ಗೆದ್ದ 2 ಬಾರಿಯೂ ಸಚಿವರಾಗಿದ್ದ ಎಂ. ಸಿ. ಮನಗೂಳಿ ಪರಿಚಯ
ವಿಜಯಪುರ ಜಿಲ್ಲೆಯ ಸಿಂಧಗಿ ಕ್ಷೇತ್ರದ ಜೆಡಿಎಸ್ ಶಾಸಕ, ಮಾಜಿ ಸಚಿವ ಎಂ. ಸಿ. ಮನಗೂಳಿ (85) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಉಸಿರಾಟದ ತೊಂದರೆಯಿಂದ ಎಂ. ಸಿ. ಮನಗೂಳಿ ಬಳಲುತ್ತಿದ್ದರು. ಜನವರಿ 9ರಂದು ಕಲಬುರಗಿಯಿಂದ ಅವರನ್ನು ಬೆಂಗಳೂರಿಗೆ ಏರ್ ಲಿಫ್ಟ್ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಅವರು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.
ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕ ಎಂಸಿ ಮನಗೂಳಿ ವಿಧಿವಶ
ಮಲ್ಲಪ್ಪ ಚನ್ನವೀರಪ್ಪ ಮನಗೂಳಿ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರು. ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡರಿಗೆ ಪರಮಾಪ್ತರು. "ಜೀವ ಇರುವ ತನಕ ಜೆಡಿಎಸ್ ಪಕ್ಷ ಬಿಡುವುದಿಲ್ಲ" ಎಂದು ಅವರು ಹಲವು ಬಾರಿ ಹೇಳಿದ್ದರು.
ದೇವೇಗೌಡರ ಕಂಚಿನ ಪ್ರತಿಮೆಗೆ ಬೆಂಕಿ ಇಟ್ಟ ಕಿಡಿಗೇಡಿಗಳು
ಒಟ್ಟು ಆರು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಎಂ. ಸಿ. ಮನಗೂಳಿ ಅವರು ಎರಡು ಬಾರಿ ಗೆಲುವು ಸಾಧಿಸಿದ್ದರು. ಗೆದ್ದ ಎರಡು ಬಾರಿ ಸಹ ಅವರು ಸಚಿವರಾಗಿದ್ದರು. 2018ರ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್-ಜೆಡಿಎಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೂ ಮನಗೂಳಿ ಸಚಿವರಾಗಿದ್ದರು.
2018ರ ಚುನಾವಣೆ ಗೆಲುವು
1994ರಲ್ಲಿ ಮತ್ತು 2018ರ ಚುನಾವಣೆಯಲ್ಲಿ ಎಂ. ಸಿ. ಮನಗೂಳಿ ಅವರು ಗೆಲುವು ಸಾಧಿಸಿದ್ದರು. ಮೊದಲ ಬಾರಿ ಶಾಸಕರಾದಾಗ ಜೆ. ಎಚ್. ಪಟೇಲ್ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ, 2018ರಲ್ಲಿ ಗೆದ್ದ ಬಳಿಕ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ತೋಟಗಾರಿಕಾ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದ್ದರು. ಕಳೆದ ಚುನಾವಣೆಯಲ್ಲಿ 70,865 ಮತಗಳನ್ನು ಪಡೆದು ಬಿಜೆಪಿಯ ರಮೇಶ ಭೂಸನೂರ ವಿರುದ್ಧ ಗೆದ್ದಿದ್ದರು.
ಗುತ್ತಿ ಬಸವಣ್ಣ ಏತ ನೀರಾವರಿ ಯೋಜನೆ
ಸಿಂದಗಿ ಕ್ಷೇತ್ರಕ್ಕೆ ನೀರಾವರಿ ಯೋಜನೆ ಅನುಷ್ಠಾನ ಮಾಡುವುದರಲ್ಲಿ ಎಂ. ಸಿ. ಮನಗೂಳಿ ಅವರ ಶ್ರಮ ಸಾಕಷ್ಟಿದೆ. ಗುತ್ತಿ ಬಸವಣ್ಣ ಏತ ನೀರಾವರಿ ಜಾರಿಗೊಳಿಸುವುದರಲ್ಲಿ ಮನಗೂಳಿ ಅವರ ಪಾತ್ರ ದೊಡ್ಡದು. ಈ ಹಿನ್ನಲೆಯಲ್ಲಿ ಗೋಲಗೇರಿಯಲ್ಲಿ ಮನಗೂಳಿ ಮತ್ತು ದೇವೇಗೌಡರ ಕಂಚಿನ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ.
ರಾಜಕೀಯ ಚಿತ್ರಣ
1975ರಲ್ಲಿ ಎಂ. ಸಿ. ಮನಗೂಳಿ ವಿಜಯಪುರದ ಸಿಂದಗಿ ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪ್ರವೇಶ ಮಾಡಿದರು. ನಂತರ ಪುರಸಭೆ ಸದಸ್ಯರಾಗಿಯೂ ಕೆಲಸ ಮಾಡಿದರು. ಎರಡು ಬಾರಿ ವಿಧಾನಸಭೆ ಚುನಾವಣೆ ಗೆದ್ದ ಅವರು ಎರಡೂ ಬಾರಿಯೂ ಸಚಿವರಾಗಿ ಕಾರ್ಯ ನಿರ್ವಹಣೆ ಮಾಡಿದರು.
ಚುನಾವಣೆ ಸೋಲು, ಗೆಲುವು
1989ರಲ್ಲಿ ಸಮಾಜವಾದಿ ಜನತಾ ಪಕ್ಷದಿಂದ ಸಿಂದಗಿಯಲ್ಲಿ ಕಣಕ್ಕಿಳಿದಿದ್ದ ಎಂ. ಸಿ. ಮನಗೂಳಿ ಸೋಲು ಕಂಡಿದ್ದರು. 1994ರಲ್ಲಿ ಜನತಾದಳದಿಂದ ಶಾಸಕರಾಗಿ ಆಯ್ಕೆಯಾದರು. ಇದೇ ಅವಧಿಯಲ್ಲಿ ಜೆ. ಎಚ್. ಪಟೇಲ್ ಸಂಪುಟದಲ್ಲಿ ಸಚಿವರಾದರು. 1999, 2004, 2008 ಮತ್ತು 2013ರಲ್ಲಿ ಸೋತರು. 2018ರಲ್ಲಿ ಗೆದ್ದರು, ಕುಮಾರಸ್ವಾಮಿ ಸಂಪುಟದಲ್ಲಿ ಸಚಿವರಾದರು.