ಸಾಲದ ದಿನಗಳಿಂದ ಸೋಲದ ದಿನಗಳವರೆಗೆ ಅಂಕಿತ ಪ್ರಕಾಶನದ 'ಪ್ರಭಾ'ವಳಿ
Recommended Video

"ನಾವು ಕನ್ನಡ ಉಳಿಸಬೇಕಿದೆ, ಓದುವ ಸಂಸ್ಕೃತಿ ಉಳಿಸಬೇಕಿದೆ, ಓದುವ ಹವ್ಯಾಸ ಹೆಚ್ಚಿಸಬೇಕಿದೆ. ಈ ಮಾತುಗಳೆಲ್ಲ ಬರೀ ಹೇಳಿಕೆ ಆಗಬಾರದು. ಎಲ್ಲರೂ ಪ್ರಯತ್ನ ಮಾಡದಿದ್ದರೆ ನಾವು ಬಹಳ ಕಳೆದುಕೊಳ್ತೀವಿ" ಎಂದು ಒಂದು ಕ್ಷಣ ಮೌನವಾದರು ಎನ್.ಪ್ರಭಾ. ಅಂಕಿತಾ ಪ್ರಕಾಶನ ಹಾಗೂ ಪುಸ್ತಕ ಮಳಿಗೆಯ ಮಾಲೀಕರಾದ ಪ್ರಕಾಶ್ ಕಂಬತ್ತಳ್ಳಿ ಅವರ ಪತ್ನಿ ಪ್ರಭಾ.
ರಾಶಿ-ರಾಶಿ ಪುಸ್ತಕದ ಮುಂದೆ ನಿಂತ ಪ್ರಭಾ ಅವರನ್ನು ನೋಡುತ್ತಿದ್ದರೆ ಪುಸ್ತಕ ಮಾರಾಟ- ಪ್ರಕಾಶನ, ಜೀವನಾನುಭವದ ಸಾವಿರ ಘಟನೆಗಳನ್ನು ಹೆಕ್ಕಿ ಮುಂದಿಡುವ ಮತ್ತೊಂದು ದೊಡ್ಡ ಪುಸ್ತಕದಂತೆಯೇ ಕಾಣುತ್ತಾರೆ.
ಬೆಂಗಳೂರಿನ ಗಾಂಧೀಬಜಾರಿಗೆ ಅಲ್ಲಿನ ಹೂವು, ವಿದ್ಯಾರ್ಥಿ ಭವನ, ಗ್ರಂಥಿಗೆ ಅಂಗಡಿ ಹೇಗೆ ಒಂದು ಸೌಂದರ್ಯ- ಗುರುತನ್ನು ತಂದುಕೊಟ್ಟಿದೆಯೋ ಅದೇ ರೀತಿ ಅಂಕಿತ ಪುಸ್ತಕ ಮಳಿಗೆ ಕೂಡ ಹೆಗ್ಗುರುತು. ಅಂಥ ಅಂಕಿತ ಪುಸ್ತಕ ಮಳಿಗೆಯಲ್ಲಿ ಹತ್ತೊಂಬತ್ತು ವರ್ಷಗಳ ಕಾಲ ತಪಸ್ಸಿನಂತೆ ಕಳೆದವರು ಪ್ರಭಾ.
ಮಳಿಗೆಯಲ್ಲಿನ ಕೆಲಸಕ್ಕೆ ಜವಾಬ್ದಾರಿ ಮುಗಿಯಿತು ಅಂತಲ್ಲ. ಆ ನಂತರ ಮನೆಯಲ್ಲಿ ಅಂಕಿತ ಪ್ರಕಾಶನದ ಕೆಲಸ ಶುರುವಾಗುತ್ತದೆ. ಪ್ರೂಫ್ ರೀಡಿಂಗ್, ಕಾಪಿ ಎಡಿಟಿಂಗ್, ಕವರ್ ಪೇಜ್...ಹೀಗೆ ಪ್ರಕಾಶನ ಹಾಗೂ ಮಾರಾಟದಲ್ಲಿ ಬಹು ಪಾತ್ರಗಳನ್ನು ನಿರ್ವಹಿಸುತ್ತಿರುವ ಪ್ರಭಾ ಅವರು ನಮ್ಮ ಈ ವಾರದ ಸಾಧಕಿ.
ಪ್ರಭಾ ಅವರ ಮೂಲ ಊರು, ವಿದ್ಯಾಭ್ಯಾಸ, ಮದುವೆ, ಪ್ರಕಾಶನ ಸಂಸ್ಥೆ, ಮಳಿಗೆ, ಕನ್ನಡ ಪುಸ್ತಕೋದ್ಯಮ, ಇಲ್ಲಿನ ಸವಾಲು, ಭವಿಷ್ಯ ಇತರ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಮುಂದೆ ಓದಿ.

