Sharath bacchegowda profile: ಹಠವಾದಿ ಯುವ ನಾಯಕ ಶರತ್ ಬಚ್ಚೇಗೌಡರ ವ್ಯಕ್ತಿ ಚಿತ್ರಣ
ಚಿಕ್ಕಬಳ್ಳಾಪುರ ಸಂಸದ ಬಿಎನ್ ಬಚ್ಚೇಗೌಡ ಅವರ ಮಗನಾದ ಶರತ್ ಬಚ್ಚೇಗೌಡ ಅವರು ಹೊಸಕೋಟೆಯ ಶಾಸಕರಾಗಿದ್ದಾರೆ. 2019ರಲ್ಲಿ ಅವರು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಬೆಂಗಳೂರು, ಮಾರ್ಚ್ 1: ರಾಜ್ಯ ಪ್ರಭಾವಿ ಯುವ ರಾಜಕಾರಣಿಗಳಲ್ಲಿ ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕ ಶರತ್ ಬಚ್ಚೇಗೌಡ ಒಬ್ಬರು. ಹೊಸಕೋಟೆ ಕ್ಷೇತ್ರದಲ್ಲಿ ತಮ್ಮದೇ ಆದ ಯುವಪಡೆ ಕಟ್ಟಿಕೊಂಡು ರಾಜ್ಯ ರಾಜಕಾರಣದಲ್ಲಿ ಮುಂದೆ ಬಂದವರು. ಅವರ ವ್ಯಕ್ತಿಗತ ಪರಿಚಯ, ರಾಜಕೀಯ ಹಿನ್ನೆಲೆಯ ಬಗ್ಗೆ ಇಲ್ಲಿ ತಿಳಿಯಿರಿ.
ಚಿಕ್ಕಬಳ್ಳಾಪುರ ಸಂಸದ ಬಿಎನ್ ಬಚ್ಚೇಗೌಡ ಅವರ ಮಗನಾದ ಶರತ್ ಬಚ್ಚೇಗೌಡ ಅವರು ಹೊಸಕೋಟೆಯ ಶಾಸಕರಾಗಿದ್ದಾರೆ. 2019ರಲ್ಲಿ ಅವರು ಹೊಸಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆ ಆಗಿದ್ದಾರೆ.

1982ರಲ್ಲಿ ಹೊಸಕೋಟೆಯ ಬೆಂಡಿಗಾನಹಳ್ಳಿಯಲ್ಲಿ ಜನಿಸಿದ ಶರತ್ ಬಚ್ಚೇಗೌಡ ರಾಜಕೀಯ ಹಿನ್ನೆಲೆ ಉಳ್ಳವರು. ಅವರ ತಂದೆ ಬಿ.ಎನ್.ಬಚ್ಚೇಗೌಡ ಮಾಜಿ ಸಚಿವರು, ಹಾಲಿ ಸಂಸದರು ಆಗಿದ್ದಾರೆ. ರಾಜಕೀಯ ಕುಟುಂಬದ ಹಿನ್ನೆಲೆ ಇದ್ದರೂ ರಾಜಕೀಯಕ್ಕೆ ಇಳಿಯದೆ ಶಿಕ್ಷಣ, ಉದ್ಯೋಗ, ಕುಟುಂಬ ವ್ಯವಹಾರ ಎಂದೇ ಇದ್ದ ಶರತ್ ಬಚ್ಚೇಗೌಡ ರಾಜಕೀಯಕ್ಕೆ ಧುಮುಕಿದ್ದು ಐದು ಆರು ವರ್ಷಗಳ ಹಿಂದೆಷ್ಟೇ.
