Unforgettable 2020:ವರ್ಷದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಸುಳ್ಳು ಸುದ್ದಿಗಳು
ನವದೆಹಲಿ, ಡಿಸೆಂಬರ್ 15: ಈ ವರ್ಷದಲ್ಲಿ ಕೆಲವು ಸುಳ್ಳು ಸುದ್ದಿಗಳು ಅತಿ ಹೆಚ್ಚು ಸದ್ದು ಮಾಡಿವೆ.
ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅದೆಷ್ಟೋ ಬಾರಿ ಸತ್ತು ಹುಟ್ಟಿ ಬಂದಿದ್ದು, ಕೊರೊನಾ ಸೋಂಕಿಗೆ ಬಾವುಲಿಯೇ ಕಾರಣ ಎಂದಿದ್ದು, 5ಜಿಯ ರೇಡಿಯೋ ತರಂಗಗಳಿಂದ ಕೊರೊನಾ ಸೋಂಕು ಹಬ್ಬುತ್ತದೆ ಎಂದು ಹೇಳಿದ್ದು, ಸೆಪ್ಟೆಂಬರ್ನಲ್ಲಿ ಮತ್ತೆ ಲಾಕ್ಡೌನ್ ಎನ್ನುವ ಸುದ್ದಿ ಹರಿದಾಡಿತ್ತು.
ಮೋದಿಯನ್ನು ಹಣಿಯಲು ಸಂಚುಗಾರ ಆಗಬೇಕು, ಮಹಾತ್ಮನಲ್ಲ: ಅರ್ನಬ್ ಹೇಳಿದ್ದ ಮಾತು
ಎಲ್ಲಾ ಸುದ್ದಿಯನ್ನು ಮಾಧ್ಯಮದಲ್ಲೂ ಪ್ರಸಾರ ಮಾಡಲಾಗಿತ್ತು, ಜನರು ಅನಿವಾರ್ಯವಾಗಿ ನಂಬುವಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ಅದೆಲ್ಲದರ ಕುರಿತು ಮಾಹಿತಿ ಇಲ್ಲಿದೆ.
ಬಾವುಲಿಯಿಂದ ಹಬ್ಬಲಿದೆಯಂತೆ ಕೊರೊನಾವೈರಸ್
ಚೀನಾದ ವುಹಾನ್ನಲ್ಲಿ ಕೊರೊನಾವೈರಸ್ ವ್ಯಾಪಿಸಿ ಜನರು ಸಾಯುತ್ತಿದ್ದಾಗ ವಿಶ್ವವ್ಯಾಪಿ ಹಬ್ಬಲಿದೆ ಎನ್ನುವ ಎಚ್ಚರಿಕೆಯ ಸಂದೇಶಗಳು ಬರತೊಡಗಿದ್ದವು. ಈ ಹಂತದಲ್ಲಿ ಭಾರತ ಸೇರಿ ವಿಶ್ವದ ಕೆಲ ದೇಶಗಳಲ್ಲಿ ಪ್ರಕರಣಗಳು ಕಾಣಿಸಿಕೊಳ್ಳಲು ಆರಂಭಿಸಿದವು. ಈ ಹಂತದಲ್ಲಿ ಬಾವುಲಿಯಿಂದ ಕೊರೊನಾ ಸೋಂಕು ಹರಡುತ್ತದೆ ಎನ್ನುವ ವದಂತಿಯೂ ಹಬ್ಬಿತ್ತು. ಈ ಹಿಂದೆಯೂ ಕೇರಳ ನಿಪಾಹ್ ವೈರಸ್ ಬಂದಾಗಲೂ ಬಾವುಲಿಯಿಂದ ಹರಡುತ್ತದೆ ಎನ್ನಲಾಗಿತ್ತು. ಆದರೆ ಕೊರೊನಾ ವೈರಸ್ ಆಗಲಿ ನಿಪಾಹ್ ವೈರಸ್ ಆಗಲಿ ಬಾವುಲಿಯಿಂದ ಹರಡುವುದಿಲ್ಲ ಎಂದು ಖಾತ್ರಿಯಾಯಿತು. ಒಟ್ಟಿನಲ್ಲಿ ಎಲ್ಲಾ ವೈರಸ್ಗಳ ಹುಟ್ಟಿಗೆ ಬಾವುಲಿಗಳೇ ಕಾರಣ ಎನ್ನುವ ವಾದದಿಂದ ಹಿಂದೆಸರಿಯಲಾಯಿತು.
