ಪ್ರತಾಪ್ ಸಿಂಹ ಸಂದರ್ಶನ:'ರಾಜಕಾರಣಕ್ಕೆ ಹೊಸಬರು ಬರಲು ಸಾಧ್ಯವಾಗುತ್ತಿಲ್ಲ'
ಮೈಸೂರು, ಏಪ್ರಿಲ್ 14:ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣೆಗೆ ಉಳಿದಿರುವುದು ಕೇವಲ ಇನ್ನೈದು ದಿನ ಮಾತ್ರ. ಪ್ರಸ್ತುತ ಸಂಸದರಾಗಿದ್ದು, ಎರಡನೇ ಬಾರಿ ಮತ್ತೊಮ್ಮೆ ಅದೇ ಪಟ್ಟಕ್ಕೆ ಸ್ಪರ್ಧಿಸುತ್ತಿರುವ ಬಿಜೆಪಿಯ ಫೈರ್ ಬ್ರಾಂಡ್ ಎಂದೇ ಹೆಸರು ಮಾಡಿರುವ ಪ್ರತಾಪ್ ಸಿಂಹ ಹತ್ತು ಹಲವು ಕಾರ್ಯಕ್ರಮಗಳನ್ನು ಮೈಸೂರಿಗೆ ತಂದಿದ್ದಾರೆ.
ಆದರೆ ಕೊಡಗಿನ ಜನರಿಗೆ ಎಲ್ಲೋ ಹಿಂದೇಟು ಹಾಕಿದ್ದಾರೆ ಎಂಬ ಮಾತಿದೆ. ಅಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ತೊಡಗಿರುತ್ತಾರೆ ಎಂಬ ಮಾತುಗಳಿವೆ.
ರಸ್ತೆ ಅಭಿವೃದ್ಧಿ, ಹೊಸ ರೈಲು ಮಾರ್ಗಗಳು, ದಶ ಪಥದ ರಸ್ತೆ , ವಿಮಾನ ನಿಲ್ದಾಣ ವಿಸ್ತರಣೆ ಹೀಗೆ ಹತ್ತು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿರುವುದನ್ನು ಗಮನಿಸಿರುವ ಮೈಸೂರು ಹಾಗೂ ಕೊಡಗು ಜನತೆ ಮತ್ತೊಮ್ಮೆ ತಮ್ಮನ್ನು ಗೆಲ್ಲಿಸಲಿದ್ದಾರೆ ಎಂಬ ಆಶಯವನ್ನು ಸಂಸದ ಪ್ರತಾಪ್ ಸಿಂಹ ಇಟ್ಟುಕೊಂಡಿದ್ದಾರೆ.
ಹಾಗಾದರೆ ಈ ಬಾರಿ ಯಾವ ಅಂಶಗಳನ್ನು ಮುಂದಿಟ್ಟುಕೊಂಡು ಸಂಸದ ಪ್ರತಾಪ್ ಸಿಂಹ ಮತ ಯಾಚನೆ ಮಾಡುತ್ತಿದ್ದಾರೆ. ಅವರ ಆಶಯಗಳೇನು ಎಂಬುದನ್ನು ಸ್ವತಃ ಅವರೇ ಒನ್ ಇಂಡಿಯಾ ಸಂದರ್ಶನದಲ್ಲಿ ತಿಳಿಸಿದ್ದಾರೆ. ಅದರ ಸಾರಂಶ ಇಲ್ಲಿದೆ.

ಒನ್ ಇಂಡಿಯಾ:ಈ ಬಾರಿ ಯಾವ ಅಂಶ ನೋಡಿ ಮತ ನೀಡಬೇಕು?