ಓದಿನಲ್ಲಿ ಮುಂದಿದ್ದ ಶರತ್ ಪಿಇಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಅವರು ತಮ್ಮ ಉನ್ನತ ಶಿಕ್ಷಣವನ್ನು ಅಮೆರಿಕಾದ ಮಿಷಿಗನ್ ವಿಶ್ವವಿದ್ಯಾನಿಲಯದಲ್ಲಿ 2006ರಲ್ಲಿ ಮುಗಿಸಿದರು. ಬಳಿಕ ಬೆಂಗಳೂರಿಗೆ ಬಂದ ಅವರು ತಂದೆಯ ಜೊತೆಯಾಗಲಿ ಇಲ್ಲವೇ ಪ್ರತ್ಯೇಕವಾಗಲಿ ರಾಜಕೀಯದ ಗುಂಗಿಗೆ ಬಂದಿರಲಿಲ್ಲ, ಬದಲಿಗೆ ಅವರು ಸಿಇಓ, ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದರು. ಅಲ್ಲದೆ ತಮ್ಮದೆ ಕುಟುಂಬದ ಒಡೆತನದ ವ್ಯವಹಾರಗಳನ್ನು ಮಾಡತೊಡಗಿದ್ದರು. ಆದರೆ ಅವರ ತಂದೆ ಬಿಎನ್ ಬಚ್ಚೇಗೌಡ ಅವರು 2014ರಲ್ಲಿ ಚಿಕ್ಕಬಳ್ಳಾಪುರ ಲೋಕಸಭಾ ಚುನಾವಣಾ ಅಭ್ಯರ್ಥಿಯಾದಾಗ ಸ್ವಲ್ವ ಸನಿಹದಿಂದ ರಾಜಕೀಯವನ್ನು ಗಮನಿಸಿದರು. ಆವಾಗಲೂ ಅವರು ರಾಜಕೀಯ ಕಾರ್ಯಕ್ರಮ ಇನ್ನಿತರೆ ಕಾರ್ಯಗಳಲ್ಲಿ ಭಾಗವಹಿಸುತ್ತಿರಲಿಲ್ಲ.

ಆಗ ಕಳೆದ 2018ರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆಲುವಿನ ನಾಗಲೋಟದಲ್ಲಿ ಓಡುತ್ತಿದ್ದ ಎಂಟಿಬಿ ನಾಗರಾಜು ಅವರ ಬೆಳವಣಿಗೆಗೆ ತಡೆಯೊಡ್ಡಲು ಬಿಎಸ್ ಯಡಿಯೂರಪ್ಪ ಬೆಳಕಿಗೆ ತಂದ ಯುವ ನಾಯಕನೇ ಶರತ್ ಬಚ್ಚೇಗೌಡ. ಶರತ್ಗೆ ಬಿಜೆಪಿಯಿಂದ ಟಿಕೆಟ್ ದೊರಕಿಸುವಲ್ಲಿ ಅವರ ತಂದೆ ಬಚ್ಚೇಗೌಡ ಅವರ ಬೆಂಬಲವೂ ಇತ್ತೆಂಬುದರಲ್ಲಿ ಅನುಮಾನವಿಲ್ಲ. ಆದರೆ ಶರತ್ ಬಚ್ಚೇಗೌಡ ಬಿಟ್ಟರೆ ಆಗ ಬಿಜೆಪಿಗೆ ಬೇರೆ ಆಯ್ಕೆಯೂ ಇರಲಿಲ್ಲ. 2018ರಲ್ಲಿ ಮೊದಲ ಬಾರಿಗೆ ಚುನಾವಣೆ ಎದುರಿಸಿದ್ದ ಶರತ್ ಕೋಟ್ಯಧಿಪತಿ ಎಂಬಿಟಿ ನಾಗರಾಜ್ಗೆ ಭಾರಿ ಪೈಪೋಟಿ ನೀಡಿದ್ದರು. ಕೇವಲ 7597 ಮತಗಳ ಅಂತರದಿಂದ ಸೋತ ಶರತ್ ಯುವಕರನ್ನು ತಮ್ಮತ್ತ ಸೆಳೆಯಲು ಯಶಸ್ವಿ ಆಗಿದ್ದರು.
