ಮರಳ ತೀರ, ತಿಳಿ ನೀರ ಸಾಮ್ರಾಜ್ಯ; ಕೊರೊನಾ ಕಾಲದಲ್ಲಿ ಮಾಲ್ಡೀವ್ಸ್ನತ್ತ ಜನರ ಚಿತ್ತ
ದೇಶದಲ್ಲಿ ಕಳೆದ ವರ್ಷ ಕೊರೊನಾ ಸೋಂಕು ಪತ್ತೆಯಾದಾಗಿನಿಂದಲೂ ಆತಂಕದ ಗುಮ್ಮ ಜನರ ಮನಸ್ಸು ಸೇರಿದೆ. ಪ್ರವಾಸ ನೆಚ್ಚಿಕೊಂಡವರಿಗಂತೂ ಲಾಕ್ಡೌನ್ನಂಥ ನಿರ್ಬಂಧಗಳು ಭಾರೀ ನಿರಾಸೆಯನ್ನೇ ಉಂಟು ಮಾಡಿತ್ತು. ಈ ಜಂಜಾಟಗಳಿಂದ ತಪ್ಪಿಸಿಕೊಂಡು ಎಲ್ಲಿಗಾದರೂ ಹೋಗಬೇಕು ಎಂದು ಎಷ್ಟೋ ಜನರ ಮನಸ್ಸೂ ಕಾತರಿಸಿತ್ತು.
ಇದೇ ಕಾರಣಕ್ಕೆ ಈಗ ಭಾರತೀಯರು ಹೆಚ್ಚೆಚ್ಚು ಸಂಖ್ಯೆಯಲ್ಲಿ ಮಾಲ್ಡೀವ್ಸ್ ಕಡೆ ಮುಖ ಮಾಡಿದ್ದಾರಂತೆ. ಕೊರೊನಾ ಗುಂಗಿನಿಂದ ಹೊರಬರಲು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲಿನವರು ಮಾಲ್ಡೀವ್ಸ್ಗೆ ಭೇಟಿ ನೀಡುತ್ತಿರುವುದಾಗಿ ಅಲ್ಲಿಯ ಸಚಿವಾಲಯ ತಿಳಿಸಿದೆ. ಮುಂದೆ ಓದಿ...

ಉತ್ತರ ಏಷ್ಯಾ ರಾಷ್ಟ್ರಗಳಿಂದ ಬರುವವರ ಸಂಖ್ಯೆಯಲ್ಲಿ ಹೆಚ್ಚಳ
ಮರಳಿನ ತೀರ, ತಿಳಿ ನೀರ ಸಾಮ್ರಾಜ್ಯ ಎನಿಸಿಕೊಂಡಿರುವ ಮಾಲ್ಡೀವ್ಸ್ಗೆ ಉತ್ತರ ಏಷ್ಯಾ ರಾಷ್ಟ್ರಗಳಿಂದ ಬರುತ್ತಿರುವವರ ಸಂಖ್ಯೆ ದುಪ್ಪಟ್ಟಾಗಿರುವುದಾಗಿ ತಿಳಿದುಬಂದಿದೆ. 2020ಕ್ಕೆ ಹೋಲಿಸಿದರೆ ಈ ವರ್ಷದ ಎರಡು ತಿಂಗಳುಗಳಲ್ಲಿ ಅಲ್ಲಿಗೆ ಭೇಟಿ ನೀಡುವವರ ಸಂಖ್ಯೆ ಶೇ 50ರಷ್ಟು ಏರಿಕೆಯಾಗಿದ್ದು, 2 ತಿಂಗಳಿನಲ್ಲಿ 44 ಸಾವಿರ ಏರಿಕೆಯಾಗಿರುವುದಾಗಿ ಐಲೆಂಡ್ನ ಪ್ರವಾಸೋದ್ಯಮ ಸಚಿವಾಲಯ ಮಾಹಿತಿ ನೀಡಿದೆ.

