Get Updates
Get notified of breaking news, exclusive insights, and must-see stories!

'ಭಾರತದ ರಾಜಕೀಯ ಭೀಷ್ಮ'ನ ರಾಜಕಾರಣದ ಮೈಲುಗಲ್ಲುಗಳು

ಬೆಂಗಳೂರು, ಆಗಸ್ಟ್ 16: ದೇಶದ ಪ್ರಧಾನಿಯಾಗಿ ಮೂರು ಬಾರಿ ಅಧಿಕಾರಕ್ಕೇರಿದ್ದ ಅಟಲ್ ಬಿಹಾರಿ ವಾಜಪೇಯಿ, ಪೂರ್ಣಾವಧಿ ಸರ್ಕಾರ ನಡೆಸಲು ಸಾಧ್ಯವಾಗಿದ್ದು ಒಂದು ಅವಧಿಯಲ್ಲಿ ಮಾತ್ರ. ಆದರೆ, ಐದು ವರ್ಷಗಳ ಸಂಪೂರ್ಣ ಆಡಳಿತ ನಡೆಸಿದ ಮೊದಲ ಕಾಂಗ್ರೆಸ್ಸೇತರ ಸರ್ಕಾರದ ಪ್ರಧಾನಿ ಎಂಬ ಹೆಗ್ಗಳಿಕೆ ಅವರದು.

ನಾಲ್ಕು ದಶಕ ಕಾಲ ಸಂಸತ್ ಸದಸ್ಯರಾಗಿದ್ದ ವಾಜಪೇಯಿ, ಲೋಕಸಭೆಗೆ ಹತ್ತು ಬಾರಿ ಹಾಗೂ ರಾಜ್ಯಸಭೆಗೆ ಎರಡು ಬಾರಿ ಆಯ್ಕೆಯಾಗಿದ್ದರು.

2009ರಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ರಾಜಕೀಯ ಜೀವನದಿಂದ ಹಿಂದಕ್ಕೆ ಸರಿಯುವವರೆಗೂ ಅವರು ಉತ್ತರ ಪ್ರದೇಶದ ಲಕ್ನೋದಿಂದ ಸಂಸತ್‌ಗೆ ಸ್ಪರ್ಧಿಸುತ್ತಿದ್ದರು.

ಭಾರತೀಯ ಜನ ಸಂಘದ ಸಂಸ್ಥಾಪಕ ಸದಸ್ಯರಲ್ಲಿ ಒಬ್ಬರಾದ ವಾಜಪೇಯಿ, 1968-72ರ ಅವಧಿಯಲ್ಲಿ ಅದರ ಅಧ್ಯಕ್ಷರು ಸಹ ಆಗಿದ್ದರು. ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿದ್ದ ಅವಧಿಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು.

1980ರಲ್ಲಿ ಜನತಾ ಸರ್ಕಾರವು ಪತನಗೊಂಡ ಬಳಿಕ ವಾಜಪೇಯಿ ನೇತೃತ್ವದಲ್ಲಿ ಜನ ಸಂಘವನ್ನು ಭಾರತೀಯ ಜನತಾ ಪಕ್ಷವಾಗಿ ಪರಿವರ್ತಿಸಲಾಯಿತು.

ಕ್ವಿಟ್ ಇಂಡಿಯಾ ಚಳವಳಿ ವಿವಾದ

ಕ್ವಿಟ್ ಇಂಡಿಯಾ ಚಳವಳಿ ವಿವಾದ

ವಾಜಪೇಯಿ ಅವರ ರಾಜಕೀಯ ಪ್ರವೇಶ 1942ರ ಕ್ವಿಟ್ ಇಂಡಿಯಾ ಚಳವಳಿ ಸಂದರ್ಭದಲ್ಲಿ ಪ್ರಾರಂಭವಾಯಿತು. ಈ ಸಂದರ್ಭದಲ್ಲಿ ವಾಜಪೇಯಿ, ತಮ್ಮ ಸಹೋದರನ ಜತೆ 23 ದಿನ ಜೈಲು ವಾಸ ಅನುಭವಿಸಿದ್ದರು. ಬಳಿಕ ಅವರು ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಭಾಗವಹಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಟ್ಟರು ಎನ್ನಲಾಗಿದೆ. ಆದರೆ, ವಾಜಪೇಯಿ ಅವರ ಚಳವಳಿ-ಹೋರಾಟ, ತಪ್ಪೊಪ್ಪಿಗೆ ಹೇಳಿಕೆಯ ವಿಚಾರಗಳು ಸಾಕಷ್ಟು ವಿವಾದ ಸೃಷ್ಟಿಸಿದ್ದವು. ಈಗಲೂ ಈ ಸಂಗತಿ ಚರ್ಚೆಯಲ್ಲಿದೆ.

