ಸಾಮ್ರಾಟ್ ಅಶೋಕ್ ಅವರಿಗಿರುವ ಪವರ್ರಿಗೆ, ಬಿಜೆಪಿ ವಲಸಿಗರ ಟಾರ್ಚರ್!

ರಾಜ್ಯ ಬಿಜೆಪಿ ಅಧ್ಯಕ್ಷ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮತ್ತೊಮ್ಮೆ ಕರ್ನಾಟಕದ ಮುಖ್ಯಮಂತ್ರಿಯಾಗಲು ಹಪಹಪಿಸುತ್ತಿದ್ದಾರೆ. ಆದರೆ ಗುರಿ ತಲುಪಲು ಅಗತ್ಯವಾದ ಸೇನಾಧಿಪತಿಯೊಬ್ಬರನ್ನು ಪಕ್ಷದ ಒಳಗಿನವರೇ ಮುಗಿಸಲು ಹೊರಟಿರುವುದನ್ನು ಕಂಡು ದಂಗಾಗಿದ್ದಾರೆ.

ಪರಿಣಾಮ? ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೂರಾ ನಾಲ್ಕರಷ್ಟು ಸೀಟುಗಳನ್ನು ಗೆದ್ದರೂ, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಪದಚ್ಯುತಗೊಂಡರೆ ಅಧಿಕಾರ ಹಿಡಿಯುವ ಶಕ್ತಿ ಬಿಜೆಪಿಗಿದ್ದರೂ, ಈ ಅಂತಃಕಲಹದ ಪರಿಣಾಮವಾಗಿ ಮುಂದಿನ ಕೆಲವೇ ದಿನಗಳಲ್ಲಿ ಅದರ ಶಕ್ತಿಯ ದೊಡ್ಡ ಪಾಲನ್ನು ಜೆಡಿಎಸ್ ಕಸಿಯುವ ಲಕ್ಷಣಗಳು ಕಾಣುತ್ತಿವೆ.

ಅಂದ ಹಾಗೆ ಜೆಡಿಎಸ್ ವರಿಷ್ಠರಾದ ದೇವೇಗೌಡ ಮತ್ತು ಕುಮಾರಸ್ವಾಮಿ ಅವರು ಕೇವಲ ಕಾಂಗ್ರೆಸ್ ಪಕ್ಷದ ಶಕ್ತಿಯನ್ನು ಕುಗ್ಗಿಸಲು ಬಯಸುತ್ತಿಲ್ಲ. ಬದಲಿಗೆ ಬಿಜೆಪಿಯ ಶಕ್ತಿಯನ್ನೂ ಕುಗ್ಗಿಸಲು ಬಯಸುತ್ತಿದ್ದಾರೆ. ಅದವರಿಗೆ ಅನಿವಾರ್ಯ ಕೂಡಾ.

ಯಾಕೆಂದರೆ ಕೇವಲ ಕಾಂಗ್ರೆಸ್ ಪಕ್ಷದ ಶಕ್ತಿಯನ್ನು ಕುಗ್ಗಿಸಿದರೆ ಅದರ ಲಾಭ ಕೇವಲ ಜೆಡಿಎಸ್ ಪಕ್ಷಕ್ಕೆ ಸಿಗುವುದಿಲ್ಲ. ಜೊತೆಗೆ ಬಿಜೆಪಿಗೂ ದಕ್ಕುತ್ತದೆ. ಈಗ ಇರುವ ಶಕ್ತಿಯ ಜತೆ ಕಾಂಗ್ರೆಸ್ ದುರ್ಬಲಗೊಂಡರೆ ದಕ್ಕುವ ಶಕ್ತಿ ಸೇರಿದರೆ ಅದು ನಿರಾತಂಕವಾಗಿ ಪವರ್ ಫುಲ್ ಆಗುತ್ತದೆ.

