Karnataka CM : ಇದುವರೆಗೂ ಮುಖ್ಯಮಂತ್ರಿಯಾಗಿ ಪೂರ್ಣಾವಧಿ ಆಡಳಿತ ನಡೆಸಿದ್ದು ಈ ಮೂವರು ಮಾತ್ರ
ಕರ್ನಾಟಕ ರಾಜ್ಯದ 24 ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ. ಮೇ 20ರಂದು ಅವರು ಪ್ರಮಾಣವಚನ ಸ್ವೀಕರಿಸಲಿದ್ದು, ಎರಡನೇ ಬಾರಿ ನಾಡಿನ ಆಡಳಿತದ ಚುಕ್ಕಾಣಿ ಹಿಡಿದಿದ್ದಾರೆ. 76 ವರ್ಷಗಳ ಕರ್ನಾಟಕ ರಾಜಕೀಯ ಇತಿಹಾಸದಲ್ಲಿ 5 ವರ್ಷಗಳ ಅವಧಿಗೆ ಸಿಎಂ ಆಗಿ ಅಧಿಕಾರ ಪೂರೈಸಿದ್ದು ಕೇವಲ ಮೂವರು ಮಾತ್ರ.
ಹಲವು ಮುಖ್ಯಮಂತ್ರಿಗಳು ಪೂರ್ಣಾವಧಿ ಮುಗಿಸುವ ಮುನ್ನವೇ ಅಧಿಕಾರದಿಂದ ಕೆಳಗಿಳಿದರೆ, ಮತ್ತೆ ಕೆಲವರು ಪೂರ್ಣಾವಧಿ ಮುಗಿಸುವ ಮುನ್ನ ಚುನಾವಣೆ ಘೋಷಣೆಯಾಗಿದ್ದರಿಂದ ಅವಕಾಶ ಕಳೆದುಕೊಂಡಿದ್ದಾರೆ. 2013ರಿಂದ 2018ರವರೆಗೆ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ತಮ್ಮ ಅಧಿಕಾರವಾಧಿಯನ್ನು ಪೂರೈಸಿದ್ದರು. ಈ ಸಾಧನೆ ಮಾಡಿದ ಮೂರನೇ ಮುಖ್ಯಮಂತ್ರಿ ಎನಿಸಿಕೊಂಡಿದ್ದರು.

ಹೌದು, ಎಸ್ ನಿಜಲಿಂಗಪ್ಪ ಮತ್ತು ದೇವರಾಜ ಅರಸ್ ಅವರನ್ನು ಬಿಟ್ಟರೆ ರಾಜ್ಯದಲ್ಲಿ 5 ವರ್ಷಗಳ ಕಾಲ ಸಿಎಂ ಆಗಿ ಆಡಳಿತ ನಡೆಸಿದ್ದು ಸಿದ್ದರಾಮಯ್ಯ ಮಾತ್ರ, ಈಗ ಮತ್ತೆ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದು, ಎರಡನೇ ಬಾರಿಗೆ 5 ವರ್ಷಗಳ ಅಧಿಕಾರ ಪೂರೈಸಿದರೆ ಅದೊಂದು ದಾಖಲೆಯಾಗಲಿದೆ. ಹಾಗಾದ್ರೆ ಈ ಮೊದಲು 5 ವರ್ಷ ಪೂರೈಸಿದ ಇಬ್ಬರು ಸಿಎಂಗಳ ಬಗ್ಗೆ ಮಾಹಿತಿ ಇಲ್ಲಿದೆ.
