ವಿದ್ಯಾರ್ಥಿಗಳಿಗೇಕೆ ಡಾ. ಅಬ್ದುಲ್ ಕಲಾಂ ಅಚ್ಚು ಮೆಚ್ಚು
ವಿಶ್ವದಾದ್ಯಂತ ಅಕ್ಟೋಬರ್ 15ದನ್ನು 'ವಿಶ್ವ ವಿದ್ಯಾರ್ಥಿಗಳ ದಿನ' ವಾಗಿ ಆಚರಣೆ ಮಾಡಲಾಗುತ್ತದೆ. ಭಾರತದ ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಜನ್ಮದಿನವನ್ನು ವಿದ್ಯಾರ್ಥಿಗಳ ದಿನವಾಗಿ ಆಚರಿಸಲಾಗುತ್ತದೆ.
2010ರಲ್ಲಿ ಮೊದಲ ಬಾರಿಗೆ ಯನೈಟೆಡ್ ನೇಷನ್ಸ್ 'ವಿಶ್ವ ವಿದ್ಯಾರ್ಥಿಗಳ ದಿನ'ವನ್ನು ಆಚರಣೆ ಮಾಡಿತು. ಆಗ ಎಪಿಜೆ ಅಬ್ದುಲ್ ಕಲಾಂ ಅವರಿಗೆ 79 ವರ್ಷ ವಯಸ್ಸಾಗಿತ್ತು. ಇಂದು ಹುಟ್ಟು ಹಬ್ಬದ ಸಂದರ್ಭದಲ್ಲಿ ಭಾರತ ಅಬ್ದುಲ್ ಕಲಾಂ ನೆನಪು ಮಾಡಿಕೊಳ್ಳುತ್ತದೆ.
ಡಾ. ಎಪಿಜೆ ಅಬ್ದುಲ್ ಕಲಾಂ ಭಾರತ ಕಂಡ ಅತ್ಯಂತ ಸರಳ ರಾಷ್ಟ್ರಪತಿ. ಸಂಶೋಧನಾ ವಿದ್ಯಾರ್ಥಿಗಳ ಪಾಲಿನ ನೆಚ್ಚಿನ ವಿಜ್ಞಾನಿ, ಓದುಗರಿಗೆ ನೆಚ್ಚಿನ ಲೇಖಕ. ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕಲಾಂ ಭಾರತೀಯರಿಗೆ ಅತ್ಯಂತ ಪ್ರೀತಿ ಪಾತ್ರರು.

ಡಾ. ಕಲಾಂ 15 ಅಕ್ಟೋಬರ್, 1931ರಲ್ಲಿ ತಮಿಳುನಾಡಿನ ರಾಮೇಶ್ವರಂನಲ್ಲಿ ಜನಿಸಿದರು. ಫಿಸಿಕ್ಸ್ ಮತ್ತು ಏರೋಸ್ಪೇಸ್ ಇಂಜಿನಿಯರಿಂಗ್ ವ್ಯಾಸಂಗ ಮಾಡಿದರು. ನಾಲ್ಕು ದಶಕಗಳ ಕಾಲ ವಿಜ್ಞಾನಿಯಾಗಿ ಡಿಆರ್ಡಿಓ ಮತ್ತು ಇಸ್ರೋದಲ್ಲಿ ಕೆಲಸ ಮಾಡಿದರು.
ಉಪನ್ಯಾಸ ಮಾಡುವುದು ಅಬ್ದುಲ್ ಕಲಾಂ ಅವರ ನೆಚ್ಚಿನ ವೃತ್ತಿಯಾಗಿತ್ತು. ಇಂದಿಗೂ ಸಹ ವಿಶ್ವಮಟ್ಟದಲ್ಲಿ ಅವರು ಇದಕ್ಕಾಗಿಯೇ ಪ್ರಸಿದ್ಧಿ ಪಡೆದಿದ್ದಾರೆ. ತಮ್ಮ ಪ್ರೀತಿಯ ವೃತ್ತಿಯನ್ನು ಮಾಡುತ್ತಿದ್ದಾಗಲೇ ಅಬ್ದುಲ್ ಕಲಾಂ ವಿಧಿವಶರಾದರು.
2015, ಜುಲೈ 27ರಂದು ಅಬ್ದುಲ್ ಕಲಾಂ ಶಿಲ್ಲಾಂಗ್ನ ಐಐಎಂನಲ್ಲಿ ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುತ್ತಿದ್ದರು. ವೇದಿಕೆ ಮೇಲೆಯೇ ಕುಸಿದು ಬಿದ್ದ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ, ಅವರು ಕೊನೆಯುಸಿರೆಳೆದಿದ್ದರು.
ವಿಶ್ವದಾದ್ಯಂತ ಇರುವ ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಬದ್ಧತೆಗಳನ್ನು ಗೌರವಿಸಲು ಅಕ್ಟೋಬರ್ 15ರಂದು 'ವಿಶ್ವ ವಿದ್ಯಾರ್ಥಿಗಳ ದಿನ'ವನ್ನು ಆಚರಣೆ ಮಾಡಲಾಗುತ್ತದೆ. ಅಬ್ದುಲ್ ಕಲಾಂ ಅವರನ್ನು ನೆನೆಪು ಮಾಡಿಕೊಳ್ಳಲಾಗುತ್ತದೆ.
ಹಲವಾರು ಪುಸ್ತಕಗಳನ್ನು ಬರೆದಿರುವ ಅಬ್ದುಲ್ ಕಲಾಂ ಭಾರತ ರತ್ನ, ಪದ್ಮಭೂಷಣ, ಪದ್ಮ ವಿಭೂಷಣ, ವೀರ ಸಾವರ್ಕರ್, ರಾಮಾನುಜಂ ಸೇರಿದಂತೆ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಭಾರತೀಯರು ಪ್ರೀತಿಯಿಂದ ಅವರನ್ನು 'ಮಿಸೈಲ್ ಮ್ಯಾನ್ ಆಫ್ ಇಂಡಿಯಾ' ಎಂದು ಕರೆಯುತ್ತಾರೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ಅವರ ಸಾಧನೆಯನ್ನು ಪರಿಗಣಿಸಿ ಹೀಗೆ ಕರೆಯಲಾಗುತ್ತದೆ.












Click it and Unblock the Notifications