ಪ್ರತಾಪ್ ಸಿಂಹ: ಐದು ವರ್ಷಗಳಲ್ಲಿ ಮಾಡಿರುವ ಕೆಲಸ ನೋಡಿ ಮತ ಕೊಡಬೇಕು. ಅಭಿವೃದ್ಧಿ ಮಾಡುತ್ತಾರೆ ಎಂಬ ಭರವಸೆಯಿಂದಲೇ ಜನರು ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಾರೆ. 780 ಕೋಟಿ ವೆಚ್ಚದಲ್ಲಿ ನಾಗನಹಳ್ಳಿಯಲ್ಲಿ ಹೊಸ ರೈಲ್ವೆ ನಿಲ್ದಾಣದ ಶಂಕುಸ್ಥಾಪನೆ,7,500 ಕೋಟಿ ವೆಚ್ಚದಲ್ಲಿ ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಆರಂಭ, ವಿಮಾನ ನಿಲ್ದಾಣ ಮೇಲ್ದರ್ಜೆ, ರನ್ವೇ ವಿಸ್ತರಣೆಗೆ 700 ಕೋಟಿ ಬಿಡುಗಡೆ,. ನಾನು ಈವರೆಗೂ ಮೈಸೂರಿನಿಂದ ವಾರಾಣಸಿ, ಉದಯಪುರ, ಹುಬ್ಬಳ್ಳಿ, ಬೆಂಗಳೂರು, ಹೈದರಾಬಾದ್, ಚೆನ್ನೈ ಸೇರಿದಂತೆ ಆರು ಹೊಸ ರೈಲು ತಂದಿದ್ದೇನೆ. ಹಿನಕಲ್ ಜಂಕ್ಷನ್ನಲ್ಲಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಪಾಸ್ಪೋರ್ಟ್ ಸೇವಾ ಕೇಂದ್ರ ಕಲ್ಪಿಸಿದ್ದೇನೆ.

ಒನ್ ಇಂಡಿಯಾ: ಹಿಂದುತ್ವ, ಕುಟುಂಬ ರಾಜಕಾರಣದ ಬಗ್ಗೆ ಅನಿಸಿಕೆ...
ಪ್ರತಾಪ್ ಸಿಂಹ: ಹಿಂದುತ್ವ, ರಾಷ್ಟ್ರೀಯತೆಯು ಬಿಜೆಪಿ ಜೀವಾಳ. ಟಿಪ್ಪು ಜಯಂತಿ ಬಂದಾಗ ಸೈದ್ಧಾಂತಿಕವಾಗಿ, ತಾತ್ವಿಕವಾಗಿ ವಿರೋಧಿಸಿದ್ದೇನೆ. ಕಾರಣ ಆತ ನಮ್ಮ ಕೊಡಗಿಗೆ ಮೋಸಗೈದಿದ್ದಾನೆ. ಆದರೆ ಎಂದಿಗೂ ಜಾತಿ, ಧರ್ಮದ ಬಗ್ಗೆ ಮಾತನಾಡಿಲ್ಲ. ರಾಜಕಾರಣಕ್ಕೆ ಹೊಸಬರು ಬರಲು ಸಾಧ್ಯವಾಗುತ್ತಿಲ್ಲ. ಮಕ್ಕಳು, ಕುಟುಂಬದವರನ್ನೇ ಬೆಳೆಸುತ್ತಿದ್ದಾರೆ. ಆದರೆ, ರಾಜಕಾರಣಕ್ಕೆ ಸಂಬಂಧಪಡದ ವ್ಯಕ್ತಿಗೆ ಟಿಕೆಟ್ ಕೊಟ್ಟು ಗೆಲ್ಲಿಸಿಕೊಡಿ ಎಂದು ಮೋದಿ ಇದೇ ಮೈಸೂರಿನ ಸಮಾವೇಶದಲ್ಲಿ ಕೋರಿದ್ದರು. ಜನ ಮೋದಿ ಮುಖ ನೋಡಿ ನನ್ನನ್ನು ಗೆಲ್ಲಿಸಿದರು. ಅದು ನನ್ನ ಮಾತಿನ ಧ್ವನಿಯಾಗಿತ್ತು.

ಒನ್ ಇಂಡಿಯಾ: ಬಿಜೆಪಿಯಿಂದ ಹಿಂದುಳಿದ ವರ್ಗದ ಜನರಿಗೆ ಅನ್ಯಾಯವಾಗುತ್ತಿದೆಯಾ?