ರಾಜಧಾನಿಯಲ್ಲಿ ಅಶೋಕ್ ಬಿಗಿ ಹಿಡಿತ

ರಾಜಧಾನಿಯಲ್ಲಿ ಅಶೋಕ್ ಬಿಗಿ ಹಿಡಿತ

ಯಡಿಯೂರಪ್ಪ ಮತ್ತು ಬಿಜೆಪಿಯ ಕೇಂದ್ರ ನಾಯಕರ ಲೆಕ್ಕಾಚಾರಕ್ಕೆ ಕಮಲ ಪಾಳೆಯದ ಹಲವರು ಹೊಡೆತ ಹಾಕುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಮೂಲ ಕಾಂಗ್ರೆಸ್ಸಿಗರು, ವಲಸಿಗ ಕಾಂಗ್ರೆಸ್ಸಿಗರು ಎಂಬ ಬಣಗಳಿದ್ದರೆ, ಬಿಜೆಪಿಯಲ್ಲಿ ಮೂಲ ಬೆಂಗಳೂರಿಗರು, ವಲಸಿಗ ಬೆಂಗಳೂರಿಗರು ಎಂಬ ಬಣವಿರುವುದು ಅನೇಕರಿಗೆ ಗೊತ್ತಿಲ್ಲ.

ಮೂಲ ಬೆಂಗಳೂರಿನ ನಾಯಕ, ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್. ಬೆಂಗಳೂರಿನ ಒಕ್ಕಲಿಗರ ಅನಭಿಷಿಕ್ತ ನಾಯಕ. ಒಂದು ಕಾಲದಲ್ಲಿ ಬಿಜೆಪಿಗೆ ಯಾವ ಜಾತಿಯ ಶಕ್ತಿಗಳ ಬೆಂಬಲವೂ ಇರಲಿಲ್ಲ. ಹೀಗಾಗಿ ಅದು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಲು ಪರದಾಡಬೇಕಿತ್ತು. ಆದರೆ ಯಡಿಯೂರಪ್ಪ ಅವರ ಮೂಲಕ ಲಿಂಗಾಯತ ಶಕ್ತಿ ಬಿಜೆಪಿಯ ಬೆನ್ನೆಲುಬಾಗಿದೆ.

ಅದೇ ರೀತಿ ಜೆಡಿಎಸ್ ಪಕ್ಷದ ವಿರುದ್ಧ ನಿಂತಿರುವ ಒಕ್ಕಲಿಗ ಸಮುದಾಯವನ್ನು ಕ್ಯಾಪ್ಚರ್ ಮಾಡಿದವರು ಆರ್. ಅಶೋಕ್. ಹೀಗಾಗಿ ಯಡಿಯೂರಪ್ಪ ಅವರು ಬೆಂಗಳೂರಿನ ಹೊರಗೆ ಪಕ್ಷವನ್ನು ಬಲಿಷ್ಠಗೊಳಿಸಿದರೆ, ರಾಜಧಾನಿಯ ರಾಜಕೀಯದ ಮೇಲೆ ಅಶೋಕ್ ಹಿಡಿತ ಹೊಂದಿದ್ದಾರೆ.

ಅನಂತ್ ಗೆಲ್ಲಿಸುವ ಜವಾಬ್ದಾರಿ ಅಶೋಕ್ ಮೇಲಿತ್ತು

ಅನಂತ್ ಗೆಲ್ಲಿಸುವ ಜವಾಬ್ದಾರಿ ಅಶೋಕ್ ಮೇಲಿತ್ತು

2009ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಕಮಲ ಪಾಳೆಯದ ರಾಷ್ಟ್ರೀಯ ನಾಯಕರು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅನಂತ್ ಕುಮಾರ್ ಅವರನ್ನು ಗೆಲ್ಲಿಸುವ ಹೊಣೆಗಾರಿಕೆಯನ್ನು ಅಶೋಕ್ ಮೇಲೆ ಹೊರಿಸಿದ್ದರು. ಕಳೆದ ಚುನಾವಣೆಯಲ್ಲೂ, ಅಂದರೆ 2014ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೂ ಈ ಹೊಣೆಗಾರಿಕೆ ಆರ್ ಅಶೋಕ್ ಅವರ ಹೆಗಲ ಮೇಲೇರಿತ್ತು.

