ಬಡ ಮಹಿಳೆಯರಿಗೆ ಸಹಕಾರಿಯಾದ 'ಶಕ್ತಿ' ಯೋಜನೆ
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದ 5 ಗ್ಯಾರಂಟಿಗಳಲ್ಲಿ ಒಂದಾದ 'ಶಕ್ತಿ' ಯೋಜನೆಯನ್ನು ಜೂನ್ 11ರಂದು ಜಾರಿಗೆ ತರಲಾಯಿತು. ಸರ್ಕಾರಿ ಬಸ್ಗಳಲ್ಲಿ ಮಹಿಳೆಯರು ಉಚಿತ ಪ್ರಯಾಣ ಮಾಡುವ ಯೋಜನೆ ಇದಾಗಿದೆ. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಮತ್ತು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಸಾಮಾನ್ಯ ಬಸ್ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಲು ಅವಕಾಶ ನೀಡಲಾಗಿದೆ.
'ಶಕ್ತಿ' ಉಚಿತ ಬಸ್ ಪ್ರಯಾಣ ಯೋಜನೆಯು ಸಾಮಾಜಿಕ ಸಮಾನತೆಗಾಗಿ ಯಾವುದೇ ತಾರತಮ್ಯವಿಲ್ಲದೆ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸಲು ಸಹಕಾರಿಯಾಗಿದೆ. ಸಮಾಜ ಏಳಿಗೆ ಕಾಣಬೇಕಾದರೆ ಪುರುಷ ಹಾಗೂ ಮಹಿಳೆಯರ ಪಾಲ್ಗೊಳ್ಳುವಿಕೆ ಅತಿ ಮುಖ್ಯ. ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಕಡಿಮೆಯಾಗಿದ್ದು, 'ಶಕ್ತಿ' ಯೋಜನೆಯು ಉದ್ಯೋಗಸ್ಥ ಮಹಿಳೆಯರ ಸಂಖ್ಯೆಯನ್ನು ಹೆಚ್ಚಿಸಲು ಪ್ರಮುಖ ಪಾತ್ರ ವಹಿಸಲಿದೆ.

ಬಡವರಿಗೆ ಅನುಕೂಲವಾದ ಯೋಜನೆ; ಗಾರ್ಮೆಂಟ್ಸ್ ಕೆಲಸಗಾರರು, ಮನೆ ಕೆಲಸಗಾರರು, ದಿನಗೂಲಿ ಕಾರ್ಮಿಕರು, ಅಸಂಘಟಿತ ವಲಯದ ಕಾರ್ಮಿಕರು, ರೈತರು, ವ್ಯಾಪಾರಸ್ಥರು ತಿಂಗಳಿಗೆ 15 ರಿಂದ 20 ಸಾವಿರದವರೆಗೆ ಸಂಬಳ ಪಡೆದು ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದಾರೆ. 'ಶಕ್ತಿ' ಯೋಜನೆಯಡಿ ಉಚಿತ ಬಸ್ ಸಂಚಾರದಿಂದ ತಿಂಗಳಿಗೆ 1,500 ರೂ. ರಿಂದ 2 ಸಾವಿರ ರೂ. ತನಕ ಉಳಿತಾಯ ತಂದಿರುವುದು ಬಡ ಹಾಗೂ ಮಾಧ್ಯಮ ಕುಟುಂಬದ ವರ್ಗದವರಿಗೆ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ.
ಕೊಡಗು ಜಿಲ್ಲೆಯ ಯೋಜನೆಯ ಫಲಾನುಭವಿಯಾದ ಪೂವಮ್ಮ, ಸುಂಟಿಕೊಪ್ಪದಿಂದ ದಿನ ಬೆಳಗ್ಗೆ ಬಸ್ಸಿನಲ್ಲಿ ಪ್ರಯಾಣಿಸಿ ಮಡಿಕೇರಿ ನಗರಕ್ಕೆ ಬಂದು ಸೊಪ್ಪು ವ್ಯಾಪಾರ ಮಾಡಿ ಬಸ್ಸಿನಲ್ಲಿ ಹೋಗಬೇಕಾಗಿತ್ತು. ಸೊಪ್ಪು ವ್ಯಾಪಾರ ಮಾಡಿ ಸಿಗುವ ಹಣದಲ್ಲಿ ಜೀವಿಸುತ್ತಿದ್ದ ಈಕೆ ಈಗ ಉಚಿತ ಬಸ್ ಪ್ರಯಾಣ ಯೋಜನೆಯಿಂದ ದಿನಕ್ಕೆ 60 ರೂಪಾಯಿ ಉಳಿತಾಯ ಮಾಡುತ್ತಿದ್ದು ನೆಮ್ಮದಿಯಿಂದ ಜೀವಿಸುತ್ತಿದ್ದಾರೆ.
ಮಡಿಕೇರಿ ನಗರ ಕುಶಾಲನಗರ ಮಾರುಕಟ್ಟೆಗಳಿಗೆ ಭೇಟಿ ನೀಡುವ ಕೊಡಗಿನ ಸುತ್ತಮುತ್ತಲ ಹಳ್ಳಿ ಭಾಗದ ಹಲವು ಮಹಿಳಾ ರೈತರು ಸ್ಥಳೀಯವಾಗಿ ಬೆಳೆದ ತರಕಾರಿಗಳನ್ನು ಮಾರಾಟ ಮಾಡಲು ಮನೆ ಮನೆಗೆ ತೆರಳಿ 'ಶಕ್ತಿ' ಯೋಜನೆಯಿಂದ ಪ್ರತಿದಿನ ಸುಮಾರು 200 ರೂಪಾಯಿ ಉಳಿಸುತ್ತಿದ್ದಾರೆ.
