Get Updates
Get notified of breaking news, exclusive insights, and must-see stories!

ಕಣ್ಮರೆಯಾದ ಗಾನಗಂಧರ್ವಗೆ ಪದ್ಮವಿಭೂಷಣದ ಗೌರವ: ಎಸ್‌ಪಿಬಿ ಜೀವನ-ಸಾಧನೆ

ಕಳೆದ ವರ್ಷ ತಮ್ಮ ಅಸಂಖ್ಯಾತ ಅಭಿಮಾನಿಗಳನ್ನು ದುಃಖದ ಮಡುವಿನಲ್ಲಿ ಅಗಲಿದ ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಮಣ್ಯಂ ಅವರಿಗೆ ಕೊನೆಗೂ ಕೇಂದ್ರ ಸರ್ಕಾರದಿಂದ ಸೂಕ್ತ ಗೌರವ ಸಂದಿದೆ. ಎಸ್‌ಪಿಬಿ ಅವರಿಗೆ ಮರಣೋತ್ತರವಾಗಿ ಪದ್ಮವಿಭೂಷಣ ಪುರಸ್ಕಾರ ನೀಡಲಾಗಿದೆ. ಹತ್ತಾರು ಭಾಷೆಗಳಲ್ಲಿ ಸಾವಿರಾರು ಹಾಡುಗಳನ್ನು ಹಾಡಿರುವ ಎಸ್‌ಪಿಬಿ ಅವರಿಗೆ ಈ ಗೌರವ ಯಾವಾಗಲೋ ಸಿಗಬೇಕಿತ್ತು. ವಾಸ್ತವವಾಗಿ ಅವರು 'ಭಾರತ ರತ್ನ'ಕ್ಕೆ ಅರ್ಹರು. ಆದರೆ ಈಗಲಾದರೂ ದೇಶದ ಎರಡನೆಯ ಅತ್ಯುನ್ನತ ನಾಗರಿಕ ಗೌರವ ಪದ್ಮವಿಭೂಷಣ ಸಿಕ್ಕಿದೆ ಎಂದು ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಕೊರೊನಾ ವೈರಸ್‌ಗೆ ತುತ್ತಾಗಿದ್ದ ಎಸ್‌ಪಿ ಬಾಲಸುಬ್ರಮಣ್ಯಂ ಅವರಲ್ಲಿ ಅನೇಕ ಆರೋಗ್ಯ ಸಮಸ್ಯೆಗಳು ಒಂದರ ಹಿಂದೊಂದರಂತೆ ಕಾಣಿಸಿಕೊಂಡಿದ್ದವು. 2020ರ ಆಗಸ್ಟ್ ತಿಂಗಳಲ್ಲಿ ಅವರನ್ನು ಚೆನ್ನೈ ಆಸ್ಪತ್ರೆಗೆ ದಾಖಲಿಸಲಾಗಿತ್ತು. 74 ವರ್ಷದ ಎಸ್‌ಪಿಬಿ ಸಾವನ್ನು ಗೆದ್ದು ಬರುತ್ತಾರೆ ಎಂಬ ನಂಬಿಕೆ ಎಲ್ಲರಲ್ಲಿತ್ತು. ಆದರೆ ಸೆಪ್ಟೆಂಬರ್ 25ರಂದು ಆ ನಂಬಿಕೆ ಹುಸಿಯಾಯಿತು. ಸಾವಿರಾರು ಜನರ ಪ್ರಾರ್ಥನೆ, ಹಾರೈಕೆಗಳು ಈಡೇರಲಿಲ್ಲ.

ಎಸ್‌ಪಿಬಿ ಅವರಿಗೆ 2001ರಲ್ಲಿ ಪದ್ಮಶ್ರೀ, 2011ರಲ್ಲಿ ಪದ್ಮಭೂಷಣ ಪುರಸ್ಕಾರಗಳು ಒಲಿದಿದ್ದವು. ಈ ಎರಡೂ ಹತ್ತು ವರ್ಷದ ಅಂತರದಲ್ಲಿ ದೊರಕಿದ್ದವು. ಈಗ ಮತ್ತೆ ಸರಿಯಾಗಿ ಹತ್ತು ವರ್ಷದ ಬಳಿಕ ಅವರಿಗೆ ಪದ್ಮ ವಿಭೂಷಣ ಸಿಕ್ಕಿದೆ. ಆದರೆ ಈ ಬಾರಿ ಪುರಸ್ಕಾರ ಪಡೆಯಲು ಅವರಿಲ್ಲ. 2011ರಲ್ಲಿ ಖ್ಯಾತ ಗಾಯಕಿ ಕೆಎಸ್ ಚಿತ್ರಾ ಕೂಡ ಎಸ್‌ಪಿಬಿ ಅವರೊಂದಿಗೆ ಪದ್ಮಭೂಷಣ ಪಡೆದಿದ್ದರು. ಮುಂದೆ ಓದಿ.