ಇದನ್ನು ಅಶೋಕ್ ಸಮರ್ಥವಾಗಿ ನಿರ್ವಹಿಸಿದರು. ಅನಂತ್ ಕುಮಾರ್ ಅವರು ಬೆಂಗಳೂರು ದಕ್ಷಿಣ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಸತತವಾಗಿ ಗೆಲ್ಲಲು ಕಾರಣರಾದರು. ಯಾರೇನೇ ಹೇಳಿದರೂ ಜೆಡಿಎಸ್ ಪಾಳೆಯಕ್ಕೆ ಹೋಗದ ಒಕ್ಕಲಿಗ ಮತ ಬ್ಯಾಂಕ್ ಬಿಜೆಪಿಯ ಜತೆ ಗುರುತಿಸಿಕೊಳ್ಳಲು ಕಾರಣರಾದವರೇ ಅಶೋಕ್. ಗಂಗಟಕಾರ ಒಕ್ಕಲಿಗರ ಮೇಲೆ ದೇವೇಗೌಡರ ಕುಟುಂಬಕ್ಕೆ ಹಿಡಿತವಿದ್ದರೆ, ದಾಸ ಒಕ್ಕಲಿಗರು ಸೇರಿದಂತೆ ಕೆಲ ಒಳ ಸಮುದಾಯಗಳು ಬಿಜೆಪಿ ಜತೆಗಿವೆ.

ಮುಖ್ಯಮಂತ್ರಿ ಪಟ್ಟಕ್ಕೂ ಏರಬಹುದು ಅಶೋಕ್

ಮುಖ್ಯಮಂತ್ರಿ ಪಟ್ಟಕ್ಕೂ ಏರಬಹುದು ಅಶೋಕ್

ಹೀಗೆ ದಾಸ ಒಕ್ಕಲಿಗರು ಸೇರಿದಂತೆ ಒಳ ಸಮುದಾಯದವರು ಬಿಜೆಪಿ ಜತೆ ನಿಲ್ಲಲು ಮುಖ್ಯ ಕಾರಣರಾದವರು ಅಶೋಕ್. ಈ ಕಾರಣಕ್ಕಾಗಿಯೇ ಅವರಿಗೆ ಜಗದೀಶ್ ಶೆಟ್ಟರ್ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ವರಿಷ್ಠರು ಅಶೋಕ್ ಅವರಿಗೆ ಉಪ ಮುಖ್ಯಮಂತ್ರಿ ಪಟ್ಟವನ್ನು ಕೊಟ್ಟು ಈ ವೋಟ್ ಬ್ಯಾಂಕ್ ಅನ್ನು ಗಟ್ಟಿಗೊಳಿಸಿದ್ದರು.

ಈಗಲೂ ಈ ವೋಟ್ ಬ್ಯಾಂಕ್ ಬಿಜೆಪಿಯ ಜತೆ ಗಟ್ಟಿಯಾಗಿ ನಿಂತಿದೆ. ಆದರೆ ಈ ವೋಟ್ ಬ್ಯಾಂಕ್ ಮೇಲೆ ಹಿಡಿತ ಸಾಧಿಸಿದ ಅಶೋಕ್ ಅವರು 'ಸಾಮ್ರಾಟ್' ಎಂಬ ಅಲಿಖಿತ ಬಿರುದಿಗೆ ಪಾತ್ರರಾಗುತ್ತಿದ್ದಂತೆಯೇ, ರಾಜಕೀಯಕ್ಕಾಗಿ ರಾಜಧಾನಿಗೆ ಹೊರ ಜಿಲ್ಲೆಗಳಿಂದ ಬಂದಿರುವ ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಸೇರಿದಂತೆ ಹಲ ಒಕ್ಕಲಿಗ ನಾಯಕರು, ಕೆಲ ಇತರ ಸಮುದಾಯಗಳ ನಾಯಕರಿಗೆ ಸಂಕಟ ಶುರುವಾಯಿತು.