ಭಾರತೀಯ ಪ್ರವಾಸಿಗರ ಸಂಖ್ಯೆ 23.3% ಏರಿಕೆ
ಚೀನಾ, ಜಪಾನ್, ದಕ್ಷಿಣ ಕೊರಿಯಾದಿಂದ ಬರುವವರ ಸಂಖ್ಯೆ ಇಳಿಮುಖಗೊಂಡಿದ್ದು, ಭಾರತದಲ್ಲಿ ಬರುವವರ ಸಂಖ್ಯೆ ಈ ಎರಡು ತಿಂಗಳಿನಲ್ಲಿ 23.3% ಏರಿಕೆಯಾಗಿರುವುದಾಗಿ ತಿಳಿಸಿದೆ. ಭಾರತದಲ್ಲಿ ಏಪ್ರಿಲ್ 5ರಂದು ಮತ್ತೆ ಕೊರೊನಾ ಪ್ರಕರಣಗಳು ಲಕ್ಷವನ್ನು ದಾಟಿದ್ದು, ಕೊರೊನಾ ಎರಡನೇ ಅಲೆ ಆತಂಕ ತಂದಿದೆ. ಕೆಲವು ನಗರಗಳಲ್ಲಿ ಮತ್ತೆ ಲಾಕ್ಡೌನ್ ಹೇರಲಾಗುತ್ತಿದೆ. ಇವೆಲ್ಲವುಗಳಿಂದ ಕೊಂಚ ಸಮಯವಾದರೂ ಕೆಲವರು ಮಾಲ್ಡೀವ್ಸ್ ಹಾದಿ ಹಿಡಿಯುತ್ತಿರುವುದಾಗಿ ತಿಳಿದುಬಂದಿದೆ.

"ಭಾರತೀಯರ ಮೊದಲ ಆದ್ಯತೆ ಮಾಲ್ಡೀವ್ಸ್"
"ಇಂದಿಗೂ ಭಾರತೀಯರ ಮೊದಲ ಆದ್ಯತೆ ಮಾಲ್ಡೀವ್ಸ್ ಆಗಿದೆ" ಎಂಬುದು ಬಹುಪಾಲು ಪ್ರವಾಸ ಆಯೋಜಕರ ಮಾತು. ಮಾಲ್ಡೀವ್ಸ್ನಲ್ಲಿ ಉತ್ತಮ ಹೋಟೆಲ್ಗಳು ಹಲವು ರಿಯಾಯಿತಿಗಳನ್ನು, ಹಲವು ಆಯ್ಕೆಗಳನ್ನು ನೀಡುತ್ತಿವೆ. ಹೀಗಾಗಿಯೇ ಅಲ್ಲಿಗೆ ಹೋಗಲು ಜನ ಬಯಸುತ್ತಿದ್ದಾರೆ. ಥೈಲ್ಯಾಂಡ್ನಲ್ಲಿ ಪ್ರವಾಸಿಗರಿಗೆ ಇನ್ನೂ ಮುಕ್ತ ಅವಕಾಶ ನೀಡುತ್ತಿಲ್ಲ. ಹೀಗಾಗಿ ಮಾಲ್ಡೀವ್ಸ್ಗೆ ಹೋಗುವವರು ಹೆಚ್ಚಾಗಿದ್ದಾರೆ ಎನ್ನಲಾಗಿದೆ.

ರಜಾ ಕಾಲದ ಉತ್ತಮ ತಾಣ
ಪ್ರವಾಸಿಗರಿಗೆ ಮಾಲ್ಡೀವ್ಸ್ ರಜಾಕಾಲದ ಉತ್ತಮ ತಾಣ ಎನಿಸಿಕೊಂಡಿದೆ. ಭಾರತೀಯರು ಮಾತ್ರವಲ್ಲ, ಎಲ್ಲ ಕಡೆಯಿಂದಲೂ ಇಲ್ಲಿಗೆ ಬರುತ್ತಾರೆ ಎಂದು ವಿಸ್ತಾರಾ ಪ್ರಾಜೆಕ್ಟ್ನ ಲೆಸ್ಲೀ ಥಾಂಗ್ ಹೇಳಿದ್ದಾರೆ. ಜೊತೆಗೆ ಮಾಲ್ಡೀವ್ಸ್ ಭೇಟಿಗೂ 96 ಗಂಟೆಗಳ ಮುಂಚಿನ ಕೊರೊನಾ ನೆಗೆಟಿವ್ ವರದಿಯಿದ್ದರೆ ಕ್ವಾರಂಟೈನ್ ಅಗತ್ಯವಿಲ್ಲ ಎಂದಿರುವುದೂ ಇಲ್ಲಿಗೆ ಹೆಚ್ಚು ಜನರು ಬರಲು ಕಾರಣವಾಗಿದೆ.











Click it and Unblock the Notifications