1995ರಲ್ಲಿ ನಮ್ಮದೇ ಪ್ರಕಾಶನ
ನನ್ನ ತಂದೆಯವರು ಕೋಲಾರದವರು. ಹೆಸರು ನರಸಿಂಹ ರಾವ್. ತಾತ ಸ್ವಾತಂತ್ರ್ಯ ಹೋರಾಟಗಾರರು. ನಾನು ಕನ್ನಡ ಎಂ.ಎ ಮಾಡಿದ್ದೀನಿ. ನಮ್ಮದು ಪ್ರೇಮ ವಿವಾಹ. ಅದರೊಳಗೆ ಕನ್ನಡ ಪ್ರೀತಿ, ಪುಸ್ತಕ ಪ್ರೀತಿ ಎಲ್ಲ ಸೇರಿದೆ. 1982ರಲ್ಲಿ ನಮ್ಮ ಮದುವೆಯಾಯಿತು. ಪ್ರಕಾಶ್ ಎನ್ ಜಿಇಎಫ್ ನಲ್ಲಿ ಕೆಲಸದಲ್ಲಿದ್ದರು. ಅಲ್ಲಿ ಬಿಟ್ಟ ನಂತರ ಕೆಲ ಕಾಲ ಕನ್ನಡ ವಿವಿಯಲ್ಲಿ ಕೆಲಸ ಮಾಡಿದರು. ನಾನೂ ಉಪನ್ಯಾಸಕಿಯಾಗಿ ವಿವಿಧ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸಿದ್ದೀನಿ. 1995ರಲ್ಲಿ ನಮ್ಮದೇ ಪ್ರಕಾಶನ ಆರಂಭಿಸಬೇಕು ಅಂತ ನಿರ್ಧಾರ ಮಾಡಿದಿವಿ.

ಸ್ವಂತ ಮಳಿಗೆ ಮಾಡುವ ಆಲೋಚನೆ
ಪ್ರಕಾಶನ ಚೆನ್ನಾಗಿ ನಡೆಯುತ್ತಿದೆ ಅಂದಾಗ 1998ರಲ್ಲಿ ಸ್ವಂತ ಪುಸ್ತಕ ಮಾರಾಟ ಮಳಿಗೆ ಮಾಡಬೇಕು ಅಂದುಕೊಂಡ್ವಿ. ಇದೇ ಗಾಂಧೀಬಜಾರಿನ ರಸ್ತೆಯಲ್ಲೇ ಮಹಡಿ ಮೇಲೆ ಅಂಗಡಿ ಮಾಡಿದಿವಿ. ಪುಸ್ತಕ ಮಾರಾಟದ ಪ್ರಚಾರ ಇರಲಿ, ಅಂಗಡಿ ಇಲ್ಲಿದೆ ಅಂತ ಜನರಿಗೆ ಪ್ರಚಾರ ಮಾಡಬೇಕಾದ ಸ್ಥಿತಿಗೆ ಬಂದುಬಿಟ್ವಿ.

ಹೊಸ ಅಂಗಡಿಯಲ್ಲೂ ಸಂಕಷ್ಟ
ಈಗಿರುವ ಅಂಗಡಿಗೆ ಸ್ಥಳಾಂತರ ಆದ ಮೇಲೂ ನಾವು ಸಾಕಷ್ಟು ಸಂಕಷ್ಟ ಅನುಭವಿಸಿದ್ದೀವಿ. ಅಂಗಡಿಯೊಳಗೆಲ್ಲ ಮಳೆ ನೀರು ನುಗ್ಗುತ್ತಿತ್ತು. ಪುಸ್ತಕಗಳೆಲ್ಲ ನೀರಿಗೆ ಹಾಳಾಗುತ್ತಿತ್ತು. ಆದರೂ ನಮಗೆ ಕನ್ನಡ ಪುಸ್ತಕಗಳು ಜೀವನ ನಡೆಸುವುದಕ್ಕೆ ದಾರಿ ಆಗುವುದರಲ್ಲಿ ಯಾವುದೇ ಅನುಮಾನ ಇರಲಿಲ್ಲ.

