ಊಬರ್ ಕ್ಯಾಬಿನಲ್ಲೇ ನಾ ನಿನ್ನ ಮರೆತಿರುವೆ: ಮುಂಬೈನಲ್ಲಿ ಹೀಗೂ ಒಂದು ಸಮೀಕ್ಷೆ!?
ಮುಂಬೈ, ಜೂನ್ 7: ಚೆಲುವೆ ನಾ ನಿನ್ನ ಮರೆತಿರುವೆ, ಚೆಲುವಾ ನಾ ನಿನ್ನ ಮರೆತಿರುವೆ. ಈ ಸಿನಿಮಾ ಡೈಲಾಗ್ ಎಲ್ಲಾ ಈಗಿನ ಸ್ಟೋರಿಗೆ ಸೆಟ್ ಆಗುವುದಿಲ್ಲ. ಏಕೆಂದರೆ ಮುಂಬೈನಲ್ಲಿ ಅದೇ ಚೆಲುವ, ಚೆಲುವೆಯರಿಗೆ ಮರೆವಿನ ಕಾಯಿಲೆ ಅತಿಹೆಚ್ಚು ಎನ್ನುವ ಸಮೀಕ್ಷೆಯೊಂದು ಹೊರ ಬಿದ್ದಿದೆ. ವಿಪರ್ಯಾಸ ಎಂದರೆ ಆ ಮರೆವಿನ ಕಾಯಿಲೆ ವಯಸ್ಸು ಆದವರನ್ನೂ ಬಿಟ್ಟಿಲ್ಲ, ಉದ್ಯೋಗಿಗಳನ್ನೂ ಬಿಟ್ಟಿಲ್ಲ.
ವಾಣಿಜ್ಯ ನಗರಿ ಎನಿಸಿಕೊಂಡಿರುವ ಮುಂಬೈನಲ್ಲಿ ಜನರಿಗೆ ಮರೆವಿನ ಕಾಯಿಲೆ ಅತಿಹೆಚ್ಚು ಎಂಬುದು ಉಬರ್ ಕ್ಯಾಬ್ ನಡೆಸಿರುವ ಸಮೀಕ್ಷೆಯಲ್ಲಿ ಹೊರ ಬಿದ್ದಿದೆ. ಪ್ರತಿನಿತ್ಯ ಉಬರ್ ಕ್ಯಾಬ್ ಮೇಲೆ ಅವಲಂಬಿತರಾದ ಸಾವಿರಾರು ಪ್ರಯಾಣಿಕರು ತಮ್ಮ ವಸ್ತುಗಳನ್ನು ಕಾರಿನಲ್ಲೇ ಬಿಟ್ಟು ಹೋಗುತ್ತಾರಂತೆ. ಇಂಥದೊಂದು ಅಚ್ಚರಿಕೆ ಸಮೀಕ್ಷೆಯನ್ನು ಸ್ವತಃ ಉಬರ್ ಕ್ಯಾಬ್ ನಡೆಸಿದೆ.
ಭಾರತದಲ್ಲಿ "ದಿ ಉಬರ್ ಲಾಸ್ಟ್ ಆಫ್ ಫೌಂಡ್ ಇಂಡೆಕ್ಟ್" ನಡೆಸಿರುವ ಸಮೀಕ್ಷೆಯಲ್ಲಿ ಜನರು ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುವಂತಾ ಫಲಿತಾಂಶ ಬಂದಿದೆ. ದೇಶದಲ್ಲಿ ಅತಿಹೆಚ್ಚು ಮರೆವಿನ ಕಾಯಿಲೆಯಿರುವ ಜನರು ಇರುವುದು ಯಾವ ನಗರದಲ್ಲಿ ಎನ್ನುವ ಪ್ರಶ್ನೆಗೆ ಸಮೀಕ್ಷೆಯು ಮುಂಬೈ ಎನ್ನುವ ಉತ್ತರವನ್ನು ನೀಡುತ್ತಿದೆ.
