1,441 ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಹಿಂಪಡೆದ ಓಲಾ ಎಲೆಕ್ಟ್ರಿಕ್ ಕಂಪನಿ
ನವದೆಹಲಿ, ಏಪ್ರಿಲ್ 25: ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೆಂಕಿ ಹೊತ್ತಿಕೊಳ್ಳುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾನುವಾರ ಓಲಾ ಎಲೆಕ್ಟ್ರಿಕ್ ತನ್ನ 1,441 ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಸ್ವಯಂಪ್ರೇರಣೆಯಿಂದ ಹಿಂಪಡೆದಿದೆ. ಇದೇ ರೀತಿಯಾಗಿ ಒಕಿನಾವಾ ಆಟೋಟೆಕ್ ಇತ್ತೀಚೆಗೆ 3,000 ಯೂನಿಟ್ಗಳನ್ನು ಹಿಂಪಡೆದಿದೆ. ಮಾತ್ರವಲ್ಲದೆ PureEV ಸುಮಾರು 2,000 ಯುನಿಟ್ಗಳನ್ನು ಹಿಂದಕ್ಕೆ ಕರೆದಿದೆ.
ದೇಶದ ಹಲವೆಡೆ ಇತ್ತೀಚೆಗೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳಿಗೆ ಬೆಂಕಿ ಹೊತ್ತುಕೊಂಡು ಹಲವಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇಂಥಹ ಘಟನೆಗಳು ಮರುಕಳಿಸುತ್ತಿರುವ ಬೆನ್ನಲ್ಲೇ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಈ ಘಟನೆಗಳ ಬಗ್ಗೆ ಎಲೆಕ್ಟ್ರಿಕ್ ವಾಹನ ತಯಾರಕರಿಗೆ ಎಚ್ಚರಿಕೆ ನೀಡಿದ್ದರು. ಜೊತೆಗೆ ಎಲ್ಲಾ ದೋಷಯುಕ್ತ ವಾಹನಗಳ ಬ್ಯಾಚ್ಗಳನ್ನು ತಕ್ಷಣವೇ ಹಿಂಪಡೆಯಲು ಸೂಚಿಸಿದ್ದರು. ಇದರಿಂದಾಗಿ ದೋಷಪೂರಿತ ಎಲೆಕ್ಟ್ರಿಕ್ ವಾಹನಗಳನ್ನು ಕಂಪನಿಗಳು ಹಿಂಪಡೆದುಕೊಂಡಿವೆ.

1,441 ಸ್ಕೂಟರ್ಗಳ ಬ್ಯಾಚ್ ಹಿಂಪಡೆದ ಓಲಾ ಎಲೆಕ್ಟ್ರಿಕ್
ಓಲಾ ಎಲೆಕ್ಟ್ರಿಕ್ ತನ್ನ 1,441 ಸ್ಕೂಟರ್ಗಳ ಬ್ಯಾಚ್ ಅನ್ನು ಹಿಂತೆಗೆದುಕೊಂಡಿದೆ. ಈ ಓಲಾ ಎಲೆಕ್ಟ್ರಿಕ್ ಸ್ಕೂಟರ್ಗೆ ಮಾರ್ಚ್ 26 ರಂದು ಪುಣೆಯ ಜನನಿಬಿಡ ಪ್ರದೇಶದಲ್ಲಿ ರಸ್ತೆಬದಿಯಲ್ಲಿ ನಿಲ್ಲಿಸಿದಾಗ ಬೆಂಕಿ ಹೊತ್ತಿಕೊಂಡಿತು. ಕಳೆದ ತಿಂಗಳ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದೆ ಎಂದು ಕಂಪನಿ ಹೇಳಿದೆ. ಜೊತೆಗೆ ಘಟನೆಗಳು ಮರುಕಳಿಸುತ್ತಿರುವುದರಿಂದ ವಾಹನಗಳ ತಪಾಸಣೆ ಕಾರಣ ಹೇಳಿ ಕಂಪನಿ ವಾಹನಗಳನ್ನು ಹಿಂಪಡೆದಿದೆ.
"ಮಾರ್ಚ್ 26 ರಂದು ಪುಣೆಯಲ್ಲಿ ಸಂಭವಿಸಿದ ವಾಹನ ಬೆಂಕಿಯ ಘಟನೆಯ ಬಗ್ಗೆ ನಮ್ಮ ಆಂತರಿಕ ತನಿಖೆ ನಡೆಯುತ್ತಿದೆ ಮತ್ತು ಪ್ರಾಥಮಿಕ ಮೌಲ್ಯಮಾಪನ ಪ್ರತ್ಯೇಕವಾಗಿ ನಡೆಸಲಾಗುತ್ತಿದೆ. ಪೂರ್ವಭಾವಿಯಾಗಿ ನಾವು ನಿರ್ದಿಷ್ಟ ಬ್ಯಾಚ್ನಲ್ಲಿನ ಸ್ಕೂಟರ್ಗಳ ವಿವರವಾದ ತಪಾಸಣೆಯನ್ನು ನಡೆಸುತ್ತೇವೆ. ಆದ್ದರಿಂದ 1,441 ವಾಹನಗಳನ್ನು ಸ್ವಯಂಪ್ರೇರಿತವಾಗಿ ಹಿಂಪಡೆಯುತ್ತಿದ್ದೇವೆ"ಎಂದು ಕಂಪನಿ ಹೇಳಿದೆ.
ಓಲಾ ಎಲೆಕ್ಟ್ರಿಕ್ ತನ್ನ ಸೇವಾ ಎಂಜಿನಿಯರ್ಗಳಿಂದ ಮರುಪಡೆಯಲಾದ ವಾಹನಗಳನ್ನು ಪರಿಶೀಲನೆ, ಎಲ್ಲಾ ಬ್ಯಾಟರಿ ವ್ಯವಸ್ಥೆಗಳ ತಪಾಸಣೆ, ಥರ್ಮಲ್ ಸಿಸ್ಟಮ್ಗಳು ಮತ್ತು ಸುರಕ್ಷತಾ ವ್ಯವಸ್ಥೆಗಳನ್ನು ಪರಿಶೀಲಿಸಲು ಮುಂದಾಗಿದೆ. ಕಂಪನಿಯು ತನ್ನ ಬ್ಯಾಟರಿ ವ್ಯವಸ್ಥೆಗಳನ್ನು ಈಗಾಗಲೇ AIS 156 ನಿಂದ ಪರೀಕ್ಷಿಸಲ್ಪಟ್ಟಿದ್ದು ಇದು ಭಾರತಕ್ಕೆ ಇತ್ತೀಚಿನ ಪ್ರಸ್ತಾವಿತ ಮಾನದಂಡವಾಗಿದೆ. ಜೊತೆಗೆ ಯುರೋಪಿಯನ್ ಸ್ಟ್ಯಾಂಡರ್ಡ್ ECE 136 ಗೆ ಇದು ಅನುಗುಣವಾಗಿದೆ.