ಪ್ರತಾಪ್ ಸಿಂಹ:ಸಂವಿಧಾನ ಅಪಾಯದಲ್ಲಿದೆ ಎಂದು ಹೇಳಿಕೊಂಡು ತಿರುಗುವ ಕೆಲ ಬೊಗಳೆ ದಾಸರು ಯಾವುದೇ ಕೆಲಸ ಮಾಡುವುದಿಲ್ಲ. ಮೈಸೂರಿನ 95 ಸಾವಿರ ಜನರಿಗೆ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಲಭಿಸಿದೆ. ಅದರಲ್ಲಿ ನರಸಿಂಹರಾಜ ಕ್ಷೇತ್ರದಲ್ಲಿ ಹೆಚ್ಚು ಫಲಾನುಭವಿಗಳು ಮುಸ್ಲಿಮರು. ಪ್ರಧಾನಮಂತ್ರಿ ಅವಾಜ್ ಯೋಜನೆ, ಆಯುಷ್ಮಾನ್ ಭಾರತ ಆರೋಗ್ಯ ಯೋಜನೆಯ ಹೆಚ್ಚು ಫಲಾನುಭವಿಗಳು ಮುಸ್ಲಿಮರು. ನಮ್ಮ ಯಾವುದೇ ಯೋಜನೆಗಳು ಜಾತಿ ಆಧಾರಿತವಾಗಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಜಾರಿಗೆ ತಂದ ಶಾದಿಭಾಗ್ಯ, ಶಾಲೆ ಮಕ್ಕಳಿಗೆ ಪ್ರವಾಸ ಭಾಗ್ಯ ಧರ್ಮ, ಜಾತಿ ಆಧಾರಿತವಾಗಿದ್ದವು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರು ಚುನಾವಣೆಯಲ್ಲಿ ಸೋತಿದ್ದರು. ಅವರಿಗೆ ಭಾರತ ರತ್ನ ನೀಡದೆ ಅವಮಾನಿಸಿದ್ದು, ತುರ್ತು ಪರಿಸ್ಥಿತಿ ಹೇರಿ ಸಂವಿಧಾನವನ್ನು ಹತ್ಯೆ ಮಾಡಿದ್ದು ಕಾಂಗ್ರೆಸ್ ಪಕ್ಷ. ಹೀಗಾಗಿ ಅವರ ಪಕ್ಷದ ಮಾತುಗಳಿಗೆ ಜನರು ಕಿವಿಗೊಡಬಾರದು.

ಒನ್ ಇಂಡಿಯಾ: ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೀರಾ?
ಪ್ರತಾಪ್ ಸಿಂಹ: ಕಳೆದ ಬಾರಿ ಚುನಾವಣೆಯಲ್ಲಿ ಮೋದಿಯವರಿಗೆ ಒಂದು ಅವಕಾಶ ನೀಡಬೇಕೆಂಬ ಕನಸು ಜನರಲ್ಲಿತ್ತು. ಇದೀಗ ಮೈಸೂರು ಜನ ಮತ್ತೊಂದು ಅವಕಾಶ ಕೊಡಬೇಕು ಎಂದು ನಿರ್ಧರಿಸಿದ್ದಾರೆ. ಈಗಲೂ ಮೋದಿ ಅವರ ಪರ ಅಲೆ ಇದೆ. ಕಳೆದ ಬಾರಿ ದಳದ ಅಲೆಯಿತ್ತು ಎನ್ನುವುದಾದರೆ ಈ ಬಾರಿ ಸಿದ್ದರಾಮಯ್ಯ ಅವರ ವಿರುದ್ಧ ಸುನಾಮಿ ಇದೆ. ಹೀಗಾಗಿ ಜನರು ಮತ್ತೊಮ್ಮೆ ನನ್ನನ್ನು ಗೆಲ್ಲಿಸಲಿದ್ದಾರೆ. ನಮ್ಮ ಪಕ್ಷದ ಕಾರ್ಯಕರ್ತರು ಕಳೆದ ಬಾರಿಯೂ ನನ್ನನ್ನು ಗೆಲ್ಲಿಸಿದ್ದಾರೆ. ಈ ಬಾರಿ ಕೂಡ ಮೋದಿ ಅವರ ಕೆಲಸ, ನನ್ನ ಕೆಲಸ ನೋಡಿ ಪ್ರಾಮಾಣಿಕವಾಗಿ ಅವರು ನನ್ನ ಪರವಾಗಿ ಮತ ಚಲಾಯಿಸುವ ವಿಶ್ವಾಸ ನನ್ನಲ್ಲಿದೆ.