ಉಬರ್ ನಡೆಸಿರುವ ವಿಶೇಷ ಹಾಗೂ ವಿಭಿನ್ನ ಸಮೀಕ್ಷೆಯು ಹೇಳುವ ಫಲಿತಾಂಶವೇನು?, ಈ ಸಮೀಕ್ಷೆಯಿಂದ ಸಾರ್ವಜನಿಕರು ಕಲಿತುಕೊಳ್ಳಬೇಕಾದ ಪಾಠವೇನು?, ಉಬರ್ ಕ್ಯಾಬ್ ಬಳಸುವ ಮಂದಿಗೆ ಹೇಗೆ ಜಾಗೃತಿ ವಹಿಸಬೇಕು ಎನ್ನುವುದರ ಕುರಿತು ಅರಿತುಕೊಳ್ಳುವುದಕ್ಕೆ ಇಂಥದೊಂದು ಸಮೀಕ್ಷೆಯೇ ಪಾಠವಾಗುವುದರಲ್ಲಿ ದುಸರಾ ಮಾತೇ ಇಲ್ಲ. ಇಂಥದೊಂದು ಸ್ಟೋರಿಯನ್ನು ನೀವೂ ಓದಿ. ಒಮ್ಮೆ ನಗುನಗುತ್ತಲೇ ಜಾಗೃತರಾಗಿರಿ.

ನಾ ನಿನ್ನ ಮರೆತಿರುವೆ ಎನ್ನುವ ಮುಂಬೈನ ಮಂದಿ
ದೇಶದ ವಾಣಿಜ್ಯನಗರಿಯಲ್ಲಿ ಮರೆವಿನ ಮಂದಿಗೆ ಮಿತಿಯಿಲ್ಲ. ಉಬರ್ ನಡೆಸಿರುವ ಸಮೀಕ್ಷೆಯಲ್ಲಿ ಅತಿಹೆಚ್ಚು ಮರೆವಿನ ಜನರು ಇರುವುದೇ ಈ ಮುಂಬೈನಲ್ಲಿ ಎನ್ನುವುದು ಸ್ಪಷ್ಟವಾಗಿ ಗೊತ್ತಾಗಿದೆ. ದೇಶದಲ್ಲಿ ಅತಿಹೆಚ್ಚು ಮರೆವಿನ ಜನರು ಇರುವ ನಗರಗಳ ಪಟ್ಟಿಯಲ್ಲಿ ಮುಂಬೈ ಅಗ್ರಸ್ಥಾನದಲ್ಲಿ ಗುರುತಿಸಿಕೊಂಡಿದೆ. ಅದೇ ರೀತಿ ಎರಡನೇ ಸ್ಥಾನದಲ್ಲಿ ದೆಹಲಿ ಹಾಗೂ ಮೂರನೇ ಸ್ಥಾನದಲ್ಲಿ ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಗುರುತಿಸಿಕೊಂಡಿದೆ. ಮಧ್ಯಾಹ್ನ 1 ಗಂಟೆಯಿಂದ 3 ಗಂಟೆವರೆಗೂ ಉಬರ್ ಕ್ಯಾಬಿನಲ್ಲಿ ಪ್ರಯಾಣಿಕರುವ ಅತಿಹೆಚ್ಚು ಪ್ರಯಾಣಿಕರು ತಮ್ಮ ವಸ್ತುಗಳನ್ನು ಮರೆತು ಹೋಗುತ್ತಾರೆ ಎನ್ನುವುದು ಸಮೀಕ್ಷೆಯಲ್ಲಿ ಉಲ್ಲೇಖಿಸಿದ ಪ್ರಮುಖ ಅಂಶವಾಗಿದೆ.

ಕ್ಯಾಬಿನಲ್ಲೇ ಮರೆತು ಹೋಗುವ ವಸ್ತುಗಳು ಯಾವುವು?
