ಅಮೆರಿಕ ಚುನಾವಣೆ: ಕಮಲಾ ಹ್ಯಾರಿಸ್ ನಾಮನಿರ್ದೇಶನ ಭಾರತಕ್ಕೆ ಎಷ್ಟು ಪ್ರಸ್ತುತ?
ವಾಷಿಂಗ್ಟನ್, ಆಗಸ್ಟ್ 13: ಅಮೆರಿಕದ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರು ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ಭಾರತ ಮೂಲದ ಕಮಲಾ ಹ್ಯಾರಿಸ್ ಅವರನ್ನು ನಾಮನಿರ್ದೇಶನ ಮಾಡಿರುವುದು ತೀವ್ರ ಕುತೂಹಲ ಕೆರಳಿಸಿದೆ. ಡೆಮಾಕ್ರಟಿಕ್ ಪಕ್ಷದ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಯಾರು ಎಂಬ ಹಲವು ವಾರಗಳ ಊಹಾಪೋಹಗಳಿಗೆ ತೆರೆಬಿದ್ದಿದೆ.
ಕಮಲಾ ಹ್ಯಾರಿಸ್ ಅವರ ತಾಯಿ ಶ್ಯಾಮಲಾ ಚೆನ್ನೈ ಮೂಲದವರು. ತಂದೆ ಡೊನಾಲ್ಡ್ ಹ್ಯಾರಿಸ್ ಜಮೈಕಾದವರು. ಅವರನ್ನು ಆಯ್ಕೆ ಮಾಡುವ ನಿರ್ಧಾರದ ಹಿಂದೆ ಡೆಮಾಕ್ರಟಿಕ್ ಪಕ್ಷದ ಹಲವು ತಂತ್ರಗಳೂ ಹಿಂದೆ. ಅಮೆರಿಕದಲ್ಲಿ ಹೆಚ್ಚು ಪ್ರಭಾವ ಹೊಂದಿರುವ ಭಾರತ ಮೂಲದ ಮತಗಳನ್ನು ಸೆಳೆಯಲು ಕಮಲಾ ಹ್ಯಾರಿಸ್ ಉಮೇದುವಾರಿಕೆ ನೆರವಾಗಲಿದೆ ಎಂಬ ಉದ್ದೇಶವೂ ಇದರಲ್ಲಿ ಸೇರಿದೆ.
ಕಮಲಾ ಹ್ಯಾರಿಸ್ ಹುಟ್ಟಿ ಬೆಳೆದಿದ್ದು ಅಮೆರಿಕದಲ್ಲಿಯೇ ಆದರೂ ಭಾರತದೆಡೆಗಿನ ತಮ್ಮ ಭಾವನಾತ್ಮಕ ಸಂಬಂಧವನ್ನು ಹಲವು ಬಾರಿ ಸ್ಮರಿಸಿಕೊಂಡಿದ್ದಾರೆ. ಉಪಾಧ್ಯಕ್ಷೆಯ ಸ್ಥಾನಕ್ಕೆ ನಾಮನಿರ್ದೇಶನಗೊಂಡ ಬಳಿಕ ನಡೆಸಿದ ಮೊದಲ ಭಾಷಣದಲ್ಲಿಯೂ ಭಾರತವನ್ನು ನೆನಪಿಸಿಕೊಂಡಿದ್ದಾರೆ. ಮುಂದೆ ಓದಿ...

ಜೈಶಂಕರ್-ಪ್ರಮೀಳಾ ವಿವಾದ
ಕಮಲಾ ಅವರ ನಾಮನಿರ್ದೇಶನ ಭಾರತಕ್ಕೆ ಬಹಳ ಪ್ರಸ್ತುತ ಎಂದು ವ್ಯಾಖ್ಯಾನಿಸಲಾಗಿದೆ. ಭಾರತದ ವಿಷಯಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಭಾರತ ಮೂಲದ ಸಂಸದೆ ಪ್ರಮೀಳಾ ಜಯಪಾಲ್ ಅವರನ್ನು ಕಮಲಾ ಹ್ಯಾರಿಸ್ ಬೆಂಬಲಿಸಿದ್ದರು. ಪ್ರಮೀಳಾ ಜಯಪಾಲ್ ಭಾರತದ ವಿಚಾರದಲ್ಲಿ ವಿವಾದಕ್ಕೆ ಸಿಲುಕಿದ್ದರು. ಕಾಶ್ಮೀರ ವಿಷಯದಲ್ಲಿ ಭಾರತ ಸರ್ಕಾರ ನಡೆಯನ್ನು ಟೀಕಿಸಿದ್ದ ಪ್ರಮೀಳಾ ಮತ್ತು ಇತರೆ ಸಂಸದರನ್ನು, ಕಳೆದ ಡಿಸೆಂಬರ್ನಲ್ಲಿ ಅಮೆರಿಕಕ್ಕೆ ತೆರಳಿದ್ದ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಭೇಟಿ ಮಾಡಿ ಮಾಡಿರಲಿಲ್ಲ. ಇದಕ್ಕಾಗಿ ಅವರನ್ನು ಪ್ರಮೀಳಾ ಟೀಕಿಸಿದ್ದರು. 370ನ ವಿಧಿ ರದ್ದತಿ ಬಳಿಕ ಕಾಶ್ಮೀರದ ಸ್ಥಿತಿಯನ್ನು 'ಗಮನವಿಟ್ಟು ನೋಡುತ್ತಿದ್ದೇವೆ' ಎಂದು ಅವರು ಹೇಳಿದ್ದರು.

