ಇಂದು ನೇತಾಜಿ ಜನ್ಮದಿನ: ಸುಭಾಷ್ ಚಂದ್ರ ಬೋಸ್ ಅವರ ನೆಚ್ಚಿನ ತಿನಿಸು ಯಾವುದು ಗೊತ್ತೇ?
ಕೋಲ್ಕತಾ, ಜನವರಿ 23: ಇಂದು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನ. ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ವಿಭಿನ್ನ ಹಾದಿ ತುಳಿದ ನೇತಾಜಿಯ ದಿಟ್ಟತನ ಇಂದಿಗೂ ಸ್ಫೂರ್ತಿದಾಯಕ. ಅವರ ನಿಗೂಢ ಸಾವು ಎಂದೆಂದಿಗೂ ಪ್ರಶ್ನೆಯಾಗಿ ಉಳಿದಿರುತ್ತದೆ. ನೇತಾಜಿ ಅವರನ್ನು ಜನಮಾನಸದಲ್ಲಿ ಉಳಿಸಿಕೊಳ್ಳುವ ಪ್ರಯತ್ನಗಳು ಕೂಡ ನಡೆಯುತ್ತಿರುತ್ತವೆ. ಅದಕ್ಕೆ ಒಂದು ಉದಾಹರಣೆ ಉತ್ತರ ಕೋಲ್ಕತಾದಲ್ಲಿನ ಫುಡ್ ಜಾಯಿಂಟ್.
ಉತ್ತರ ಕೋಲ್ಕತಾದ ಸ್ಕಾಟಿಶ್ ಚರ್ಚ್ ಕಾಲೇಜಿನಲ್ಲಿ ಸುಭಾಷ್ ಚಂದ್ರ ಬೋಸ್ ಅವರು ಓದುತ್ತಿದ್ದಾಗ ಅವರು ಯಾವಾಗಲೂ ಚಹಾ ಮತ್ತು ತಿನಿಸಿಗಾಗಿ ಹೋಗುತ್ತಿದ್ದ ಪುಟ್ಟ ಅಂಗಡಿ ಈಗಲೂ ಬಹು ಜನಪ್ರಿಯ. ಲಕ್ಷ್ಮಿನಾರಾಯಣ್ ಶಾ ಮತ್ತು ಅವರ ಮಕ್ಕಳ ಕ್ಯಾಂಟೀನ್ 'ನೇತಾಜಿ ಅವರ ಅಂಗಡಿ' ಎಂದೇ ಹೆಸರುವಾಸಿ. ಅದಕ್ಕೀಗ 103 ವರ್ಷದ ಹರೆಯ!
ನೇತಾಜಿ 125ನೇ ಜನ್ಮದಿನ; ಪರಾಕ್ರಮ ಸ್ಮರಿಸಿ ಗೌರವ ಸಲ್ಲಿಸಿದ ಪ್ರಧಾನಿ ಮೋದಿ
ಖೇದು ಶಾ ಎಂಬುವವರು 1918ರಲ್ಲಿ ಲಕ್ಷ್ಮಿನಾರಾಯಣ್ ಶಾ ಆಂಡ್ ಸನ್ಸ್ ಅಂಗಡಿ ಆರಂಭಿಸಿದ್ದರು. ಆ ಸಂದರ್ಭದಲ್ಲಿ ಭಾರತ ಬ್ರಿಟಿಷರ ಆಡಳಿತದ ಹಿಡಿತದಲ್ಲಿತ್ತು. ದೇಶದ ಸ್ವಾತಂತ್ರ್ಯಕ್ಕಾಗಿ ಎಲ್ಲ ಕಡೆ ಬಹುದೊಡ್ಡ ಹೋರಾಟಗಳು ನಡೆಯುತ್ತಿದ್ದವು.
