ಸಮೀಕ್ಷೆ : ಬಾಲಕೋಟ್ ದಾಳಿ ನಂತರ ಮೋದಿ ಪುನರ್ ಆಯ್ಕೆ?
Recommended Video
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಉಗ್ರರು ನಡೆಸಿದ ಆತ್ಮಾಹುತಿ ದಾಳಿ ಹಾಗೂ ಅದಕ್ಕೆ ಪ್ರತಿಯಾಗಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಬಾಲಕೋಟ್ ನಲ್ಲಿ ಭಾರತದ ವೈಮಾನಿಕ ದಾಳಿಗಳು ಮುಂಬರುವ ಲೋಕಸಭೆ ಚುನಾವಣೆ 2019ರಲ್ಲಿ ಯಾವ ರೀತಿ ಪರಿಣಾಮ ಬೀರಬಹುದು. ನರೇಂದ್ರ ಮೋದಿ ಅವರ ಪುನರ್ ಆಯ್ಕೆಗೆ ಇದು ಸಹಕಾರಿಯಾಗಬಹುದೆ ಎಂಬ ವಿಷಯದ ಬಗ್ಗೆ ದಿ ಕ್ವಿಂಟ್ ನಡೆಸಿದ ಸಮೀಕ್ಷಾ ವರದಿಯ ವಿವರ ಇಲ್ಲಿದೆ.
ಫೆಬ್ರವರಿ 14ರಂದು ಪುಲ್ವಾಮಾ ಜಿಲ್ಲೆಯ ಆವಂತಿಪೋರ್ ನಲ್ಲಿ ನಡೆದ ಉಗ್ರರ ದಾಳಿ, ಇದಕ್ಕೆ ಪ್ರತಿಯಾಗಿ ಬಾಲಕೋಟ್, ಮುಜಾಫರ್ ಬಾದ್ ಹಾಗೂ ಚಕೋತಿಯಲ್ಲಿ ನೆಲೆಸಿದ್ದ ಉಗ್ರರ ನೆಲೆ ಮೇಲೆ ಫೆಬ್ರವರಿ 27ರಂದು ಭಾರತೀಯ ವಾಯುಸೇನೆ ಯಶಸ್ವಿ ದಾಳಿ ನಡೆಸಿದ್ದು, ಐಎಎಫ್ ವಿಂಗ್ ಕಮಾಂಡರ್ ಪೈಲಟ್ ಅಭಿನಂದನ್ ವರ್ಧಮಾನ್ ಅವರು ಪಾಕಿಸ್ತಾನಿಗಳ ಕೈಗೆ ಸೆರೆಸಿಕ್ಕಿದ್ದು, ಎರಡು ದಿನಗಳ ನಂತರ ಬಿಡುಗಡೆ, ಗಡಿಯಲ್ಲಿನ ನಿರಂತರ ಗುಂಡಿನ ಚಕಮಕಿ, ಪಾಕಿಸ್ತಾನವನ್ನು ದುರ್ಬಲಗೊಳಿಸಲು ಕೈಗೊಂದ ರಾಜತಾಂತ್ರಿಕ ನಡೆಗಳು ಎಲ್ಲವೂ 2019ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಪರಿಗಣಿತವಾಗಲಿವೆ.
ಇಂಡಿಯಾ ಟುಡೇ ಸಮೀಕ್ಷೆ: ಯಾರೇ ಕೂಗಾಡಲಿ ವೋಟ್ ಶೇರಿಂಗ್ ನಲ್ಲಿ ಬಿಜೆಪಿಯೇ ನಂಬರ್ 1
ಪಾಕಿಸ್ತಾನ ಮೇಲೆ ಎಲ್ಲರ ಗಮನ ಕೇಂದ್ರಿಕೃತವಾಗಿರುವುದರಿಂದ ನಿರುದ್ಯೋಗ, ಕೃಷಿ ಸಮಸ್ಯೆಗಳು, ರಫೇಲ್ ಒಪ್ಪಂದದ ಗೊಂದಲ ಹೀಗೆ ಇನ್ನಿತರ ವಿಷಯಗಳಿಂದ ಜನರ ಮನಸ್ಸು, ಮಾಧ್ಯಮ, ವಿಪಕ್ಷಗಳು ವಿಮುಖವಾಗಿವೆ.