ಅಶೋಕ್ ಒಕ್ಕಲಿಗ ನಾಯಕರಾಗಿ ಉಳಿದುಕೊಂಡರೆ ಮುಂದಿನ ದಿನಗಳಲ್ಲಿ ಪಕ್ಷ ಮರಳಿ ಅಧಿಕಾರಕ್ಕೆ ಬಂದಾಗ ಏನಾಗುತ್ತದೆ? ಸಹಜವಾಗಿಯೇ ಅವರು ಮತ್ತೆ ಉಪಮುಖ್ಯಮಂತ್ರಿಯಾಗುತ್ತಾರೆ. ಲಕ್ಕು ಕುದುರಿದರೆ ಆರ್ ಅಶೋಕ್ ಅವರು ಮುಖ್ಯಮಂತ್ರಿ ಪಟ್ಟಕ್ಕೂ ಏರಬಹುದು.

ಸಂಘ ಪರಿವಾರಕ್ಕೆ ಅಶೋಕ್ ಮೇಲೆ ನಂಬಿಕೆ ಹೆಚ್ಚು

ಸಂಘ ಪರಿವಾರಕ್ಕೆ ಅಶೋಕ್ ಮೇಲೆ ನಂಬಿಕೆ ಹೆಚ್ಚು

ಆದರೆ ಬಿಜೆಪಿ ಮತ್ತು ಕರ್ನಾಟಕದಲ್ಲಿ ಆಡಳಿತದ ಚುಕ್ಕಾಣಿ ಹಿಡಿಯುವುದು ಯಡಿಯೂರಪ್ಪ ಅವರ ರಾಜಕೀಯ ಶಕ್ತಿಯ ಮೇಲೆ ಅವಲಂಬಿತವಾಗಿದೆ. ಅಂದ ಹಾಗೆ, ತಮಗೆ ಹೀಗೆ 'ಸಾಮ್ರಾಟ್' ಪಟ್ಟ ದಕ್ಕಿದರೂ, ಅಶೋಕ್ ಯಾವತ್ತೂ ಪಕ್ಷದ ಇನ್ನಿತರ ನಾಯಕರನ್ನು ಹೊಡೆದು ಹಾಕಲು ಬಯಸಿದವರಲ್ಲ.

ಬೇಸಿಕಲಿ, ಅವರು ಸಂಘಂ, ಶರಣಂ, ಗಚ್ಚಾಮಿ ಎಂಬ ಮನಃಸ್ಥಿತಿಯವರು. ಈಗಲೂ ಸಂಘ ಪರಿವಾರದ ನಾಯಕರು ಎಲ್ಲರಿಗಿಂತ ಮುಖ್ಯವಾಗಿ ಅಶೋಕ್ ಅವರನ್ನು ನಂಬುತ್ತಾರೆ. ಅದೇ ರೀತಿ ರಾಜ್ಯ ಬಿಜೆಪಿ ಪಾಳೆಯದ ಚಾಣಕ್ಯ ಅನಂತಕುಮಾರ್ ಅವರೂ ಅಶೋಕ್ ಅವರನ್ನು ನಂಬುತ್ತಾರೆ.

ಇದು ಸಹಜವಾಗಿಯೇ ಬಿಜೆಪಿಯಲ್ಲಿ ಒಕ್ಕಲಿಗ ನಾಯಕರಾಗಲು ಹವಣಿಸುತ್ತಿರುವ, ಮುಖ್ಯಮಂತ್ರಿಯಾಗಲು ಹವಣಿಸುತ್ತಿರುವ, ಉಪಮುಖ್ಯಮಂತ್ರಿಯಾಗಲು ಹವಣಿಸುತ್ತಿರುವ ಹಲವು ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಯಡಿಯೂರಪ್ಪಗೆ ಅಶೋಕ್ ಶಕ್ತಿ ಗೊತ್ತು