ಎಸ್ ನಿಜಲಿಂಗಪ್ಪ (ಜೂನ್ 21, 1962 ರಿಂದ ಮೇ 29 1968)
ಕರ್ನಾಟಕ ಮೈಸೂರು ರಾಜ್ಯವಾಗಿದ್ದ ಸಂದರ್ಭದಲ್ಲಿ ಎಸ್ ನಿಜಲಿಂಗಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಯಶಸ್ವಿಯಾಗಿ ಆಡಳಿತ ಮಾಡಿದ್ದರು. 1956 ರಿಂದ 1958ರ ವರೆಗೆ ಕಾಂಗ್ರೆಸ್ ಸರ್ಕಾರದಲ್ಲಿ ಎರಡು ವರ್ಷಗಳ ಸಿಎಂ ಆಗಿ ಆಡಳಿತ ನಡೆಸಿದರು. 1958ರಲ್ಲಿ ಬಿಡಿ ಜತ್ತಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಮಾರ್ಚ್ 14, 1962 ರಿಂದ 20ನೇ ಜೂನ್ 1962 ರವರೆಗೆ ಎಸ್.ಆರ್. ಕಂಠಿ ಮೈಸೂರು ರಾಜ್ಯದ ಸಿಎಂ ಆಗಿದ್ದರು. ಜೂನ್ 21, 1962 ರಲ್ಲಿ ಮತ್ತೆ ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಎಸ್ ನಿಜಲಿಂಗಪ್ಪ ಮೇ 29 1968ರವರೆಗೂ ಸಿಎಂ ಆಗಿ ಆಳ್ವಿಕೆ ನಡೆಸಿದರು.
ದೇವರಾಜ್ ಅರಸ್ (20ನೇ ಮಾರ್ಚ್ 1972 ರಿಂದ 31ನೇ ಡಿಸೆಂಬರ್ 1977)
ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ನಾಮಕರಣ ಮಾಡಿದ ನಂತರ 20ನೇ ಮಾರ್ಚ್ 1972ರಲ್ಲಿ ಕಾಂಗ್ರೆಸ್ ಸರ್ಕಾರದಲ್ಲಿ ದೇವರಾಜ ಅರಸ್ ಮುಖ್ಯಮಂತ್ರಿಯಾಗಿ ಆಯ್ಕೆಯಾದರು. ಸತತ ಐದು ವರ್ಷಗಳ ಆಳ್ವಿಕೆ ನಡೆಸಿದ ಅರಸ್ ರಾಜ್ಯ ಕಂಡ ಜನಪ್ರಿಯ ಮುಖ್ಯಮಂತ್ರಿಗಳಲ್ಲಿ ಒಬ್ಬರು, ಸಾಮಾಜಿಕ ನ್ಯಾಯದ ಹರಿಕಾರ ಎಂದು ಅವರನ್ನು ಕರೆಯಲಾಗುತ್ತದೆ. ಹಿಂದುಳಿದ ವರ್ಗಗಳ ಏಳಿಗೆಗಾಗಿ ಅವರು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದರು. 31ನೇ ಡಿಸೆಂಬರ್ 1977ರಲ್ಲಿ ಅವರ ಅಧಿಕಾರವಾಧಿ ಮುಕ್ತಾಯವಾಗಿತ್ತು. 1978ರ ಫೆಬ್ರವರಿ 28ರಂದು ಅವರು ಮತ್ತೊಮ್ಮೆ ಸಿಎಂ ಆಗಿ ಆಯ್ಕೆಯಾದರು 7ನೇ ಜನವರಿ 1980ರಲ್ಲಿ ಅವರು ಅಧಿಕಾರದಿಂದ ಕೆಳಗಿಳಿದರು.
ಅದಾದ ಬಳಿಕ ಕರ್ನಾಟಕದಲ್ಲಿ 2013ರ ವರೆಗೆ ಯಾವ ಮುಖ್ಯಮಂತ್ರಿ ಕೂಡ ಐದು ವರ್ಷ ಅಧಿಕಾರ ನಡೆಸಲಿಲ್ಲ. ಮೊದಲ ಬಾರಿಗೆ ಕರ್ನಾಟಕದಲ್ಲಿ ಜನತಾ ಪಕ್ಷದ 18 ಶಾಸಕರ ಬೆಂಬಲದೊಂದಿಗೆ ಸಿಎಂ ಸ್ಥಾನ ಅಲಂಕರಿಸಿದ ರಾಮಕೃಷ್ಣ ಹೆಗಡೆ ಮೊದಲ ಕಾಂಗ್ರೆಸ್ಸೇತರ ಮುಖ್ಯಮಂತ್ರಿ (10ನೇ ಜನವರಿ 1983 ರಿಂದ 10ನೇ ಆಗಸ್ಟ್ 1988ರ ವರೆಗೆ ಅವರು ಅಧಿಕಾರದಲ್ಲಿದ್ದರು ಎರಡು ಬಾರಿ ರಾಜೀನಾಮೆ ನೀಡಿ ಮತ್ತೆ ಅಧಿಕಾರ ನಡೆಸಿದರು.) ಅರಸು ನಂತರ 36 ವರ್ಷಗಳಲ್ಲಿ ರಾಜ್ಯದಲ್ಲಿ 14 ಮುಖ್ಯಮಂತ್ರಿಗಳು ಆಡಳಿತ ನಡೆಸಿದ್ದಾರೆ ಹಾಗೂ ಐದು ಬಾರಿ ರಾಷ್ಟ್ರಪತಿ ಆಡಳಿತ ಜಾರಿಯಾಗಿತ್ತು.
