ಫಲಿತಾಂಶ: ನಾಯಕರು ಮನನ ಮಾಡಿಕೊಳ್ಳಬೇಕಾದ್ದೇನು?
ಈ ಬಾರಿಯ ಲೋಕಸಭಾ ಚುನಾವಣೆಯ ಫಲಿತಾಂಶ ಹತ್ತು ಹಲವು ದಾಖಲೆಗಳನ್ನು ಬರೆಯುತ್ತಿರುವುದು ಈಗಿನ ಸನ್ನಿವೇಶವನ್ನು ಗಮನಿಸಿದರೆ ಅರ್ಥವಾಗಿ ಬಿಡುತ್ತದೆ.
ಪ್ರಧಾನಿ ನರೇಂದ್ರ ಮೋದಿ ಅವರ ಹವಾ ದೇಶದಾದ್ಯಂತ ಮತವನ್ನು ತಂದುಕೊಟ್ಟಿದೆ ಎಂಬುದನ್ನು ನಿಸ್ಸಂದೇಹವಾಗಿ ಹೇಳಬಹುದು. ಸಬ್ ಕಾ ಸಾಥ್... ಸಬ್ ಕಾ ವಿಕಾಸ್... ಎಂಬ ಮೋದಿ ಅವರ ಘೋಷಣೆ ಎದುರು ರಾಹುಲ್ ಗಾಂಧಿ ಅವರ ಹಬ್ ಹೋ ಗಾ ನ್ಯಾಯ್ ಯಾವುದೇ ಕೆಲಸ ಮಾಡದಿರುವುದು ಈಗ ಎದ್ದು ಕಾಣುತ್ತಿದೆ.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ಮೋದಿಯವರನ್ನು ಕೆಳಗಿಳಿಸಲು ಏನೆಲ್ಲಾ ಕಸರತ್ತು ಮಾಡಬಹುದೋ ಅದನ್ನೆಲ್ಲಾ ಮಾಡಿದರು. ಪರಸ್ಪರ ವಾಗ್ದಾಳಿ, ವಾದ ವಿವಾದಗಳೂ ನಡೆದವು. ಮೋದಿ ಮತ್ತೆ ಪ್ರಧಾನಿಯಾಗದಂತೆ ತಡೆಯಲು ವಿಪಕ್ಷಗಳು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ನಡೆಸಿದ್ದವು. ಆದರೆ ಅವೆಲ್ಲವೂ ಈಗ ವ್ಯರ್ಥ ಪ್ರಯತ್ನವೇ ಆದವು.
ತಮ್ಮ ಗೆಲುವಿನ ತಂತ್ರವನ್ನೇ ಮರೆತರು
ಯಾರು ಬೇಕಾದರೂ ಪ್ರಧಾನಿಯಾಗಲಿ, ಆದರೆ ಮೋದಿಯನ್ನು ಮಾತ್ರ ಪ್ರಧಾನಿ ಸ್ಥಾನದಿಂದ ಹೊರಗೆ ಅಟ್ಟಬೇಕೆನ್ನುವುದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಮುಖ್ಯ ಅಜೆಂಡಾ ಆಗಿತ್ತು. ಹೀಗಾಗಿ ಕಳೆದೊಂದು ವರ್ಷದ ಹಿಂದೆಯೇ ಎಲ್ಲ ಪಕ್ಷಗಳು ಸೇರಿ ಮಹಾಘಟಬಂಧನ್ ಶುರು ಮಾಡಿದ್ದರಲ್ಲದೆ, ಮೋದಿಯ ವಿರುದ್ಧವೇ ಎಲ್ಲರೂ ಮುಗಿಬಿದ್ದರು. ಈ ಮುಗಿ ಬೀಳುವ ಧಾವಂತದಲ್ಲಿ, ತಮ್ಮ ಗೆಲುವಿಗೆ ಬೇಕಾದ ತಯಾರಿ, ತಂತ್ರಗಳನ್ನು ಮಾಡಿಕೊಳ್ಳುವುದನ್ನೇ ಮರೆತರು. ಇದರ ಪರಿಣಾಮವೇ ಈಗ ದೊರೆತಿರುವ ಫಲಿತಾಂಶ ಎಂದರೆ ತಪ್ಪಾಗಲಾರದು.
ತಪ್ಪಲಿಲ್ಲ ಮುಖಭಂಗ
ಕರ್ನಾಟಕದಲ್ಲಿ ದೋಸ್ತಿ ಪಕ್ಷದ ಐಕಾನ್, ಸಮನ್ವಯ ಸಮಿತಿಯ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರ ಯಾವ ತಂತ್ರವೂ ಕೆಲಸ ಮಾಡಿದಂತೆ ಕಂಡು ಬರುತ್ತಿಲ್ಲ. ಮೈಸೂರು ಲೋಕ ಸಭಾ ಕ್ಷೇತ್ರದಲ್ಲಿ ತನ್ನ ಆಪ್ತ ವಿಜಯಶಂಕರ್ ಅವರನ್ನು ಕಣಕ್ಕಿಳಿಸಿದ್ದರು. ಆದರೆ ಇಲ್ಲಿಯೂ ಸಿದ್ದರಾಮಯ್ಯ ಅವರಿಗೆ ಮುಖಭಂಗವಾಗಿದೆ.
