ದಾಂತೇವಾಡದ ನಮ್ರತಾ ಜೈನ್ ಸಿವಿಲ್ ಪರೀಕ್ಷೆ ಸಾಧನೆ ಸಾಮಾನ್ಯದ್ದಲ್ಲ
ವಾರದ ಹಿಂದಷ್ಟೇ ಅಖಿಲ ಭಾರತ ಮಟ್ಟದ ನಾಗರಿಕ ಸೇವಾ ಪರೀಕ್ಷೆಗಳ ಅಂತಿಮ ಫಲಿತಾಂಶ ಬಂದಿದೆ. ಅದರಲ್ಲಿ ಹನ್ನೆರಡನೇ ಸ್ಥಾನ ಪಡೆದ ನಮ್ರತಾ ಜೈನ್ ಸುದ್ದಿಯ ಕೇಂದ್ರ ಬಿಂದು ಆಗಿದ್ದಾರೆ. ಇಪ್ಪತ್ತೈದು ವರ್ಷದ ನಮ್ರತಾ ಛತ್ತೀಸ್ ಗಢದ ದಾಂತೇವಾಡ ಜಿಲ್ಲೆಯವರು. ಹೌದು, ನಕ್ಸಲ್ ಪೀಡಿತ ಪ್ರದೇಶ ಎಂದು ಇಡೀ ದೇಶದಲ್ಲೇ ಕುಖ್ಯಾತಿ ಪಡೆದಿರುವ ಅದೇ ದಾಂತೇವಾಡ ಇದು.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ನಮ್ರತಾ ಜೈನ್ ಅವರು ದಾಂತೇವಾಡದ ಗೀಡಂ ಪಟ್ಟಣದವರು. ಮೂರು ವರ್ಷಗಳ ಹಿಂದೆ ಇದೇ ನಮ್ರತಾ ನಾಗರಿಕ ಸೇವಾ ಪರೀಕ್ಷೆಯಲ್ಲಿ ತೊಂಬತ್ತೊಂಬತ್ತನೇ ಸ್ಥಾನ ಪಡೆದಿದ್ದರು. ಭಾರತೀಯ ಪೊಲೀಸ್ ಸೇವೆಗೆ ಆಯ್ಕೆಯಾಗಿ, ಹೈದರಾಬಾದ್ ನಲ್ಲಿ ಇರುವ ಸರ್ದಾರ್ ವಲ್ಲಭ ಭಾಯ್ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ನನಗೆ ಕಲೆಕ್ಟರ್ ಆಗಬೇಕು ಎಂಬ ಅಪೇಕ್ಷೆ ಇತ್ತು. ನಾನು ಎಂಟನೇ ಕ್ಲಾಸ್ ನಲ್ಲಿ ಇರುವಾಗ ಮಹಿಳಾ ಅಧಿಕಾರಿಯೊಬ್ಬರು ನನ್ನ ಶಾಲೆಗೆ ಬಂದಿದ್ದರು. ಆ ಮೇಲೆ ನನಗೆ ಗೊತ್ತಾಯಿತು ಅವರು ಕಲೆಕ್ಟರ್ ಎಂಬ ಸಂಗತಿ. ಆಕೆಯಿಂದ ಸ್ಫೂರ್ತಿಗೊಂಡಿದ್ದೆ. ಆ ಸಮಯದಲ್ಲೇ ನಾನು ಕಲೆಕ್ಟರ್ ಆಗಬೇಕು ಎಂದು ತೀರ್ಮಾನಿಸಿದೆ ಎನ್ನುತ್ತಾರೆ ನಮ್ರತಾ ಜೈನ್.

ನಕ್ಸಲ್ ಪೀಡಿತ ಪ್ರದೇಶವಾದ ತವರು ಜಿಲ್ಲೆಯಲ್ಲಿ ಪೊಲೀಸ್ ಠಾಣೆಯನ್ನು ನಕ್ಸಲರು ಸ್ಫೋಟಿಸಿದ್ದರು. ಆ ಘಟನೆಯ ನಂತರ ನಾಗರಿಕ ಸೇವೆ ಸೇರಲು ನಿರ್ಧರಿಸಿದೆ. ಬಡವರ ಸೇವೆಗೆ ಹಾಗೂ ಮಾವೋವಾದಿಗಳ ಪ್ರಭಾವ ಇರುವ ಪ್ರದೇಶದ ಅಭಿವೃದ್ಧಿ ಮಾಡುವ ಸಲುವಾಗಿ ಐಎ ಎಸ್ ಆಗಬೇಕು ಎಂದು ಬಯಸಿದ್ದೆ ಎನ್ನುತ್ತಾರೆ.
ನಾನು ಬಂದಿರುವ ಪ್ರದೇಶವು ನಕ್ಸಲಿಸಂನಿಂದ ತೊಂದರೆಗೊಳಗಾಗಿದೆ. ಅಲ್ಲಿನ ಜನಕ್ಕೆ ಶಿಕ್ಷಣ ಸೇರಿದಂತೆ ಕೆಲವು ಪ್ರಾಥಮಿಕ ವ್ಯವಸ್ಥೆಗಳಿಲ್ಲ. ನನ್ನ ರಾಜ್ಯದ ಜನರಿಗೆ ಸೇವೆ ಸಲ್ಲಿಸಲು ಬಯಸುತ್ತೇನೆ. ಈ ಸಲ ಐಎಎಸ್ ಗೆ ಆಯ್ಕೆ ಆಗುವ ನಂಬಿಕೆ ಇದೆ ಎಂದು ನಮ್ರತಾ ಜೈನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ನಮ್ರತಾ ಜೈನ್ ರ ತಂದೆ ಸ್ಥಳೀಯ ವ್ಯಾಪಾರಿ. ತಾಯಿ ಗೃಹಿಣಿ. ಸಹೋದರ ಚಾರ್ಟರ್ಡ್ ಅಕೌಂಟೆಂಟ್ ಆಗಲು ವ್ಯಾಸಂಗ ಮಾಡುತ್ತಿದ್ದಾರೆ. ನಮ್ರತಾ ಹತ್ತನೇ ತರಗತಿ ತನಕ ದಾಂತೇವಾಡದಲ್ಲಿ ಓದಿದ್ದಾರೆ. ಆ ನಂತರ ಛತ್ತೀಸ್ ಗಢದ ಭಿಲಾಯ್ ನಲ್ಲಿ ಎಂಜಿನಿಯರಿಂಗ್ ಪೂರ್ಣಗೊಳಿಸಿದ್ದಾರೆ. ಒಟ್ಟಾರೆ 759 ಅಭ್ಯರ್ಥಿಗಳು ಸರಕಾರದ ವಿವಿಧ ಸೇವೆಗಳಿಗೆ ಆಯ್ಕೆಯಾಗಿದ್ದಾರೆ. 2018ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಐಐಟಿ-ಬಾಂಬೆಯ ಬಿ.ಟೆಕ್., ಪದವೀಧರ ಕನಿಷಕ್ ಕಟಾರಿಯಾ ಮೊದಲ ಸ್ಥಾನ ಪಡೆದಿದ್ದಾರೆ.












Click it and Unblock the Notifications