ಎಲ್ಲೆಲ್ಲಿ ದುರಂತ
ಇಲ್ಲಿಯವರೆಗೆ ದೇಶದಲ್ಲಿ ಮೂರು ಪ್ಯೂರ್ ಇವಿ, ಒಂದು ಓಲಾ, ಒಂದು ಬೂಮ್, ಎರಡು ಓಕಿನಾವಾ ಮತ್ತು 20 ಜಿತೇಂದ್ರ ಇವಿ ಸ್ಕೂಟರ್ಗಳಿಗೆ ಬೆಂಕಿ ಹೊತ್ತುಕೊಂಡಿದೆ. ಹೀಗಾಗಿ ಅವುಗಳ ಸುರಕ್ಷತೆಯ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ.
ಕಳೆದ ಶನಿವಾರ ಆಂಧ್ರಪ್ರದೇಶದ ವಿಜಯವಾಡದ ಮನೆಯಲ್ಲಿ ಚಾರ್ಜ್ ಮಾಡುವಾಗ ಬೂಮ್ ಮೋಟಾರ್ಸ್ಗೆ ಸೇರಿದ ಇ-ಸ್ಕೂಟರ್ನ ಬ್ಯಾಟರಿ ಸ್ಫೋಟ ಸಂಭವಿಸಿ 40 ವರ್ಷದ ವ್ಯಕ್ತಿ ಸಾವನ್ನಪ್ಪಿದರು. ಮೃತ ಕೋಟಕೊಂಡ ಶಿವಕುಮಾರ್ ಅವರ ಪತ್ನಿ ಮತ್ತು ಇಬ್ಬರು ಪುತ್ರಿಯರು ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ.
ಬಹು ವರದಿಗಳ ಪ್ರಕಾರ, ಪೊಲೀಸರು EV ತಯಾರಕರ ವಿರುದ್ಧ ಕ್ರಿಮಿನಲ್ ಪ್ರೊಸೀಜರ್ ಕೋಡ್ (CrPC) ನ ಸೆಕ್ಷನ್ 174 ರ ಅಡಿಯಲ್ಲಿ ದೂರು ದಾಖಲಿಸಿದ್ದಾರೆ ಮತ್ತು ಇ-ಸ್ಕೂಟರ್ ಅನ್ನು ಕುಮಾರ್ಗೆ ಮಾರಾಟ ಮಾಡಿದ ಬೂಮ್ ಮೋಟಾರ್ಸ್ ಡೀಲರ್ಗೆ ನೋಟಿಸ್ ಕಳುಹಿಸಲಾಗಿದೆ. ಡಿಟಿಪಿ ಡಿಸೈನರ್ ಆಗಿರುವ ಕುಮಾರ್ ಅವರು ಏಪ್ರಿಲ್ 22 ರಂದು ಸುಮಾರು 70,000 ರೂಪಾಯಿಗಳಿಗೆ ಇ-ಸ್ಕೂಟರ್ ಅನ್ನು ಖರೀದಿಸಿದ್ದರು. ಏಪ್ರಿಲ್ 23 ರಂದು ಖರೀದಿಸಿದ ಒಂದು ದಿನದೊಳಗೆ ಬ್ಯಾಟರಿ ಸ್ಫೋಟಗೊಂಡಿದೆ ಎಂದು ವರದಿಗಳು ತಿಳಿಸಿವೆ. ವಿಪರ್ಯಾಸವೆಂದರೆ, ಸರ್ಕಾರದ ಆಟೋಮೋಟಿವ್ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಯೋಜನೆಯಡಿ ಆಯ್ಕೆಯಾದವರಲ್ಲಿ ಬೂಮ್ ಮೋಟಾರ್ ಸೇರಿದೆ.