ಮುಂಬೈನಲ್ಲಿ ಅವಸರದಲ್ಲಿ ಕ್ಯಾಬ್ ಬುಕ್ ಮಾಡುವ ಪ್ರಯಾಣಿಕರು ತಮ್ಮ ನಿಗದಿತ ಸ್ಥಳವನ್ನು ತಲುಪುತ್ತಿದ್ದಂತೆ ತಾವೇ ತಗೆದುಕೊಂಡು ಹೋಗಿದ್ದ ವಸ್ತುಗಳನ್ನು ಕ್ಯಾಬಿನಲ್ಲೇ ಮರೆತು ಹೋಗುತ್ತಾರೆ. ಹೀಗೆ ತಮ್ಮ ವಸ್ತುಗಳನ್ನು ಮರೆತು ಹೋಗುವುದರಲ್ಲೇ ಮುಂಬೈನ ಮಂದಿ ಟಾಪ್ ಎಂದು ಸಮೀಕ್ಷೆ ಸ್ಪಷ್ಟವಾಗಿ ಉಲ್ಲೇಖಿಸಿದೆ. ಹಾಗಾದರೆ, ಜನರು ಮರೆತು ಹೋಗುವ ಆ ಪ್ರಮುಖ ವಸ್ತುಗಳು ಯಾವುವು ಎನ್ನುವ ಪ್ರಶ್ನೆಗೂ ಇಲ್ಲಿ ಉತ್ತರವಿದೆ. ವಾಣಿಜ್ಯ ನಗರಿ ಜನರು ಉಬರ್ ಕ್ಯಾಬ್ ನಲ್ಲಿ ಪ್ರಯಾಣಿಸುವ ಸಂದರ್ಭದಲ್ಲಿ ತಮ್ಮ ಮೊಬೈಲ್, ಕ್ಯಾಮರಾ, ಲ್ಯಾಪ್ ಟಾಪ್, ಬ್ಯಾಕ್ ಪ್ಯಾಕ್, ವ್ಯಾಲೆಟ್ ಮತ್ತು ಸ್ಪೀಕರ್, ಬಟ್ಟೆ, ಆಭರಣಗಳು, ಹಣ, ನೀರಿನ ಬಾಟಲ್ ಮತ್ತು ಇಯರ್ ಫೋನ್ ಅನ್ನು ಹೆಚ್ಚಾಗಿ ಮರೆತು ಹೋಗುತ್ತಾರೆ ಎನ್ನುವುದು ಸಮೀಕ್ಷೆಯ ಫಲಿತಾಂಶವಾಗಿದೆ.

ಭಾರತದಲ್ಲಿ ಮಂದಿಗೆ ಇಷ್ಟೆಲ್ಲ ಮರೆವು ಯಾಕೋ ಗೊತ್ತಿಲ್ಲ
ಸಾಮಾನ್ಯವಲ್ಲದೆ, ಉಬರ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಸುವ ಭಾರತೀಯರು ಮರೆತು ಹೋಗುವ ವಸ್ತುಗಳ ಪಟ್ಟಿ ಇಷ್ಟಕ್ಕೆ ನಿಲ್ಲೋದಿಲ್ಲ. ಕೆಲವು ವಿಶಿಷ್ಟ ಮತ್ತು ಅಸಾಮಾನ್ಯ ವಸ್ತುಗಳನ್ನು ಕಾರಿನಲ್ಲೇ ಬಿಟ್ಟು ಹೋಗಿರುವ ಸಾಕಷ್ಟು ಉದಾಹರಣೆಗಳು ಸಮೀಕ್ಷೆಯಿಂದ ತಿಳಿದು ಬಂದಿವೆ. ಅದರಲ್ಲಿ ಭಾರತೀಯ ಸಿಹಿ ಖಾದ್ಯ ಎಂದಿರುವ ಘೇವಾರ್, ಕೊಳಲು, ಆಧಾರ್ ಕಾರ್ಡ್, ಡಂಬ್ಬೆಲ್ಗಳು, ಕ್ರಿಕೆಟ್ ಬ್ಯಾಟ್ಗಳು, ಸ್ಪೈಕ್ ಗಾರ್ಡ್ಗಳು ಮತ್ತು ಕಾಲೇಜು ಪ್ರಮಾಣಪತ್ರಗಳನ್ನು ಪ್ರಯಾಣಿಕರು ತಮ್ಮ ಉಬರ್ ಟ್ಯಾಕ್ಸಿಗಳಲ್ಲೇ ಮರೆತು ಹೋಗಿದ್ದಾರೆ.

ಮುಂಬೈ ಮಂದಿ ಯಾವ ದಿನ ಏನು ಮರೆಯುವರು?