1999ರ ಕಾರ್ಗಿಲ್ ವಿಜಯದ ನಂತರ ವಾಜಪೇಯಿ
1998ಕ್ಕೆ ಹೋಲಿಸಿದರೆ 1999ರಲ್ಲಿ ಕಾರ್ಗಿಲ್ ಯುದ್ಧದ ಬಳಿಕ ಅಟಲ್ ಬಿಹಾರಿ ವಾಜಪೇಯಿ ಅವರ ಜನಪ್ರಿಯತೆ ಶೇ 9ರಷ್ಟು ಏರಿಕೆ ಕಂಡಿತು ಎಂದು ಲೋಕನೀತಿ-ಸಿಎಸ್ ಡಿಎಸ್ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿತ್ತು. ಕಾರ್ಗಿಲ್ ಯುದ್ಧ ವಿಷಯದಲ್ಲಿ ವಾಜಪೇಯಿ ಸರ್ಕಾರ ಪರ ಶೇ 63.5ರಷ್ಟು ಮತಗಳು ಬಂದವು. ಆದರೆ, ಶೇಕಡಾವಾರು ಮತಗಳಿಕೆ ಶೇ 1.8ರಷ್ಟು ಇಳಿಕೆಯಾಯಿತು.
1998 ಹಾಗೂ 1999ರ ಶೇಕಡಾವಾರು ಮತ ಗಳಿಕೆ
ಈ ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ 1999ರಲ್ಲಿ 43 ಕ್ಷೇತ್ರಗಳಲ್ಲಿ ಬಿಜೆಪಿ ಸ್ಪರ್ಧಿಸಿರಲಿಲ್ಲ. ಸ್ಪರ್ಧಿಸಿದ್ದ ಕ್ಷೇತ್ರಗಳಲ್ಲಿ ಶೇ 50-55ರಷ್ಟು ಗೆಲುವು ಸಾಧಿಸಿದರೆ, 1998ರಲ್ಲಿ ಶೇ 45 ರಿಂದ 50ರ ತನಕ ಜಯ ದಾಖಲಾಗಿತ್ತು. ರಾಜ್ಯವಾರು ಲೆಕ್ಕಾಚಾರದಲ್ಲಿ 1999ರಲ್ಲಿ ಗೋವಾದಲ್ಲಿ 21.4%, ಹರ್ಯಾಣ 10.3% ಹೆಚ್ಚಿನ ಪಾಲು ಹೊಂದಿದ್ದವು. ಬಿಹಾರ, ಮಹಾರಾಷ್ಟ್ರ, ಕೇರಳ, ಪಂಜಾಬ್, ಹಿಮಾಚಲ ಪ್ರದೇಶ, ಆಂಧ್ರಪ್ರದೇಶ, ಉತ್ತರಪ್ರದೇಶದಲ್ಲಿ (-8.8%) ವೈಫಲ್ಯ ಕಂಡಿತ್ತು.