ಯಡಿಯೂರಪ್ಪಗೆ ಅಶೋಕ್ ಶಕ್ತಿ ಗೊತ್ತು

ಅದರಲ್ಲೂ ಕಳೆದ ಬಿಬಿಎಂಪಿ ಚುನಾವಣೆಯಲ್ಲಿ ಸಕಲ ಜವಾಬ್ದಾರಿಗಳನ್ನು ತಾವೊಬ್ಬರೇ ವಹಿಸಿಕೊಂಡು ಕಮಲ ಪಾಳೆಯಕ್ಕೆ ನೂರು ಸ್ಥಾನಗಳು ದಕ್ಕುವಂತೆ ಮಾಡಿದವರು ಅಶೋಕ್. ಅವರಿಗೆ ಇಂತಹ ಶಕ್ತಿಯಿದೆ ಎಂಬುದು ಯಡಿಯೂರಪ್ಪ ಅವರಿಗೆ ಗೊತ್ತು. ಅನಂತಕುಮಾರ್ ಅವರಿಗೂ ಗೊತ್ತು.

ಹೀಗಾಗಿ ಅವರು ಬಿಬಿಎಂಪಿ ಚುನಾವಣೆಯ ವಿಷಯದಲ್ಲಿ ತಪ್ಪಿಯೂ ಮೂಗು ತೂರಿಸದೆ ಅಶೋಕ್ ಅವರ ಮೇಲೆ ಜವಾಬ್ದಾರಿ ವಹಿಸಿದರು. ಮತ್ತು ಈ ಜವಾಬ್ದಾರಿಯನ್ನು ಅಶೋಕ್ ಕೂಡಾ ಅತ್ಯಂತ ಸಮರ್ಥವಾಗಿ ನಿಭಾಯಿಸಿದರು. ಅವತ್ತು ಅಸ್ತಿತ್ವದಲ್ಲಿದ್ದುದು ಕಾಂಗ್ರೆಸ್ ಸರ್ಕಾರವಾದರೂ ಬಿಜೆಪಿಯೇ ಅಧಿಕಾರ ಹಿಡಿಯುವ ಸ್ಥಿತಿ ತಂದರು.

ಮೀಸಲಾತಿಯ ತಂತ್ರಗಾರಿಕೆ ನೆರವಿಗೆ ಬರದಿದ್ದರೆ ಕಾಂಗ್ರೆಸ್-ಜೆಡಿಎಸ್ ಅದೇನೇ ತಿಪ್ಪರಲಾಗ ಹಾಕಿದರೂ ಬಿಬಿಎಂಪಿಯ ಅಧಿಕಾರ ಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಬೇರೆ ಜಿಲ್ಲೆಗಳ ಜನಪ್ರತಿನಿಧಿಗಳನ್ನೂ ಬೆಂಗಳೂರಿನಲ್ಲಿ ಸೆಟ್ಲ್ ಮಾಡಿಸಿದ ನಾಟಕವಾಡಿ ಈ ಮೈತ್ರಿಕೂಟ ಬಿಜೆಪಿಯ ವಿರುದ್ಧ ಗೆಲುವು ಸಾಧಿಸಿತು.

ಈಗಲೂ ಪಾಲಿಕೆ ವ್ಯಾಪ್ತಿಯಲ್ಲಿ ಬಿಜೆಪಿ ಪವರ್ ಫುಲ್

ಈಗಲೂ ಪಾಲಿಕೆ ವ್ಯಾಪ್ತಿಯಲ್ಲಿ ಬಿಜೆಪಿ ಪವರ್ ಫುಲ್

ಆದರೆ ಈ ರೀತಿ ನಡೆದರೂ ಆಳದಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪವರ್ ಫುಲ್ ಆಗಿರುವುದು ಬಿಜೆಪಿಯೇ ಎಂಬುದು ನಿರ್ವಿವಾದ. ಮೇಯರ್ ಮತ್ತು ಉಪಮೇಯರ್ ಆಯ್ಕೆಯಲ್ಲಿ ಏನೇ ತಂತ್ರಗಾರಿಕೆ ಅನುಸರಿಸಿದರೂ ಜನಸಾಮಾನ್ಯರ ಮಟ್ಟದಲ್ಲಿ ಬಿಜೆಪಿಯ ಪವರ್ ಹೆಚ್ಚು. ಇದಕ್ಕೆ ಮುಖ್ಯ ಕಾರಣ ಯಥಾ ಪ್ರಕಾರ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್.

