ಮೈಸೂರು ಕೊನೆ ಮಹಾರಾಜರಿಗೆ ಗೌರವಧನ ದುಪ್ಪಟ್ಟು
ಮೈಸೂರು,ಸೆ 19: ಸುವಿಖ್ಯಾತ ಮೈಸೂರು ದಸರಾ ಸಡಗರಕ್ಕೆ ಜಿಲ್ಲಾ ಆಡಳಿತ ಸರ್ವಸಿದ್ಧತೆ ನಡೆಸಿದೆ. ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ರಾಜವಂಶಸ್ಥರಿಗೆ ರಾಜ್ಯ ಸರಕಾರ ಕೊಡಮಾಡುವ ಗೌರವಧನವನ್ನು ಈ ಬಾರಿ ದುಪ್ಪಟ್ಟು ಮಾಡಲಾಗಿದೆ.
ಮೈಸೂರಿನವರೇ ಆದ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರವು ಮೈಸೂರಿನ ಕೊನೆಯ ರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (60) ಅವರಿಗೆ ಸಂಪ್ರದಾಯಂತೆ ಫಲತಾಂಬೂಲದ ಜತೆಗೆ ಗೌರವ ಸೂಚಕವಾಗಿ 20 ಲಕ್ಷ ರೂಪಾಯಿಯನ್ನು ನೀಡಲಿದೆ.

4 ಬಾರಿ ಸಂಸದರಾಗಿದ್ದವರು
1970ರ ಸಂದರ್ಭದಲ್ಲಿ ರಾಜರ ಆಡಳಿತ ಅಂತ್ಯಗೊಂಡು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬಂದ ಮೊದಲ 3 ವರ್ಷ ದಸರಾ ಮಹೋತ್ಸವದಲ್ಲಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಅವರು ಪಾಲ್ಗೊಂಡಿರಲಿಲ್ಲ. ಮುಂದೆ, ಅವರು 4 ಬಾರಿ ಸಂಸದರಾಗಿ ಆಯ್ಕೆಗೊಂಡಿದ್ದಾರೆ.

1950ರಲ್ಲಿ 50 ಸಾವಿರ ರೂ ಗೌರವಧನ
ಆ ನಂತರದ ದಸರಾ ಮಹೋತ್ಸವಗಳಲ್ಲಿ ರಾಜಕುಟುಂಬದವರನ್ನು ಅಧಿಕೃತವಾಗಿ ಆಹ್ವಾನಿಸಿ, ಗೌರವಧನ ನೀಡುವ ಪದ್ಧತಿ ಜಾರಿಗೆ ಬಂದಿತು. 1950ರ ಸಂದರ್ಭದಲ್ಲಿ ರಾಜವಂಶಸ್ಥರಿಗೆ 50 ಸಾವಿರ ರೂ ನಗದನ್ನು ಗೌರವಾರ್ಪಣೆ ಮಾಡಲಾಗುತ್ತಿತ್ತು.

ಕಳೆದ ವರ್ಷ 10 ಲಕ್ಷ ರೂ ನೀಡಿಕೆ
2003-04ರಲ್ಲಿ ಗೌರವಧನ 2 ಲಕ್ಷ ರೂ ಗೆ ಏರಿಕೆಯಾಯ್ತು. ಮುಂದೆ 5 ಲಕ್ಷ ರೂ. ಗೂ ಏರಿತು. ಕಳೆದ ವರ್ಷ 10 ಲಕ್ಷ ರೂ ನೀಡಿ ಗೌರವಿಸಲಾಗಿತ್ತು. ಆದರೆ ಈ ಬಾರಿ ದುಪ್ಪಟ್ಟುಗೊಳಿಸಿ, 20 ಲಕ್ಷ ರೂ ಗೌರವಧನ ನೀಡಲು ನಿರ್ಧರಿಸಲಾಗಿದೆ ಎಂದು ದಸರಾ ಮಹೋತ್ಸವ ಉಸ್ತುವಾರಿ ಹೊತ್ತಿರುವ ಜಿಲ್ಲಾಧಿಕಾರಿ ಸಿ. ಶಿಖಾ ತಿಳಿಸಿದ್ದಾರೆ.

ಗಣ್ಯಾತಿಗಣ್ಯರಿಗೆ ಅಧಿಕೃತ ಆಹ್ವಾನ:
ನಾಡ ಹಬ್ಬ ದಸರೆಯಲ್ಲಿ ಪಾಲ್ಗೊಳ್ಳುವಂತೆ ನಾಡಿನ ಗಣ್ಯಾತಿಗಣ್ಯರಿಗೂ ಜಿಲ್ಲಾಡಳಿತ ಅಧಿಕೃತ ಆಹ್ವಾನ ನೀಡಲಿದೆ. ರಾಜ್ಯಪಾಲರು, ಮುಖ್ಯಮಂತ್ರಿ, ಮುಖ್ಯ ನ್ಯಾಯಮೂರ್ತಿ, ಸಚಿವರು ಮತ್ತು ರಾಜವಂಶಸ್ಥರನ್ನು ಆಹ್ವಾನಿಸಲು ಜಿಲ್ಲಾಡಳಿತ ಈ ವಾರಾಂತ್ಯ ಬೆಂಗಳೂರಿಗೆ ಬರಲಿದೆ. ಜಿಲ್ಲಾ ಉಸ್ತುವಾರಿ ಸಚಿವ ವಿ ಶ್ರೀನಿವಾಸ ಪ್ರಸಾದ್ ಹಾಗೂ ಜಿಲ್ಲಾಧಿಕಾರಿ ನೇತೃತ್ವದ ಉನ್ನತಾಧಿಕಾರಿಗಳ ತಂಡ ಬೆಂಗಳೂರಿಗೆ ಭೇಟಿ ನೀಡಲಿದೆ.












Click it and Unblock the Notifications