ವಾರಕ್ಕೆ ಏಳು ದಿನ. ಪ್ರತಿಯೊಂದು ದಿನ ಮುಂಬೈನ ಮಂದಿ ಒಂದೊಂದು ವಸ್ತುಗಳನ್ನು ಮರೆತು ಹೋಗುತ್ತಾರೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ. ಹಾಗಾದರೆ ಯಾವ ದಿನ ಮುಂಬೈ ಮಂದಿ ಏನು ಮರೆಯುವರು ಎನ್ನುವ ಕುತೂಹಲಕ್ಕೂ ಉತ್ತರ ಸಿಕ್ಕಿದೆ. ಸೋಮವಾರ ಮತ್ತು ಶುಕ್ರವಾರ ಜನರು ತಮ್ಮ ಹೆಡ್ ಫೋನ್ ಮತ್ತು ಸ್ಪೀಕರ್ ಅನ್ನು ಮರೆತು ಹೋಗುತ್ತಾರೆ. ಅದೇ ರೀತಿ ಬುಧವಾರ ಲ್ಯಾಪ್ಟಾಪ್ಗಳನ್ನು ಮರೆತು ಹೋದರೆ, ಶನಿವಾರ ತಮ್ಮ ಜೊತೆಗೆ ತೆಗೆದುಕೊಂಡು ಹೋಗುವ ಬಟ್ಟೆಯ ಬ್ಯಾಗ್ ಅನ್ನೇ ಮರೆತು ಹೋಗುತ್ತಾರೆ ಎನ್ನುವುದು ಸಮೀಕ್ಷೆಯಿಂದ ತಿಳಿದು ಬಂದಿರುವ ಅಂಶವಾಗಿದೆ.

ಉಬರ್ ಕಾರಿನಲ್ಲಿ ಮರೆತ ವಸ್ತುಗಳನ್ನು ಪಡೆಯುವುದು ಹೇಗೆ?
"ದಿ ಉಬರ್ ಲಾಸ್ಟ್ ಆಫ್ ಫೌಂಡ್ ಇಂಡೆಕ್ಟ್" ನಡೆಸಿರುವ ಸಮೀಕ್ಷೆಯ ಬಗ್ಗೆ ಉಬರ್ ಕಂಪನಿಯ ಕೇಂದ್ರ ಕಾರ್ಯಾಚರಣೆಗಳ ನಿರ್ದೇಶಕ ನಿತೀಶ್ ಭೂಷಣ್ ಪ್ರತಿಕ್ರಿಯೆ ನೀಡಿದ್ದಾರೆ. ಉಬರ್ ಪ್ರಯಾಣಿಕರು ತಾವು ಉಬರ್ ಕಾರಿನಲ್ಲಿ ಪ್ರಯಾಣಿಸಿದ ನಂತರದಲ್ಲಿ ತಾವು ಮರೆತ ವಸ್ತುಗಳನ್ನು ವಾಪಸ್ ಪಡೆದುಕೊಳ್ಳುವುದಕ್ಕೆ ಅವಕಾಶವಿದೆ. ಈ ನಿಟ್ಟಿನಲ್ಲಿ ನಾವು ವಿಶೇಷ ವ್ಯವಸ್ಥೆಯನ್ನು ಮಾಡಿಕೊಂಡಿದ್ದೇವೆ. ಈ ಹಂತದಲ್ಲಿ ಪ್ರಯಾಣಿಕರು ತಮ್ಮ ಯಾವ ಯಾವ ವಸ್ತುಗಳನ್ನು ಅತಿಹೆಚ್ಚಾಗಿ ಮರೆತು ಹೋಗುತ್ತಾರೆ ಎಂಬುದರ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಸಮೀಕ್ಷೆಯನ್ನು ಪ್ರಕಟಿಸಲಾಗಿದೆ. ಈ ಸಮೀಕ್ಷೆಯಲ್ಲಿ ಮುಂಬೈನಲ್ಲಿ ಉಬರ್ ಪ್ರಯಾಣಿಕರು ಅತಿಹೆಚ್ಚಾಗಿ ತಮ್ಮ ವಸ್ತುಗಳನ್ನು ಪ್ರಯಾಣದ ನಂತರದಲ್ಲಿ ಕ್ಯಾಬಿನಲ್ಲೇ ಮರೆತು ಹೋಗುತ್ತಾರೆ ಎನ್ನುವ ಅಂಶವು ಬಯಲಾಗಿದೆ.












Click it and Unblock the Notifications