ಎದುರಿಸಿದ ಮೊದಲ ಚುನಾವಣೆಯಲ್ಲಿಯೇ ಭಾರಿ ಪೈಪೋಟಿ ನೀಡಿದ ಶರತ್ ಬಚ್ಚೇಗೌಡ ಯಡಿಯೂರಪ್ಪನವರ ಮೆಚ್ಚಿನ ಯುವ ನಾಯಕನಾಗಿಯೂ ಗುರುತಿಸಿಕೊಂಡಿದ್ದರು. ಅಷ್ಟೆ ಅಲ್ಲ ಬಿಜೆಪಿ ಯುವ ಮೋರ್ಚಾದ ರಾಜ್ಯ ಕಾರ್ಯದರ್ಶಿಯಾಗಿಯೂ ಕಾರ್ಯನಿರ್ವಹಿಸಿದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಿಂದ ಹೊಸಕೋಟೆ ಕ್ಷೇತ್ರದ ಬಿಜೆಪಿ ಟಿಕೆಟ್ ಅನ್ನು ಯಡಿಯೂರಪ್ಪ ಅವರು ಶರತ್ ಬಚ್ಚೇಗೌಡ ಹಾಗೂ ಅವರ ಕುಟುಂಬದ ರಾಜಕೀಯ ಎದುರಾಳಿ ಎಂಟಿಬಿ ಕೈಗಿತ್ತರು. ದಶಕಗಳಿಂದ ರಾಜಕೀಯ ಹಗೆತನ ಸಾಧಿಸಿಕೊಂಡು ಬಂದಿದ್ದ ವ್ಯಕ್ತಿಯೊಡನೆ ಸ್ನೇಹ ಸಾಧ್ಯವಾಗದೆ ಶರತ್ ಬಚ್ಚೇಗೌಡ ಪಕ್ಷೇತರವಾಗಿ ಕಣಕ್ಕೆ ಇಳಿದರು.

ಯಡಿಯೂರಪ್ಪ ಸೇರಿ ಬಿಜೆಪಿ ರಾಜ್ಯ ನಾಯಕರು ಶರತ್ ಬಚ್ಚೇಗೌಡ ಅವರೊಂದಿಗೆ ಸಂಧಾನದ ಪ್ರಯತ್ನ ಮಾಡಿದರಾದರೂ ಯಾವುದಕ್ಕೂ ಬಗ್ಗದೆ. 'ಸ್ವಾಭಿಮಾನ' ಹೋರಾಟ ಪ್ರಾರಂಭಿಸಿ ಕ್ಷೇತ್ರದಲ್ಲಿ ಯುವ ಅಲೆ ಎಬ್ಬಿಸಿದರು. ಎದುರಾಳಿ ಅಭ್ಯರ್ಥಿ ಎಂಟಿಬಿ ನಾಗರಾಜು ಕೋಟ್ಯಂತರ ಹಣ ಖರ್ಚು ಮಾಡಿ, ಹಳೆಯ ರಾಜಕೀಯ ಪಟ್ಟುಗಳನ್ನೆಲ್ಲಾ ಬಳಸಿ ಗೆಲ್ಲಲೇ ಬೇಕೆಂಬ ಹಠಕ್ಕೆ ಬಿದ್ದಿದ್ದರೂ, ಶರತ್ ಬಚ್ಚೇಗೌಡ ಪ್ರಚಾರದ ವೇಳೆಯಲ್ಲೆಲ್ಲಾ ಮತದಾರರ 'ಸ್ವಾಭಿಮಾನ' ಬಡಿದೆಬ್ಬಿಸುವ ಮಾತುಗಳಾಡಿ ಮತದಾರರನ್ನು ಸೆಳೆದರು. ಅದರ ಫಲಿತವಾಗಿಯೇ ಅಂದು ಗೆಲುವಿನ ನಗೆ ಬೀರಿದರು.
ಸದ್ಯ ಪಕ್ಷೇತರ ಶಾಸಕರಾಗಿದ್ದರೂ ಅವರು ಕಾಂಗ್ರೆಸ್ಗೆ ಸೇರುವ ಅಭಿಲಾಷೆ ಹೊಂದಿದ್ದಾರೆ. ಈ ಮೊದಲು ಕಾಂಗ್ರೆಸ್ ಸೇರುವ ಪ್ರಯತ್ನ ನಡೆದಿದ್ದರೂ ಅದು ಸಾಧ್ಯವಾಗಿರಲಿಲ್ಲ. ಕೊನೆ ಗಳಿಗೆಯಲ್ಲಿ ಅದು ಅಫಲವಾಗಲಿಲ್ಲ. ಈಗ ಅವರು ಸಂಪೂರ್ಣವಾಗಿ ಕಾಂಗ್ರೆಸ್ಗೆ ಬೆಂಬಲ ಸೂಚಿಸಿ ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.












Click it and Unblock the Notifications