ಜನ ಸಂಘದ ಸ್ಥಾಪನೆ

ಜನ ಸಂಘದ ಸ್ಥಾಪನೆ

1948ರಲ್ಲಿ ಮಹಾತ್ಮ ಗಾಂಧಿ ಅವರ ಹತ್ಯೆಯ ಹಿನ್ನೆಲೆಯಲ್ಲಿ ಆರ್‌ಎಸ್‌ಎಸ್‌ಅನ್ನು ನಿಷೇಧಿಸಲಾಯಿತು. 1951ರಲ್ಲಿ ದೀನದಯಾಳ್ ಉಪಾಧ್ಯಾಯರ ಜತೆಗೂಡಿ ಭಾರತೀಯ ಜನಸಂಘದ ಹೆಸರಿನಲ್ಲಿ ಆರ್‌ಎಸ್‌ಎಸ್‌ನ ಸಹಯೋಗಿ ಬಲಪಂಥೀಯ ರಾಜಕೀಯ ಪಕ್ಷವನ್ನು ಸ್ಥಾಪಿಸಿದರು.

1954ರಲ್ಲಿ ಪಕ್ಷದ ನಾಯಕ ಶ್ಯಾಮ್ ಪ್ರಸಾದ್ ಮುಖರ್ಜಿ ಅವರೊಂದಿಗೆ ಕಾಶ್ಮೀರದಲ್ಲಿ ಭಾರತೀಯರನ್ನು ನಡೆಸಿಕೊಳ್ಳುತ್ತಿರುವ ನೀತಿ ವಿರುದ್ಧ ಉಪವಾಸ ಸತ್ಯಾಗ್ರಹ ನಡೆಸಿದ್ದರು.

ಮೊದಲ ಚುನಾವಣೆಯಲ್ಲಿ ಸೋಲು-ಗೆಲುವು

ಮೊದಲ ಚುನಾವಣೆಯಲ್ಲಿ ಸೋಲು-ಗೆಲುವು

ಹೀಗೆ ರಾಜಕೀಯ ವಲಯದಲ್ಲಿ ಗುರುತಿಸಿಕೊಂಡ ವಾಜಪೇಯಿ, ಲೋಕಸಭೆ ಚುನಾವಣೆಗೆ 1957ರಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿದರು.

ಈ ಚುನಾವಣೆಯಲ್ಲಿ ಅವರು ಮಥುರಾ ಕ್ಷೇತ್ರದಲ್ಲಿ ರಾಜಾ ಮಹೇಂದ್ರ ಪ್ರತಾಪ್ ಎದುರು ಸೋತರು. ಆದರೆ, ಬಲರಾಮಪುರದಿಂದಲೂ ಸ್ಪರ್ಧಿಸಿದ್ದ ಅವರು ಅಲ್ಲಿ ಗೆಲುವು ಕಂಡರು.

ನೆಹರೂ ನುಡಿದ ಭವಿಷ್ಯ

ನೆಹರೂ ನುಡಿದ ಭವಿಷ್ಯ

ಈ ಸಂದರ್ಭದಲ್ಲಿ ವಾಜಪೇಯಿ ಅವರ ಭಾಷಣವನ್ನು ಕೇಳಿದ್ದ ಆಗಿನ ಪ್ರಧಾನಿ ಜವಹರಲಾಲ್ ನೆಹರೂ, ಅವರು ಮುಂದೆ ಪ್ರಧಾನಿಯಾಗಲಿದ್ದಾರೆ ಎಂದು ಭವಿಷ್ಯ ನುಡಿದಿದ್ದರು.

ದೀನದಯಾಳ್ ಉಪಾಧ್ಯಾಯ ಅವರ ನಿಧನದ ಬಳಿಕ ಜನಸಂಘವನ್ನು ನಡೆಸುವ ಹೊಣೆ ವಾಜಪೇಯಿ ಅವರ ಹೆಗಲಿಗೇರಿತು.

ತುರ್ತು ಪರಿಸ್ಥಿತಿ ಘೋಷಣೆಯಾದ ಸಂದರ್ಭದಲ್ಲಿ ವಾಜಪೇಯಿ 1975-77ರವರೆಗೆ ವಿವಿಧ ನಾಯಕರ ಜತೆ ಜೈಲುವಾಸ ಅನುಭವಿಸಿದರು.