2014ರಲ್ಲಿ ಬಿಜೆಪಿ ಗೆದ್ದ ಹೈಪ್ರೊಫೈಲ್ ಲೋಕಸಭಾ ಸೀಟುಗಳು
ಪುಲ್ವಾಮಾ ದಾಳಿ ನಂತರ ರಾಜಕೀಯ ಮೈತ್ರಿಗಳು
ಪುಲ್ವಾಮಾ ಉಗ್ರರ ದಾಳಿ ನಂತರ ಬಿಜೆಪಿ ತನ್ನ ಹಳೆ ದೋಸ್ತಿಗಳತ್ತ ಮತ್ತೆ ಕೈ ಚಾಚಿತು. ಸಂಬಂಧ ಇನ್ನೇನು ಮುರಿದು ಬಿತ್ತು ಎನ್ನವಷ್ಟರಲ್ಲೇ ಶಿವಸೇನಾ ಹಾಗೂ ಅಕಾಲಿ ದಳ ಜತೆ ಮೈತ್ರಿ ಘೋಷಣೆಯಾಯಿತು. ಬಾಲಕೋಟ್ ವೈಮಾನಿಕ ದಾಳಿ ಬಳಿಕ, ಉತ್ತರಪ್ರದೇಶದಲ್ಲಿ ಅಪ್ನಾ ದಳ್ ಹಾಗೂ ಸುಹೆಲ್ದೆವ್ ಭಾರತೀಯ ಸಮಾಜ್ ಪಾರ್ಟಿ ಜತೆ ಬಿಜೆಪಿ ಸಖ್ಯ ಬೆಳೆಸಿತು. ದಕ್ಷಿಣದಲ್ಲಿ ಎಐಎಡಿಎಂಕೆ ಜತೆ ಬಿಜೆಪಿ ಮೈತ್ರಿ ಸಾಧಿಸುವಲ್ಲಿ ಯಶಸ್ವಿಯಾಯಿತು.
ಶಿವಸೇನೆ ದೋಸ್ತಿ ಹೆಚ್ಚು ಲಾಭ, ಸ್ವತಂತ್ರ ಸ್ಪರ್ಧೆಯೂ ಬಿಜೆಪಿಗೆ ಲಾಭ
ರಾಜ್ಯವಾರು ಸ್ಥಾನಗಳಿಕೆ ಸಾಧ್ಯತೆಗಳು
ಹಿಮಾಚಲ ಪ್ರದೇಶ(4), ಉತ್ತರಾಖಂಡ್(5), ರಾಜಸ್ಥಾನ್ (25), ಮಧ್ಯಪ್ರದೇಶ (29), ಛತ್ತೀಸ್ ಗಢ (11), ಗುಜರಾತ್ (26), ದಮನ್ ಹಾಗೂ ಡಿಯು (1), ದಾದ್ರಾ ಮತ್ತು ನಗರ್ ಹವೇಲಿ(1), ಅಂಡಮಾನ್ ಅಂಡ್ ನಿಕೋಬಾರ್ ದ್ವೀಪ (1), ಗೋವಾ (2), ಜಮ್ಮು ಮತ್ತು ಕಾಶ್ಮೀರ (2) ಎಲ್ಲವೂ ಸೇರಿ 107 ಸ್ಥಾನಗಳು, ಈ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನೇರ ಹಣಾಹಣಿ ಇದೆ. ಸದ್ಯ 104 ಸ್ಥಾನ ಗೆದ್ದಿರುವ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಅದೇ ಶೋ ರಿಪೀಟ್ ಮಾಡುವುದು ಕಷ್ಟ.ಭಾರತ ಹಾಗೂ ಪಾಕ್ ನಡುವಿನ ಶೀತಲ ಸಮರ ಇಲ್ಲಿನ ಪ್ರಮುಖ ವಿಷಯವಾಗಲಿದೆ. ರೈತರ ಸಾಲಮನ್ನಾ, ನಿರುದ್ಯೋಗ ಮುಂತಾದ ವಿಷಯಗಳನ್ನು ಕಾಂಗ್ರೆಸ್ ಹೆಚ್ಚಾಗಿ ಚುನಾವಣೆ ವಿಷಯವಾಗಿ ಬಳಸಿಕೊಂಡರೆ ಬೇರೆ ಪರಿಣಾಮ, ಬದಲಾವಣೆ ಸಾಧ್ಯವಾಗಬಹುದು.