ಒಕಿನಾವಾದಲ್ಲಿ ಸ್ಕೂಟರ್ಗೆ ಬೆಂಕಿ
ಇನ್ನೂ ಕಳೆದ ಬುಧವಾರ ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಮನೆಯೊಂದರಲ್ಲಿ ಪ್ಯೂರ್ ಇವಿ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬ್ಯಾಟರಿ ಸ್ಫೋಟಗೊಂಡಿದ್ದರಿಂದ 80 ವರ್ಷದ ವ್ಯಕ್ತಿ ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ. ಅದಕ್ಕೂ ಮೊದಲು ವೆಲ್ಲೂರಿನಲ್ಲಿ ಒಕಿನಾವಾ ಸ್ಕೂಟರ್ ಬೆಂಕಿಗೆ ಆಹುತಿಯಾದ ನಂತರ ಒಬ್ಬ ವ್ಯಕ್ತಿ ಮತ್ತು ಅವರ 13 ವರ್ಷದ ಮಗಳು ತಮ್ಮ ಪ್ರಾಣವನ್ನು ಕಳೆದುಕೊಂಡರು.

ಕೇಂದ್ರ ಸಾರಿಗೆ ಸಚಿವರಿಂದ ಖಡಕ್ ಎಚ್ಚರಿಕೆ
EV ಅಗ್ನಿ ಅವಘಡಗಳು ಸರ್ಕಾರವನ್ನು ಪರೀಕ್ಷಿಸಲು ಸಮಿತಿಯನ್ನು ರಚಿಸುವಂತೆ ಪ್ರೇರೇಪಿಸಿವೆ. ಜೊತೆಗೆ ಸರ್ಕಾರ ಕಂಪನಿಗಳು ನಿರ್ಲಕ್ಷ್ಯ ತೋರಿದರೆ ದಂಡ ವಿಧಿಸುವ ಎಚ್ಚರಿಕೆ ನೀಡಿದೆ. ಪುನರಾವರ್ತಿತ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ವಿದ್ಯುತ್ ವಾಹನಗಳ (ಇವಿ) ತಯಾರಕರಿಗೆ 'ಗುಣಮಟ್ಟ-ಕೇಂದ್ರಿತ' ಮಾರ್ಗಸೂಚಿಗಳನ್ನು ಪ್ರಕಟಿಸಲಿದೆ ಎಂದು ಗುರುವಾರ ಹೇಳಿದ್ದಾರೆ. ನಿರ್ಲಕ್ಷ್ಯ ತೋರಿದಲ್ಲಿ ಇವಿ ತಯಾರಕರಿಗೆ ಭಾರಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು (MoRTH) EV ತಯಾರಿಕೆಯ ಸಮಸ್ಯೆಗಳನ್ನು, ವಿಶೇಷವಾಗಿ ದ್ವಿಚಕ್ರ ವಾಹನಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ಮತ್ತು ಮುಂಬರುವ ಮಾರ್ಗಸೂಚಿಗಳಿಗೆ ಸೇರಿಸಲು ಶಿಫಾರಸುಗಳನ್ನು ಮಾಡಲು ತಜ್ಞರ ಸಮಿತಿಯನ್ನು ರಚಿಸಿದೆ ಎಂದು ಗಡ್ಕರಿ ಹೇಳಿದರು. ಸಚಿವಾಲಯದ ಆದೇಶಗಳು ಅಥವಾ ಮಾರ್ಗಸೂಚಿಗಳಿಗಾಗಿ ಕಾಯದೆ ದೋಷಯುಕ್ತ ಬ್ಯಾಚ್ಗಳನ್ನು ಗುರುತಿಸಿ ಮತ್ತು ಹಿಂಪಡೆಯುವ ಮೂಲಕ ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸುವಂತೆ ಅವರು EV ಕಂಪನಿಗಳಿಗೆ ಸಲಹೆ ನೀಡಿದ್ದಾರೆ.











Click it and Unblock the Notifications