ತೆಲುಗು ಮಾತೃಭಾಷೆ

ತೆಲುಗು ಮಾತೃಭಾಷೆ

ಆಂಧ್ರಪ್ರದೇಶದ ನೆಲ್ಲೂರಿನಲ್ಲಿ 1946, ಜೂನ್ 4 ರಂದು ಹುಟ್ಟಿದ ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ ಮುಂದೆ ಎಸ್‌ಪಿಬಿ ಆಗಿ ಜನಮಾನಸದಲ್ಲಿ ಹೆಸರಾದರು. ಅವರದು ತೆಲುಗು ಮಾತೃಭಾಷೆಯಾದರೂ ಅವರು ಹಾಡಿದ ಭಾಷೆಗಳ ಜನರೆಲ್ಲರೂ ಅವರನ್ನು ತಮ್ಮವರು ಎಂದೇ ಒಪ್ಪಿಕೊಂಡರು.

ಗುರುವಾಗಿ ಸಿಕ್ಕ ಕೋದಂಡಪಾಣಿ

ಗುರುವಾಗಿ ಸಿಕ್ಕ ಕೋದಂಡಪಾಣಿ

ಸಾಮಾನ್ಯ ಕುಟುಂಬದಲ್ಲಿ ಹುಟ್ಟಿದ ಎಸ್‌ಪಿಬಿಗೆ ಇಬ್ಬರು ಸಹೋದರರು, ಐವರು ಸಹೋದರಿಯರು. ಎಸ್‌ಪಿಬಿ ತಂದೆ ನಾಟಕಗಳಲ್ಲಿ ಅಭಿನಯಿಸುತ್ತಿದ್ದರು. ಎಸ್‌ಪಿಬಿ ಸಣ್ಣ ವಯಸ್ಸಿನಲ್ಲಿಯೇ ಸಂಗೀತಾಭ್ಯಾಸ ಮಾಡಲು ಆರಂಭಿಸಿದರು. ಎಸ್‌ಪಿಬಿ ಅವರು ಎಂಜಿನಿಯರಿಂಗ್ ಪದವಿ ಪಡೆಯುವ ಸಲುವಾಗಿ ಅನಂತಪುರದ ಜೆಎನ್‌ಟಿಯುಕ್ಕೆ ಪ್ರವೇಶ ಪಡೆದಿದ್ದರು. ಆದರೆ ಒಮ್ಮೆ ಅನಾರೋಗ್ಯ ಉಂಟಾಗಿದ್ದರಿಂದ ಓದು ಮೊಟಕುಗೊಂಡಿತು. ಕೊನೆಗೆ ಕಾಲೇಜು ಮೆಟ್ಟಿಲೇರಲು ಅವರಿಗೆ ಮನಸಾಗಲಿಲ್ಲ. ಸಂಗೀತ ಕ್ಷೇತ್ರ ಸೆಳೆಯುತ್ತಿತ್ತು. ಚೆನ್ನೈನ ಎಂಜಿನಿಯರ್ ಸಂಸ್ಥೆಯ ಅಸೋಸಿಯೇಟ್ ಸದಸ್ಯರಾಗಿ ಸೇರಿಕೊಂಡವರು, ಅದೇ ಸಮಯಕ್ಕೆ ವಿವಿಧ ಸಂಗೀತ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳಲಾರಂಭಿಸಿದರು. ಒಂದು ಸ್ಪರ್ಧೆಯಲ್ಲಿ ಎಸ್‌ಪಿ ಕೋದಂಡಪಾಣಿ ಮತ್ತು ಘಂಟಸಾಲ ತೀರ್ಪುಗಾರರಾಗಿದ್ದರು. ಆ ಸಮಯದಲ್ಲಿಯೇ ಎಸ್‌ಪಿಬಿಗೆ ಕೋದಂಡಪಾಣಿ ಗುರುಗಳಾಗಿ ಸಿಕ್ಕರು.