ಅದೆಷ್ಟೋ ಬಾರಿ ಸತ್ತು ಹುಟ್ಟಿದ ಕಿಮ್ ಜಾಂಗ್ ಉನ್
ಉತ್ತರ ಕೊರಿಯಾ ಸರ್ವಾಧಿಕಾರಿ ಮೃತಪಟ್ಟಿದ್ದಾರೆ ಅವರ ಸಹೋದರಿಯೇ ಮುಂದಿನ ಸರ್ವಾಧಿಕಾರಿ ಎನ್ನುವ ಸುದ್ದಿಗಳು ಅದೆಷ್ಟೋ ಹರಿದಾಡಿದವು. ಈ ಬಾರಿಯೂ ಹೃದಯ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಕಿಮ್ ಜಾಂಗ್ ಉನ್ ಚಿಕಿತ್ಸೆ ವಿಫಲವಾಗಿ ಮರಣ ಹೊಂದಿದ್ದಾರೆ ಎನ್ನುವ ಸುದ್ದಿಗಳು ಬಹಳ ಗಾಢವಾಗಿ ಹಬ್ಬಿದವು ಇದಕ್ಕೆ ಪೂರಕವೆನ್ನುವಂತೆ ಕಿಮ್ ಜಂಗ್ ಉನ್ ಹೋಲುವ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು. ಆದರೆ ಈ ಸುದ್ದಿಯನ್ನು ಖುದ್ದು ಕಿಮ್ ಜಾಂಗ್ ಉನ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ಮೂಲಕ ಅಲ್ಲಗಳೆದರು. ಈ ಕಾರ್ಯಕ್ರಮದ ಬಳಿಕವೂ ಕಿಮ್ ಜಾಂಗ್ ಉನ್ ಸಾವಿನ ಕುರಿತ ಕತೆಗಳು ಅಂತ್ಯವಾಗಲಿಲ್ಲ, ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಅಸಲಿ ಕಿಮ್ ಜಾಂಗ್ ಉನ್ ಅಲ್ಲವೇ ಅಲ್ಲ ಎಂದು ಕೆಲವರು ದಾಖಲೆ ಸಮೇತ ವಾದಿಸಿದರು. ಆದರೆ ಈಗ ಕೊರೊನಾ ಭಯದಿಂದ ಕಿಮ್ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳುತ್ತಿಲ್ಲ.
ಸೆಪ್ಟೆಂಬರ್ನಲ್ಲಿ ಲಾಕ್ಡೌನ್ ಭೂತ
ಮಾರ್ಚ್ನಿಂದ ಸತತ ನಾಲ್ಕು ತಿಂಗಳ ಕಾಲ ಸಂಪೂರ್ಣ ಭಾರತ ಲಾಕ್ಡೌನ್ ಅಲ್ಲಿತ್ತು, ಲಾಕ್ಡೌನ್ ಸಡಿಲಗೊಂಡ ಬಳಿಕ ಕೊರೊನಾ ಸೋಂಕಿತರ ಮರಣ ಸಂಖ್ಯೆ ಹಾಗೂ ಸೋಂಕಿತರ ಪ್ರಮಾಣ ತೀವ್ರಗತಿಯಲ್ಲಿ ಹೆಚ್ಚಾಗಲಾರಂಭಿಸಿತು. ಅಮೆರಿಕದ ನಂತರದ ಸ್ಥಾನಕ್ಕೆ ಭಾರತ ಹೋಯಿತು, ಈ ಸಂದರ್ಭದಲ್ಲಿ ಕೆಲ ಮಾಧ್ಯಮಗಳೂ ಸೇರಿ ಸಾಮಾಜಿಕ ಜಾಲತಾಣಗಳಲ್ಲಿ ಸೆಪ್ಟೆಂಬರ್ನಲ್ಲಿ ಮತ್ತೆ ಕಠಿಣ ಲಾಕ್ಡೌನ್ ಸುದ್ದಿಗಳು ಹರಿದಾಡಲು ಆರಂಭಿಸಿದವು. ಈ ಸುದ್ದಿಯ ಬಳಿಕ ಖುದ್ದು ಕೇಂದ್ರ ಸರ್ಕಾರವೇ ಗೃಹ ಇಲಾಖೆಯ ಮೂಲಕ ಅಲ್ಲಗಳೆಯಬೇಕಾಯಿತು. ಈ ಸುಳ್ಳು ಸುದ್ದಿಗೆ ಹೆದರಿ ಮತ್ತೆ ಗಂಟು ಮೂಟೆ ಕಟ್ಟಲು ಆರಂಭಿಸಿದ್ದರು.
ಕೊರೊನಾ ಸೋಂಕಿಗೆ 5ಜಿ ಕಾರಣ
ಈ ವರ್ಷವಿಡೀ ಎಲ್ಲರ ಬಾಯಲ್ಲಿ ಕೊರೊನಾ ಸೋಂಕಿನದೇ ಸುದ್ದಿ, ಮುಂದಿನ ವರ್ಷ ಭಾರತಕ್ಕೆ ಬರಲಿರುವ 5ಜಿ ತಂತ್ರಜ್ಞಾನಕ್ಕೂ ಕೆಲ ಕಿಡಿಗೇಡಿಗಳು ಕೊರೊನಾ ವೈರಸ್ ಅಂಟಿಸುವ ಕೆಲಸ ಮಾಡಿದರು.5 ಜಿ ರೇಡಿಯೋ ತರಂಗಗಳು ಮನುಷ್ಯನ ರೋಗನಿಉರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ, ಹಾಗೆಯೇ 5 ಜಿ ತಂತ್ರಜ್ಞಾನದಿಂದ ಕೊರೊನಾವೈರಸ್ ಹರಡಲಿದೆ ಎನ್ನುವ ಸುದ್ದಿಯನ್ನು ಕೆಲವು ಹಬ್ಬಿಸಿದರು.