ಮೊನ್ನೆ ನಡೆದ ಮೇಯರ್-ಉಪಮೇಯರ್ ಚುನಾವಣೆಯ ಸಂದರ್ಭದಲ್ಲೂ ಅಷ್ಟೇ. ಮೀಸಲಾತಿ ತಂತ್ರಗಾರಿಕೆ ಮೂಲಕ ಕಾಂಗ್ರೆಸ್ ಮತ್ತು ಜೆಡಿಎಸ್ ನೂರಾ ಮೂವತ್ತಾರು ಮತಗಳ ಬಲ ಹೊಂದಿದ್ದರೆ, ಪದ್ಮನಾಭನಗರದ ಶಾಸಕ ಆರ್. ಅಶೋಕ್ ಅವರ ಸಾಮರ್ಥ್ಯದಿಂದ ಕಮಲ ಪಾಳೆಯ ಗೆಲುವಿನ ಸಮೀಪಕ್ಕೆ ಹೋಯಿತು. ಆದರೆ, ಸೋಲಿನ ಹೊಣೆಗಾರಿಕೆಯನ್ನು ಅಶೋಕ್ ಮೇಲೆ ಹೊರಿಸಲಾಗುತ್ತಿದೆ.

ಅಶೋಕ್ ವಿರುದ್ಧ ಮುಗಿಬಿದ್ದಿರುವ ವಲಸಿಗರು

ಅಶೋಕ್ ವಿರುದ್ಧ ಮುಗಿಬಿದ್ದಿರುವ ವಲಸಿಗರು

ಯಥಾ ಪ್ರಕಾರ ಇದು ಕೂಡಾ ಬಿಜೆಪಿಯ ವಾಸ್ತವ ಶಕ್ತಿ ಏನು ಅನ್ನುವುದರ ಕುರುಹು. ಆದರೆ ರಾಜಕೀಯ ಮಾಡಲು ತಮ್ಮ ಜಿಲ್ಲೆಯಲ್ಲಿ ನೆಲೆಯಿಲ್ಲದೆ ಬೆಂಗಳೂರಿಗೆ ಬಂದು ನೆಲೆ ಕಂಡುಕೊಂಡಿರುವ ಹಲವು ಬಿಜೆಪಿ ನಾಯಕರು ಈ ಫಲಿತಾಂಶವನ್ನೇ ಹಿಡಿದುಕೊಂಡು ಅಶೋಕ್ ವಿರುದ್ಧ ಮುಗಿಬಿದ್ದಿದ್ದಾರೆ.

ಅಯ್ಯೋ, ಇನ್ನೇನು ಅಶೋಕ್ ಅವರ ಶಕ್ತಿಯೇ ಕುಸಿದು ಹೋಗಿದೆ. ಮೇಯರ್, ಡೆಪ್ಯೂಟಿ ಮೇಯರ್ ಹುದ್ದೆಗಳ ಚುನಾವಣೆಯಲ್ಲಿ ಬಿಜೆಪಿ ಸೋಲುಂಡಿದ್ದರೆ ಅಶೋಕ್ ಅವರ ಅಸಾಮರ್ಥ್ಯವೇ ಇದಕ್ಕೆ ಕಾರಣ ಎಂದು ಹುಯಿಲೆಬ್ಬಿಸುತ್ತಿದ್ದಾರೆ.