ಎಸ್‌ಪಿಬಿ 16 ನೇ ವರ್ಷದವರಿದ್ದಾಗಲೇ ಸಂಗೀತ ಸ್ಪರ್ಧೆಯಲ್ಲಿ ಅವರ ಹಾಡು ಕೇಳಿದ್ದ ಎಸ್.ಜಾನಿಕಿ, 'ನೀನು ಸಿನಿಮಾದಲ್ಲಿ ಹಾಡು, ನಿನಗೆ ಭವಿಷ್ಯವಿದೆ' ಎಂದಿದ್ದರು, ಆಗ ಎಸ್‌ಪಿಬಿ ನಕ್ಕುಬಿಟ್ಟಿದ್ದರಂತೆ.

ಎಸ್‌ಪಿಬಿ-ಇಳೆಯರಾಜ ಜೋಡಿ

ಎಸ್‌ಪಿಬಿ-ಇಳೆಯರಾಜ ಜೋಡಿ

ಎಸ್‌ಪಿಬಿ ಒಂದು ಸಂಗೀತ ತಂಡವನ್ನು ನಡೆಸುತ್ತಿದ್ದರು. ಅದರಲ್ಲಿ ಸಂಗೀತ ಮಾಂತ್ರಿಕ ಇಳೆಯರಾಜ ಗಿಟಾರ್ ಹಾಗೂ ಇತರೆ ವಾದ್ಯಗಳನ್ನು ನುಡಿಸುತ್ತಿದ್ದರೆ, ಅನಿರುತ್ತ ಹಾರ್ಮೋನಿಯಂ ನುಡಿಸುತ್ತಿದ್ದರು. ಇಳೆಯರಾಜ ಅವರೊಂದಿಗಿನ ಸಂಗೀತ ಪಯಣ ಹಲವು ವರ್ಷಗಳವರೆಗೆ ನಡೆದಿತ್ತು. ಗುರುಗಳಾದ ಕೋದಂಡಪಾಣಿ ಅವರಿಂದ 1966ರಲ್ಲಿ 'ಶ್ರೀ ಮರ್ಯಾದಾ ರಾಮಣ್ಣ' ಚಿತ್ರದ ಮೂಲಕ ಎಸ್‌ಪಿಬಿ ಸಿನಿಮಾ ಸಂಗೀತಕ್ಕೆ ಕಾಲಿರಿಸಿದರು. ಎಂಟೇ ದಿನದಲ್ಲಿ ಕನ್ನಡದ 'ನಕ್ಕರೆ ಅದೇ ಸ್ವರ್ಗ' ಚಿತ್ರದಲ್ಲಿ ಹಾಡಿದರು. ಕೆಲವು ದಿನಗಳ ಬಳಿಕ ತಮಿಳು ಮತ್ತು ಮಲಯಾಳಂಗೆ ಸಹ ಪದಾರ್ಪಣೆ ಮಾಡಿದರು.

ಸಾಲು ಸಾಲು ಅವಕಾಶಗಳು

ಸಾಲು ಸಾಲು ಅವಕಾಶಗಳು

ಆ ಕಾಲದಲ್ಲಿ ಪಿ.ಬಿ. ಶ್ರೀನಿವಾಸ್, ಟಿ.ಎಂ. ಸೌಂದರರಾಜನ್ ಸಿನಿಮಾ ಹಾಡುಗಳ ಗಾಯನದಲ್ಲಿ ಉತ್ತುಂಗದಲ್ಲಿದ್ದರು. ಹೀಗಿರುವಾಗ ಎಂ.ಜಿ.ಆರ್, ಜಯಲಲಿತಾ ಅವರೊಂದಿಗೆ ನಟಿಸಿದ 'ಅದಿಮೈ ಪೆನ್' ಚಿತ್ರದ 'ಆಯಿರಾಮ್ ನಿಲವೆ ವಾ' ಹಾಡನ್ನು ಎಸ್‌ಪಿಬಿಯೇ ಹಾಡಬೇಕು ಎಂದು ವೈಯಕ್ತಿಕವಾಗಿ ಆಸೆಪಟ್ಟು ಹಾಡಿಸಿದ್ದರು. ಈ ಹಾಡು ಹಿಟ್ ಆದ ಪರಿ ಹೇಗಿತ್ತು ಎಂದರೆ, ಪಿಬಿಎಸ್ ಮತ್ತು ಟಿಎಂಎಸ್ ಅವರಿಗಿಂತಲೂ ಎಸ್‌ಪಿಬಿ ಬಹು ಬೇಡಿಕೆಯ ಗಾಯಕರಾದರು.

