ಮಾಯಾವತಿ ಬಹಿರಂಗ ಪಡಿಸಿದ ರಹಸ್ಯ ಖರ್ಗೆಯವರನ್ನು ತಲ್ಲಣಗೊಳಿಸಿದ್ದೇಕೆ?
ಹಿರಿಯ ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತೊಮ್ಮೆ ಮೌನವಾಗಿ ನೋವು ನುಂಗಿಕೊಂಡಿದ್ದಾರೆ. ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ತಮ್ಮೆದುರು ಬಹಿರಂಗ ಪಡಿಸಿದ ರಹಸ್ಯವೊಂದನ್ನು ಕೇಳಿ ಖರ್ಗೆ ನೋವಿಗೀಡಾಗಿದ್ದಾರೆ.
ಅಂದ ಹಾಗೆ ಮಾಯಾವತಿ ಅವರು ಖರ್ಗೆಯವರ ಮುಂದೆ ಸತ್ಯ ಬಹಿರಂಗಪಡಿಸಿದ್ದು ಕಳೆದ ವಾರ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರದ ಮುಖ್ಯಮಂತ್ರಿಯಾಗಿ ಎಚ್.ಡಿ. ಕುಮಾರಸ್ವಾಮಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ.
ಅವತ್ತು ಮಾಯಾವತಿ ಅವರಾಡಿದ ಮಾತುಗಳೇನು ಎಂಬುದು ಇದುವರೆಗೂ ಬಹಿರಂಗವಾಗಿ ಚರ್ಚೆಗೆ ಬಂದಿಲ್ಲ. ಆದರೆ ಬಿ.ಎಸ್.ಪಿ ನಾಯಕಿ ಮಾಯಾವತಿ ಅವರು ಖರ್ಗೆಯವರಿಗೆ ಹೇಳಿದ ಮಾತೇನು? ಅನ್ನುವುದು ಅವರ ಆಪ್ತ ವಲಯಕ್ಕೆ ಮಾತ್ರ ಗೊತ್ತಿದೆ.
ಆದರೆ ಖರ್ಗೆಯವರೇ ಆ ಮಾತುಗಳನ್ನು ಕೇಳಿ ಆದ ನೋವನ್ನು ನುಂಗಿರುವಾಗ ಅವರಾದರೂ ಈ ಬಗ್ಗೆ ಬಹಿರಂಗವಾಗಿ ಏಕೆ ಚರ್ಚೆ ಮಾಡುತ್ತಾರೆ? ಇರಲಿ, ಅಂದ ಹಾಗೆ ಅವತ್ತು ಮಾಯಾವತಿ ಅವರು ಖರ್ಗೆಯವರಿಗೆ ಹೇಳಿದ ಮಾತು ಕುತೂಹಲಕಾರಿಯಂತೂ ಹೌದು.
ಅವತ್ತು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಂದರ್ಭದಲ್ಲಿ ಮಾಯಾವತಿ ಅವರು ಖರ್ಗೆಯವರಿಗೆ ತೆರೆಯ ಹಿಂದೆ ನಡೆದ ಒಂದು ರಹಸ್ಯ ಬೆಳವಣಿಗೆಯ ಬಗ್ಗೆ ವಿವರ ನೀಡಿದರು.

ರಹಸ್ಯ ಬೆಳವಣಿಗೆ ಬಗ್ಗೆ ಮಾಯಾವತಿ ಮಾತು
"ಖರ್ಗೆ ಜೀ, ರಾಜ್ಯದಲ್ಲಿ ಅತಂತ್ರ ಸರ್ಕಾರ ರಚನೆಯಾಗುವುದು ಖಾತ್ರಿಯಾಗುತ್ತಿದ್ದಂತೆಯೇ, ಅದರಲ್ಲೂ ಬಿಜೆಪಿ ಅತ್ಯಂತ ದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂಬುದು ಖಾತ್ರಿಯಾಗುತ್ತಿದ್ದಂತೆಯೇ ನಾನು ಮಾಜಿ ಪ್ರಧಾನಿ ದೇವೇಗೌಡರಿಗೆ ಫೋನು ಮಾಡಿದ್ದೆ. ಕರ್ನಾಟಕದಲ್ಲಿ ಯಾವ ಪಕ್ಷವೂ ನೂರರ ಗಡಿ ದಾಟದಿದ್ದರೆ ಒಂದು ಅತಂತ್ರ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಆದರೆ ಬಿಜೆಪಿ ಏನಾದರೂ ನೂರಕ್ಕೂ ಹೆಚ್ಚು ಸೀಟುಗಳನ್ನು ಪಡೆದರೆ ಅದು ದೊಡ್ಡ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಅದರಲ್ಲೂ ಮುಖ್ಯವಾಗಿ ಅದು ನಿಮ್ಮ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟು ಕೊಡುವುದಿಲ್ಲ."

ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸುವಂತಿರಲಿಲ್ಲ
"ಯಾಕೆಂದರೆ ಈಗಾಗಲೇ ಆ ಹುದ್ದೆಗೆ ಬಂದು ಕೂರಲು ಯಡಿಯೂರಪ್ಪ ಸಜ್ಜಾಗಿದ್ದಾರೆ. ಮತ್ತು ಅವರೇ ಪಕ್ಷದ ಮುಖ್ಯಮಂತ್ರಿ ಕ್ಯಾಂಡಿಡೇಟ್ ಎಂದು ಬಿಜೆಪಿ ಹೈಕಮಾಂಡ್ ಘೋಷಿಸಿದೆ. ಹೀಗಿರುವಾಗ ಪಕ್ಷ ನೂರು ಸೀಟುಗಳ ಗಡಿ ದಾಟಿದರೆ ಅದು ಯಡಿಯೂರಪ್ಪ ಅವರನ್ನು ನಿರ್ಲಕ್ಷಿಸುವ ಸಾಹಸಕ್ಕೆ ಇಳಿಯುವುದಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮೋದಿ ಗ್ಯಾಂಗಿಗೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ಭಾರತದಿಂದ ಹೆಚ್ಚು ಸೀಟುಗಳು ಬೇಕಾಗಿವೆ. ದಕ್ಷಿಣ ಭಾರತ ಎಂದರೆ ಕರ್ನಾಟಕವೇ ಅದಕ್ಕೆ ಪಿನ್ ಪಾಯಿಂಟ್. ಹೀಗಾಗಿ ಅವರು ಯಡಿಯೂರಪ್ಪ ಅವರನ್ನು ಧಿಕ್ಕರಿಸಿ, ಅವರೊಂದಿಗಿರುವ ಸಮುದಾಯವನ್ನು ಎದುರು ಹಾಕಿಕೊಳ್ಳುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ರಚಿಸುವ ಅವಕಾಶ ಬಿಜೆಪಿಯೇತರ ಶಕ್ತಿಗಳಿಗೆ ಸಿಕ್ಕರೆ, ದಲಿತ ನಾಯಕರೊಬ್ಬರನ್ನು ಮುಖ್ಯಮಂತ್ರಿ ಮಾಡುವುದು ಒಳ್ಳೆಯದು."

ನಿಎಂ ಪಟ್ಟಕ್ಕೆ ಖರ್ಗೆ ಹೆಸರು ಸೂಚಿಸಿದ್ದು ಮಾಯಾ
"ಹೇಗಿದ್ದರೂ ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರಿದ್ದಾರೆ. ಹೀಗಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಸರ್ಕಾರ ರಚನೆಯಾಗಿ, ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆಯವರು ಮುಖ್ಯಮಂತ್ರಿಯಾಗಲು ನೀವು ಸಹಕಾರ ನೀಡಿದರೆ ನೋ ಡೌಟ್, ದೇಶಾದ್ಯಂತ ಇರುವ ದಲಿತ ಮತದಾರರ ಮೇಲೆ ಅದು ದೊಡ್ಡ ಪ್ರಭಾವ ಬೀರುತ್ತದೆ. ಆ ಮೂಲಕ ಬಿಜೆಪಿಯೇತರ ಶಕ್ತಿಗಳು ಮಹಾಮೈತ್ರಿ ರೂಪಿಸಿ ಮುನ್ನುಗ್ಗಲು ಸುಲಭವಾಗುತ್ತದೆ ಎಂದು ಮಾಜಿ ಪ್ರಧಾನಿ ದೇವೇಗೌಡರಿಗೆ ವಿವರಿಸಿದೆ. ನನ್ನ ಮಾತಿಗೆ ಅವರೂ ಒಪ್ಪಿಗೆ ಸೂಚಿಸಿದ್ದರು. ಹೀಗಾಗಿ ನಾನು ಕಾಂಗ್ರೆಸ್ ಪಕ್ಷದ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ಅವರಿಗೂ ಫೋನು ಮಾಡಿ ವಿಷಯ ತಿಳಿಸಿದೆ. ಅದಕ್ಕೆ ಅವರೂ ಸಂತಸಪಟ್ಟಿದ್ದರು."

ಮಾಯಾವತಿ ಹೇಳಿದಂತೆ ಬಿಜೆಪಿಗೆ ಹೆಚ್ಚು ಸೀಟು
"ಚುನಾವಣೆಯ ಫಲಿತಾಂಶ ಬಂದಾಗ ನಾನು ಹೇಳಿದ ಮಾದರಿಯಲ್ಲೇ ಬಿಜೆಪಿ ನೂರಕ್ಕೂ ಹೆಚ್ಚು ಸೀಟು ಗಳಿಸಿತ್ತು. ಇಂತಹ ಪರಿಸ್ಥಿತಿಯಲ್ಲಿ ಅದು ಮುಖ್ಯಮಂತ್ರಿ ಸ್ಥಾನವನ್ನು ಜೆಡಿಎಸ್ ಗೆ ಬಿಟ್ಟು ಕೊಡುವ ಪ್ರಶ್ನೆಯೇ ಇರಲಿಲ್ಲ. ಹೀಗಾಗಿ ಒಂದೋ, ಜೆಡಿಎಸ್ ಅನಿವಾರ್ಯವಾಗಿ ಉಪಮುಖ್ಯಮಂತ್ರಿ ಹುದ್ದೆಯನ್ನು ಒಪ್ಪಿಕೊಳ್ಳಬೇಕಿತ್ತು. ಬೇಸಿಕಲಿ, ಅದು ಯಡಿಯೂರಪ್ಪ ಅವರ ಕೈ ಕೆಳಗೆ ತನ್ನ ಪಕ್ಷದವರು ಉಪಮುಖ್ಯಮಂತ್ರಿಯಾಗಲು ತಯಾರಿರಲಿಲ್ಲ. ಹೀಗಾಗಿ ಅದು ಕೂಡಾ ಕೆಲ ಕಾಲ ಗೊಂದಲದಲ್ಲಿತ್ತು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಕಾದು ನೋಡುವ ತಂತ್ರ ಅನುಸರಿಸಿದ್ದರೆ ಜೆಡಿಎಸ್ ನಾಯಕರು ಕಾಂಗ್ರೆಸ್ ಪಕ್ಷದ ಜತೆ ಮಾತುಕತೆಗೆ ಮುಂದಾಗುತ್ತಿದ್ದರು."

ಸೋನಿಯಾ ಕಿವಿ ಊದಿದ್ದು ಯಾರು?
"ಆ ಸಂದರ್ಭದಲ್ಲಿ ನಿಮ್ಮ ಪಕ್ಷದ ನಾಯಕರು ಖರ್ಗೆ ಅವರಿಗೆ ಸಿಎಂ ಪಟ್ಟ ಕೊಡಬೇಕು ಎಂದು ಹೇಳಿದ್ದರೆ ದೇವೇಗೌಡರೂ ತುಂಬ ತಕರಾರು ಮಾಡುತ್ತಿರಲಿಲ್ಲ. ಆದರೆ ನಿಮ್ಮ ಪಕ್ಷದ ಕೆಲ ಹಿರಿಯ ನಾಯಕರು ಏಕಾಏಕಿಯಾಗಿ, ಸಿಎಂ ಪೋಸ್ಟನ್ನು ಜೆಡಿಎಸ್ ಗೆ ಬಿಟ್ಟು ಕೊಡೋಣ ಎಂದು ಮಾತನಾಡಿಕೊಂಡು ಸೋನಿಯಾ ಗಾಂಧಿ ಅವರಿಗೆ ವಿಷಯ ತಿಳಿಸಿದರು. ಅದಕ್ಕವರು, ಖರ್ಗೆ ಹಿರಿಯ ನಾಯಕರು, ಅವರು ಸಿಎಂ ಆಗಬೇಕು ಎಂಬ ಷರತ್ತಿನೊಂದಿಗೆ ಮಾತುಕತೆ ನಡೆಸಿ ಎಂದು ಸೂಚಿಸಿದರು. ಆದರೆ ದೇವೇಗೌಡರೊಂದಿಗೆ ಮಾತುಕತೆ ನಡೆಸುವ ಮುನ್ನವೇ ನಿಮ್ಮ ಪಕ್ಷದ ಕೆಲ ನಾಯಕರು, ಮೇಡಂ, ಯಾವ ಕಾರಣಕ್ಕೂ ಸಿಎಂ ಪಟ್ಟ ಬಿಟ್ಟು ಕೊಡುವುದಿಲ್ಲ ಎಂದು ದೇವೇಗೌಡರು ಪಟ್ಟು ಹಿಡಿದಿದ್ದಾರೆ ಎಂದು ಹೇಳಿ ಬಿಟ್ಟರು."

