'ಮೀಸಲಾತಿ ಇರುವುದು ಸಾಮಾಜಿಕ ನ್ಯಾಯ ದೊರಕಿಸುವುದಕ್ಕೆ ಹೊರತು ಆರ್ಥಿಕ ವಿಚಾರಗಳಿಗಲ್ಲ'
ಸಾಮಾನ್ಯವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಮೀಸಲಾತಿ ನೀಡುವ ಪ್ರಸ್ತಾವವನ್ನು ಪರಿಶಿಷ್ಟ ಜಾತಿ (ಎಸ್ಸಿ), ಪರಿಶಿಷ್ಟ ಪಂಗಡದ (ಎಸ್ಟಿ) ಹೋರಾಟಗಾರರು ಹಾಗೂ ಪ್ರಗತಿಪರರು ವಿರೋಧಿಸಿದ್ದಾರೆ. ಇದು ಸಾಂವಿಧಾನ ವಿರೋಧಿ ನಡೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೀಸಲಾತಿಯನ್ನು ಐತಿಹಾಸಿಕ ಅಸಮಾನತೆ ಹಾಗೂ ಪ್ರಾತಿನಿಧಿತ್ವದ ಕೊರತೆ ಇರುವ ಆಧಾರದಲ್ಲಿ ನೀಡಲಾಗುತ್ತಿದೆಯೇ ವಿನಾ ಬಡತನದ ಆಧಾರದಲ್ಲಿ ಅಲ್ಲ. ಮೀಸಲಾತಿ ಇರುವುದು ಬಡವರನ್ನು ಮೇಲೆತ್ತುವ ಸಲುವಾಗಿ ಅಲ್ಲ. ಶತಮಾನಗಳಿಂದ ತುಳಿತಕ್ಕೆ ಒಳಗಾಗಿ, ಅವಕಾಶಗಳನ್ನು ನಿರಾಕರಿಸಿದಂಥ ಜನರ ಪ್ರಾತಿನಿಧ್ಯಕ್ಕಾಗಿ. ಈಗಿನ ಕೇಂದ್ರ ಸರಕಾರದ ನಡೆ ರಾಜಕೀಯ ಪ್ರೇರಿತ ಎಂದು ಆರೋಪಿಸಿದ್ದಾರೆ.
ಮೇಲ್ವರ್ಗದವರಿಗೂ ಉದ್ಯೋಗದಲ್ಲಿ ಮೀಸಲಾತಿ, ಯಾರು ಇದಕ್ಕೆ ಅರ್ಹರು?
ನ್ಯಾಷನಲ್ ಕಾನ್ಫಡರೇಷನ್ ಆಫ್ ದಲಿತ್ ಆರ್ಗನೈಸೇಷನ್ ನ ಅಧ್ಯಕ್ಷರಾದ ಅಶೋಕ್ ಭಾರತಿ ಮಾತನಾಡಿ, ತಮ್ಮ ಜನಸಂಖ್ಯಾ ಪ್ರಮಾಣಕ್ಕಿಂತ ಹೆಚ್ಚಿನದನ್ನು ಪಡೆದವರಿಗೇ ಮತ್ತೆ ನೀಡುವುದು ಸಂವಿಧಾನ ಪರ ನಿಲುವಲ್ಲ. ಇದು ಸಂವಿಧಾನದ ಸ್ಪಷ್ಟ ಉಲ್ಲಂಘನೆ ಹಾಗೂ ಮೇಲ್ಜಾತಿಯವರ ಓಲೈಕೆ ಎಂದಿದ್ದಾರೆ.
ಮೇಲ್ಜಾತಿ ಬಗ್ಗೆಯೇ ಹೆಚ್ಚಿನ ಕಾಳಜಿ
ಸರಕಾರವು ಮೇಲ್ಜಾತಿಯವರನ್ನು ಓಲೈಕೆ ಮಾಡಲು ಬಯಸುತ್ತಿದೆ. ತಳ ಸಮುದಾಯದ ಬಗ್ಗೆ ಅವರಿಗಿರುವ ಪೂರ್ವಗ್ರಹವು ಇದರಿಂದ ತಿಳಿಯುತ್ತದೆ. ಆದರೆ ಅವರಿಗೆ ಮೇಲ್ಜಾತಿಯ ಬಡವರ ಬಗ್ಗೆಯೇ ಹೆಚ್ಚಿನ ಕಾಳಜಿ ಎಂದು ಗುಜರಾತ್ ನ ಮಂಜುಳಾ ಪ್ರದೀಪ್ ಅಭಿಪ್ರಾಯ ಪಟ್ಟಿದ್ದಾರೆ.
