ವಿಶ್ಲೇಷಣೆ: ಮರಿತಿಬ್ಬೇಗೌಡ ಜೆಡಿಎಸ್ ಬಿಟ್ಟು ಹೋಗುತ್ತಿರುವುದೇಕೆ?
ಮೈಸೂರು: ಜೆಡಿಎಸ್ ಪಕ್ಷವನ್ನು ಸಂಘಟಿಸಿ ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆದು ಅಧಿಕಾರಕ್ಕೆ ಬರಬೇಕೆನ್ನುವ ಕನಸು ಕಾಣುತ್ತಿರುವ ಎಚ್.ಡಿ.ದೇವೇಗೌಡರ ಕುಟುಂಬಕ್ಕೀಗ ಪಕ್ಷದಿಂದ ಹೊರಟು ನಿಂತಿರುವ ನಾಯಕರನ್ನು ಉಳಿಸಿಕೊಳ್ಳುವುದೇ ಸವಾಲ್ ಆಗಿದೆ.
ಇತ್ತೀಚೆಗೆ ಜನತಾ ಜಲಧಾರೆ ಮೂಲಕ ರಾಜ್ಯದಲ್ಲಿ ಪ್ರವಾಸ ಮಾಡಿ ನೆಲಮಂಗಲದಲ್ಲಿ ಶಕ್ತಿ ಪ್ರದರ್ಶನ ಮಾಡಿದ ಮೇಲೆಯೂ ಒಂದಷ್ಟು ನಾಯಕರು ಪಕ್ಷ ಬಿಟ್ಟು ಹೋಗುವುದು ಖಚಿತವಾಗುತ್ತಿದೆ. ಮೊದಲಿನಿಂದಲೂ ಸಿದ್ದರಾಮಯ್ಯ, ಎಚ್.ವಿಶ್ವನಾಥ್ ಸೇರಿದಂತೆ ಎಲ್ಲ ನಾಯಕರು ದೇವೇಗೌಡರ ಕುಟುಂಬದ ವಿರುದ್ಧವೇ ಆರೋಪ ಮಾಡಿಕೊಂಡು ಬರುತ್ತಿದ್ದಾರೆ. ತಮ್ಮನ್ನು ಪಕ್ಷದಲ್ಲಿ ಬೆಳೆಯಲು ಬಿಡಲಿಲ್ಲ ಎಂಬ ಮಾತನ್ನು ಈಗಲೂ ಒಂದಷ್ಟು ನಾಯಕರು ಮಾಡುತ್ತಲೇ ಇದ್ದಾರೆ ಇದರ ನಡುವೆಯೇ ಬಸವರಾಜ ಹೊರಟ್ಟಿ ಅವರು ಪಕ್ಷ ಬಿಟ್ಟು ಬಿಜೆಪಿ ಸೇರ್ಪಡೆಗೊಂಡಿದ್ದಾರೆ.
ಜೆಡಿಎಸ್ ತೊರೆಯುವೆ ಎಂದ ಪರಿಷತ್ ಸದಸ್ಯ ಮರಿತಿಬ್ಬೇಗೌಡ!
ಜೆಡಿಎಸ್ ಬಿಟ್ಟು ಹೋಗುತ್ತಿರುವುದೇಕೆ?