ಈ ಬಾರಿ ಮೈತ್ರಿ ಸರ್ಕಾರದ ಕೆಲಸಗಳೇ ಶ್ರೀರಕ್ಷೆ ಎಂದು ಸಿ.ಎಚ್.ವಿಜಯಶಂಕರ್ ಅಖಾಡಕ್ಕಿಳಿದಿದ್ದರು. ಆದರೆ ಆ ಲೆಕ್ಕಾಚಾರಗಳು ತಲೆಕೆಳಗಾದವು. ಕಾಂಗ್ರೆಸ್ ನಾಯಕರಲ್ಲೇ ಮೂಡದ ಒಮ್ಮತ, ಪ್ರಚಾರದ ಕೊರತೆ, ಜೆಡಿಎಸ್ ನಾಯಕರ ಅಸಮಾಧಾನ ಇವೆಲ್ಲವೂ ವಿಜಯ್ ಶಂಕರ್ ಸೋಲಿಗೆ ಕಾರಣವಾದವು.
ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ನಾಯಕರಿಗೆಲ್ಲಾ ಸೋಲು!
ತಳಮಟ್ಟದಿಂದಲೇ ಪೈಪೋಟಿ
ಇಲ್ಲಿ ದೋಸ್ತಿಗಳು ಒಂದಾಗಿಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮೇಲ್ನೋಟಕ್ಕೆ ನಾವೆಲ್ಲ ಒಂದಾಗಿದ್ದೇವೆ ಎಂದು ಹೇಳುತ್ತಾ ಬಂದಿದ್ದರಾದರೂ ಅದು ಫಲಿತಾಂಶದಲ್ಲಿ ಪ್ರತಿಫಲಿತಗೊಂಡಿದೆ.
ಹಾಗೆ ನೋಡಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಸಾಂಪ್ರದಾಯಿಕ ಪ್ರತಿಸ್ಪರ್ಧಿಗಳಾಗಿದ್ದು, ತಳಮಟ್ಟದಿಂದಲೇ ಇವರ ನಡುವೆ ತೀವ್ರ ಪೈಪೋಟಿಯಿದೆ, ಇವರು ಒಂದಾಗುವುದು ಕಷ್ಟ ಎನ್ನುವುದು ಈ ಚುನಾವಣೆಯಲ್ಲಿ ಸಾಬೀತಾಗಿದೆ.
ಇದಕ್ಕೆ ಈ ಬಾರಿಯ ಚುನಾವಣೆಯ ಪ್ರಚಾರ ಹಂತದಿಂದಲೂ ಸಾಕಷ್ಟು ಉದಾಹರಣೆಗಳು ದೊರೆಯುತ್ತಲೇ ಹೋದವು. ಪಕ್ಷ ಪಕ್ಷಗಳ ನಡುವೆ ಮೂಡದ ಒಮ್ಮತ, ಅಸಮಾಧಾನ ಎಲ್ಲವೂ ಮೇಲಿಂದ ಮೇಲೆ ಗೋಚರಿಸುತ್ತಲೇ ಇದ್ದವು.
ಹೀನಾಯ ಪ್ರದರ್ಶನ : 9 ರಾಜ್ಯಗಳಲ್ಲಿ ಸೊನ್ನೆ ಹಿಂದೆ ಸುತ್ತಿದ ಕಾಂಗ್ರೆಸ್
ಯುವ ಮತದಾರರ ಭರವಸೆ
2014ರಲ್ಲಿ ನರೇಂದ್ರ ಮೋದಿ ಪ್ರಧಾನಿ ಅಭ್ಯರ್ಥಿ ಎಂದು ಬಿಜೆಪಿ ಘೋಷಣೆ ಮಾಡಿದ್ದಾಗ ಅವರು ಗುಜರಾತ್ನ ಮುಖ್ಯಮಂತ್ರಿಯಾಗಿದ್ದರಷ್ಟೆ. ಅವತ್ತೇ ಅವರ ಹವಾ ಕೆಲಸ ಮಡಿತ್ತು ಎನ್ನುವುದಾದರೆ ಐದು ವರ್ಷಗಳ ಕೆಲಸ ಕಾರ್ಯಗಳು ಕೂಡ ಈ ಬಾರಿಯ ಅವರ ಮುನ್ನಡೆಗೆ ಏಕೆ ಕಾರಣವಾಗಬಾರದು ಎಂಬುದನ್ನು ಮನನ ಮಾಡಿಕೊಳ್ಳಲೇಬೇಕಾಗಿದೆ.
ಪ್ರತಿ ಐದು ವರ್ಷಕ್ಕೂ ಯುವ ಮತದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತು ಅವರು ಪ್ರಬುದ್ಧರಾಗಿದ್ದಾರೆ. ಅವರಿಗೆ ದೇಶದ ರಾಜಕೀಯದ ಬಗ್ಗೆ ಅರಿಯುವ ಹುಮ್ಮಸ್ಸಿದೆ. ಎಲ್ಲವನ್ನು ತಿಳಿದುಕೊಳ್ಳುವ ಉತ್ಸಾಹವಿದೆ. ಆಲೋಚಿಸುವ ಮತ್ತು ದೇಶ ಭವಿಷ್ಯದ ಬಗ್ಗೆ ಚಿಂತಿಸಿ ಯಾವುದು ಸರಿ ಮತ್ತು ತಪ್ಪು ಎಂಬುದನ್ನು ಪರಾಮರ್ಶಿಸುವ ಶಕ್ತಿಯೂ ಇದೆ ಎಂಬುದನ್ನು ನಮ್ಮ ರಾಜಕೀಯ ನಾಯಕರು ಅರ್ಥ ಮಾಡಿಕೊಳ್ಳಬೇಕಾಗಿದೆ.