ಆ ಧರ್ಮದವರ ಮನವಿಯನ್ನು ಕಿವಿಗೆ ಹಾಕಿಕೊಳ್ತಿಲ್ಲ
ನ್ಯಾಷನಲ್ ದಲಿತ್ ಮೂವ್ ಎಂಟ್ ಫಾರ್ ಜಸ್ಟೀಸ್ ಪ್ರಧಾನ ಕಾರ್ಯದರ್ಶಿ ರಮೇಶ್ ನಥಾನ್ ಮಾತನಾಡಿ, ಮೀಸಲಾತಿ ನೀಡುವ ಲೆಕ್ಕಾಚಾರಕ್ಕೆ ಹೀಗೆ ಸೇರಿಸುತ್ತಾ ಹೋದರೆ ಸಾಮಾಜಿಕ ನ್ಯಾಯಕ್ಕೆ ಘಾಸಿಯಾಗುತ್ತದೆ. ಮುಸ್ಲಿಮ್ ಹಾಗೂ ಕ್ರಿಶ್ಚಿಯನ್ನರ ಪೈಕಿ ಕೆಲವರು ತಮಗೆ ಎಸ್ಸಿ ಸ್ಥಾನಮಾನ ನೀಡಬೇಕು ಎಂದು ಕೇಳುತ್ತಲೇ ಇದ್ದಾರೆ. ಆದರೆ ಅವರ ಮನವಿಯನ್ನು ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಸರಕಾರಕ್ಕೆ ಮೇಲ್ಜಾತಿ ಅವರನ್ನು ಓಲೈಸಬೇಕಿದೆ. ಅದಕ್ಕೆ ಇದನ್ನು ಪ್ರಸ್ತಾವ ಮಾಡಿದ್ದಾರೆ ಎಂದಿದ್ದಾರೆ.
ಎಸ್ಸಿ-ಎಸ್ಟಿ, ಹಿಂದುಳಿದ ವರ್ಗದವರಿಗೆ ಹೆಚ್ಚಿನ ಸವಲತ್ತು ನೀಡಲಿ
ಸರಕಾರದ ಈ ನಡೆ ಸರಿಯಲ್ಲ. ಇದು ಮೇಲ್ಜಾತಿ ಪರವಾದ ಆಲೋಚನೆ ಇರುವ ಸರಕಾರ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಎಸ್ಸಿ, ಎಸ್ಟಿ ಹಾಗೂ ಹಿಂದುಳಿದ ವರ್ಗದವರಲ್ಲೂ ಆರ್ಥಿಕವಾಗಿ ಹಿಂದುಳಿದವರು ಇದ್ದಾರೆ. ಅವರಿಗೆ ಇನ್ನೂ ಹೆಚ್ಚಿನ ಅವಕಾಶ ಮಾಡಿಕೊಡಬಹುದಿತ್ತು ಎಂದು ತಮಿಳುನಾಡು ಮೂಲ ತೃತೀಯಲಿಂಗಿಗಳು ಹಾಗೂ ದಲಿತಪರ ಹೋರಾಟಗಾರರಾದ ಗ್ರೇಸ್ ಬಾನು ಅಭಿಪ್ರಾಯ ಪಟ್ಟಿದ್ದಾರೆ.
ಸಾಮಾಜಿಕ ನ್ಯಾಯದ ಕಲ್ಪನೆಯಲ್ಲಿ ಮೂಡಿಬಂದಿರುವುದು ಮೀಸಲಾತಿ
ದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರ ಏಳ್ಗೆಗಾಗಿ ಅಂತಲೇ ಸಾಕಷ್ಟು ಕಾರ್ಯಕ್ರಮ ಇದೆ. ಆದರೆ ಮೀಸಲಾತಿ ಅನ್ನೋದು ಸಾಮಾಜಿಕ ಕಾರ್ಯಕ್ರಮ. ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಸಲುವಾಗಿ ರೂಪುಗೊಂಡ ಕಾರ್ಯಕ್ರಮ. ಆದರೆ ಈಗ ಸಾಮಾನ್ಯವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿ ಎಂದು ತರುವ ಮೂಲಕ ಉದ್ದೇಶವೇ ದಾರಿ ತಪ್ಪಿದಂತಾಗುತ್ತದೆ. ಇದರ ಬದಲು ಈಗಿರುವ ಯೋಜನೆಗಳು ಹಾಗೂ ಮೀಸಲಾತಿ ಬಲಪಡಿಸಿದ್ದರೆ ಒಂದೊಳ್ಳೆ ನಡೆ ಆಗಿರುತ್ತಿತ್ತು ಎಂದು ಹಿರಿಯ ಪತ್ರಕರ್ತರಾದ ಸನತ್ ಕುಮಾರ್ ಬೆಳಗಲಿ ಅವರು ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದರು.