, ತಾಜಾತನವನ್ನೂ ನೀದಲಿ ಎಂಬ ಉದ್ದೇಶ ಹೊಸ ಬಟ್ಟೆ ತೊಡುವುದರ ಹಿಂದಿದೆ. ಹೊಸ ಬಟ್ಟೆ ಇಲ್ಲದವರು ಹಳೆ ಬಟ್ಟೆಯನ್ನೇ ಆದರೂ, ಶುದ್ಧವಾಗಿ ತೊಳೆದ ಬಟ್ಟೆಯನ್ನು ಧರಿಸಿದರೆ ಹಬ್ಬದ ತಾಜಾತನ ಇಮ್ಮಡಿಯಾಗುತ್ತದೆ.
ಗೌರಿ ಪ್ರತಿಮೆ
ಅರಿಶಿಣದಿಂದ ಮಾಡಿದ ಅಥವಾ ಮಾರುಕಟ್ಟೆಯಿಂದ ಖರೀದಿಸಿದ ಮಣ್ಣಿನ ಗೌರಿಯನ್ನು ಪೂಜಾ ಕೋಣೆಯಲ್ಲಿಡಿ.
ಮಂಟಪದಲ್ಲಿ ಗೌರಿ
ನಿಮ್ಮ ಅನುಕೂಲ ಮತ್ತು ಅಭಿರುಚಿಗೆ ತಕ್ಕಂತೆ ನಿರ್ಮಿಸಿದ ಮಂಟಪದಲ್ಲಿ ಅರಿಶಿಣದ ಅಥವಾ ಮಣ್ಣಿನ ಗೌರಿಯನ್ನು ಗೆಜ್ಜೆವಸ್ತ್ರ, ಹೂವಿನ ಮಾಲೆಯಿಂದ ಅಲಂಕರಿಸಿ.
ಪವಿತ್ರ ಕಳಶ
ಕಳಶಕ್ಕೆ ಅರಿಶಿಣ ಮತ್ತು ಕುಂಕುಮ ಬಳಿದು ಅದಕ್ಕೆ ನೀರನ್ನು ತುಂಬಿ. ಕುಂಕುಮ, ಅರಿಶಿಣ, ಅಕ್ಷತೆ ಮತ್ತು ನಾಟ್ಯಗಳನ್ನು ಅದಕ್ಕೆ ಹಾಕಿ. ಕಳಶದ ಮೇಲ್ಭಾಗದಲ್ಲಿ ವೀಳ್ಯದಲೆ ಮತ್ತು ಅರಿಶಿಣ-ಕುಂಕುಮ ಬಳಿದ ತೆಂಗಿನ ಕಾಯಿಯನ್ನು ಇಡಿ.
ರಂಗೋಲಿಯ ಚಿತ್ತಾರ
ಕಳಶವನ್ನು ಮಂಟಪದಲ್ಲಿ ಇಡುವ ಮುನ್ನ ಮಂಟಪದೆದುರು ರಂಗೋಲಿ ಬರೆದು ಅದರ ಮೇಲೆ ತಟ್ಟೆಯೊಂದನ್ನು ಇಟ್ಟು, ಅದರ ಮೇಲೆ ಅಕ್ಕಿ ಸುರಿದು, ನಂತರ ಕಳಶವನ್ನಿಡಿ.
ಸುಮಂಗಲಿಯರಿಗೆ ಗೌರಿದಾರ
ಹದಿನಾರು ಸುತ್ತಿನ ಪವಿತ್ರ ದಾರವನ್ನು ಪೂಜಿಸಿ, ಗೌರಿಯ ಆಶೀರ್ವಾದ ಎಂಬಂತೆ ಸುಮಂಗಲಿಯರು ತಮ್ಮ ಕೈಗೆ ಕಟ್ಟಿಕೊಳ್ಳುತ್ತಾರೆ. ಇದಕ್ಕೆ ಗೌರಿದಾರ ಎಂದೂ ಕರೆಯುತ್ತಾರೆ.
ಗೌರಿ ಪೂಜೆಗೂ ಮುನ್ನ ಗಣೇಶನ ಪೂಜೆ
ಗೌರಿ ಪೂಜೆ ಶುರುಮಾಡುವ ಮೊದಲು ಪ್ರಥಮ ಪೂಜ್ಯ ಗಣನಾಯಕನನ್ನು ಪೂಜಿಸಬೇಕು. ನಂತರ ಗೌರಿಯನ್ನು ಶ್ರದ್ಧೆ-ಭಕ್ತಿಯಿಂದ ಪೂಜಿಸಬೇಕು. ಗೌರಿ ಅಷ್ಟೋತ್ತರ, ಅಥವಾ ಗೌರಿಯನ್ನು ಸ್ತುತಿಸುವ ಬಜನೆ, ಹಾಡಿನೊಂದಿಗೆ ಭಕ್ತಿಯಿಂದ ಪೂಜಿಸಬೇಕು.
ಗೌರಿ ಬಾಗೀನ
ಗೌರಿ ಹಬ್ಬದಂದು ಸುಮಂಗಲಿಯರಿಗೆ ನೀಡುವ ಬಾಗೀನ ಬಹಳ ಶ್ರೇಷ್ಠವಾದುದು. ಅದಕ್ಕೆಂದೇ ಕನಿಷ್ಠ ಐದು ಮುಜತ್ತೈದೆಯರಿಗೆ ಈ ದಿನ ಬಾಗಿನ ನೀಡುವ ಪದ್ಧತಿ ಚಾಲ್ತಿಯಲ್ಲಿದೆ. ಅರಿಶಿಣ-ಕುಂಕುಮ, ಹಸಿರು ಬಳೆ, ಕರಿಮಣಿ, ಬಾಚಣಿಗೆ, ಸೀರೆ ಅಥವಾ ಬ್ಲೊಸ್ ಪೀಸ್, ಕಾಯಿ, ಹಣ್ಣು, ಧಾನ್ಯಗಳನ್ನೊಳಗೊಂಡ ಬಾಗಿನವನ್ನು ನೀಡುವುದರಿಂದ ದಾನ ಮಾಡಿದ ಪುಣ್ಯ ಲಭಿಸುತ್ತದೆ.
ಬಗೆ ಬಗೆ ಖಾದ್ಯ
ಗೌರಿ ಹಬ್ಬದಂದು ದಕ್ಷಿಣ ಭಾರತದಲ್ಲಿ ಒಬ್ಬಟ್ಟು, ಪಾಯಸ, ಚಿತ್ರಾನ್ನ, ಬಜ್ಜಿ, ಕೋಸುಂಬರಿ ಮಾಡುವುದು ಮಾಮೂಲು. ಕುಟುಂಬಸ್ಥರು, ಸ್ನೇಹಿತರನ್ನೆಲ್ಲ ಮನೆಗೆ ಕರೆದು ಒಟ್ಟಾಗಿ ಊಟ ಮಾಡುವುದು ಈ ಹಬ್ಬದ ವಿಶೇಷ.