ವಿದೇಶಾಂಗ ಸಚಿವ

ವಿದೇಶಾಂಗ ಸಚಿವ

ಬಳಿಕ 1977ರಲ್ಲಿ ನಡೆದ ಸಂಸತ್ ಚುನಾವಣೆಯಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂದಾಗ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಸಂಪುಟದಲ್ಲಿ ವಿದೇಶಾಂಗ ಸಚಿವರಾಗಿದ್ದರು. ಸಚಿವರಾಗಿ ವಿಶ್ವಸಂಸ್ಥೆಯಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ಭಾಷಣ ಮಾಡಿದ್ದು, ಅವರ ಖ್ಯಾತಿಯನ್ನು ಹೆಚ್ಚಿಸಿತು.

ಬಿಜೆಪಿ ಸ್ಥಾಪನೆ

ಬಿಜೆಪಿ ಸ್ಥಾಪನೆ

1979ರಲ್ಲಿ ಜನತಾ ಸರ್ಕಾರ ಪತನಗೊಂಡ ಬಳಿಕ 1980ರಲ್ಲಿ ಭಾರತೀಯ ಜನ ಸಂಘದ ವಾಜಪೇಯಿ, ಎಲ್‌.ಕೆ. ಅಡ್ವಾಣಿ, ಭೈರೋನ್ ಸಿಂಗ್ ಶೆಖಾವತ್ ಮುಂತಾದವರು ಜತೆಗೂಡಿ ಆರ್‌ಎಸ್‌ಎಸ್‌ ಸಹಯೋಗದಲ್ಲಿ ಭಾರತೀಯ ಜನತಾ ಪಕ್ಷವನ್ನು ಸ್ಥಾಪಿಸಿದ್ದಲ್ಲದೆ, ಅದರ ಮೊದಲ ಅಧ್ಯಕ್ಷರೂ ಆದರು.

1984ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಕೇವಲ ಎರಡೇ ಸೀಟುಗಳೊಂದಿಗೆ ವಿರೋಧ ಪಕ್ಷದ ಸ್ಥಾನದಲ್ಲಿ ನಿಂತಿತ್ತು. ಆಗ ವಾಜಪೇಯಿ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ನಡೆಸಿದ್ದರು.

ಬಿಜೆಪಿಗೆ ಜಯ

ಬಿಜೆಪಿಗೆ ಜಯ

1995ರಲ್ಲಿ ಗುಜರಾತ್ ಹಾಗೂ ಮಹಾರಾಷ್ಟ್ರಗಳ ವಿಧಾನಸಭೆ ಚುನಾವಣೆಗಳಲ್ಲಿ ಗೆಲ್ಲುವ ಮೂಲಕ ಬಿಜೆಪಿ ದೊಡ್ಡ ಪ್ರಮಾಣದ ರಾಜಕೀಯ ನೆಲೆ ಕಂಡುಕೊಂಡಿತು. ಅದಕ್ಕೂ ಮೊದಲು 1994ರಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಸಾಧನೆ ತೋರಿಸಿತ್ತು.

1995ರಂದು ನಡೆದ ಬಿಜೆಪಿ ಸಭೆಯಲ್ಲಿ ವಾಜಪೇಯಿ ಅವರು ಮುಂದೆ ಭಾರತದ ಪ್ರಧಾನಿಯಾಗಲಿದ್ದಾರೆ ಎಂದು ಎಲ್‌.ಕೆ. ಅಡ್ವಾಣಿ ಘೋಷಿಸಿದರು. 1996ರ ಸಂಸತ್ ಚುನಾವಣೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿತು.

ಹದಿಮೂರು ದಿನದ ಪ್ರಧಾನಿ

ಹದಿಮೂರು ದಿನದ ಪ್ರಧಾನಿ

ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಬಿಜೆಪಿಗೆ ಸರ್ಕಾರ ರಚನೆಗೆ ಅವಕಾಶ ನೀಡಲಾಯಿತು. ವಾಜಪೇಯಿ ಮೊದಲ ಬಾರಿಗೆ ಪ್ರಧಾನಿಯಾದರು. ಆದರೆ, ಬಹುಮತ ಸಾಬೀತುಪಡಿಸುವಲ್ಲಿ ವಿಫಲರಾದ ವಾಜಪೇಯಿ 13 ದಿನಗಳಲ್ಲಿಯೇ ರಾಜೀನಾಮೆ ನೀಡಬೇಕಾಯಿತು.