ಆರಂಭಿಸಿದ್ದು ಹೊಟ್ಟೆಪಾಡಿಗಾಗಿಯೇ
ವರ್ಷಗಳ ಕಾಲ ಸಾಲದಲ್ಲೇ ಅಂಗಡಿ ನಡೆಸಿದ್ದೀವಿ. ನಾವು ಈ ಎಲ್ಲವನ್ನೂ ಆರಂಭಿಸಿದ್ದು ಹೊಟ್ಟೆಪಾಡಿಗಾಗಿಯೇ. ಆದರೆ ನಮ್ಮ ಪುಸ್ತಕ- ಕನ್ನಡ ಪ್ರೀತಿ ಇಲ್ಲಿವರೆಗೆ ಕರೆದುಕೊಂಡು ಬಂದಿದೆ. ಈ ವರೆಗೆ ಏಳುನೂರಕ್ಕೂ ಹೆಚ್ಚು ಪುಸ್ತಕದ ಪ್ರಕಟಣೆ ಮಾಡಿದ್ದೀವಿ. ಇನ್ನು ನಾನು ವಿಜ್ಞಾನ ಲೇಖನಗಳು ಸೇರಿದಂತೆ ಕೆಲವು ಅನುವಾದಗಳನ್ನು ಮಾಡಿದ್ದೀನಿ.

ಆರ್ಥಿಕ ಚೇತರಿಕೆ
ಸಿದ್ದಲಿಂಗಯ್ಯ ಅವರ ಊರು-ಕೇರಿ, ಜಯಂತ ಕಾಯ್ಕಿಣಿ ಪುಸ್ತಕಗಳು, ಚಂದ್ರಶೇಖರ ಕಂಬಾರ, ಕೆ.ಎನ್.ಗಣೇಶಯ್ಯ, ಜೋಗಿ ಇತರ ಲೇಖಕರ ಪುಸ್ತಕಗಳ ಪ್ರಕಟಣೆಯಿಂದ ಆರ್ಥಿಕವಾಗಿ ಒಂದಿಷ್ಟು ಚೇತರಿಕೆ ಕಂಡುಕೊಂಡೆವು. ಇನ್ನು ವಿಜಯ ಕರ್ನಾಟಕ, ಕನ್ನಡ ಪ್ರಭ, ಪ್ರಜಾವಾಣಿಯಂಥ ಪತ್ರಿಕೆಗಳು ನಮ್ಮ ಹೊಸ ಸಾಹಸಗಳಿಗೆ ಜತೆಯಾಗಿ ನಿಂತವು.

ಓದುಗರ ಮಧ್ಯೆ ಗೋಡೆ ನಿರ್ಮಾಣ
ಇತ್ತೀಚೆಗೆ ಜಾತಿ, ಧರ್ಮ, ಸಿದ್ಧಾಂತದ ಆಧಾರದಲ್ಲಿ ಓದುಗರ ಮಧ್ಯೆಯೇ ಗೋಡೆಗಳ ನಿರ್ಮಾಣವಾಗುತ್ತಿವೆ. ಈಗಿನ ತಲೆಮಾರಿಗೆ ಓದುವ ಹವ್ಯಾಸವೇ ಕಡಿಮೆ ಆಗುತ್ತಿದೆ. ಕಳೆದ ಎರಡ್ಮೂರು ವರ್ಷಗಳ ರಾಜ್ಯೋತ್ಸವಕ್ಕೆ ಹೋಲಿಸಿದರೆ ಈ ಬಾರಿಯ ರಾಜ್ಯೋತ್ಸವದಲ್ಲಿ ಪುಸ್ತಕ ಮಾರಾಟ ತೀರಾ ಕುಸಿದಿದೆ.

ಅಂಗಡಿ ಒಳಗಿನ ಕೆಲಸ ನನ್ನದು- ಹೊರಗಿನದು ಪ್ರಕಾಶ್ ನೋಡ್ತಾರೆ
ಅಂಗಡಿ ಒಳಗಿನ ಕೆಲಸ ನನ್ನದು ಹಾಗೂ ಹೊರಗಿನ ಕೆಲಸ ಪ್ರಕಾಶ್ ಅವರದು ಎಂದು ಹಂಚಿಕೊಂಡಿದ್ದೀವಿ. ಯಾವುದೇ ಪುಸ್ತಕದ ಪ್ರೂಫ್ ನಾನೇ ನೋಡ್ತೀನಿ. ಪುಸ್ತಕಗಳ ಆಯ್ಕೆ, ಕವರ್ ಪೇಜ್ ಆಯ್ಕೆ, ಅಂಗಡಿಯಲ್ಲಿ ಬಂದು ನೋಡಿಕೊಳ್ತೀನಿ...ಹೀಗೆ ಜವಾಬ್ದಾರಿ ದಿನವಿಡೀ ಮುಂದುವರಿಯುತ್ತದೆ. ಆದರೆ ಇವೆಲ್ಲ ನನ್ನ ಪಾಲಿಗೆ ಎಂದೂ ಹೊರೆ ಅನಿಸಿಲ್ಲ.