ಮೈಸೂರು ಭಾಗದಲ್ಲಿ ತಳಮಟ್ಟದ ಕಾರ್ಯಕರ್ತರು ಪಕ್ಷ ತೊರೆಯುತ್ತಿರುವುದು ಕಾಣಿಸುತ್ತಿದೆ. ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡರು ಪಕ್ಷ ತೊರೆದಿದ್ದೇ ಆದರೆ ಒಂದಷ್ಟು ಅವರ ಬೆಂಬಲಿಗ ನಾಯಕರು ಪಕ್ಷ ತೊರೆಯುವುದಂತು ಖಚಿತವಾಗಿದೆ. ಈಗಾಗಲೇ ದಕ್ಷಿಣ ಪದವೀಧರರ ಕ್ಷೇತ್ರದ ಪಕ್ಷದ ಟಿಕೆಟ್ ಗೆ ಸಂಬಂಧಿಸಿದಂತೆ ಜೆಡಿಎಸ್ ನಲ್ಲಿ ಭಿನ್ನಾಭಿಪ್ರಾಯಗಳು ಆರಂಭವಾಗಿದ್ದು, ಇದರಿಂದ ಕೇವಲ ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆಗೆ ಮಾತ್ರ ಪರಿಣಾಮವಾಗುವುದಲ್ಲದೆ ಮುಂದಿನ ವಿಧಾನಸಭಾ ಚುನಾವಣೆ ವೇಳೆಯೂ ಜೆಡಿಎಸ್ ಗೆ ಹೊಡೆತ ನೀಡುವ ಸಾಧ್ಯತೆ ಇರುವುದನ್ನು ತಳ್ಳಿ ಹಾಕುವಂತಿಲ್ಲ.
ಜೆಡಿಎಸ್ನಲ್ಲಿ ಆಗುತ್ತಿರುವುದೇನು?
ಇಷ್ಟಕ್ಕೂ ಜೆಡಿಎಸ್ನಲ್ಲಿ ಆಗುತ್ತಿರುವುದೇನು? ಏತಕ್ಕಾಗಿ ನಾಯಕರು ಪಕ್ಷವನ್ನು ಬಿಟ್ಟು ಹೋಗುತ್ತಿದ್ದಾರೆ? ಎಂಬ ಪ್ರಶ್ನೆಗಳು ಮೂಡುವುದು ಸಹಜವೇ.. ಮೇಲ್ನೋಟಕ್ಕೆ ಎಲ್ಲರೂ ಆರೋಪ ಮಾಡುವಂತೆ ಕುಟುಂಬ ರಾಜಕಾರಣವಂತು ಎದ್ದು ಕಾಣುತ್ತಿದೆ. ಅದರಾಚೆಗೆ ಏನಿದೆ ಎಂಬುದನ್ನು ನೋಡಿದ್ದೇ ಆದರೆ ದುಡ್ಡಿದ್ದರೆ ಮಾತ್ರ ಪಕ್ಷದಲ್ಲಿ ಉಳಿಗಾಲ ಎಂಬ ಆರೋಪವನ್ನು ಪಕ್ಷದ ನಾಯಕ, ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಅವರೇ ಹೇಳಿದ್ದಾರೆ. ಜೆಡಿಎಸ್ನಲ್ಲಿ ದುಡಿಮೆಗಿಂತ ದುಡ್ಡಿಗೆ ಬೆಲೆ ಎಂಬುದನ್ನು ಬಹಿರಂಗವಾಗಿಯೇ ಹೇಳುವ ಮೂಲಕ ಹೆಚ್.ಡಿ.ದೇವೇಗೌಡರ ಕುಟುಂಬವನ್ನು ಮುಜುಗರಕ್ಕೆ ತಳ್ಳಿದ್ದಾರೆ.
ಮರಿತಿಬ್ಬೇಗೌಡರಿಗೆ ಅಸಮಾಧಾನ ಏಕೆ?