ಭಾರತದಲ್ಲಿ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿಸಿದ ಅನೇಕ ಹೋರಾಟಗಾರರು, ಬುದ್ಧಿಜೀವಿಗಳು ಮತ್ತು ಕ್ರಾಂತಿಕಾರಿಗಳ ನೆಲೆಗಳಲ್ಲಿ ಕೋಲ್ಕತಾ ಒಂದು. ಅಲ್ಲಿನ ಸ್ವಾತಂತ್ರ್ಯ ಹೋರಾಟದ ರೂಪುರೇಷೆಗಳು ಟೀ ಮತ್ತು ಕುರುಕಲು ತಿಂಡಿಗಳ ಸೇವನೆ ವೇಳೆ ರೂಪುಗೊಳ್ಳುತ್ತಿದ್ದವು. ಆ ಸಂಪ್ರದಾಯ ಈಗಲೂ ನಗರದಲ್ಲಿ ಮುಂದುವರಿದಿದೆ. ಮುಂದೆ ಓದಿ.
ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನ: ಜನವರಿ 23ರಂದು ಪರಾಕ್ರಮ ದಿವಸವಾಗಿ ಆಚರಣೆ
103 ವರ್ಷದ ಬಾಂಧವ್ಯ
ಬಂಗಾಳದ ಪ್ರಸಿದ್ಧ ತಿನಿಸು ತೆಲೆಭಾಜ (ಪಕೋಡ) ಮತ್ತು ಭರೇರ್ ಚಾ (ಮಣ್ಣಿನ ಲೋಟದ ಟೀ) ನೇತಾಜಿಗೂ ಆಪ್ತವಾಗಿದ್ದವು. ನೇತಾಜಿ ಅವರಿಗೆ ಈ ಕ್ಯಾಂಟೀನ್ ಬಹಳ ಅಚ್ಚುಮೆಚ್ಚಿನ ಜಾಗ. ತಮ್ಮ ಅಜ್ಜ ನೇತಾಜಿ ಅವರನ್ನು ಹೇಗೆ ಭೇಟಿ ಮಾಡಿದ್ದರು, ಅವರೊಂದಿಗೆ ಹುಟ್ಟಿಕೊಂಡ ಬಾಂಧವ್ಯ ಈ 103 ವರ್ಷಗಳಲ್ಲಿ ಹೇಗೆ ಬೆಳೆದುಬಂದಿದೆ ಎಂಬ ಬಗ್ಗೆ ಲಕ್ಷ್ಮಿನಾರಾಯಣ್ ಶಾ ಆಂಡ್ ಸನ್ಸ್ ಮಾಲೀಕ ಕೆಷ್ತೋ ಕುಮಾರ್ ಗುಪ್ತಾ ಹಂಚಿಕೊಂಡಿದ್ದಾರೆ.
ಹೋರಾಟಗಾರರಿಗೆ ತಿನಿಸು ಪೂರೈಕೆ
'ನಿರಂತರ ಸಭೆಗಳನ್ನು ನಡೆಸುತ್ತಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ನನ್ನ ಅಜ್ಜ ತಿನಿಸುಗಳನ್ನು ಪೂರೈಕೆ ಮಾಡುತ್ತಿದ್ದರು. ಅವರಿಗೆ ಅನ್ನ, ಬಿಸಿ ಬಿಸಿ ಬಜ್ಜಿ, ಹಸಿರು ಮೆಣಸಿನಕಾಯಿಯನ್ನು ಪತ್ರಿಕೆಯಲ್ಲಿ ಇರಿಸಿ ಕೊಡುತ್ತಿದ್ದರು. ಮಣ್ಣಿನ ಲೋಟಗಳಲ್ಲಿ ಅಥವಾ ಕುಲ್ಹಾದ್ಗಳಲ್ಲಿ ಕೋಲ್ಕತಾದ ಜನಪ್ರಿಯ ಭರೇರ್ ಚಾವನ್ನು ನೀಡುತ್ತಿದ್ದರು' ಎಂದು ಅವರು ನೆನಪಿಸಿಕೊಂಡಿದ್ದಾರೆ.