ಸಿಎಂ ಪಟ್ಟ ತಪ್ಪಲು ಜೆಡಿಎಸ್ ಕಾರಣವಲ್ಲ
"ಯಾವಾಗ ಈ ಮಾತು ಕೇಳಿದರೋ? ಆಗ ಸೋನಿಯಾ ಗಾಂಧಿಯವರೂ ಅನಿವಾರ್ಯವಾಗಿ ಸುಮ್ಮನಾದರು. ಯಾಕೆಂದರೆ ಜೆಡಿಎಸ್ ಜತೆ ಸೇರಿ ಸರ್ಕಾರ ರಚಿಸದಿದ್ದರೆ ಮುಂದಿನ ದಿನಗಳಲ್ಲಿ ನಮಗೇ ಕಷ್ಟ. ನಾವು ವಿಳಂಬ ಮಾಡಿದರೆ ಬಿಜೆಪಿ ಅದರ ಪ್ರಯೋಜನ ಪಡೆಯುತ್ತದೆ ಅಂತ ಈ ನಾಯಕರು ಹೇಳಿದ್ದರಿಂದ ಅವರೂ ಹೆಚ್ಚು ಮಾತನಾಡುವ ಗೋಜಿಗೆ ಹೋಗಲಿಲ್ಲ. ಈಗ ಕುಳಿತು ಯೋಚಿಸಿದರೆ ನಿಮಗೆ ಸಿಎಂ ಪಟ್ಟ ತಪ್ಪಲು ಜೆಡಿಎಸ್ ಕಾರಣವಲ್ಲ, ನಿಮ್ಮ ಪಕ್ಷದ ಕೆಲ ನಾಯಕರೇ ಕಾರಣ. ನಾನು ಹೇಳಿದ ರೀತಿಯಲ್ಲಿ ಕಾಂಗ್ರೆಸ್ ನಡೆದುಕೊಂಡಿದ್ದರೆ ಇವತ್ತು ಕುಮಾರಸ್ವಾಮಿ ಅವರಲ್ಲ, ನೀವು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಿರಿ" ಅಂತ ಮಾಯಾವತಿ ವಿಷಾದದಿಂದ ಹೇಳಿದಾಗ ಮಲ್ಲಿಕಾರ್ಜುನ ಖರ್ಗೆ ತಣ್ಣಗಾಗಿ ಹೋದರು.

ಖರ್ಗೆಗೆ ಸಿಎಂ ಹುದ್ದೆ ತಪ್ಪಿದ್ದು ಮೊದಲೇನಲ್ಲ
ಅಂದ ಹಾಗೆ ಖರ್ಗೆ ಅವರಿಗೆ ಸಿಎಂ ಹುದ್ದೆ ತಪ್ಪಿದ್ದು ಇದೇ ಮೊದಲ ಸಲವೇನಲ್ಲ. 2008ರಲ್ಲಿ ಅವರು ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾಗ ಮುಖ್ಯಮಂತ್ರಿಯಾಗುವ ಅವಕಾಶವಿತ್ತು. ಆದರೆ ಸುಖಾ ಸುಮ್ಮನೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರೊಬ್ಬರು ಪ್ರಚಾರದ ಫೀಲ್ಡಿಗಿಳಿದು ಗೊಂದಲವೆಬ್ಬಿಸಿದರು. ಈ ಸಲವೇನಾದರೂ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಖರ್ಗೆ ಅವರಲ್ಲ, ತಾವೇ ಸಿಎಂ ಆಗುವುದು ನಿಶ್ಚಿತ ಎಂಬ ಅನುಮಾನ ದಲಿತ ಸಮುದಾಯದಲ್ಲಿ ಹುಟ್ಟುವಂತೆ ಮಾಡಿದರು. ಪರಿಣಾಮ? ದಲಿತ ಮತಗಳು ಪುನ: ಇಬ್ಬಾಗವಾದವು. ಹೀಗಾಗಿ ಕಾಂಗ್ರೆಸ್ ಪಕ್ಷ ಎಂಭತ್ತು ಸೀಟುಗಳ ಗಡಿ ತಲುಪಿ ನಿಟ್ಟುಸಿರು ಬಿಡಬೇಕಾದ ಸ್ಥಿತಿ ಬಂತು.
ಹಾಗೆಯೇ ಮುಖ್ಯಮಂತ್ರಿಯಾಗುವ ಮಲ್ಲಿಕಾರ್ಜುನ ಖರ್ಗೆ ಅವರ ಕನಸೂ ನುಚ್ಚು ನೂರಾಗಿತ್ತು. ಈ ಸಲವೂ ಮುಖ್ಯಮಂತ್ರಿ ಪಟ್ಟ ಅವರಿಗೆ ಗೊತ್ತಾಗುವ ಮುನ್ನವೇ ಕೈ ತಪ್ಪಿದೆ. ಯಥಾ ಪ್ರಕಾರ ಅವರಲ್ಲಿ ಮತ್ತೊಮ್ಮೆ ನೋವು ದಟ್ಟೈಸಿದೆ. ರಾಜಕೀಯ ಚದುರಂಗದಾಟದಲ್ಲಿ ಗೋಚರವಾಗದೆ ಮಾಯವಾಗುವ ಇಂತಹ ಸತ್ಯಗಳೇ ಹೆಚ್ಚು.












Click it and Unblock the Notifications