ಮಡಿಕೇರಿಯಲ್ಲಿ ಪದವಿ ವ್ಯಾಸಂಗ ಮಾಡುತ್ತಿರುವ ಐಶ್ವರ್ಯ ಮಾತನಾಡಿ, "ಬಡ ಕುಟುಂಬದಲ್ಲಿ ಹುಟ್ಟಿದ ನನಗೆ ದಿನನಿತ್ಯ ಬಸ್ಸಿಗೆ ಹಣ ನೀಡಿ ಪ್ರಯಾಣ ಮಾಡಲು ಅಸಾಧ್ಯವಾಗುತ್ತಿತ್ತು. ಉಚಿತ ಬಸ್ ಪ್ರಯಾಣ ಯೋಜನೆಯಿಂದ ನೆಮ್ಮದಿಯಾಗಿ ಬಸ್ಸಿನಲ್ಲಿ ಪ್ರಯಾಣ ಮಾಡುತ್ತಿರುವುದು ವಿದ್ಯಾಭ್ಯಾಸ ಮುಂದುವರಿಸಲು ಸಹಾಯಕವಾಗಿದೆ" ಎಂದರು.
ಕೊಡಗು ಜಿಲ್ಲೆಯಲ್ಲಿ ಯೋಜನೆ ಯಶಸ್ವಿ; 'ಶಕ್ತಿ' ಯೋಜನೆ ಜಾರಿಗೆ ಬಂದ ಬಳಿಕ ಧಾರ್ಮಿಕ ಸ್ಥಳಗಳಿಗೆ ಮಹಿಳೆಯರು ಭೇಟಿ ನೀಡುತ್ತಿದ್ದಾರೆ. ಕುಟುಂಬಸ್ಥರನ್ನು ಪರಸ್ಪರ ಭೇಟಿ ಮಾಡಿ ಮಾತನಾಡುತ್ತಾರೆ. ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುತ್ತಾರೆ. ಇದರಿಂದ ಪ್ರಾಪಂಚಿಕ ಜ್ಞಾನ ಹೆಚ್ಚುತ್ತದೆ. ಯೋಜನೆಯು ಮಹಿಳೆಯರ ಏಳಿಗೆ ಸಾಧಿಸುವಲ್ಲಿ ಅತ್ಯಂತ ಪ್ರಮುಖವಾದ ಪಾತ್ರ ವಹಿಸಿರುವುದು ಶ್ಲಾಘನೀಯವಾಗಿದೆ.
ಉಚಿತ ಬಸ್ ಪ್ರಯಾಣದ ಯೋಜನೆಯಿಂದ ವಿದ್ಯಾರ್ಥಿನಿಯರ ಮನಸ್ಸಿನಲ್ಲಿ ಕೂಡ ಮಂದಹಾಸ ಮೂಡಿರುವುದು ಗಮನಿಸಬೇಕಾದ ಅಂಶ. ಬಡ ಪೋಷಕರು ಮಕ್ಕಳನ್ನು ಶಾಲಾ-ಕಾಲೇಜಿಗೆ ಕಳುಹಿಸಲು 'ಶಕ್ತಿ' ಯೋಜನೆಯು ಸಹಕಾರಿಯಾಗಿದೆ.
ಯಾವುದೇ ತಾರತಮ್ಯವಿಲ್ಲದೆ ಪ್ರತಿ ಮಹಿಳೆಗೂ ಉಚಿತ ಬಸ್ ಸೌಲಭ್ಯ ಸಿಗುತ್ತಿರುವುದು ಸಮಾನತೆಯನ್ನು ಎತ್ತಿ ಹಿಡಿದಂತೆ. ರಾಜ್ಯವು ಅಭಿವೃದ್ಧಿಪಥದಲ್ಲಿ ಸಾಗಲು 'ಶಕ್ತಿ' ಯೋಜನೆಯು ಮುನ್ನುಡಿಯಾಗಿದೆ. ಯೋಜನೆಯಿಂದ ಎಲ್ಲಾ ಕ್ಷೇತ್ರಗಳಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚುತ್ತದೆ. ದೇಶವು ಆರ್ಥಿಕವಾಗಿ ಮುನ್ನಡೆಯಲು ಸಹಕಾರಿಯಾಗಿದೆ.
ಒಟ್ಟಾರೆ ಕೊಡಗು ಜಿಲ್ಲೆಯಲ್ಲಿ ಆಗಸ್ಟ್ 27ರ ತನಕ 11,10,983 ಮಂದಿ ಮಹಿಳೆಯರು ಬಸ್ನಲ್ಲಿ ಪ್ರಯಾಣ ಬೆಳೆಸಿದ್ದಾರೆ. 4,10,54,728 ರೂ. ವೆಚ್ಚ ಭರಿಸಲಾಗಿದೆ ಎಂದು ಮಡಿಕೇರಿ ಕೆಎಸ್ಆರ್ಟಿಸಿ ಘಟಕದ ವ್ಯವಸ್ಥಾಪಕರಾದ ಗೀತಾ ಮಾಹಿತಿ ನೀಡಿದ್ದಾರೆ.












Click it and Unblock the Notifications