ಬಜ್ಜಿಯ ಕಾಯಂ ಗಿರಾಕಿ
'ಒಮ್ಮ ನೇತಾಜಿ ಅವರನ್ನು ಭೇಟಿ ಮಾಡಿದ್ದ ನನ್ನ ಅಜ್ಜ, ಅವರಿಗೆ ಚಹಾ ಮತ್ತು ಬಜ್ಜಿಗಳನ್ನು ನೀಡಿದ್ದರು. ಸ್ಕಾಟಿಷ್ ಚರ್ಚ್ ಕಾಲೇಜಿನಲ್ಲಿ ಓದುವಾಗ ನೇತಾಜಿ ಅವರು ನಮ್ಮ ಅಂಗಡಿಯ ಚಹಾ ಹಾಗೂ ಬಜ್ಜಿಯ ಕಾಯಂ ಗಿರಾಕಿಯಾಗಿದ್ದರು. ಹೀಗಾಗಿಯೇ ನನ್ನ ಅಜ್ಜನಿಗೆ ನೇತಾಜಿ ಅವರೊಂದಿಗೆ ಅವಿನಾಭಾವ ಸಂಬಂಧ ಬೆಳೆದಿತ್ತು' ಎಂದು ವಿವರಿಸಿದ್ದಾರೆ.
1942ರಲ್ಲಿ ಶುರುವಾದ ಸಂಪ್ರದಾಯ
1942ರ ಜನವರಿ 23ರ ನೇತಾಜಿ ಅವರ ಜನ್ಮದಿನದಂದು ಖೇದು ಶಾ ಅವರು ಅವರ ಎಲ್ಲ ಸ್ನೇಹಿತರು, ನೆರೆಹೊರೆಯವರಿಗೆ ಬಜ್ಜಿಗಳನ್ನು ಹಂಚಿ, ತಮ್ಮ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರನ ಜನ್ಮದಿನ ಎಂದು ಹೇಳಿಕೊಂಡಿದ್ದರು. ವಿಶೇಷವೆಂದರೆ ಇಷ್ಟುವರ್ಷಗಳಾದರೂ ಆ ಸಂಪ್ರದಾಯವನ್ನು ಮುಂದುವರಿಸಿಕೊಂಡು ಬರಲಾಗುತ್ತಿದೆ.
ಬಗೆ ಬಗೆಯ ಬಜ್ಜಿಗಳು
'ನಮಗೆ ಸ್ವಾತಂತ್ರ್ಯ ದೊರೆತ ಬಳಿಕ 1948ರ ಜನವರಿ 23ರಂದು ಅಂಗಡಿಯಲ್ಲಿ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಫಲಕಗಳನ್ನು ಇರಿಸಿ ನಮ್ಮ ಅಂಗಡಿಯಲ್ಲಿ ಮಾಡಿದ ಬಜ್ಜಿಯನ್ನು ಎಲ್ಲರಿಗೂ ಹಂಚಿದ್ದೆವು. ಮಕ್ಕಳಿಗೆ ಎರಡು, ದೊಡ್ಡವರಿಗೆ ನಾಲ್ಕು ನೀಡುತ್ತಿದ್ದವು' ಎಂದು ಕೆಷ್ತೋ ತಿಳಿಸಿದ್ದಾರೆ. ಈಗಲೂ ಅವರ ಅಂಗಡಿಯ ಮೇಲೆ ನೇತಾಜಿ ಅವರ ದೊಡ್ಡ ಚಿತ್ರವಿರುವ ಫಲಕವಿದೆ. ಇಂದು (ಜ. 23) ಕೂಡ ಅವರು ಬೆಳಿಗ್ಗೆಯಿಂದಲೇ ಆಲೂಗಡ್ಡೆ, ಅವರೆಕಾಳು, ಈರುಳ್ಳಿ, ಕೋಸಿನ ಬಜ್ಜಿಗಳನ್ನು ಮಾಡಿ ಹಂಚುತ್ತಿದ್ದಾರೆ.