ಒನ್ ಇಂಡಿಯಾ:ಚುನಾವಣೆ ಎದುರಿಸಲು ಮೋದಿ ಹೆಸರು ಬಳಸುತ್ತಿದ್ದೀರಾ?
ಪ್ರತಾಪ್ ಸಿಂಹ: ನಾನು ಒಂದು ನಿಮಿತ್ತ ಮಾತ್ರ. ಹಿಂದಿನ ಚುನಾವಣೆ ಮತ್ತು ಐದು ವರ್ಷಗಳಲ್ಲಿ ಕೆಲಸ ಆಗಿರೋದು ಇದಿಷ್ಟು ಕೂಡ ಮೋದಿಯವರ ಕೊಡುಗೆಯೇ ಆಗಿದೆ. ನಮ್ಮ ಉದ್ದೇಶ ಮೋದಿಯವರು ಮತ್ತೆ ಪ್ರಧಾನಿಯಾಗಿ ಮುಂದುವರಿಯಬೇಕು ಅನ್ನುವುದು. ಮೋದಿ ಅವರು ಕೊಟ್ಟಿದ್ದನ್ನು ನನ್ನ ಕ್ಷೇತ್ರದ ಜನರಿಗೆ ತಲುಪಿಸಿದ್ದೇನೆ ಹಾಗೂ ನಂತರ ಅಗತ್ಯತೆ ಏನಿದೆ ಅದನ್ನು ಮೋದಿಯವರಿಗೆ ತಿಳಿಸಿ ಅದನ್ನು ಪಡೆದುಕೊಂಡಿದ್ದೇನೆ. ನನ್ನ ಹೆಸರಿಗಿಂತ ಮೋದಿ ಕೊಟ್ಟರು ಎನ್ನುವುದೇ ದೊಡ್ಡದು.

ಒನ್ ಇಂಡಿಯಾ:ಎದುರಾಳಿಗಳು ಕ್ಷೇತ್ರಕ್ಕೆ ನೀವೇನು ಕೊಡುಗೆ ಕೊಟ್ಟಿದ್ದೀರಿ ಎನ್ನುತ್ತಾರಲ್ಲ?
ಪ್ರತಾಪ್ ಸಿಂಹ: ಕಳೆದ 10 ವರ್ಷಗಳಲ್ಲಿ ಮೈಸೂರಿಗೆ ಒಂದು ಹೊಸ ಟ್ರೈನ್ ಸಿಕ್ಕಿಲ್ಲ. ಆದರೆ ಮೋದಿಯವರ ಸಮಯದಲ್ಲಿ ನಾನು ಮೈಸೂರಿಗೆ ಆರು ಹೊಸ ಟ್ರೈನ್ ಗಳನ್ನು ತಂದೆ. ನಮಗೆ ಕೇಳಿದ್ದನ್ನೆಲ್ಲಾ ಕೊಡುವಂತಹ ಒಂದು ಕಾಮದೇನು ರೂಪದಲ್ಲಿ ಮೋದಿ ಅವರು ಇರಬೇಕಾದರೆ ನಾನು ಮಾಡಿರುವ ಕೆಲಸದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ನನ್ನ ಹಿಂದಿನ ಸಂಸದರಿಗೆ ಕೇಳಿದ್ದನ್ನು ಕೊಡುವ ಪ್ರಧಾನಿ ಇರಲಿಲ್ಲವೇ ? ಹಾಗಾಗಿ ಯಾವ ಕೆಲಸಗಳನ್ನು ಮೈಸೂರಲ್ಲಿ ಅವರು ಮಾಡಲೇ ಇಲ್ಲ.ರಾಜ್ಯ ಸರ್ಕಾರದಿಂದ ಎಷ್ಟು ಅನುದಾನ ಬಂದಿದೆ ಎಂಬುದರ ಬಗ್ಗೆ ಪಟ್ಟಿ ಕೊಡಲಿ. ನಾವು ಕೂಡ ಪಟ್ಟಿ ಕೊಡುತ್ತೇವೆ. ಕೊಡಗಿನಲ್ಲಿ 5 ಸಾವಿರ ಮನೆ ಕುಸಿದಿದ್ದವು. ಅದಕ್ಕೆ ಪರಿಹಾರ ನೀಡಿರುವುದು ಕೇಂದ್ರ ಸರ್ಕಾರ. ಮೃತಪಟ್ಟ 20 ಜನರ ಸಂಬಂಧಿಕರಿಗೆ ತಲಾ 7 ಲಕ್ಷ ಲಭಿಸಿದೆ. ಅದರಲ್ಲಿ ತಲಾ 6 ಲಕ್ಷ ಕೇಂದ್ರ ಸರ್ಕಾರ ನೀಡಿದೆ. 1 ಲಕ್ಷ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಬಂದಿದೆ.