ಎಸ್‌ಪಿಬಿ ಮತ್ತು ಇಳೆಯರಾಜ ಸಂಗೀತ ಜೋಡಿ ಸೃಷ್ಟಿಸಿದ ಅಲೆ ಸಾಮಾನ್ಯದ್ದಲ್ಲ. ಎಸ್‌ಪಿಬಿ ಕೆಲಸ ಮಾಡಿದ ಎಲ್ಲ ಸಂಗೀತ ನಿರ್ದೇಶಕರಿಂದಲೂ ಇಂತಹ ಮಧುರ ಹಾಡುಗಳು ಸಿಕ್ಕಿವೆ. ಕನ್ನಡದಲ್ಲಿ ಹಂಸಲೇಖ-ಎಸ್‌ಪಿಬಿ ಜೋಡಿ ಕೂಡ ಇಂತಹ ಅಲೆ ಸೃಷ್ಟಿಸಿತ್ತು. ಎಆರ್ ರೆಹಮಾನ್ ಜತೆಗೂ ಎಸ್‌ಪಿಬಿ ಅನೇಕ ಹಿಟ್ ಹಾಡುಗಳನ್ನು ನೀಡಿದ್ದರು.

ಹಿಂದಿಯಲ್ಲಿ ಎಸ್‌ಪಿಬಿ

ಹಿಂದಿಯಲ್ಲಿ ಎಸ್‌ಪಿಬಿ

ದಿಗ್ಗಜ ನಿರ್ದೇಶಕ ಕೆ. ಬಾಲಚಂದರ್ ಅವರ 'ಮನೋಚರಿತ' ತೆಲುಗು ಚಿತ್ರ ಹಿಂದಿಯಲ್ಲಿ 'ಏಕ್ ದುಜೆ ಕೆ ಲಿಯೆ' ಹೆಸರಲ್ಲಿ ರೀಮೇಕ್ ಆಗಿತ್ತು. ಹಿಂದಿ ಆವೃತ್ತಿಗೆ ಲಕ್ಷ್ಮೀಕಾಂತ್ ಪ್ಯಾರೆಲಾಲ್ ಸಂಗೀತ ನೀಡಿದ್ದರು. ಲಕ್ಷ್ಮೀಕಾಂತ್ ಅವರಿಗೆ ಬಾಲಚಂದರ್ ಹಾಕಿದ್ದ ಷರತ್ತು ಏನೆಂದರೆ ಈ ಚಿತ್ರದ ಎಲ್ಲ ಪುರುಷ ಹಾಡುಗಳನ್ನೂ ಎಸ್‌ಪಿಬಿ ಅವರೇ ಹಾಡಬೇಕು ಎನ್ನುವುದು. ಈ ಚಿತ್ರದ ಹಾಡಿಗೆ ಎಸ್‌ಪಿಬಿಗೆ ರಾಷ್ಟ್ರಪ್ರಶಸ್ತಿ ಒಲಿಯಿತು. 'ಮೈನೆ ಪ್ಯಾರ್ ಕಿಯಾ', 'ಹಮ್ ಆಪ್ನೆ ಹೈ ಕೌನ್' ಮುಂತಾದ ಹಿಟ್ ಸಿನಿಮಾಗಳಿಗೆ ಎಸ್‌ಪಿಬಿ ಧ್ವನಿಯಾಗಿದ್ದರು. ಅವರು ಕೊನೆಯದಾಗಿ ಹಾಡಿದ ಹಿಂದಿ ಸಿನಿಮಾ 'ಚೆನ್ನೈ ಎಕ್ಸ್‌ಪ್ರೆಸ್' ಕೂಡ ಹಿಟ್ ಆಗಿತ್ತು.

