ಅತ್ಯಾಕರ್ಷಕ ಜಂಬೂ ಸವಾರಿ ವೀಕ್ಷಣೆಗೆ ಆತುರ.. ಕಾತರ..
ಮೈಸೂರು , ಅಕ್ಟೋಬರ್ 23 : ಮೈಸೂರು ದಸರಾ ಪ್ರಮುಖ ಆಕರ್ಷಣೆ ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ.
ನಿನ್ನೆಯಿಂದಲೇ ದೂರದ ಊರುಗಳಿಂದ ಆಗಮಿಸಿ ನಗರದ ಹೋಟೆಲ್, ರೆಸಾರ್ಟ್, ಸಂಬಂಧಿಕರ ಮನೆಯಲ್ಲಿ ಬೀಡು ಬಿಟ್ಟಿರುವ ಪ್ರವಾಸಿಗರ ಪೈಕಿ ಪಾಸು ಹೊಂದಿರುವವರು ತಮ್ಮ ಆಸನ ಅಲಂಕರಿಸುವ ತವಕದಲ್ಲಿದ್ದರೆ, ದೂರದ ಹಳ್ಳಿಯಿಂದ, ನಗರದಿಂದ ಬಂದವರು ನಮಗೆ ಬೇಕಾದ ಸ್ಥಳಗಳನ್ನು ಆಯ್ದುಕೊಳ್ಳುವ ತವಕದಲ್ಲಿದ್ದಾರೆ.
ಅರಮನೆಯಿಂದ ಬನ್ನಿಮಂಟಪದವರೆಗೆ ಜಂಬೂಸವಾರಿ ಸಾಗುವ ಸಯ್ಯಾಜಿರಾವ್ ರಸ್ತೆಯ ಇಕ್ಕೆಲಗಳ ಕಟ್ಟಡ, ಮರ ಸೇರಿದಂತೆ ಖಾಲಿ ಜಾಗಗಳಲ್ಲಿ ಜನ ನೆರೆಯುತ್ತಿದ್ದಾರೆ. ಅಲ್ಲಲ್ಲಿ ಪೆಂಡಾಲ್ ಹಾಕಿ ಆಸನಗಳ ವ್ಯವಸ್ಥೆ ಮಾಡಲಾಗಿದೆ.
ಇತ್ತ ಅರ್ಜುನ ನಾಲ್ಕನೇ ಬಾರಿಗೆ ಅಂಬಾರಿ ಹೊರಲು ತಯಾರಾಗುತ್ತಿದ್ದಾನೆ. ಸುಮಾರು 5450 ಕೆಜಿ ಭಾರ ಹೊಂದಿರುವ ಈತ ಇರುವ ಆನೆಗಳ ಪೈಕಿ ಬಲಿಷ್ಠನಾಗಿದ್ದಾನೆ. ಸುಮಾರು 10 ಅಡಿಯಷ್ಟು ಎತ್ತರ ಹಾಗೂ ಸಮತಟ್ಟಾದ ಬೆನ್ನು, ನೀಳವಾದ ದಂತ ಹೊಂದಿ ಅಂಬಾರಿ ಹೊರಲು ಸರ್ವ ವಿಧದಲ್ಲೂ ಸೂಕ್ತವಾಗಿರುವುದರಿಂದ ಅಲ್ಲದೆ ಈಗಾಗಲೇ ಎಲ್ಲ ವಿಧದ ತಾಲೀಮನ್ನೂ ಯಶಸ್ವಿಯಾಗಿ ಪೂರೈಸಿರುವುದರಿಂದ ಅಂಬಾರಿಯನ್ನು ಯಶಸ್ವಿಯಾಗಿ ಹೊರುವ ನಂಬಿಕೆ ಬಂದಿದೆ. [ಈ ಬಾರಿಯ ದಸರಾ ಜಂಬೂಸವಾರಿ ವೈಭವ ಹೇಗಿರುತ್ತದೆ?]

ಈಗಾಗಲೇ ಅರ್ಜುನ ಸೇರಿದಂತೆ ಎಲ್ಲ 11 ಆನೆಗಳನ್ನು ಅಲಂಕಾರಗೊಳಿಸುವ ಕಾರ್ಯ ನಡೆಯುತ್ತಿದ್ದು, ತ್ರಿಶೂರ್ನಿಂದ ತರಿಸಲಾದ ಚಿನ್ನಲೇಪಿತ ಮುಂದಾಲೆ ಪಟ್ಟಿಯನ್ನು ಧರಿಸಲಾಗುತ್ತಿದೆ. ಛತ್ರಿ, ಚಾಮರಗಳ ವ್ಯವಸ್ಥೆ ಮಾಡಲಾಗುತ್ತದೆ.
ಸುಮಾರು 11 ಗಂಟೆ ವೇಳೆಗೆಲ್ಲಾ ಗಜಪಡೆ ಜಂಬೂ ಸವಾರಿಗೆ ಸರ್ವ ಸನ್ನದ್ಧವಾಗಿವೆ. ಅರ್ಜುನ ಅಂಬಾರಿ ಹೊತ್ತರೆ ಬಲರಾಮ ನಿಶಾನೆ, ಅಭಿಮನ್ಯು ನೌಪತ್ ಆನೆಗಳಾಗಿ ಸಾಥ್ ನೀಡಲಿದ್ದಾರೆ. ಉಳಿದಂತೆ ಇತರೆ ಆನೆಗಳು ತಮ್ಮ ಜವಾಬ್ದಾರಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಲಿದ್ದಾರೆ.
ಜಂಬೂಸವಾರಿ ಸಾಗುವ ಮಾರ್ಗದಲ್ಲಿ ಅರಣ್ಯ ಇಲಾಖೆಯ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಹಾಗೂ ವೈದ್ಯರು ಕಾರ್ಯನಿರ್ವಹಿಸಲಿದ್ದಾರೆ. ಯಾವುದೇ ತೊಂದರೆಯಾಗದಂತೆ ಯಶಸ್ವಿ ಜಂಬೂಸವಾರಿಗೆ ಅರಣ್ಯ ಇಲಾಖೆ ಅಧಿಕಾರಿಗಳು ತಯಾರಿ ಮಾಡಿದ್ದರೆ, ಅತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸುಮಾರು ಆರು ಸಾವಿರಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ. ಅಂಬಾರಿ ಹೊತ್ತ ಅರ್ಜುನನ ಸುತ್ತ ಚಾಮುಂಡಿ ಕಮಾಂಡೋ ಪಡೆ ಭದ್ರತೆ ಒದಗಿಸಲಿದೆ.
ಒಟ್ಟಾರೆ ಜಂಬೂಸವಾರಿಗೆ ಕ್ಷಣಗಣನೆ ಆರಂಭವಾಗಿದ್ದು, ಚಿನ್ನದ ಅಂಬಾರಿಯಲ್ಲಿ ವೀರಾಜಮಾನಳಾಗಿ ಶೋಭಿಸುವ ಚಾಮುಂಡೇಶ್ವರಿಯನ್ನು ವೀಕ್ಷಿಸಿ ಕೃತಾರ್ಥರಾಗಲು ಜನ ಕಾತರದಿಂದ ಕಾಯುತ್ತಿದ್ದಾರೆ.












Click it and Unblock the Notifications