1999ರ ಅಕ್ಟೋಬರ್ ತಿಂಗಳಿನಲ್ಲಿ ಎಸ್ಎಂ ಕೃಷ್ಣ ನೇತೃತ್ವದ ಸರ್ಕಾರವಿತ್ತು, ಎಸ್ಎಂ ಕೃಷ್ಣ ಅವರಿಗೆ 5 ವರ್ಷ ಆಡಳಿತ ಪೂರ್ಣಗೊಳಿಸುವ ಅವಕಾಶ ಇತ್ತಾದರೂ, 2004ರಲ್ಲಿ ಲೋಕಸಭಾ ಚುನಾವಣೆ ಘೋಷಣೆಯಾದ ಕಾರಣ ಎರಡೂ ಚುನಾವಣೆ ಒಟ್ಟಿಗೆ ನಡೆಯಲಿ ಎಂದು ಎಸ್ಎಂ ಕೃಷ್ಣ ವಿಧಾನಸಭೆಯನ್ನು ವಿಸರ್ಜಿಸಿದ್ದರು.
ಅಧಿಕಾರ ಪೂರ್ಣಗೊಳಿಸಿದ ಸಿದ್ದರಾಮಯ್ಯ
2013ರ ಮೇ 13 ರಂದು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಸಿದ್ದರಾಮಯ್ಯ 15 ಮೇ 2018 ರವರೆಗೆ ಪೂರ್ಣಾವಧಿಗೆ ಆಡಳಿತ ನಡೆಸಿದರು. 2018ರಲ್ಲಿ ಕಾಂಗ್ರೆಸ್ ಬಹುಮತ ಪಡೆಯುವಲ್ಲಿ ವಿಫಲವಾದ ಬಳಿಕ ಜೆಡಿಎಸ್ ಜೊತೆ ಸಮ್ಮಿಶ್ರ ಸರ್ಕಾರ ರಚನೆ ಮಾಡಿದರು, 2019ರಲ್ಲಿ ಮೈತ್ರಿ ಸರ್ಕಾರ ಪತನವಾಗಿತ್ತು.
2023ರಲ್ಲಿ ಕಾಂಗ್ರೆಸ್ ಭರ್ಜರಿ ಬಹುಮತ ಪಡೆದುಕೊಂಡಿದ್ದು, ಸಿದ್ದರಾಮಯ್ಯ ಮತ್ತೊಮ್ಮೆ 5 ವರ್ಷಗಳ ಕಾಲ ಸಿಎಂ ಆಗುವ ಮೂಲಕ ದಾಖಲೆಯ ಬರೆಯುತ್ತಾರ ಕಾದು ನೋಡಬೇಕಿದೆ. ರಾಜ್ಯದಲ್ಲಿ ಇದುವರೆಗೆ ಜನತಾದಳ, ಜನತಾ ಪಕ್ಷ, ಬಿಜೆಪಿ, ಮತ್ತು ಕಾಂಗ್ರೆಸ್ ಪಕ್ಷ ಆಡಳಿತ ನಡೆಸಿದ್ದರೂ, ಪೂರ್ಣಾವಧಿಯ ಸಿಎಂಗಳನ್ನು ನೀಡಿದ್ದು ಮಾತ್ರ ಕಾಂಗ್ರೆಸ್ ಸರ್ಕಾರವಾಗಿದೆ.












Click it and Unblock the Notifications