ಶಾಸ್ತ್ರೀಯ ಸಂಗೀತದ ಸವಾಲು

ಶಾಸ್ತ್ರೀಯ ಸಂಗೀತದ ಸವಾಲು

ಭಾರತದ ಶಾಸ್ತ್ರೀಯ ಸಂಗೀತ ಆಧಾರಿತ ಸಿನಿಮಾಗಳಲ್ಲಿ ಪ್ರಮುಖ ಸ್ಥಾನ ಪಡೆದಿರುವ ಚಿತ್ರ 'ಶಂಕರಾಭರಣಂ'. ಕ್ಲಾಸಿಕಲ್ ಗೀತೆಗಳಿಂದ ಪ್ರಸಿದ್ಧರಾಗಿದ್ದ ಜೇಸುದಾಸ್ ಮತ್ತು ಬಾಲಮುರಳಿ ಕೃಷ್ಣ ಅವರಿದ್ದಾಗಲೂ ಸಂಗೀತ ನಿರ್ದೇಶಕ ಕೆ.ವಿ. ಮಹದೇವನ್ ಅವರು ಎಸ್‌ಪಿಬಿಗೆ ಮಣೆ ಹಾಕಿದ್ದರು. ಶಾಸ್ತ್ರೀಯ ಸಂಗೀತದ ಕಠಿಣ ಸ್ವರಗಳ ಹಾಡುಗಳನ್ನು ಹಾಡುವುದು ಎಸ್‌ಪಿಬಿಗೆ ದೊಡ್ಡ ಸವಾಲಾಗಿತ್ತು. ಹಾಡಿನಿಂದಲೇ ತುಂಬಿದ್ದ ಈ ಚಿತ್ರದ ಎಲ್ಲ ಹಾಡುಗಳನ್ನು ಅವರೇ ಹಾಡಬೇಕಿತ್ತು. ಹಗಲು ರಾತ್ರಿ ನಿದ್ದೆ ಬಿಟ್ಟು ಸತತ ಅಭ್ಯಾಸ ನಡೆಸಿ ಅವರು ಈ ಹಾಡುಗಳನ್ನು ಹಾಡಿದ್ದರಂತೆ. 1980ರಲ್ಲಿ ಬಿಡುಗಡೆಯಾದ ಈ ಚಿತ್ರದ ಹಾಡುಗಳು ಭರ್ಜರಿ ಹಿಟ್ ಆದವು, ಎಸ್ಪಿಬಿಗೆ ಮೊದಲ ರಾಷ್ಟ್ರಪ್ರಶಸ್ತಿ ತಂದುಕೊಟ್ಟಿತು. 1983ರಲ್ಲಿ ಮತ್ತೊಂದು ಸಂಗೀತ ಪ್ರಧಾನ ಚಿತ್ರ 'ಸಾಗರ ಸಂಗಮಮ್'ದಲ್ಲಿಯೂ ಎಸ್‌ಪಿಬಿ ರಾಷ್ಟ್ರಪ್ರಶಸ್ತಿ ಕಿರೀಟ ಮುಡಿಗೇರಿಸಿಕೊಂಡಿದ್ದರು.

ಒಂದೇ ದಿನ 21 ಹಾಡು ಮುದ್ರಣ

ಒಂದೇ ದಿನ 21 ಹಾಡು ಮುದ್ರಣ

ಎಸ್‌ಪಿಬಿ ಅವರ ಹೆಸರಲ್ಲಿ ವಿಶೇಷ ದಾಖಲೆಯೊಂದಿದೆ. ಆ ದಾಖಲೆ ಸೃಷ್ಟಿಯಾಗಿದ್ದು ಕನ್ನಡದಲ್ಲಿ ಎನ್ನುವುದು ಗಮನಾರ್ಹ. ಒಂದೇ ದಿನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಮುದ್ರಿಸಿದ ದಾಖಲೆ ಇದು. ಕನ್ನಡದ ಸಂಗೀತ ನಿರ್ದೇಶಕ ಉಪೇಂದ್ರ ಕುಮಾರ್ ಅವರು ಸಂಯೋಜಿಸಿದ 21 ಹಾಡುಗಳನ್ನು ಕೇವಲ 12 ಗಂಟೆಯಲ್ಲಿ ಮುದ್ರಿಸಿದ್ದರು. ತಮಿಳಿನಲ್ಲಿ ಒಂದೇ ದಿನ 19 ಹಾಡುಗಳು ಮತ್ತು ಹಿಂದಿಯಲ್ಲಿ 16 ಹಾಡುಗಳನ್ನು ಹಾಡಿದ್ದರು.