ಆದರೆ ವಾಸ್ತವ ಸ್ಥಿತಿ ಎಂದರೆ ಅಶೋಕ್ ಅವರು ಇನ್ನೂ ಒಂದಷ್ಟು ಮತಗಳನ್ನು ಕ್ರೋಢೀಕರಿಸಿಕೊಂಡಿದ್ದರೂ ಮೀಸಲಾತಿಯ ಟೆಕ್ನಿಕ್ಕಿನ ಮೂಲಕ ಬಿಬಿಎಂಪಿಯ ಅಧಿಕಾರ ಹಿಡಿಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಶಕ್ತವಾಗಿವೆ. ಈ ಮೂಲ ಅಂಶವನ್ನು ಗಮನಿಸುವ ಬದಲು ಇದನ್ನೇ ಹಿಡಿದುಕೊಂಡು ಅಶೋಕ್ ಅವರನ್ನು ರಾಜಕೀಯವಾಗಿ ಮುಗಿಸಲು ಬಿಜೆಪಿಯ ವಲಸಿಗ ನಾಯಕರು ಮಾಡುತ್ತಿರುವ ಯತ್ನ ಆಳದಲ್ಲಿ ಪಕ್ಷದ ಬೇರಿಗೇ ಕೊಡುತ್ತಿರುವ ಹೊಡೆತ.

ಬಿಜೆಪಿ ವರಿಷ್ಠರು ಕಣ್ಣು ಮುಚ್ಚಿ ಕುಳಿತಿದ್ದರೆ..

ಬಿಜೆಪಿ ವರಿಷ್ಠರು ಕಣ್ಣು ಮುಚ್ಚಿ ಕುಳಿತಿದ್ದರೆ..

ತಕ್ಷಣ ಇದನ್ನು ಯಡಿಯೂರಪ್ಪ, ಅನಂತಕುಮಾರ್ ಮಾತ್ರವಲ್ಲ, ಕಮಲ ಪಾಳೆಯದ ವರಿಷ್ಠರೂ ಕಣ್ಣು ಬಿಟ್ಟು ನೋಡಬೇಕು. ನೆಲೆಯೇ ಇಲ್ಲದ ವಲಸಿಗ ಬಿಜೆಪಿ ನಾಯಕರ ಆಟಗಳಿಗೆ ಬ್ರೇಕ್ ಹಾಕಬೇಕು. ಹಾಗಾಗದೆ ಅಶೋಕ್ ಅವರನ್ನು ಮುಗಿಸಲು ಅವರು ನಡೆಸುತ್ತಿರುವ ಆಟವನ್ನು ನೋಡಿಯೂ ಅವರು ಮೌನವಾಗಿದ್ದರೆ, ಮುಂದಿನ ದಿನಗಳಲ್ಲಿ ಜೆಡಿಎಸ್ ವರಿಷ್ಠ ದೇವೇಗೌಡ ಮತ್ತು ಕುಮಾರಸ್ವಾಮಿ ಬಿಜೆಪಿಯ ಜತೆಗಿರುವ ದೊಡ್ಡ ವೋಟ್ ಬ್ಯಾಂಕ್ ಒಂದನ್ನು ನಿರುಮ್ಮಳವಾಗಿ ಕಬಳಿಸುತ್ತಾರೆ.

ಪರಿಣಾಮ? ಬಿಜೆಪಿ ರಾಜಧಾನಿಯಲ್ಲಿ ಭಾರತೀಯ ಜನತಾ ಪಕ್ಷ ಶಕ್ತಿ ಕಳೆದುಕೊಳ್ಳುತ್ತದೆ. ಅಷ್ಟೇ ಅಲ್ಲ,ರಾಜ್ಯ ರಾಜಕೀಯದ ಷೇರ್ ಮಾರ್ಕೆಟ್ಟಿನಲ್ಲಿರುವ ಅದರ ವ್ಯಾಲ್ಯೂ ಕುಸಿದು ಹೋಗುತ್ತದೆ. ಬೆಂಗಳೂರಿನಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಕೆಲ ಹಿರಿಯ ನಾಯಕರು ಏಕೆ ಕಣ್ಣು ಮುಚ್ಚಿ ಕುಳಿತಿದ್ದಾರೆ ಎಂಬುದು ಅರ್ಥವಾಗದ ಪ್ರಶ್ನೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+