ಹಾಗಾದರೆ, ಮರಿತಿಬ್ಬೇಗೌಡರಿಗೆ ಅಸಮಾಧಾನ ವಿರುವುದೇಕೆ ಎಂಬುದನ್ನು ನೋಡಿದರೆ ಅವರು ಸೂಚಿಸಿದ ವ್ಯಕ್ತಿಗೆ, ಗೆಲುವು ಸಾಧಿಸುವ ವರ್ಚಸ್ಸು ಇರುವ ಅಭ್ಯರ್ಥಿಗೆ ದಕ್ಷಿಣ ಪದವೀಧರರ ಕ್ಷೇತ್ರದ ಟಿಕೆಟ್ ನೀಡಿಲ್ಲವಂತೆ. ಅವರು ಹೇಳುವ ಪ್ರಕಾರ ನಿಷ್ಠಾವಂತ ಕಾರ್ಯಕರ್ತ ಜಯರಾಮ್ ಕೀಲಾರ ಬದಲು ಎಚ್.ಕೆ.ರಾಮು ಅವರಿಗೆ ದಕ್ಷಿಣ ಪದವೀಧರರ ಕ್ಷೇತ್ರದ ಟಿಕೆಟ್ ನೀಡಲಾಗಿದೆಯಂತೆ. ದಕ್ಷಿಣ ಪದವೀಧರರ ಕ್ಷೇತ್ರಕ್ಕೂ ಎಚ್.ಕೆ.ರಾಮು ಅವರಿಗೂ ಏನು ಸಂಬಂಧ? ಜಯರಾಮು ಅವರಿಗೆ ಹಣ ಕೊಡಬೇಡಿ, ಟಿಕೆಟ್ ಕೊಡುವಂತೆ ಮನವಿ ಮಾಡಿದ್ದೆ. ಆರಂಭದಲ್ಲಿ ಒಪ್ಪಿದ್ದರು. ತದನಂತರ ಜಯರಾಮ್ ನಿಮ್ಮ ಹತ್ತಿರ ಹಣ ಇಲ್ಲ. ಹಾಗಾಗಿಯೇ ರಾಮು ಅವರಿಗೆ ಟಿಕೆಟ್ ನೀಡುವುದಾಗಿ ಹೇಳಿದ್ದಾರೆ. ಆ ಮೂಲಕ ನಿಷ್ಠಾವಂತ ಕಾರ್ಯಕರ್ತರಿಗೆ ಅನ್ಯಾಯ ಮಾಡಿ ದುಡ್ಡಿಗೆ ಮಣೆ ಹಾಕಲಾಗಿದೆ.
ರೈತನನ್ನು ಎಂಎಲ್ಸಿ ಮಾಡಿಲ್ಲವಂತೆ
ಮರಿತಿಬ್ಬೇಗೌಡರು ಹೇಳುವ ಪ್ರಕಾರ ಜೆಡಿಎಸ್ನಲ್ಲಿ ಸಾಮಾನ್ಯ ಕಾರ್ಯಕರ್ತ, ಆರ್ಟಿಸಿ ಹೊಂದಿರುವ ರೈತನನ್ನು ಎಂಎಲ್ಸಿ ಮಾಡಿಲ್ಲವಂತೆ. ಕುದುರೆ ಜೂಜಾಡುವವರು, ಚಿನ್ನ ವ್ಯಾಪಾರಗಾರರು, ರಿಯಲ್ ಎಸ್ಟೇಟ್ ಉದ್ಯಮಿಗಳನ್ನು ವಿಧಾನ ಪರಿಷತ್ತಿಗೆ ಕಳುಹಿಸಿದ್ದಾರೆ. ಪಕ್ಷದಲ್ಲಿ ಆಂತರಿಕ ಸ್ವಾತಂತ್ರ್ಯ ಇಲ್ಲ. ನಾಯಕರ ದೌರ್ಬಲ್ಯ, ತಪ್ಪುಗಳ ವಿಮರ್ಶೆ ಇಲ್ಲ. ಹಿರಿಯ ನಾಯಕರು ಏಕೆ ಪಕ್ಷ ಬಿಡುತ್ತಿದ್ದಾರೆ ಎಂಬುದರ ಬಗ್ಗೆ ಚರ್ಚೆಯಾಗುತ್ತಿಲ್ಲ. 1983ರಿಂದ ಜೆಡಿಎಸ್ ಸಾಮಾನ್ಯ ಕಾರ್ಯಕರ್ತನಾಗಿ ದುಡಿದ ನಾನು ಕಾಂಗ್ರೆಸ್ ಪಕ್ಷದಿಂದ ವಿಧಾನ ಪರಿಷತ್ ಪ್ರವೇಶಿಸಿದೆ. ಎರಡನೇ ಬಾರಿಗೆ ಪಕ್ಷೇತರನಾಗಿ ಸ್ಪರ್ಧಿಸಿ ಗೆಲುವು ಪಡೆದೆ. ಎರಡು ಬಾರಿ ಗೆದ್ದ ನಂತರ ಜೆಡಿಎಸ್ ಟಿಕೆಟ್ ದೊರೆಯಿತು. ಈ ಎರಡೂ ಬಾರಿ ಟಿಕೆಟ್ ಕೊಟ್ಟು ಒಂದು ಸುದ್ದಿಗೋಷ್ಠಿ, ಚುನಾವಣಾ ಪ್ರಚಾರ ಮಾಡದೇ ಪರೋಕ್ಷವಾಗಿ ಸೋಲಿಸಲು ಪ್ರಯತ್ನಿಸಲಾಯಿತು.