ಜೈಶಂಕರ್ ವಿರುದ್ಧ ಮಾತನಾಡಿದ್ದ ಕಮಲಾ
ಕಮಲಾ ಹ್ಯಾರಿಸ್ ಭಾರತದಲ್ಲಿ ಜನಿಸದೆ ಇದ್ದರೂ, ತಮ್ಮಲ್ಲಿನ ಭಾರತೀಯ ಭಾವನೆಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಕಾರಣಕ್ಕಾಗಿ ಮಾತ್ರವಲ್ಲದೆ, ಸಂಸದೆಯಾಗಿ ಅವರು ನಾಲ್ಕು ವರ್ಷಗಳಿಂದ ಅಮೆರಿಕದಲ್ಲಿನ ಭಾರತೀಯರ ಪರವಾಗಿ ದನಿ ಎತ್ತುತ್ತಿರುವುದೂ ಅವರ ಸ್ಪರ್ಧೆ ಮುಖ್ಯವೆನಿಸಿದೆ. ಜೈಶಂಕರ್- ಪ್ರಮೀಳಾ ವಿವಾದದಲ್ಲಿ ಪ್ರಮೀಳಾ ಅವರನ್ನು ಕಮಲಾ ಬೆಂಬಲಿಸಿದ್ದರು. ಅಮೆರಿಕ ಭೇಟಿಯ ವೇಳೆ ಸಮಿತಿಯಿಂದ ಪ್ರಮೀಳಾ ಅವರನ್ನು ಕೈಬಿಡದೆ ಹೋದರೆ ತಾವು ಸಮಿತಿಯೊಂದಿಗೆ ಸಭೆ ನಡೆಸುವುದಿಲ್ಲ ಎಂದು ಜೈಶಂಕರ್ ಹೇಳಿದ್ದರು. ಅದಕ್ಕೆ ಅವರು ಒಪ್ಪದ ಕಾರಣ ಈ ಸಭೆಯೇ ನಡೆದಿರಲಿಲ್ಲ. ಯಾವ ಸದಸ್ಯರು ಸಭೆಯಲ್ಲಿ ಪಾಲ್ಗೊಳ್ಳಬೇಕು ಎಂದು ಯಾವುದೇ ವಿದೇಶಿ ಸರ್ಕಾರವು ಸೂಚನೆ ನೀಡುವುದು ತಪ್ಪು ಎಂದು ಕಮಲಾ ಹೇಳಿಕೆ ನೀಡಿದ್ದರು.

ಭಾರತದ ನಂಟಿನ ವಿವರಣೆ
'ಅದ್ಭುತ ಪ್ರಭಾವಶಾಲಿ ಮಹಿಳೆಯರ ಕುಟುಂಬದಿಂದ ಬಂದವಳು ನಾನು. ನನ್ನ ಅಜ್ಜಿ ಹಳ್ಳಿಗಳಿಗೆ ಎತ್ತಿನ ಗಾಡಿಯಲ್ಲಿ ತೆರಳಿ ಜನನ ನಿಯಂತ್ರಣದ ಬಗ್ಗೆ ಬಡ ಮಹಿಳೆಯರಿಗೆ ಸಲಹೆ ನೀಡುತ್ತಿದ್ದರು. ನನ್ನ ತಾಯಿ 19ನೇ ವಯಸ್ಸಿಗೆ ಎಂಡೋಕ್ರಿನೋಲಜಿ ಓದಲು ಅಮೆರಿಕಕ್ಕೆ ಬಂದಿದ್ದರು. ಇಲ್ಲಿ ಓದಿ ಅವರು ಪ್ರಮುಖ ಸ್ತನ ಕ್ಯಾನ್ಸರ್ ಸಂಶೋಧಕಿಯೂ ಆದರು' ಎಂದು ತಮ್ಮ ಪರಂಪರೆಯನ್ನು ನೆನಪಿಸಿಕೊಂಡಿದ್ದರು.
ಅಮ್ಮ ಪ್ರತಿಭಾವಂತ ಗಾಯಕಿ ಮತ್ತು ಬುದ್ಧಿವಂತ ವಿದ್ಯಾರ್ಥಿನಿ. ಅರ್ಧದಷ್ಟು ಜಗತ್ತನ್ನು ಸುತ್ತಾಡಲು ಅವರ ಅಪ್ಪ ಅವಕಾಶ ನೀಡಿದ್ದರು. ಓದು ಮುಗಿಯುತ್ತಿದ್ದಂತೆಯೇ ಭಾರತಕ್ಕೆ ಬಂದು ಸಾಂಪ್ರದಾಯಿಕ ರೀತಿಯಲ್ಲಿ ಮದುವೆಯಾಗುವುದಾಗಿ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಬರ್ಕೆಲಿ ವಿಶ್ವವಿದ್ಯಾಲಯದಲ್ಲಿ ಈಕೆಯಂತೆಯೇ ವಲಸಿಗನಾಗಿದ್ದ ಯುವಕನ ಪರಚಯವಾಯ್ತು. ಕುಟುಂಬದ ಸಾವಿರಾರು ವರ್ಷಗಳ ಪರಂಪರೆಯನ್ನು ಮುರಿದು ಆಕೆ ಜಮೈಕಾದ ಅರ್ಥಶಾಸ್ತ್ರ ವಿದ್ಯಾರ್ಥಿಯ ಜತೆ ಮದುವೆಯಾದರು ಎಂದು ತಾಯಿಯ ಪ್ರೇಮ ಕಥೆಯನ್ನು ಹೇಳಿದ್ದರು.