ತಕ್ಷಣದ ಕುತೂಹಲ ತಣಿದರೆ ಆಯಿತು
ಇತ್ತೀಚೆಗೆ ಯಾವುದೇ ಪುಸ್ತಕದ ವಿವಾದಿತ ಅಂಶವೇ ಹೆಚ್ಚು ಹೈಲೈಟ್ ಆಗುತ್ತದೆ. ಮಾಜಿ ಸಚಿವ ಎಚ್.ವಿಶ್ವನಾಥ್ ರ ಹಳ್ಳಿ ಹಕ್ಕಿಯ ಹಾಡು ಪುಸ್ತಕದ ಸಣ್ಣ ಅಂಶವೊಂದನ್ನು ದೊಡ್ಡದು ಮಾಡಿ, ಮಾಧ್ಯಮಗಳಲ್ಲಿ ಪ್ರಚಾರ ಸಿಕ್ಕಿತು. ಆದರೆ ಒಬ್ಬ ಹಳ್ಳಿಗಾಡಿನ ವ್ಯಕ್ತಿ ಸಚಿವ ಸ್ಥಾನಕ್ಕೆ ಏರುವ ಮಟ್ಟಕ್ಕೆ ಮಾಡಿದ ಸಾಧನೆಯೇ ಗೌಣವಾಯಿತು. ಇಂಥ ಅನೇಕ ಉದಾಹರಣೆ ಇದೆ. ಓದುಗರು ತಕ್ಷಣದ ಕುತೂಹಲ ತಣಿದರೆ ಸಾಕು ಎಂಬ ಮನಸ್ಥಿತಿ ತಲುಪಿದರಾ ಎಂದು ಬೇಸರವಾಗುತ್ತದೆ.

ಹೊಸ ಪುಸ್ತಕ ಪರಿಚಯ ಮಾಡಿಕೊಡುವ ಪರಿಪಾಠವೇ ಕಾಣೆ
ವಿದೇಶಗಳಲ್ಲಿ ಹೊಸ ಪುಸ್ತಕ ಪರಿಚಯವನ್ನು ಪ್ರಮುಖ ದಿನ ಪತ್ರಿಕೆಗಳಲ್ಲಿ, ಟಿವಿಗಳಲ್ಲಿ ಮಾಡುತ್ತಾರೆ. ನಮ್ಮಲ್ಲಂತೂ ಇತ್ತೀಚೆಗೆ ಪುಸ್ತಕ ಬಿಡುಗಡೆಯ ಸುದ್ದಿ ಕೂಡ ಪ್ರಕಟವಾಗುವುದಿಲ್ಲ. ಪ್ರಜಾವಾಣಿಯಂಥ ಪತ್ರಿಕೆಯಲ್ಲಿ ಹೊಸ ಪುಸ್ತಕಗಳ ಪರಿಚಯ ಎಂಬುದು ಮೂರ್ನಾಲ್ಕು ವಾರದಿಂದ ಪ್ರಕಟವೇ ಆಗಿಲ್ಲ. ಇಂತಹ ಸ್ಥಿತಿಯಲ್ಲೂ ನಾವು ಭರವಸೆ ಕಳೆದುಕೊಂಡಿಲ್ಲ.
-
Hindi Language: ಹಿಂದಿ ಭಾಷೆ ರದ್ದು, ಎಸ್ಎಸ್ಎಲ್ಸಿ ಮಕ್ಕಳ ಬದುಕಿಗೆ ಕಲ್ಲು:ಆರ್ ಅಶೋಕ್ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Karnataka Rains: ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಿಗೆ ಮುಂದಿನ ಮೂರು ಗಂಟೆಗಳಲ್ಲಿ ಭಾರೀ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
ಪಾರದರ್ಶಕ ನೇಮಕಾತಿಗಾಗಿ ಪ್ರತಿಷ್ಠಿತ 'ಸ್ಕಾಚ್ ರಾಷ್ಟ್ರೀಯ ಪ್ರಶಸ್ತಿ' ಮುಡಿಗೇರಿಸಿಕೊಂಡ KSRTC -
ಕನ್ನಡತಿ ಶ್ರೇಯಾಂಕಾ ಪಾಟೀಲ್, ಮಂಧಾನ ಜೊತೆ ಆರ್ಸಿಬಿ ಪಂದ್ಯ ವೀಕ್ಷಣೆ: ಕ್ರೀಡಾ ಸ್ಪೂರ್ತಿ ಮೆರೆದ ಜೆಮಿಮಾ ರೊಡ್ರಿಗಸ್ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು












Click it and Unblock the Notifications