ಹದಿಮೂರು ತಿಂಗಳ ಆಡಳಿತ

ಹದಿಮೂರು ತಿಂಗಳ ಆಡಳಿತ

1998ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಜಯಗಳಿಸಿತು. ಈ ಬಾರಿ ವಿವಿಧ ರಾಜಕೀಯ ಪಕ್ಷಗಳ ಮೈತ್ರಿಕೂಟ ಏರ್ಪಟ್ಟು ಎನ್‌ಡಿಎ ರಚನೆಯಾಯಿತು. ವಾಜಪೇಯಿ ಮತ್ತೆ ಪ್ರಧಾನಿಯಾದರು. ಆದರೆ 13 ತಿಂಗಳಿನಲ್ಲಿಯೇ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಸರ್ಕಾರಕ್ಕೆ ನೀಡಿದ್ದ ತನ್ನ ಬೆಂಬಲವನ್ನು ಹಿಂದಕ್ಕೆ ಪಡೆದುಕೊಂಡ ಕಾರಣ ಸರ್ಕಾರ ಪತನಗೊಂಡಿತು. ವಿರೋಧ ಪಕ್ಷಗಳು ಅಧಿಕಾರಕ್ಕೆ ಬರಲು ಅಗತ್ಯ ಬೆಂಬಲ ಇರದ ಕಾರಣ ಹೊಸದಾಗಿ ಚುನಾವಣೆ ಘೋಷಿಸಲಾಯಿತು.

ಮೊದಲ ಬಾರಿ ಪೂರ್ಣಾವಧಿ ಆಡಳಿತ

ಮೊದಲ ಬಾರಿ ಪೂರ್ಣಾವಧಿ ಆಡಳಿತ

1999ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ 303 ಸೀಟುಗಳ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬಂದಿತು. ಕಾರ್ಗಿಲ್ ಯುದ್ಧ, ಸಂಸತ್ ದಾಳಿ, ಗುಜರಾತ್ ಗಲಭೆ, ಕಂದಹಾರ್ ವಿಮಾನ ಹೈಜಾಕ್ ಮುಂತಾದ ಸವಾಲುಗಳ ನಡುವೆಯೂ ವಾಜಪೇಯಿ ಐದು ವರ್ಷದ ಆಡಳಿತ ಪೂರ್ಣಗೊಳಿಸಿದರು.

ಸೋಲು ಮತ್ತು ನಿವೃತ್ತಿ

ಸೋಲು ಮತ್ತು ನಿವೃತ್ತಿ

ಭಾರತ ಪ್ರಕಾಶಿಸುತ್ತಿದೆ ಎಂಬ ಘೋಷವಾಕ್ಯದೊಂದಿಗೆ ಮತ್ತೆ ಅಧಿಕಾರಕ್ಕೆ ಬರುವ ಭರವಸೆ ಹೊಂದಿದ್ದ ಬಿಜೆಪಿ 2004ರ ಚುನಾವಣೆಯಲ್ಲಿ ಸೋಲು ಅನುಭವಿಸಿತು. ವಾಜಪೇಯಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿದರು.

20೦5ರಲ್ಲಿ ಸಕ್ರಿಯ ರಾಜಕಾರಣದಿಂದ ಅವರು ನಿವೃತ್ತಿ ಘೋಷಿಸಿದರು. ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಪ್ರಕಟಿಸಿದರು. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ನಡೆದ ಬಿಜೆಪಿಯ ಐತಿಹಾಸಿಕ ರಜತ ಮಹೋತ್ಸವ ಸಮಾರಂಭದಲ್ಲಿ ಅವರು, 'ಇನ್ನು ಮುಂದೆ ಲಾಲ್ ಕೃಷ್ಣ ಅಡ್ವಾಣಿ ಮತ್ತು ಪ್ರಮೋದ್ ಮಹಾಜನ್ ಬಿಜೆಪಿಯ ರಾಮ-ಲಕ್ಷ್ಮಣರಾಗಿ ಇರಲಿದ್ದಾರೆ ಎಂದು ಹೇಳಿದರು.

ಭೀಷ್ಮ ಪಿತಾಮಹ

ಭೀಷ್ಮ ಪಿತಾಮಹ

ವಾಜಪೇಯಿ ಅವರನ್ನು ಭಾರತೀಯ ರಾಜಕೀಯದ ಭೀಷ್ಮ ಪಿತಾಮಹ ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಬಣ್ಣಿಸಿದ್ದರು.

ಸುದೀರ್ಘಕಾಲ ಅನಾರೋಗ್ಯದಿಂದ ಬಳಲುತ್ತಿದ್ದ ವಾಜಪೇಯಿ, ಲೌಕಿಕ ಬದುಕಿಗೆ ವಿದಾಯ ಹೇಳಿದ್ದಾರೆ. ಮನಮೋಹನ್ ಸಿಂಗ್ ಗುರುತಿಸಿದ ಭೀಷ್ಮನ ಯುಗಾಂತ್ಯವಾಗಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+