ಎಚ್-4 ವೀಸಾದಾರರ ಪರ ಹೋರಾಟ
ಎಚ್1ಬಿ ವೀಸಾದಾರರ ಪತ್ನಿಯರಿಗೆ ಎಚ್-4 ವೀಸಾದಡಿ ಅವರ ಕೌಶಲಕ್ಕೆ ಅನುಗುಣವಾಗಿ ಉದ್ಯೋಗ ನೀಡುವ ಸಂಬಂಧ ಕಮಲಾ ಹ್ಯಾರಿಸ್ ದನಿ ಎತ್ತಿದ್ದರು. 2018ರಲ್ಲಿ ಅವರು ಸಂಸದೆ ಕ್ರಿಸ್ಟನ್ ಗಿಲ್ಲಿ ಜತೆಗೂಡಿ ಅಮೆರಿಕದ ಹೋಮ್ಲ್ಯಾಂಡ್ ಸೆಕ್ಯುರಿಟಿ ಹಾಗೂ ಅಮೆರಿಕ ಪೌರತ್ವ ಮತ್ತು ವಲಸೆ ಸೇವೆ ಇಲಾಖೆಗೆ ಪತ್ರ ಬರೆದಿದ್ದರು. ವೈದ್ಯರು, ನರ್ಸ್ಗಳು, ವಿಜ್ಞಾನಿಗಳು, ಶಿಕ್ಷಕರು ಮುಂತಾದ ವಲಯಗಳಲ್ಲಿನ ಅವರ ಪರಿಣತಿಗೆ ತಕ್ಕಂತೆಇರುವ ಉದ್ಯೋಗಾವಕಾಶಗಳನ್ನು ಕಿತ್ತುಕೊಳ್ಳದಂತೆ ಮನವಿ ಮಾಡಿದ್ದರು. ಈ ವೀಸಾ ಹೊಂದಿರುವವರಲ್ಲಿ ಭಾರತ ಸೇರಿದಂತೆ ದಕ್ಷಿಣ ಏಷ್ಯಾದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಸಿಖ್ ಸಮುದಾಯ ಆಕ್ರೋಶ
2019ರ ಜುಲೈನಲ್ಲಿ ಅಮೆರಿಕದ ಸಿಖ್ ಸಮುದಾಯದಿಂದ ಕಮಲಾ ತೀವ್ರ ಟೀಕೆಗೆ ವ್ಯಕ್ತಪಡಿಸಿದ್ದರು. ರಾಜ್ಯ ಕಾರಾಗೃಹ ಕಾವಲುಗಾರರು ಧಾರ್ಮಿಕ ಕಾರಣಗಳಿಂದ, ವೈದ್ಯಕೀಯ ವಿನಾಯಿತಿಗಳನ್ನು ಹೊಂದಿದ್ದರೂ ಗಡ್ಡ ಬಿಡುವಂತಿಲ್ಲ ಎಂದು ಹೇಳುವ ತಾರತಮ್ಯದ ನೀತಿಯನ್ನು ಸಮರ್ಥಿಸಿಕೊಂಡಿದ್ದಕ್ಕಾಗಿ ಕಮಲಾ ಹ್ಯಾರಿಸ್ ವಿರುದ್ಧ ಅಮೆರಿಕದ ಸಿಖ್ ಸಂಘಟನೆ ಕ್ಷಮೆ ಕೋರುವಂತೆ ಆಗ್ರಹಿಸಿ ಆನ್ಲೈನ್ ಅಭಿಯಾನ ನಡೆಸಿತ್ತು.












Click it and Unblock the Notifications