ಪ್ರಜ್ವಲ್ ರೇವಣ್ಣರೇ ಟೀಕಿಸಿದ್ದರು..
ವಿಶ್ವನಾಥ್ ಪಾರ್ಟಿಗೆ ಬಂದಾಗ ಹುಣಸೂರಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಜ್ವಲ್ ರೇವಣ್ಣ ತಮ್ಮ ಪಕ್ಷದಲ್ಲಿ ಸೂಟ್ಕೇಸ್ ಇದ್ದವರಿಗೆ ಮುಂದಿನ ಸಾಲು, ಸಾಮಾನ್ಯ ಕಾರ್ಯಕರ್ತರಿಗೆ ಹಿಂದಿನ ಸಾಲು ಎಂದು ನೇರವಾಗಿ ಟೀಕಿಸಿದ್ದರು. ಮೂರು ಅವಧಿಯಿಂದಲೂ ಕುಮಾರಸ್ವಾಮಿ ಪಕ್ಷ ವಿಸರ್ಜಿಸುವುದಾಗಿ ಹೇಳುತ್ತಿದ್ದಾರೆ. ಮುಖ್ಯಮಂತ್ರಿಯಾದಾಗಲೂ ಒಳ್ಳೆಯ ಕಾರ್ಯಕ್ರಮ ನೀಡಲಿಲ್ಲ. ಪ್ರಾದೇಶಿಕ ಪಕ್ಷ ಉಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ. ಈಗ ಜಯರಾಮು ಕೀಲಾರ ಅವರಿಗೆ ಟಿಕೆಟ್ ಕೊಟ್ಟರೂ ನಾನು ಪಕ್ಷ ಬಿಡುವುದು ನಿಶ್ಚಿತ. ಆಂತರಿಕ ಸ್ವಾತಂತ್ರ್ಯ ಇಲ್ಲದ ಕಡೆ ಸ್ವಾಭಿಮಾನಿಗಳು ಇರುವುದಿಲ್ಲ. ಮೈಸೂರು, ಮಂಡ್ಯ ಜಿಲ್ಲೆಗಳ ಮತದಾರರು, ಹಿತೈಷಿಗಳ ಸಭೆ ನಡೆಸಿ ಅಭಿಪ್ರಾಯ ಪಡೆಯುವುದಾಗಿ ಹೇಳುವುದರೊಂದಿಗೆ ಪಕ್ಷ ಬಿಡುವ ಸೂಚನೆ ನೀಡಿದ್ದಾರೆ.
ಜೆಡಿಎಸ್ನಲ್ಲಿ ಆಗುತ್ತಿರುವ ಬೆಳವಣಿಗೆಗಳು ಮುಂದಿನ ಚುನಾವಣೆ ಹೊತ್ತಿಗೆ ಪಕ್ಷಕ್ಕೆ ಯಾವ ರೀತಿಯ ಹೊಡೆತವನ್ನು ನೀಡುತ್ತದೆಯೋ ಗೊತ್ತಿಲ್ಲ. ಇರುವ ನಾಯಕರನ್ನು ಉಳಿಸಿಕೊಳ್ಳಲಾಗದೆ ಹೊಸ ನಾಯಕರ ಮೂಲಕ ಚುನಾವಣೆ ಎದುರಿಸಿ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿರುವ ಕುಮಾರಸ್ವಾಮಿ ಅವರ ಧೈರ್ಯವನ್ನು ಮೆಚ್ಚಲೇ ಬೇಕಾಗಿದೆ.
Recommended Video