ದೆಹಲಿ, ಹರ್ಯಾಣ, ಮಹಾರಾಷ್ಟ್ರದಲ್ಲಿ ಲೆಕ್ಕಾಚಾರ
ಹರ್ಯಾಣ(10), ಮಹಾರಾಷ್ಟ್ರ (48), ದೆಹಲಿ (7), ಚಂದೀಗಢ ಎಲ್ಲವೂ ಸೇರಿ ಎನ್ಡಿಎ 67 ಸೀಟುಗಳ ಪೈಕಿ 58 ಸೀಟು ಗೆದ್ದಿತ್ತು. ಆದರೆ, ಪಾಕಿಸ್ತಾನ ಬೆಂಬಲಿತ ಉಗ್ರರ ವಿರುದ್ಧ ದಾಳಿ ನಡೆಸಿದರೂ, ಮೂಲ ಸೌಕರ್ಯ, ರೈತರ ಸಮಸ್ಯೆಗಳು ಈ ರಾಜ್ಯಗಳಲ್ಲಿ ಮುಖ್ಯವಾಗಿದ್ದು, ಬಿಜೆಪಿ ಹಿನ್ನಡೆ ಅನುಭವಿಸುವ ಸಾಧ್ಯತೆ ಹೆಚ್ಚಿದೆ.
ಯಾವ ರಾಜ್ಯಗಳಲ್ಲಿ ಬಿಜೆಪಿಗೆ ಲಾಭ
ಪಶ್ಚಿಮ ಬಂಗಾಲ (42), ಒಡಿಶಾ (21) ಗಳಲ್ಲಿ ಪ್ರಾದೇಶಿಕ ಪಕ್ಷಗಳು ಅಧಿಕಾರದಲ್ಲಿದ್ದರೂ ಬಿಜೆಪಿಯ ಶೇಕಡವಾರು ಮತ ಗಳಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಆದರೆ, ಇದು ಮತಗಳಾಗಿ ಪರಿವರ್ತನೆಯಾಗಿ ಬಿಜೆಪಿಗೆ ಗೆಲುವು ತಂದುಕೊಡಬಲ್ಲುದು ಎಂದು ನಿಖರವಾಗಿ ಹೇಳಲಾಗದು. ಇದೇ ರೀತಿ ಬಿಹಾರ(40), ತಮಿಳುನಾಡು(39), ಪುದುಚೇರಿ (1) ಗಳಲ್ಲಿ ಬಿಜೆಪಿ ಮಾಡಿಕೊಂಡಿರುವ ಮೈತ್ರಿ ಪಕ್ಷಗಳ ಮೇಲೆ ಫಲಿತಾಂಶ ನಿರ್ಧಾರವಾಗಲಿದೆ.
ಕರ್ನಾಟಕದಲ್ಲಿ ಯಾವ ರೀತಿ ಪರಿಣಾಮ
ಉತ್ತರಪ್ರದೇಶ(80), ಕರ್ನಾಟಕ (28), ಜಾರ್ಖಂಡ್ (14) ರಾಜ್ಯಗಳಲ್ಲಿ ಪ್ರತಿಪಕ್ಷಗಳ ಮೈತ್ರಿಯಿಂದ ಬಿಜೆಪಿಗೆ ಹೆಚ್ಚಿನ ಸ್ಥಾನಗಳು ಕಷ್ಟವಾಗಲಿದೆ. ಪುಲ್ವಾಮಾ ದಾಳಿಯನ್ನು ರಾಜಕೀಯ ವಿಷಯವಾಗಿ ಬಳಕೆ ಮಾಡಲಾಗುತ್ತಿದ್ದು, ಇದರಿಂದ ಹೆಚ್ಚಿನ ಪರಿಣಾಮ ನಿರೀಕ್ಷಿಸಬಹುದು. ತೆಲಂಗಾಣ (17), ಆಂಧ್ರಪ್ರದೇಶ(25), ಕೇರಳ (20), ಪಂಜಾಬ್ (13), ಸಿಕ್ಕಿಂ (1) ಹಾಗೂ ಲಕ್ಷದೀಪ್ (1) ಈ ರಾಜ್ಯಗಳಲ್ಲಿ ಬಿಜೆಪಿಗೆ ಹೆಚ್ಚಿನ ಲಾಭ ಸಿಗುವುದು ಕಷ್ಟ.