ಹಾಡುಗಳಲ್ಲಿ ಗಿನ್ನೆಸ್ ದಾಖಲೆ

ಹಾಡುಗಳಲ್ಲಿ ಗಿನ್ನೆಸ್ ದಾಖಲೆ

ಜೀವಮಾನದಲ್ಲಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ ಗಿನ್ನೆಸ್ ದಾಖಲೆ ಎಸ್‌ ಪಿ ಬಾಲಸುಬ್ರಮಣ್ಯಂ ಹೆಸರಿನಲ್ಲಿದೆ. ವರ್ಷಕ್ಕೆ ಸರಾಸರಿ 930 ಹಾಡುಗಳಂತೆ ಅಥವಾ ದಿನಕ್ಕೆ ಸುಮಾರು 3 ಹಾಡುಗಳಂತೆ ಅವರು 40,000ಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದಾರೆ. ಜಗತ್ತಿನ ಯಾವ ಗಾಯಕರೂ ಇಷ್ಟು ಹಾಡುಗಳನ್ನು ಹಾಡಿಲ್ಲ. ಅದರಲ್ಲಿಯೂ ಇಷ್ಟು ಭಾಷೆಗಳಲ್ಲಿ ಹಾಡಿ ದಾಖಲೆ ಮಾಡುವುದು ಬಹುಶಃ ಅಸಾಧ್ಯವೇ ಸರಿ. ಇದರ ಜತೆಗೆ ಎಸ್‌ಪಿಬಿ ತಮ್ಮ ಹೆಸರಲ್ಲಿ ಅನೇಕ ಖಾಸಗಿ ಆಲ್ಬಮ್‌ಗಳನ್ನೂ ಮಾಡಿದ್ದರು.

ಎಸ್‌ಪಿಬಿಗೆ ಒಲಿದ ಪ್ರಶಸ್ತಿಗಳು

ಎಸ್‌ಪಿಬಿಗೆ ಒಲಿದ ಪ್ರಶಸ್ತಿಗಳು

ಭಾರತದ ನಾಲ್ಕು ವಿಭಿನ್ನ ಭಾಷೆಗಳಿಗೆ ಆರು ರಾಷ್ಟ್ರ ಪ್ರಶಸ್ತಿಗಳನ್ನು ಪಡೆದ ಅಪರೂಪದ ಗಾಯಕ ಎಸ್‌ಪಿಬಿ. ತೆಲುಗಿನಲ್ಲಿ ಸಾಗರ ಸಂಗಮಂ, ಶಂಕರಾಭರಣಂ ಮತ್ತು ರುದ್ರವೀಣ ಚಿತ್ರಗಳಿಗೆ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದರು. ಕನ್ನಡದಲ್ಲಿ ಸಂಗೀತ ಸಾಗರ ಪಂಚಾಕ್ಷರಿ ಗವಾಯಿ, ತಮಿಳಿನಲ್ಲಿ ಮಿನ್ಸರಾ ಕನುವು ಮತ್ತು ಹಿಂದಿಯಲ್ಲಿ ಏಕ್ ದುಜೆ ಕೆಲಿಯೆ ಚಿತ್ರಕ್ಕೆ ಪ್ರಶಸ್ತಿಗಳು ಒಲಿದಿದ್ದವು. ಇದರ ಜತೆ ಬಾಲಿವುಡ್ ಫಿಲಂ ಫೇರ್ ಅವಾರ್ಡ್, ದಕ್ಷಿಣದಲ್ಲಿ ಐದು ಬಾರಿ ಫಲಂ ಫೇರ್ ಪ್ರಶಸ್ತಿ, 25 ನಂದಿ ಪ್ರಶಸ್ತಿಗಳು, ಪದ್ಮಶ್ರೀ (2001) ಮತ್ತು 2011ರಲ್ಲಿ ಪದ್ಮಭೂಷಣ ಸೇರಿದಂತೆ ಅನೇಕ ಪ್ರಶಸ್ತಿಗಳು ದೊರೆತಿದ್ದವು. ಈಗ ಆ ಸಾಲಿಗೆ ಪದ್ಮ ವಿಭೂಷಣದ ಗೌರವ ಸೇರ್ಪಡೆಯಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+