ಒನ್ ಇಂಡಿಯಾ:ಕಾಫಿ, ತಂಬಾಕು ಬೆಳೆಗಾರರ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂಬ ದೂರಿದೆ?
ಪ್ರತಾಪ್ ಸಿಂಹ: ವಿಜಯಶಂಕರ್ ಮಾಡಿರುವ ಆರೋಪವಿದು. ಬಿಜೆಪಿ ಕೋಮುವಾದಿ ಪಕ್ಷ ಎಂದು ಅವರು ಹೇಳುತ್ತಾರೆ. ಸಿಮೆಂಟ್ ಮಾರುತ್ತಿದ್ದ ಅವರನ್ನು ಸಂಸದರನ್ನಾಗಿ ಮಾಡಿದ್ದು ಬಿಜೆಪಿ. ಆದರೆ, ಪಕ್ಷಕ್ಕೆ ದ್ರೋಹ ಬಗೆದರು. ಕಾಂಗ್ರೆಸ್ ಟಿಕೆಟ್ ಪಡೆಯಲು ಕೈಚಾಚಿ ಕಣ್ಣೀರು ಹಾಕಿದರು. ಸೋತಿದ್ದ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಂತ್ರಿ ಮಾಡಿದ್ದು ಯಡಿಯೂರಪ್ಪ. ಅವರು ಸಂಸದರಾಗಿದ್ದಾಗ ತಂಬಾಕಿಗೆ ಸರಾಸರಿ ಬೆಲೆ ಎಷ್ಟಿತ್ತು. ಈಗ ಎಷ್ಟು ಬೆಲೆ ಇದೆ ಎಂಬುದನ್ನು ಹೋಲಿಕೆ ಮಾಡಲಿ.
-
ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ-ಬಿ.ಎಸ್.ಯಡಿಯೂರಪ್ಪ -
Venkatesh Daggubati: ಬೆಂಗಳೂರಿನ ಐಕಾನಿಕ್ ವಿದ್ಯಾರ್ಥಿ ಭವನದಲ್ಲಿ ದೋಸೆ ಸವಿದ ಟಾಲಿವುಡ್ ನಟ ವೆಂಕಟೇಶ್ ದಗ್ಗುಬಾಟಿ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
ಕೊಹ್ಲಿ ಭಾಯ್ಗೆ ಮೈದಾನದಲ್ಲಿ ಕೆಣಕ್ಬೇಡಿ, ತುಂಬಾ ಸಮಯ ನಿಲ್ಲಲು ಬಿಡಬೇಡಿ; ಎಸ್ಆರ್ಎಚ್ ಸಹ ಆಟಗಾರರಿಗೆ ಇಶಾನ್ ಎಚ್ಚರಿಕೆ ಸಂದೇಶ -
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ












Click it and Unblock the Notifications